ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಅಸ್ಥಿಪಂಜರಗಳಿಗಾಗಿ ವಿಶೇಷ ತನಿಖಾ ತಂಡ (SIT) ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಇದೀಗ ಇನ್ನೂ ಒಂದು ವಾರ ಕಾಲ ಶೋಧ ಕಾರ್ಯ ನಡೆಸಲು ನಿರ್ಧರಿಸಿದೆ.
ದೂರುದಾರರು ಗುರುತಿಸಿದ 15 ಸ್ಥಳಗಳು ಮಾತ್ರವಲ್ಲದೆ, ಅವರು ತೋರಿಸಿದ ಎಲ್ಲಾ ಸ್ಥಳಗಳಲ್ಲಿಯೂ ಶೋಧ ಕಾರ್ಯ ನಡೆಸಲು ಎಸ್ಐಟಿ ಚಿಂತನೆ ನಡೆಸಿದೆ. ಇದಕ್ಕಾಗಿ 13ನೇ ಪಾಯಿಂಟ್ನಲ್ಲಿ ಶೋಧ ನಡೆಸಲು ಗ್ರೌಂಡ್-ಪೆನೆಟ್ರೇಟಿಂಗ್ ರೇಡಾರ್ (GPR) ಯಂತ್ರವನ್ನು ಬಳಸಲು ನಿರ್ಧರಿಸಲಾಗಿದೆ. ಈ ಯಂತ್ರ ಬಂದ ನಂತರ ಎಸ್ಐಟಿ ತಂಡವು 13ನೇ ಪಾಯಿಂಟ್ಗೆ ಭೇಟಿ ನೀಡಲಿದೆ. ಈ ವಿಷಯದ ಕುರಿತು ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರು ಗೃಹ ಸಚಿವ ಪರಮೇಶ್ವರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಇದರ ಜೊತೆಗೆ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಎಸ್ಐಟಿಯನ್ನು “ಪೊಲೀಸ್ ಠಾಣೆ” ಎಂದು ಘೋಷಿಸಿದೆ. ಈ ಮೂಲಕ ಎಸ್ಐಟಿಗೆ ಪೊಲೀಸ್ ಠಾಣೆಯ ಮಾನ್ಯತೆ ನೀಡಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ದೋಷಾರೋಪಣಾ ಪತ್ರ (charge sheet) ಸಲ್ಲಿಸುವ ಅಧಿಕಾರವನ್ನೂ ನೀಡಿದೆ.