Sunday, June 8, 2025

ಸತ್ಯ | ನ್ಯಾಯ |ಧರ್ಮ

ಕರಾವಳಿ ಭಾಗದ ಸಾಮಾಜಿಕ ಕಾರ್ಯಕರ್ತರಿಂದ ಬಿ ಕೆ ಹರಿಪ್ರಸಾದ್ ಭೇಟಿ, ಕರಾವಳಿಯ ಮತೀಯ ರಾಜಾಕರಣದ ಕುರಿತು ಚರ್ಚೆ

ಕರಾವಳಿ ಜಿಲ್ಲೆಗಳಲ್ಲಿ ಭುಗಿಲೆದ್ದಿರುವ ಮತೀಯ ಹಿಂಸಾಚಾರ, ದ್ವೇಷ ಭಾಷಣ, ಪ್ರತೀಕಾರದ ಹತ್ಯೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಮಂಗಳೂರಿಗೆ ಆಗಮಿಸಿರುವ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಸದಸ್ಯ ಬಿ ಕೆ ಹರಿಪ್ರಸಾದ್ ಅವರನ್ನು ದ.ಕ‌. ಉಡುಪಿ ಜಿಲ್ಲೆಯ ಪ್ರಮುಖ ಚಿಂತಕರು, ಬರಹಗಾರರು, ರಂಗಕರ್ಮಿಗಳು, ಸಾಮಾಜಿಕ ಕಾರ್ಯಕರ್ತರು, ವಿವಿಧ ಚಳವಳಿಗಳ ಪ್ರಮುಖರು ಭೇಟಿಯಾದರು.

ಹೆಚ್ಚುತ್ತಿರುವ ಕೋಮು ಸಂಘರ್ಷ, ಆಳಗೊಳ್ಳುತ್ತಿರುವ ಮತೀಯ ಧ್ರುವೀಕರಣದ ಕುರಿತು ಕಳವಳ ವ್ಯಕ್ತ ಪಡಿಸಿದರು. ಶಾಂತಿ, ಸಾಮರಸ್ಯ ಮರಳಿ ನೆಲೆಗೊಳಿಸಲು ಸರಕಾರ ಕೈಗೊಳ್ಳಬೇಕಾದ ಕೆಲಸಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು, ಸಲಹೆಗಳನ್ನು ನೀಡಿದರು. ಸುಮಾರು ಎರಡು ತಾಸುಗಳ ಕಾಲ ಸಭೆ ನಡೆಯಿತು.

ಮೂರು ದಶಕಗಳಿಗಿಂತೂ ದೀರ್ಘ ಅವಧಿಯಲ್ಲಿ ವ್ಯವಸ್ಥಿತವಾಗಿ ಕೋಮುವಾದಿ ಸಿದ್ದಾಂತವನ್ನು ಕರಾವಳಿ ಜಿಲ್ಲೆಯಲ್ಲಿ ಹರಡಲಾಗಿದೆ. ಸರಿಯಾದ ಪ್ರತಿರೋಧ ಒಡ್ಡದಿರುವುದರಿಂದ ಇಂದು ಕೋಮುವಾದ ಯಾರ ಅಂಕೆಗೂ ಸಿಗದಷ್ಟು ರಾಕ್ಷಸೀ ರೂಪ ತಾಳಿದೆ. ಈ ಅವಧಿಯಲ್ಲಿ ಅಧಿಕಾರಕ್ಕೆ ಬಂದ  ಕಾಂಗ್ರೆಸ್ ಸರಕಾರ ಈ ಕುರಿತು ಸ್ಪಷ್ಟ ಧೋರಣೆ ಹೊಂದದಿರುವುದರಿಂದ ಬಿಜೆಪಿ ಸರಕಾರದ ಪತನದ ಹೊರತಾಗಿಯು ಸಂಘ ಪರಿವಾರದ ಶಕ್ತಿಗಳ ಚಟುವಟಿಕೆ ತಡೆ ಇಲ್ಲದೆ ಮುಂದುವರಿದಿದೆ. ದ್ವೇಷ ಭಾಷಣಗಳು ತಡೆ ರಹಿತವಾಗಿ ನಡೆಯುತ್ತಿದೆ. ಇದು ಭೀಕರ ಹತ್ಯೆಗಳಿಗೂ ಸಾಕ್ಷಿ ಆಗುತ್ತಿರುವುದು ಭೀತಿಗೆ ಕಾರಣವಾಗಿದೆ ಎಂದು ಚಿಂತಕರು ಮತ್ತು ಸಾಮಾಜಿಕ ಹೋರಾಟಗಾರರ ತಂಡ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರ ಗಮನ ಸೆಳೆಯಿತು.

ರಾಜ್ಯದ ಸಿದ್ದರಾಮಯ್ಯ ಸರಕಾರ ಕೋಮು ಶಕ್ತಿಗಳ ನಿಗ್ರಹಕ್ಕೆ ಈಗಲಾದರು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚಿಂತಕರು ಅಭಿಪ್ರಾಯ ಪಟ್ಟರು. ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ವಲಯಗಳಲ್ಲಿ ಸೌಹಾರ್ದತೆಯನ್ನು ಉದ್ದೀಪನಗೊಳಿಸುವ ಕಾರ್ಯಕ್ರಮಗಳು ನಡೆಯಬೇಕು, ದ.ಕ‌. ಉಡುಪಿ ಜಿಲ್ಲೆಗಳಲ್ಲಿ ದಂಧೆಗಳ ಲೋಕ, ಹಾಗೂ ಮತೀಯ ಗೂಂಡಾಗಳ ಲೋಕ ಒಂದಕ್ಕೊಂದು ಬೆಸೆದುಕೊಂಡಿದ್ದು, ಇವುಗಳನ್ನು ಮುಲಾಜಿಲ್ಲದೆ ಮಟ್ಟ ಹಾಕಬೇಕು. ದ್ವೇಷ ಭಾಷಣ, ಮಾಬ್ ಲಿಂಚಿಂಗ್, ಹತ್ಯಾ ಪ್ರಕರಣಗಳಲ್ಲಿ ಜಾಮೀನು ದೊರಕದಂತೆ ಕಾನೂನಾತ್ಮಕ ದೃಢ ಕ್ರಮಗಳನ್ನು ಕೈಗೊಳ್ಳಬೇಕು, ಜಿಲ್ಲಾಡಳಿತದ ಎಲ್ಲಾ ವಿಭಾಗಗಳು, ಪೊಲೀಸ್ ಇಲಾಖೆ, ವಿ ವಿ ಸೇರಿದಂತೆ ಆಯಕಟ್ಟಿನ ವಿಭಾಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.

ಮಾನವೀಯತೆ, ಸಂವಿಧಾನದ ಮೌಲ್ಯಗಳನ್ನು ಜನತೆಗೆ ತಲುಪಿಸುವ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸರಕಾರ ವ್ಯಾಪಕವಾಗಿ ನಡೆಸಬೇಕು, ಸಾಮಾಜಿಕ ಚಳವಳಿಗಳು ನಡೆಸುವ ಸೌಹಾರ್ದ ಕಾರ್ಯಕ್ರಮಗಳಿಗೆ ಬೆಂಬಲ ನೀಡಬೇಕು, ಸಾಮರಸ್ಯ, ಸಹಬಾಳ್ವೆಯ ಕರೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.

ಇದರ ಜೊತೆಗೆ ಹಲವು ಮಹತ್ವದ  ಅಂಶಗಳ ಮೇಲೆ ಗಂಭೀರ ಚರ್ಚೆ ನಡೆಯಿತು. ಚಿಂತಕರ ನಿಯೋಗದ ಅಭಿಪ್ರಾಯಗಳನ್ನು ಆಲಿಸಿದ ಬಿ ಕೆ ಹರಿಪ್ರಸಾದ್ ಈ ಕುರಿತು ಜಾತ್ಯಾತೀತ ಶಕ್ತಿಗಳ ಜೊತೆಗಿರುವುದಾಗಿ ಭರವಸೆ ನೀಡಿದರು, ಮುಖ್ಯಮಂತ್ರಿಗಳ ಜೊತೆಗೆ ಕರಾವಳಿಯ ಚಿಂತಕರು, ಬರಹಗಾರರು, ಸಂಘಟನೆಗಳ ಪ್ರಮುಖರ ಸಭೆ ಏರ್ಪಡಿಸುವುದಾಗಿ ತಿಳಿಸಿದರು.

ಸಮಾನ ಮನಸ್ಕ ಸಂಘಟನೆ ಗಳ ಒಕ್ಕೂಟದ ಸಂಚಾಲಕರಾದ ಮುನೀರ್ ಕಾಟಿಪಳ್ಳ ಸ್ವಾಗತಿಸಿ ಸಭೆಯ ಉದ್ದೇಶವನ್ನು ವಿವರಿಸಿದರು. ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಖ್ಯಾತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಜನಪದ ವಿದ್ವಾಂಸ ಡಾ‌.ಗಣನಾಥ ಶೆಟ್ಟಿ ಎಕ್ಕಾರು, ನಿವೃತ್ತ ಪ್ರಾಂಶುಪಾಲರು, ಲೇಖಕರು ಆದ ಡಾ.ಉದಯ ಇರ್ವತ್ತೂರು, ನಿವೃತ್ತ ಪ್ರಾಧ್ಯಾಪಕ ಡಾ ಶಿವರಾಮ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಡಾ ಎನ್ ಇಸ್ಮಾಯಿಲ್, ಡಾ‌.ಅಮರಶ್ರೀ ಮೂಡಬಿದ್ರೆ, ವಾಸುದೇವ ಉಚ್ಚಿಲ್, ಸಹಬಾಳ್ವೆ ಉಡುಪಿಯ ಅಮೃತ್ ಶೆಣೈ, ರಥಬೀದಿ ಗೆಳೆಯರು, ಉಡುಪಿ ಇದರ ನಾಗೇಶ್ ಉದ್ಯಾವರ, ಕೀರ್ತಿ ಶೆಟ್ಟಿ ಅಂಬಲಪಾಡಿ,  ಸಿಪಿಎಂ ಮುಖಂಡರಾದ ಕೆ ಯಾದವ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಹಿರಿಯ ನ್ಯಾಯವಾದಿಗಳಾದ ದಿನೇಶ್ ಹೆಗ್ಡೆ ಉಳೆಪ್ಪಾಡಿ, ಯಶವಂತ ಮರೋಳಿ,ದಲಿತ ಚಳವಳಿಯ ನಾಯಕರಾದ ಎಂ ದೇವದಾಸ್,ಕ್ರಷ್ಣಾನಂದ ಬಜ್ಪೆ ,ಸದಾಶಿವ ಪಡುಬಿದ್ರೆ, ರಘು ಎಕ್ಕಾರು ,ಮಾಜಿ ಮೇಯರ್ ಕೆ ಅಶ್ರಫ್, ಸಾಮಾಜಿಕ ಹೋರಾಟಗಾರರಾದ ಮಂಜುಳಾ ನಾಯಕ್, ಬಿ ಎನ್ ದೇವಾಡಿಗ, ಟಿ ಆರ್ ಭಟ್, ಸ್ವರ್ಣಾ ಭಟ್, ದಿಲ್ ರಾಜ್ ಆಳ್ವ, ಸಮರ್ಥ್ ಭಟ್,ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಸೀತಾರಾಮ ಬೇರಿಂಜ,ಕರುಣಾಕರ್ ಮಾರಿಪಳ್ಳ, ಸಿಪಿಐ ನ.ವಿ ಕುಕ್ಯಾನ್, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ರೋಯ್ ಕ್ಯಾಸ್ಟಲಿನೋ,ಪ್ಲೇವಿಕ್ರಾಸ್ತಾ ಅತ್ತಾವರ, ಡೋಲ್ಪಿ ಡಿಸೋಜ, ರಚನಾ ಸಂಸ್ಥೆಯ ಜೋನ್ ಮುಂತೇರೋ,ಕೆಥೋಲಿಕ್ ಸಭಾದ ಸಂತೋಷ್ ಡಿಸೋಜ,ಡಿವೈಎಫ್ಐ ನ ನ‌ ಬಿಕೆ ಇಮ್ತಿಯಾಜ್, ಮಹಿಳಾ ಸಂಘಟನೆ ಯ ಅಸುಂತ ಡಿಸೋಜ, ಪ್ರಮೀಳಾ ಶಕ್ತಿನಗರ,ಸಾಂಸ್ಕೃತಿಕ ರಂಗದ ಸಂತೋಷ್ ಶೆಟ್ಟಿ ಹಿರಿಯಡ್ಕ, ವಿದ್ದು ಉಚ್ಚಿಲ್, ಹರೀಶ್ ಪೇಜಾವರ, ಶ್ಯಾಮಸುಂದರ್ ರಾವ್, ಚಿತ್ತರಂಜನ್ ಶೆಟ್ಟಿ ಬೊಂಡಾಲ ಮುಂತಾದವರು ಹಾಜರಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page