ಶಿರಸಿ: ಶಿರಸಿ ಹೊರವಲಯದ ಸೋಮನಹಳ್ಳಿಯಲ್ಲಿ ಶುಕ್ರವಾರ ಏರ್ ಗನ್ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಒಂಬತ್ತು ವರ್ಷದ ಬಾಲಕನೊಬ್ಬ ಎದೆಗೆ ಪೆಲೆಟ್ ತಾಗಿ ಸಾವಿಗೀಡಾಗಿದ್ದಾನೆ.
ಹಾವೇರಿ ಜಿಲ್ಲೆಯ ಮೂಲದ ಕೃಷಿ ಕಾರ್ಮಿಕ ಬಸಪ್ಪ ಉಂಡಿಯಾರ ಅವರ ಮಕ್ಕಳು ಸೋಮನಹಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಅವರಿಗೆ ಸೇರಿದ ತೋಟದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, “ಕೋತಿಗಳ ಉಪಟಳ ನಿಯಂತ್ರಿಸಲು ಗ್ರಾಮಸ್ಥರು ನೇಮಿಸಿದ್ದ ನಿತೀಶ್ ಗೌಡ, ಹೆಗಡೆ ಅವರಿಗೆ ಸೇರಿದ ಏರ್ ಗನ್ನೊಂದಿಗೆ ತೋಟಕ್ಕೆ ಬಂದಿದ್ದರು. ಈ ವೇಳೆ ಏಳು ವರ್ಷದ ಬಾಲಕನೊಬ್ಬ ಅಜಾಗರೂಕತೆಯಿಂದ ಟ್ರಿಗ್ಗರ್ ಎಳೆದಿದ್ದಾನೆ. ಗನ್ನಿಂದ ಹೊರಟ ಪೆಲೆಟ್ ಒಂಬತ್ತು ವರ್ಷದ ಬಾಲಕ ಕರಿಯಪ್ಪನ ಎದೆಗೆ ತಗುಲಿ ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.”
ಈ ಘಟನೆ ಸಂಬಂಧ ಸಿರ್ಸಿ ಪೊಲೀಸರು ತೋಟದ ಮಾಲೀಕ ರಾಘವೇಂದ್ರ ಹೆಗಡೆ ಮತ್ತು ನಿತೀಶ್ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.