Saturday, June 28, 2025

ಸತ್ಯ | ನ್ಯಾಯ |ಧರ್ಮ

ಸಂಸತ್ತಿನ ಪೂರ್ವಸೂರಿಗಳು : ಭಾಗ 1: ಒಬ್ಬ ಅಪ್ಪಟ ಸಮಾಜವಾದಿ ನಾಯಕ ಆಚಾರ್ಯ ನರೇಂದ್ರ ದೇವ

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಅವರು ಬಿಟ್ಟುಹೋದ ಶಾಶ್ವತ ವಿಚಾರಗಳು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ವಿಶೇಷ ಕೊಡುಗೆಗಳನ್ನು ನೆನಪಿಸುತ್ತದೆ

ಭಾರತದ ಸಮಾಜವಾದಿ ಚಳುವಳಿ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಆಚಾರ್ಯ ನರೇಂದ್ರ ದೇವ ಅವರು ನೀಡಿದ ಕೊಡುಗೆಗಳ ಜೊತೆಗೆ ಬೌದ್ಧಧರ್ಮದ ಕುರಿತು ರಚಿಸಿದ ಸಾಹಿತ್ಯಿಕ ಕೃತಿ ಮತ್ತು ಇನ್ನೂ ಅನೇಕ ವಿಚಾರಗಳನ್ನು ಅವರ 69ನೇ ಸಂಸ್ಮರಣಾ ದಿನದಂದು ನಾವು ಮೆಲುಕು ಹಾಕಬೇಕು.

ಫೆಬ್ರವರಿ 19, ಮಹಾನ್ ಸಮಾಜವಾದಿ ನಾಯಕ ಆಚಾರ್ಯ ನರೇಂದ್ರ ದೇವ ಸಂಸ್ಮರಣಾ ದಿನ. 1956 ರಲ್ಲಿ ಅವರ ಮರಣದ ಮರುದಿನ, ಆಗಿನ ಪ್ರಧಾನಿ ಜವಾಹರಲಾಲ್ ನೆಹರು ರಾಜ್ಯಸಭೆಯಲ್ಲಿ ಆಡಿದ ಮಾತುಗಳು ಹೀಗಿವೆ:

“ಆಚಾರ್ಯ ನರೇಂದ್ರ ದೇವ ಅವರ ಸಾವು ನಮ್ಮಲ್ಲಿ ಅನೇಕರಿಗೆ ಬಹಳ ಆಘಾತದ ಸಂಗತಿ. ನನಗನ್ನಿಸುವಂತೆ ಒಟ್ಟು ದೇಶಕ್ಕೆ ಒಬ್ಬ ಬಹಳ ಪ್ರಮುಖ ವ್ಯಕ್ತಿಯ ಸಾವು ಎಂಬುದಕ್ಕಿಂತಲೂ ಮಿಗಿಲಾದುದು. ಅವರೊಬ್ಬ ಅಸಾಮಾನ್ಯ ಮತ್ತು ಅನನ್ಯ ವ್ಯಕ್ತಿಯಾಗಿದ್ದರು. ಹಲವು ಕ್ಷೇತ್ರಗಳಲ್ಲಿ ಅದನ್ನು ಸಾಬೀತು ಪಡಿಸಿದ್ದರು. ಅಸಾಮಾನ್ಯ ಉತ್ಸಾಹ, ಅಸಾಮಾನ್ಯ ಮಾನಸಿಕತೆ ಮತ್ತು ಅಪಾರ ಬುದ್ಧಿಶಕ್ತಿ, ಅಸಾಮಾನ್ಯ ಏಕಾಗ್ರತೆ ಹೀಗೆ ಮುಂದುವರಿಯುತ್ತದೆ. ಅವರ ದೇಹ ಮಾತ್ರವೇ ಅವರನ್ನು ಸೋಲಿಸಿತು. ಈ ಸದನದಲ್ಲಿ ನನಗಿಂತಲೂ ಹೆಚ್ಚು ಕಾಲ ಅವರೊಂದಿಗೆ ಸಂಬಂಧ ಹೊಂದಿದ್ದ ಯಾರಾದರೂ ಇದ್ದಾರೆಯೇ ಎಂಬುದರ ಕುರಿತು ನನಗೆ ಸಂಶಯವಿದೆ. ನಲ್ವತ್ತು ವರ್ಷಗಳ ಹಿಂದೆ ನಾವು ಒಟ್ಟಾಗಿ ಹೊರಟಿದ್ದೆವು. ಸ್ವಾತಂತ್ರ್ಯ ಹೋರಾಟದ ಧೂಳು ಮತ್ತು ಸೆಖೆಯಲ್ಲಿ ಜೊತೆಗಿದ್ದೆವು. ದೀರ್ಘ ಮೌನದ ಜೈಲು ವಾಸಗಳಲ್ಲಿಯೂ ನಾವು ಒಟ್ಟಿಗಿದ್ದೆವು. ಒಂದು ಕಡೆ ಸಾರ್ವಜನಿಕ ನಷ್ಟ, ಮತ್ತೊಂದು ಕಡೆ ವೈಯಕ್ತಿಕ ನಷ್ಟ. ಇಂತಹ ಅಪರೂಪದ ವ್ಯಕ್ತಿಯೊಬ್ಬರು ನಮ್ಮಿಂದ ಅಗಲಿದ್ದಾರೆ ಎಂದು ಹೇಳುವಾಗ, ಅಂತಹ ಇನ್ನೊಬ್ಬ ವ್ಯಕ್ತಿಯನ್ನು ಮತ್ತೆ ಹುಡುಕುವುದು ಕೂಡ ಕಷ್ಟ ಎಂಬುದು ಮತ್ತಷ್ಟು ನೋವಿನ ಸಂಗತಿ.”

ಆರಂಭಿಕ ಬದುಕು
ಭಾರತೀಯ ಸಮಾಜವಾದಿ ಚಳವಳಿಯ ಪ್ರಮುಖ ನಾಯಕ, ವಿದ್ವಾಂಸ ಮತ್ತು ಶಿಕ್ಷಕ, ಶಿಕ್ಷಣತಜ್ಞ, ಕಟ್ಟಾ ರಾಷ್ಟ್ರೀಯವಾದಿ, ಅಷ್ಟೇ ಪ್ರಖರ ಮಾರ್ಕ್ಸ್‌ವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ನರೇಂದ್ರ ದೇವ ಅವರು ಅಕ್ಟೋಬರ್ 31, 1889 ರಂದು ಉತ್ತರ ಪ್ರದೇಶದ ಸೀತಾಪುರದಲ್ಲಿ ಜನಿಸಿದರು. ಅವರು ಈಗಿನ ಪಾಕಿಸ್ತಾನದ ಭಾಗವಾಗಿರುವ ಪಂಜಾಬಿನ ಸಿಯಾಲ್‌ಕೋಟ್‌ನ ಮಧ್ಯಮ ವರ್ಗದ ಹಿಂದೂ ಖಾತ್ರಿ ಕುಟುಂಬಕ್ಕೆ ಸೇರಿದವರು. ಅವರ ಕುಟುಂಬ ವಾಸವಿದ್ದದ್ದು ಮಾತ್ರ ಫೈಜಾಬಾದ್‌ನಲ್ಲಿ.

ಸಂಸ್ಕೃತದಲ್ಲಿ ಆರಂಭಿಕ ಶಿಕ್ಷಣ ಪಡೆದ ನಂತರ, ನರೇಂದ್ರ ದೇವ ಅವರು 1906 ರಲ್ಲಿ ಅಲಹಾಬಾದ್‌ನ ಮುಯಿರ್ ಸೆಂಟ್ರಲ್ ಕಾಲೇಜಿಗೆ ಸೇರಿದರು. ಅಲ್ಲಿದ್ದಾಗ, ಅವರು ಪ್ರಿನ್ಸ್ ಪೀಟರ್ ಕ್ರೊಪೊಟ್ಕಿನ್ ಅವರ ಮೆಮೋಯರ್ಸ್ ಆಫ್ ಎ ರೆವಲ್ಯೂಷನರಿ ಮತ್ತು ಮ್ಯೂಚುಯಲ್ ಏಯ್ಡ್ , ಎ.ಕೆ. ಕುಮಾರಸ್ವಾಮಿ ಅವರ ಎಸ್ಸೇಸ್ ಇನ್ ನ್ಯಾಷನಲ್ ಐಡಿಯಲಿಸಂ , ರಷ್ಯಾದ ಲೇಖಕ ಇವಾನ್ ತುರ್ಗೆನೆವ್ ಅವರ ಕಥೆಗಳು, ಜೋಹಾನ್ ಕ್ಯಾಸ್ಪರ್ ಬ್ಲಂಟ್‌ಷ್ಲಿ ಅವರ ದಿ ಥಿಯರಿ ಆಫ್ ದಿ ಸ್ಟೇಟ್ ಮತ್ತು ಆರು ಸಂಪುಟಗಳಲ್ಲಿದ್ದ ಲೈಫ್‌ ಆಂಡ್‌ ರೈಟಿಂಗ್ಸ್‌ ಆಫ್‌ ಜೋಸೆಫ್‌ ಮಜ್ಜಿನಿ ಮೊದಲಾದ ಕೃತಿಗಳನ್ನು ಓದಿಕೊಂಡಿದ್ದರು. ಇವುಗಳ ಜೊತೆಗೆ ರಷ್ಯಾದ ಬಹಳಷ್ಟು ನಿರಾಕರಣವಾದಿ ಸಾಹಿತ್ಯವನ್ನೂ ಓದಿಕೊಂಡಿದ್ದರು.

ಪದವಿಯ ನಂತರ, ಅವರು ಡಾ. ಆರ್ಥರ್ ವೆನಿಸ್ ಮತ್ತು ಪ್ರೊಫೆಸರ್ ಹ್ಯಾರಿ ನಾರ್ಮನ್ ಅವರ ಮಾರ್ಗದರ್ಶನದಲ್ಲಿ ಸಂಸ್ಕೃತ ಸ್ನಾತಕೋತ್ತರ ಪದವಿಗಾಗಿ ಬನಾರಸ್‌ನ ಕ್ವೀನ್ಸ್ ಕಾಲೇಜ್‌ ಸೇರಿದರು. ಈ ಇಬ್ಬರೂ ಅವರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿದವರು.

ಪಾಲಿ, ಪ್ರಾಕೃತ, ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಸಹ ಅವರು ಅಧ್ಯಯನ ಮಾಡಿಕೊಂಡಿದ್ದರು. 1913 ರ ಹೊತ್ತಿಗೆ ಅವರು ಎಂ.ಎ ಪದವಿ ಮತ್ತು 1915 ರ ಹೊತ್ತಿಗೆ ಎಲ್.ಎಲ್.ಬಿ ಪದವಿಗಳನ್ನು ಪಡೆದುಕೊಂಡಿದ್ದರು.

ನರೇಂದ್ರ ದೇವ ಅವರು ನಿಧಾನಕ್ಕೆ ಲಾಲ್-ಬಾಲ್-ಪಾಲ್ ಅವರ ರಾಜಕೀಯಕ್ಕೆ ಆಕರ್ಷಿತರಾಗುತ್ತಿದ್ದರು. ಪರಿಣಾಮವಾಗಿ, ಅವರು ಸ್ವದೇಶಿ ಪ್ರತಿಜ್ಞೆ ಕೈಗೊಂಡರು. 1920-21ರ ಅಸಹಕಾರ ಚಳವಳಿಯ ಹೊತ್ತಿನಲ್ಲಿ ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿ ಕಾಶಿ ವಿದ್ಯಾಪೀಠವನ್ನು ಸೇರಿದರು. ಅಲ್ಲಿ 1926 ರಲ್ಲಿ ಅವರು ಪ್ರಾಂಶುಪಾಲರಾಗಿ ನೇಮಕಗೊಳ್ಳುತ್ತಾರೆ. ಅದರ ನಂತರ “ಆಚಾರ್ಯ” ಎಂಬುದು ಅವರ ಹೆಸರಿನ ಜೊತೆಗೆ ಶಾಶ್ವತವಾಗಿ ಅಂಟಿಕೊಳ್ಳುತ್ತದೆ.

ನರೇಂದ್ರ ದೇವ ಅವರು ರಷ್ಯಾ ಕ್ರಾಂತಿ ಮತ್ತು ಅದರ ನಂತರದ ಘಟನೆಗಳನ್ನು ಬಹಳ ಆಸಕ್ತಿಯಿಂದ ಗಮನಿಸುತ್ತಿದ್ದರು. ಆದರೆ ಅವರು ಕಾಶಿ ವಿದ್ಯಾಪೀಠಕ್ಕೆ ಬಂದ ನಂತರವೇ ವೈಜ್ಞಾನಿಕ ಸಮಾಜವಾದ ಅಥವಾ ಮಾರ್ಕ್ಸ್‌ವಾದದ ಅಧ್ಯಯನವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳುವುದು. ಅವರು ಆಳವಾಗಿ ಆಸಕ್ತಿ ಬೆಳೆಸಿಕೊಂಡಿದ್ದ ಇನ್ನೊಂದು ಕ್ಷೇತ್ರವೆಂದರೆ ಬೌದ್ಧ ತತ್ವಶಾಸ್ತ್ರ. ಅವಕಾಶ ಸಿಕ್ಕಾಗಲೆಲ್ಲ ಆ ಕುರಿತ ಅಧ್ಯಯನ ಮತ್ತು ಇತರರಿಗೆ ಕಲಿಸುವುದರಲ್ಲಿ ಬಹಳ ಆಸಕ್ತಿ ಹೊಂದಿದ್ದರು. 1921 ರಿಂದ 1948 ರಲ್ಲಿ ಕಾಂಗ್ರೆಸ್‌ ತೊರೆಯುವ ತನಕ ಅವರು ಯುಪಿಸಿಸಿ ಮತ್ತು ಎಐಸಿಸಿಯ ಸದಸ್ಯರಾಗಿದ್ದರು.

ಸಮಾಜವಾದಿ ಭವಿಷ್ಯದ ಕಲ್ಪನೆ
ನೆಹರೂ, ಎಸ್. ಶ್ರೀನಿವಾಸ ಅಯ್ಯಂಗಾರ್, ಸುಭಾಷ್ ಚಂದ್ರ ಬೋಸ್, ಜಾಕಿರ್ ಹುಸೇನ್ ಮತ್ತಿತರ ಒಂದು ಗುಂಪು ಕಾಂಗ್ರೆಸಿನ ಸಾಂಪ್ರದಾಯಿಕ ದಾರಿಯ ಬಗ್ಗೆ ಅತೃಪ್ತಿ ಹೊಂದಿತ್ತು. ಸ್ವಾತಂತ್ರ್ಯವನ್ನು ತನ್ನ ಗುರಿಯಾಗಿ ಅಳವಡಿಸಿಕೊಳ್ಳುವಂತೆ ಕಾಂಗ್ರೆಸ್ ಮೇಲೆ ಒತ್ತಡ ಹೇರಲೆಂದೇ ಅವರು ಇಂಡಿಪೆಂಡೆನ್ಸ್ ಫಾರ್ ಇಂಡಿಯಾ ಲೀಗ್ ರಚಿಸಿದ್ದರು. ಆ ಲೀಗ್ ವಿವಿಧ ಪ್ರಾಂತ್ಯಗಳಲ್ಲಿ ತನ್ನ ಶಾಖೆಗಳನ್ನು ಸ್ಥಾಪಿಸಿತ್ತು. ಲೀಗ್‌ನ ಭವಿಷ್ಯದ ಬಗ್ಗೆ ದೇವ ಆಶಾವಾದಿಯಾಗಿರಲಿಲ್ಲ. ಆದರೂ ದೇವ ಬೊಟ್ಟು ಮಾಡಿದ್ದ ನ್ಯೂನತೆಗಳ ಹೊರತಾಗಿಯೂ, ಲೀಗ್ ಪರಿಣಾಮಕಾರಿಯಾಗಿತ್ತು. ಡೊಮಿನಿಯನ್ ಸ್ಥಾನಮಾನಕ್ಕೆ ಅದು ಎತ್ತಿದ ವಿರೋಧವು ಕಾಂಗ್ರೆಸ್‌ನ ನೀತಿಯಲ್ಲಿ ಸಣ್ಣ ಮಟ್ಟಿಗಾದರೂ ಸುಧಾರಣೆಗೆ ಕಾರಣವಾಗಿತ್ತು.

ಬ್ರಿಟಿಷ್ ಸರ್ಕಾರ ಭಾರತಕ್ಕೆ ಒಂದು ವರ್ಷದೊಳಗೆ ಡೊಮಿನಿಯನ್ ಪದವಿ ನೀಡದಿದ್ದರೆ, ಮುಂದಿನ ಅಧಿವೇಶನದಲ್ಲಿ ಸಂಪೂರ್ಣ ಸ್ವಾತಂತ್ರ್ಯದ ನಿರ್ಣಯವನ್ನು ಅಂಗೀಕರಿಸುವುದಾಗಿ ಡಿಸೆಂಬರ್ 1928 ರ ಕಲ್ಕತ್ತಾ ಕಾಂಗ್ರೆಸ್‌ ಅಧಿವೇಶನದಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು. 1929 ರ ಲಾಹೋರ್‌ ಅಧಿವೇಶನದಲ್ಲಿ ಆ ನಿರ್ಣಯವನ್ನು ಕೈಗೊಳ್ಳಲಾಯಿತು ಕೂಡ. ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಟ ಸಂಘಟಿಸುವ ನಿರ್ಣಯವನ್ನೂ ಅದು ಅಂಗೀಕರಿಸಿತ್ತು. ಭಾರತವು ಹೋರಾಟದ ಬಾಗಿಲಿಗೆ ಬಂದು ನಿಂತಿತ್ತು. ಮುಂದಿನ ಹೋರಾಟಕ್ಕೆ ಜನರನ್ನು ಅಣಿಗೊಳಿಸುವ ಕಾರ್ಯದಲ್ಲಿ ನರೇಂದ್ರ ದೇವ ಅವರು ಪ್ರಮುಖ ಪಾತ್ರ ವಹಿಸಿದರು. ಊರೂರು ತಿರುಗಿ ಅವರು “ಸಂಪೂರ್ಣ ಸ್ವಾತಂತ್ರ್ಯ”ದ ಅರ್ಥವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ಸ್ವದೇಶಿ ಸಂಕೇತವಾಗಿ ಚರಕವನ್ನು ಬಳಸುವಂತೆ ಪ್ರಚಾರ ಮಾಡಿದರು.

ಸೆಪ್ಟೆಂಬರ್‌ 1931 ರಲ್ಲಿ ನಡೆದ ಎರಡನೇ ದುಂಡು ಮೇಜಿನ ಸಭೆಯು ಯಾವುದೇ ಪರಿಹಾರವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿ, ಗಾಂಧೀಜಿಯು ಬರಿಗೈಯಲ್ಲಿ ಭಾರತಕ್ಕೆ ಮರಳಿದ ನಂತರ, ಯುಪಿಯಲ್ಲಿ ಕರ ನಿರಾಕರಣೆ ಚಳುವಳಿ ಆರಂಭಗೊಂಡಿತ್ತು. ದೇವ ಈ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಾರೆ. ಅದರ ಪರಿಣಾಮವಾಗಿ 16 ಅಕ್ಟೋಬರ್‌ 1932 ರಂದು ಅವರನ್ನು ಬಂಧಿಸಿ ಬನಾರಸ್‌ ಜೈಲಿಗೆ ಕಳಿಸಲಾಗುತ್ತದೆ. ಅಲ್ಲಿಂದ 1933 ರಲ್ಲಿ ಬಿಡುಗಡೆಗೊಳ್ಳುತ್ತಾರೆ.

1926 ರಲ್ಲಿ, ನರೇಂದ್ರ ದೇವ ಅವರು ಯುಪಿ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ಆಶ್ರಯದಲ್ಲಿ ಸಂಪೂರ್ಣಾನಂದರೊಂದಿಗೆ ಸೇರಿಕೊಂಡು ಒಂದು ಸಮಾಜವಾದಿ ಕೃಷಿ ಕಾರ್ಯಕ್ರಮವನ್ನು ರೂಪಿಸಿ ಅದನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಗೆ ಕಳುಹಿಸಿ ಕೊಡುತ್ತಾರೆ. 1929 ರಲ್ಲಿ ನೆಹರೂ ಈ ಕಾರ್ಯಕ್ರಮವನ್ನು ಎಐಸಿಸಿ ಅಂಗೀಕರಿಸುವಂತೆ ನೋಡಿಕೊಳ್ಳುತ್ತಾರೆ. 1931 ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕರಾಚಿ ಅಧಿವೇಶನವು “ಸಮಾಜವಾದಿ ಅಭಿವೃದ್ಧಿ ಮಾದರಿ”ಯನ್ನು ಭಾರತದ ಗುರಿಯಾಗಿ ಘೋಷಿಸುತ್ತದೆ. ಕರಾಚಿ ನಿರ್ಣಯವನ್ನು ರಚಿಸಿದ ನೆಹರೂ, ಅದರ ಮೂಲವು 1929 ರ ಯುಪಿಸಿಸಿ ನಿರ್ಣಯದಲ್ಲಿದೆ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಳ್ಳುತ್ತಾರೆ.

1934 ರ ಹೊತ್ತಿಗೆ ದೇವ ಅವರು ಭಾರತದ ಪ್ರಮುಖ ಸೈದ್ಧಾಂತಿಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಜಯಪ್ರಕಾಶ್‌ ನಾರಾಯಣ್‌ ಮೊದಲ ಕಾರ್ಯದರ್ಶಿಯಾಗಿದ್ದ “ಕಾಂಗ್ರೆಸ್ ಸಮಾಜವಾದಿ ಪಕ್ಷದ” ಸ್ಥಾಪಕರಾಗಿದ್ದರು ನರೇಂದ್ರ ದೇವ. ತಮ್ಮ ಕೊನೆಗಾಲದವರೆಗೂ ಆ ಪಕ್ಷದ ಉನ್ನತ ನಾಯಕರಾಗಿ ಗುರುತಿಸಿಕೊಂಡಿದ್ದರು. ಅವರ ಪ್ರಜಾಸತ್ತಾತ್ಮಕ ಸಮಾಜಾದವು ಹಿಂಸೆಯನ್ನು ತನ್ನ ತಾತ್ವಿಕತೆಯಲ್ಲವೆಂದು ಅಲ್ಲಗಳೆದು ಸತ್ಯಾಗ್ರಹವನ್ನು ಕ್ರಾಂತಿಕಾರಿ ಮಾರ್ಗವನ್ನಾಗಿ ಸ್ವೀಕರಿಸಿತ್ತು.

17 ಮೇ 1934 ರಂದು ಪಾಟ್ನಾದಲ್ಲಿ ನಡೆದ ಸಿಎಸ್‌ಪಿಯ ಮೊದಲ ಸಂಸ್ಥಾಪನಾ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ನರೇಂದ್ರ ದೇವ ಅವರು ಹೀಗೆ ಹೇಳಿದರು:
“ಸಮಾಜವಾದವು ಈ ದೇಶದಲ್ಲಿ ಈಗಾಗಲೇ ನೆಲೆಯೂರಿದೆ. ಕಾಂಗ್ರೆಸ್ ಒಳಗೆ ಮತ್ತು ದೇಶದಲ್ಲಿ ಅದು ದಿನೇ ದಿನೇ ಬಲ ಮತ್ತು ಪ್ರತಿಷ್ಠೆಯನ್ನು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಒಳಗೆ ಕಾಣಿಸಿಕೊಂಡಿರುವ ಈ ಹೊಸ ಚಿಂತನಾ ಶಾಲೆಯ ಸಾಮಾಜಿಕ ಅಡಿಪಾಯವೆಂದರೆ ಪ್ರಜಾಸತ್ತಾತ್ಮಕ ಬುದ್ಧಿಜೀವಿಗಳು. ಕಾಂಗ್ರೆಸ್ಸಿನ ಹೊರಗೆ ಅದರ ಅನುಯಾಯಿಗಳಲ್ಲಿ ಮುಖ್ಯವಾಗಿ ಕಾರ್ಮಿಕ ಪ್ರತಿನಿಧಿಗಳು ಮತ್ತು ಸ್ವಲ್ಪ ಮಟ್ಟಿಗೆ ರೈತರು ಇದ್ದಾರೆ. ಇವರೇ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ನಿಜವಾದ ಕ್ರಾಂತಿಕಾರಿಗಳು. ವಾಸ್ತವದಲ್ಲಿ ಕಾರ್ಮಿಕ ವರ್ಗವು ಮುಂಚೂಣಿಯಲ್ಲಿದ್ದರೆ, ರೈತರು ಮತ್ತು ಬುದ್ಧಿಜೀವಿಗಳು ಅದಕ್ಕೆ ಪೂರಕ ಅಂಶಗಳಾಗಿದ್ದಾರೆ.”

ಆ ಕಾಲದಲಿ ಜೈಲಿನಲ್ಲಿದ್ದ ನೆಹರೂ ಅವರನ್ನು ನರೇಂದ್ರ ದೇವ ಆತ್ಮೀಯವಾಗಿ ನೆನಪಿಸಿಕೊಳ್ಳುತ್ತಾರೆ. ಕಾಂಗ್ರೆಸ್‌ ಪಕ್ಷದೊಳಗೆ ಸಿಎಸ್‌ಪಿಯನ್ನು ಸ್ಥಾಪಿಸಲು ತನಗೆ ನೆಹರೂ ಸ್ಪೂರ್ತಿ ಎಂದೂ ಹೇಳುತ್ತಾರೆ.

“ಸ್ನೇಹಿತರೇ, ನಮ್ಮ ಮಹಾನ್ ನಾಯಕ ಪಂಡಿತ್ ಜವಾಹರಲಾಲ್ ನೆಹರೂ ಅವರ ಅನುಪಸ್ಥಿತಿಯಲ್ಲಿ ನಾವು ಇಂದು ಕಾಂಗ್ರೆಸ್‌ನೊಳಗೆ ಸಮಾಜವಾದಿ ಚಳವಳಿಯ ಮೊದಲ ಘಟಕವನ್ನು ಸ್ಥಾಪಿಸುತ್ತಿದ್ದೇವೆ. ಈ ನಮ್ಮ ಕಾರ್ಯವು ಅತ್ಯಂತ ಕಷ್ಟಕರವಾಗಿದೆ. ಅವರ ಅಮೂಲ್ಯ ಸಲಹೆ, ಮಾರ್ಗದರ್ಶನ ಮತ್ತು ನಾಯಕತ್ವದಿಂದ ನಾವು ಇನ್ನೆಷ್ಟು ಕಾಲ ವಂಚಿತರಾಗಲಿದ್ದೇವೆ ಎಂದು ನಮಗೆ ತಿಳಿದಿಲ್ಲ. ಕಾಂಗ್ರೆಸ್‌ನೊಳಗಿನ ಈ ಹೊಸ ಪಕ್ಷದ ಉದಯವನ್ನು ಅವರು ಸಂತೋಷದಿಂದ ಸ್ವಾಗತಿಸುತ್ತಾರೆ ಮತ್ತು ಜೈಲು ಕಂಬಿಗಳ ಹಿಂದೆಯಿದ್ದರೂ ನಮ್ಮ ಪ್ರಗತಿಯನ್ನು ಅವರು ಬಹಳ ಆಸಕ್ತಿಯಿಂದ ಗಮನಿಸುತ್ತಾರೆ ಎಂದು ಖಚಿತವಾಗಿ ತಿಳಿದಿದೆ. ಅವರು ಹಾಕಿಕೊಟ್ಟ ಮಹಾನ್ ಮಾದರಿಯು ಅವರ ಸೆರೆವಾಸದ ಅವಧಿಯಲ್ಲಿ ನಮಗೆ ಉತ್ತೇಜನ ಮತ್ತು ಪ್ರೇರೇಪಣೆಯಾಗಿದೆ. ನಾವು ಗುರಿಯಿಟ್ಟಿರುವ ಉದ್ದೇಶವು ಅಂತಿಮವಾಗಿ ಗೆಲ್ಲುತ್ತದೆ ಎಂಬ ಭರವಸೆಯೊಂದಿಗೆ ನಾವು ಮುಂದುವರಿಯೋಣ.”

ತಮ್ಮ ಸಾರ್ವಜನಿಕ ಬುದುಕಿನ ಆರಂಭದಿಂದಲೂ, ನರೇಂದ್ರ ದೇವ ಅವರು ರೈತರ ಸಮಸ್ಯೆಗಳಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದರು. ಏಪ್ರಿಲ್ 11, 1936 ರಂದು, ರೈತ ಸಂಘಟನೆಗಳ ಪ್ರತಿನಿಧಿಗಳು ಲಕ್ನೋದಲ್ಲಿ ಸಭೆ ಸೇರಿದ್ದರು. ಆ ಮೂಲಕ ಅಖಿಲ ಭಾರತ ಕಿಸಾನ್ ಸಭಾ ಸ್ಥಾಪನೆಯಾಗುವುದು.

ದೇವ ಒಬ್ಬ ಮಾರ್ಕ್ಸ್‌ವಾದಿಯಾಗಿದ್ದರು. ಆದರೆ ಕಾರ್ಮಿಕರು ಮಾತ್ರವೇ ಕ್ರಾಂತಿಯ ಮುಂಚೂಣಿಯಲ್ಲಿರಬೇಕೆಂಬುದನ್ನು ಅವರು ನಂಬಿರಲಿಲ್ಲ. ಭಾರತದಂತಹ ಒಂದು ದೇಶದಲ್ಲಿ ರೈತರು ಕೂಡ ಕ್ರಾಂತಿಕಾರಿ ಪಾತ್ರವನ್ನು ನಿರ್ವಹಿಸಬಹುದು ಎಂದು ಅವರು ನಂಬಿದ್ದರು. ಮಾವೋ ತ್ಸೆ ತುಂಗ್ ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದರು.

1936 ರಲ್ಲಿ ನೆಹರೂ ನರೇಂದ್ರ ದೇವ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಹ್ವಾನಿಸುತ್ತಾರೆ. 1938 ರವರೆಗೆ ಅವರು ಆ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಅದೇ ವರ್ಷ ದೇವ ಅವರನ್ನು ಯುಪಿಸಿಸಿ ಅಧ್ಯಕ್ಷರನ್ನಾಗಿಯೂ ಆಯ್ಕೆ ಮಾಡಲಾಗುತ್ತದೆ. ಜನವರಿ 1938 ರವರೆಗೆ ಅವರು ಆ ಹುದ್ದೆಯಲ್ಲಿ ಮುಂದುವರೆದಿದ್ದರು. 1937 ರಲ್ಲಿ, ಅವರು ಯುಪಿ ಶಾಸನ ಸಭೆಗೆ ಆಯ್ಕೆಯಾಗುತ್ತಾರೆ. ಆದರೆ, ತಮ್ಮ ಮೇಲಿದ್ದ ಒತ್ತಡವನ್ನೂ ಪರಿಗಣಿಸದೆ, ಕ್ಯಾಬಿನೆಟ್‌ ಸೇರಲು ನಿರಾಕರಿಸುತ್ತಾರೆ. ಸಿಎಸ್‌ಪಿ ಅಂತಹ ಪಾಲುದಾರಿಕೆಯನ್ನು ಬೆಂಬಲಿಸುತ್ತಿರಲಿಲ್ಲ.

ನರೇದ್ರ ದೇವ ಒಬ್ಬ ನಿರರ್ಗಳ ಭಾಷಣಕಾರರಾಗಿದ್ದರು. ಭಾರತೀಯ ರಾಜಕಾರಣವನ್ನು ಕಾಡುತ್ತಿದ್ದ ಮತ್ತು ಕೊನೆಗೆ ದೇಶ ವಿಭಜನೆಗೆ ಕಾರಣವಾದ ಕೋಮುವಾದದ ವಿರುದ್ಧ ಅವರು ನಿರಂತರವಾಗಿ ಮಾತನಾಡುತ್ತಿದ್ದರು. ಅಲ್ಪಸಂಖ್ಯಾತರ ರಕ್ಷಣೆಯ ಜೊತೆಗೆ, ಬಹುಸಂಖ್ಯಾತ ಸಮುದಾಯಗಳು ಅವರನ್ನು ನ್ಯಾಯಯುತವಾಗಿ ಮತ್ತು ಉದಾರವಾಗಿ ನಡೆಸಿಕೊಳ್ಳಬೇಕೆಂದು ಆಗ್ರಹಿಸುತ್ತಿದ್ದರು.

ಆಗಸ್ಟ್ 7-8, 1942 ರಂದು ಬಾಂಬೆಯಲ್ಲಿ ನಡೆದ ಎಐಸಿಸಿ ಸಭೆಯಲ್ಲಿ, ಗಾಂಧೀಜಿಯು “ಭಾರತ ಬಿಟ್ಟು ತೊಲಗಿ” (ಕ್ವಿಟ್‌ ಇಂಡಿಯಾ) ನಿರ್ಣಯವನ್ನು ಮಂಡಿಸಿ “ಮಾಡು ಇಲ್ಲವೇ ಮಡಿ” ಎಂಬ ಘೋಷಣೆಯನ್ನು ಕೈಗೆತ್ತಿಕೊಂಡಾಗ, ನರೇಂದ್ರ ದೇವ ಕೂಡ ಮಾತನಾಡಿದ್ದರು. ಮರುದಿನ ಆಗಸ್ಟ್ 9, 1942 ರ ಮುಂಜಾನೆ ಗಾಂಧೀಜಿ ಮತ್ತು ಸಿಡಬ್ಯೂಸಿ ಸದಸ್ಯರನ್ನು ಬಂಧಿಸಲಾಗುತ್ತದೆ. ಗಾಂಧೀಜಿ ಮತ್ತು ಅವರ ತಂಡವನ್ನು ಪೂನಾದ ಆಗಾಖಾನ್ ಅರಮನೆಯಲ್ಲಿ ಮತ್ತು CWC ಸದಸ್ಯರನ್ನು ಅಹ್ಮದ್‌ನಗರ ಕೋಟೆಯಲ್ಲಿ ಬಂಧಿಸಿ ಇರಿಸಲಾಗಿತ್ತು. ನೆಹರೂ, ಮೌಲಾನಾ ಆಜಾದ್ ಮತ್ತು ಇತರರೊಂದಿಗೆ ದೇವಾ 1945 ರವರೆಗೆ ಅಹ್ಮದ್‌ನಗರದಲ್ಲಿ ಬಂಧನದಲ್ಲಿದ್ದರು.

ಈ ಜೈಲುವಾಸದ ಕಾಲದಲ್ಲಿ ನರೇಂದ್ರ ದೇವ ಅವರು ಸಾಹಿತ್ಯದ ಕಡೆಗೆ ಹೊರಳಿಕೊಳ್ಳುತ್ತಾರೆ. ಸರ್ವಸ್ತಿವಾದದ ಪ್ರಮುಖ ಕೃತಿಯಾದ ಪೌಸಿನ್‌ ಅವರ ಅಭಿಧರ್ಮಕೋಶವನ್ನು ಫ್ರೆಂಚ್‌ ಭಾಷೆಯಿಂದ ಹಿಂದಿಗೆ ಅನುವಾದಿಸುವ ಕೆಲಸವನ್ನು 1932-33 ರ ಹೊತ್ತಿಗೆ ಬನಾರಸ್‌ ಜೈಲಿನಿಂದ ಆರಂಭಿಸುತ್ತಾರೆ. ಭೌದ್ಧ ಧರ್ಮ ಮತ್ತು ತತ್ವಶಾಸ್ತ್ರದ ಬಗ್ಗೆ ಬರೆದ, ಅವರ ಮರಣಾನಂತರ ಪ್ರಕಟವಾದ 616 ಪುಟಗಳ ಭೌದ್ಧ ಧರ್ಮ ದರ್ಶನ್‌  ಅವರ ಮಹೋನ್ನತ ಕೃತಿಯೆಂದು ಪರಿಗಣಿತವಾಗಿದೆ. ನೆಹರೂ ಅವರ ಡಿಸ್ಕವರಿ ಆಫ್‌ ಇಂಡಿಯಾ ಕೃತಿಯ ರಚನೆಯಲ್ಲೂ ಅವರು ಸಹಾಯ ಮಾಡಿದ್ದರು.

ಕಾಂಗ್ರೆಸ್‌ ತೊರೆಯುವುದು
ಸ್ವಾತಂತ್ರ್ಯದ ನಂತರ, 1948 ರಲ್ಲಿ, ಸಮಾಜವಾದಿ ಪಕ್ಷವು ಕಾಂಗ್ರೆಸ್‌ನಿಂದ ಬೇರ್ಪಡಲು ನಿರ್ಧರಿಸುತ್ತದೆ. ನರೇಂದ್ರ ದೇವ ಸಹಿತ ಇತರ 11 ಸದಸ್ಯರುಗಳು ಯುಪಿ ವಿಧಾನಸಭೆಯ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಾರೆ. ಕಾಂಗ್ರೆಸ್‌ ಟಿಕೆಟ್‌ ಮೂಲಕ ಆಯ್ಕೆಯಾಗಿದ್ದ ಅವರು, ಆ ಸ್ಥಾನದಲ್ಲಿ ಮುಂದುವರಿಯಲು ತಮಗಿನ್ನು ನೈತಿಕ ಹಕ್ಕಿಲ್ಲ ಎಂದು ವಾದಿಸಿದ್ದರು.

ಮಾರ್ಚ್ 30, 1948 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಾಗ, ನರೇದ್ರ ದೇವ ಅವರು ಯುಪಿ ವಿಧಾನಸಭೆಯಲ್ಲಿ ಒಂದು ಭಾಷಣ ಮಾಡುತ್ತಾರೆ. ಅದರಲ್ಲಿ ಅವರು ಹೀಗೆ ಹೇಳುತ್ತಾರೆ:
“ಬೇಪರ್ಪಡುವಿಕೆ ಯಾವಾಗಲೂ ನೋವಿನ ಸಂಗತಿಯೇ ಆಗಿದೆ. ಕಾಂಗ್ರೆಸ್‌ನಿಂದ ನಮ್ಮ ಬೇರ್ಪಡುವಿಕೆಯೂ ಅದಕ್ಕೆ ಹೊರತಾಗಿಲ್ಲ. ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಆದರ್ಶಗಳು ಮತ್ತು ಉದ್ಧೇಶಗಳಿಗಾಗಿ ತಮ್ಮ ಆತ್ಮೀಯ ಸಂಗತಿಗಳನ್ನು ಕೂಡ ಕೆಲವೊಮ್ಮೆ ತೊರೆಯಬೇಕಾದ ಸಂದರ್ಭಗಳು ಕೆಲವು ವ್ಯಕ್ತಿಗಳ ಮತ್ತು ಸಂಘಟನೆಗಳ ಪಾಲಿಗೆ ಒದಗಿ ಬರುತ್ತವೆ. ನಾವಿಂದು ನಮ್ಮ ಹಿರಿಯರ ಮನೆಯನ್ನು ದುಃಖ ಮತ್ತು ಭಾರವಾದ ಹೃದಯದೊಂದಿಗೆ ತೊರೆಯುತ್ತಿದ್ದೇವೆ. ಹಾಗೆಂದು ಆ ಪರಂಪರೆಯ ಮೇಲಿನ ನಮ್ಮ ಹಕ್ಕನ್ನು ಬಿಟ್ಟುಕೊಡುವುದಿಲ್ಲ. ನಾವು ಮುಂದಿಡುತ್ತಿರುವ ಹಕ್ಕು ಭೌತಿಕ ವಸ್ತುಗಳ ಕುರಿತಾದದ್ದು ಅಲ್ಲವೇ ಅಲ್ಲ. ಆ ನಿಧಿಯಲ್ಲಿ ಆದರ್ಶಗಳು ಮತ್ತು ಉದಾತ್ತ ಉದ್ಧೇಶಗಳು ಅಡಗಿವೆ. ನಮಗೆ ನಮ್ಮ ಮೇಲೆ ಯಾವುದೇ ರೀತಿಯ ಪೊಳ್ಳು ಅಭಿಮಾನ ಇಲ್ಲ. ನಮ್ಮ ಮಿತಿಗಳ ಬಗ್ಗೆ ನಮಗೆ ತಿಳಿದಿದೆ. ನಮ್ಮ ನ್ಯೂನತೆಗಳ ಬಗ್ಗೆ ಸ್ಪಷ್ಟತೆಯಿದೆ. ನಮ್ಮ ಪರಂಪರೆಯನ್ನು ಮುಂದುವರಿಸಲು ನಾವು ಅರ್ಹರು ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತೇವೆ ಎಂದು ಮಾತ್ರ ನಾನು ಹೇಳಲು ಬಯಸುತ್ತೇನೆ. ವೈಯಕ್ತಿಕ ದಾಳಿಗಳನ್ನು ತಪ್ಪಿಸಲು ನಾವು ಪ್ರಯತ್ನಿಸುತ್ತೇವೆ ಮತ್ತು ಅಂತಹ ವಿವಾದಗಳಿಗೆ ಸಿಲುಕುವುದಿಲ್ಲ. ಮಹಾತ್ಮಾ ಗಾಂಧೀಜಿಯ ಬೋಧನೆಗಳನ್ನು ನಾವು ಮಾರ್ಗದರ್ಶನವಾಗಿ ಸ್ವೀಕರಿಸುತ್ತೇವೆ.”

ಇದರೊಂದಿಗೆ ಕಾಂಗ್ರೆಸ್‌ ಜೊತೆಗಿನ ಅವರ ಮೂರು ದಶಕಗಳ ಸಂಬಂಧ ಕೊನೆಗೊಳ್ಳುತ್ತದೆ. ನರೇಂದ್ರ ದೇವ ಮತ್ತು ಇತರರ ರಾಜೀನಾಮೆಯಿಂದ ಉಂಟಾದ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಾರೆ. 1948 ರ ಜೂನ್-ಜುಲೈ ತಿಂಗಳುಗಳಲ್ಲಿ ಚುನಾವಣೆ ನಡೆಯುತ್ತದೆ. ಚುನಾವಣಾ ಪ್ರಚಾರದ ಆರಂಭದಿಂದಲೂ ಕಾಂಗ್ರೆಸ್ ಪಕ್ಷವು ಸಮಾಜವಾದಿಗಳನ್ನು ಹೇಗಾದರೂ ಮಾಡಿ ಸೋಲಿಸಲು ಟೊಂಕ ಕಟ್ಟಿ ನಿಂತಿತ್ತು.

ಗೋರಖ್‌ಪುರದ ಕಾಂಗ್ರೆಸ್‌ ನಾಯಕ ಬಾಬಾ ರಾಘವದಾಸ್‌ ಅವರನ್ನು ಅವರ ವಿರೋಧದ ನಡುವೆಯೂ ನರೇಂದ್ರ ದೇವ ವಿರುದ್ಧ ಸ್ಪರ್ಧಿಸಲು ಕಣಕ್ಕಿಳಿಸಿತ್ತು. ರಾಘವದಾಸ್‌ ಅವರನ್ನು ಅಯೋಧ್ಯೆಯಿಂದ ಚುನಾವಣೆಗೆ ನಿಲ್ಲಿಸಲು ಕಾರಣ ಅವರ ಧಾರ್ಮಿಕ ದೃಷ್ಟಿಕೋನವೇ ಹೊರತು, ರಾಜಕೀಯ ಕಾರಣಗಳು ಆಗಿರಲಿಲ್ಲ ಎಂಬುದು ಕೂಡ ವಾಸ್ತವವಾಗಿತ್ತು. ನರೇಂದ್ರ ದೇವ ಅವರನ್ನು ನಾಸ್ತಿಕನೆಂದೂ ಧರ್ಮ ವಿರೋಧಿ ಎಂದೂ ಚಿತ್ರಿಸಲಾಗಿತ್ತು. ರಾಮ-ರಾವಣ ಸಂವಾದ ಎಂಬ ಶೀರ್ಷಿಕೆಯ ಕರಪತ್ರಗಳನ್ನು ಹಂಚಲಾಗಿತ್ತು. ರಾವಣ-ರೂಪಿ ನರೇಂದ್ರ ದೇವ ಅವರನ್ನು ಸೋಲಿಸಲು ರಾಮ-ರೂಪಿ ರಾಘವದಾಸ್‌ ಅವರಿಗೆ ಮತ ಹಾಕಬೇಕು ಎಂಬಂತಹ ಪೋಸ್ಟರ್‌ಗಳು ಕೂಡ ಎಲ್ಲೆಡೆ ಕಾಣಿಸಿಕೊಂಡಿದ್ದವು.

ಆದರೆ, ಆ ಕಾಲದಲ್ಲಿ ನರೇಂದ್ರ ದೇವಾ ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ವರ್ಷಗಳ ನಂತರ ಅವರು ಕಾಂಗ್ರೆಸ್‌ನ ಆ ಕೆಲಸದ ಬಗ್ಗೆ ಮಾತನಾಡಿದ್ದರು.

“1948 ರ ಉಪಚುನಾವಣೆಯಲ್ಲಿ ನಾನು ನಾಸ್ತಿಕನೆಂದೂ ಹಾಗಾಗಿ ನನಗೆ ಮತ ಹಾಕಬಾರದೆಂದೂ ಪ್ರಚಾರ ಮಾಡಲಿಲ್ಲವೇ? ನಮ್ಮದು ಜಾತ್ಯಾತೀತ ದೇಶ ಎಂದು ಹೇಳಿಕೊಳ್ಳುತ್ತಲೇ ಆ ರೀತಿ ಪ್ರಚಾರ ಮಾಡುವುದು ಎಷ್ಟು ಸರಿ? ಆದರೆ, ಹಾಗೆ ಹೇಳಿದ ಮಹಾನ್‌ ಮನುಷ್ಯ ತನ್ನ ಕೊನೆಗಾಲದಲ್ಲಿ ಒಬ್ಬ ನಾಸ್ತಿಕನ, ಧರ್ಮಿಷ್ಠನೂ ಅಲ್ಲದ ದೇವರ ಭಯವೂ ಇಲ್ಲದ ಒಬ್ಬರ ದರ್ಬಾರಲ್ಲಿ ಕಳೆಯಬೇಕಾಗಿ ಬಂದದ್ದನ್ನು ನೆನೆಯುವಾಗ ನಾನೀಗ ಕೆಟ್ಟ ಸಂತೋಷವನ್ನು ಅನುಭವಿಸುತ್ತಿದ್ದೇನೆ.  ಮತದಾರರು ನನ್ನನ್ನು ಗೆಲ್ಲಿಸಿದರೆ, ಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿಗಳೆರಡೂ ಗಂಭೀರ ಅಪಾಯಕ್ಕೆ ಸಿಲುಕಲಿದೆ ಎಂದೂ ಹೇಳಲಿಲ್ಲವೇ? ಕಾಂಗ್ರೆಸ್‌ ಪಕ್ಷದ ನಿರ್ಣಾಯಕ ಸಮಯದಲ್ಲಿ ನಾನು ಅದನ್ನು ತೊರೆದು ಬಂದು ದ್ರೋಹ ಎಸಗಿದೆ ಎಂದು ಕೂಡ ಹೇಳಲಿಲ್ಲವೇ? ಇದು ಒಬ್ವ ಪ್ರಜಾಪ್ರಭುತ್ವವಾದಿಯ ಭಾಷಣವೋ ಅಥವಾ ಒಬ್ಬ ಅತಿಕೆಟ್ಟ ಜನನಾಯಕನ ಮಾತುಗಳೋ? ನನ್ನನ್ನು ಸೋಲಿಸಲೆಂದು ಗಾಂಧೀಜಿಯ ಆತ್ಮವನ್ನೂ ಎಬ್ಬಿಸಿ, ರಾಮಚಂದ್ರನ ಸಹಾಯವನ್ನೂ ಕೋರಲಿಲ್ಲವೇ? ಒಬ್ಬ ದೊಡ್ಡ ಕಾಂಗ್ರೆಸಿಗರು ಮಹಿಳಾ ಮತದಾರರು ನನ್ನ ವಿರುದ್ಧ ಮತ ಹಾಕುವಂತೆ ಅವರನ್ನು ದೇವಸ್ಥಾನದಲ್ಲಿ ಪ್ರತಿಜ್ಞೆ ಮಾಡಿಸಲಿಲ್ಲವೇ? ಪ್ರಮುಖ ನಾಯಕರೊಬ್ಬರು ಬ್ಯಾಲೆಟ್‌ ಪೆಟ್ಟಿಗೆಗೆ ಹಾಕುತ್ತೇನೆ ಎಂದು ಸುಳ್ಳು ಹೇಳಿ ನನ್ನ ಮಹಿಳಾ ಮತದಾರರಿಂದ ಕಾರ್ಡುಗಳನ್ನು ಕಿತ್ತುಕೊಳ್ಳಲಿಲ್ಲವೇ?”

ಆ ಚುನಾವಣೆಯಲ್ಲಿ ನರೇಂದ್ರ ದೇವ 1,312 ಮತಗಳ ಅಂತರದಿಂದ ಸೋತಿದ್ದರು. ರಾಘವದಾಸ್ 5,392 ಮತಗಳನ್ನು ಪಡೆದಿದ್ದರೆ, ದೇವಾ 4,080 ಮತಗಳನ್ನು ಪಡೆದಿದ್ದರು.

ಏಪ್ರಿಲ್ 1952 ರಲ್ಲಿ, ನರೇಂದ್ರ ದೇವ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. ಏಪ್ರಿಲ್ 1954 ರಲ್ಲಿ ಆರು ವರ್ಷಗಳ ಅವಧಿಗೆ ಅವರು ಮರು ಆಯ್ಕೆಯಾಗುತ್ತಾರೆ. ಉನ್ನತ ಶಿಕ್ಷಣ ಕೇಂದ್ರಗಳನ್ನು ರೂಪಿಸುವ ಅವರ ಬಯಕೆ ಮತ್ತು ಸ್ನೇಹಿತರು ಹಾಗೂ ಅಧಿಕಾರಿಗಳ ಒತ್ತಡದ ಕಾರಣದಿಂದ, ಅಕ್ಟೋಬರ್‌ 1947  ರಲ್ಲಿ ಅವರು ಲಕ್ನೋ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಯನ್ನು ಸ್ವೀಕರಿಸಿದ್ದರು.

ರಾಷ್ಟ್ರೀಯವಾದಿ ಮಾರ್ಕ್ಸ್‌ವಾದಿ
ದೇವ ಒಬ್ಬ ಕಟ್ಟಾ ಮಾರ್ಕ್ಸ್‌ವಾದಿಯಾಗಿದ್ದರು. ಆದರೆ ಅವರ ಮಾರ್ಕ್ಸ್‌ವಾದವು ಕಟ್ಟುನಿಟ್ಟಿನ ಸೂತ್ರಗಳ ಮೇಲೆ ನಿಂತಿರಲಿಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ಸಾಮಾಜಿಕ ವಿದ್ಯಮಾನಗಳನ್ನು ವಿಶ್ಲೇಷಿಸಿ, ಅಧ್ಯಯನ ನಡೆಸಿ ವಿಭಿನ್ನ ತೀರ್ಮಾನಗಳನ್ನು ತೆಗೆದುಕೊಳ್ಳಬಹುದಾದ ಒಂದು ವಿಧಾನವಾಗಿ ಅವರು ಅದನ್ನು ಕಂಡಿದ್ದರು.

ಅವರ ಪ್ರಕಾರ ಕಾರ್ಲ್‌ ಮಾರ್ಕ್ಸ್‌ ಒಬ್ಬ ಮಹಾನ್‌ ಪ್ರಜಾಪ್ರಭುತ್ವವಾದಿ ಮತ್ತು ಮಾನವತಾವಾದಿ. ಆತನ ಬೋಧನೆಗಳನ್ನು ಕಮ್ಯುನಿಸ್ಟ್‌ ಅನುಯಾಯಿಗಳು ಹೇಗೆ ತಿರುಚುತ್ತಿದ್ದರು ಮತ್ತು ದುರುಪಯೋಗಪಡಿಸಿಕೊಳ್ಳುತ್ತಿದ್ದರು ಎಂಬುದು ದೇವ ಅವರಿಗೆ ದುಃಖ ಮತ್ತು ನಿರಾಸೆಯ ಸಂಗತಿಯಾಗಿತ್ತು.

ಭಾರತದ ಸಮಾಜವಾದಿ ಚಳುವಳಿಗೆ ನರೇಂದ್ರ ದೇವ ನೀಡಿದ ಕೊಡುಗೆಗಳನ್ನು ಹೀಗೆ ಪಟ್ಟಿ ಮಾಡಬಹುದು. ಮೊದಲನೆಯದಾಗಿ, ಸಮಾಜವಾದವನ್ನು ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಸಂಗತಿಯಾಗಿ ರೂಪಿಸುವಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದರು. ಎರಡನೆಯದಾಗಿ, ರೈತರ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಭಾರತದಲ್ಲಿ ಯಾವುದೇ ಸಮಾಜವಾದಿ ಚಳುವಳಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಅವರು ಆರಂಭದಲ್ಲಿಯೇ ಅರಿತುಕೊಂಡರು. ಹಾಗಾಗಿಯೇ ಅವರು ರೂಪಿಸಿದ ಎಲ್ಲಾ ನೀತಿ ನಿರೂಪಣೆಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಭೂ ಸುಧಾರಣೆಗಳಿಗೆ ಬೇಕಾದ ಪ್ರಾಮುಖ್ಯತೆಯನ್ನು ನೀಡಿದ್ದರು. ಮೂರನೆಯದಾಗಿ, ಸಮಾಜವಾದವನ್ನು ಕೇವಲ ಆರ್ಥಿಕ ಸಮಸ್ಯೆಗೆ ಪರಿಹಾರವಾಗಿ ಮಾತ್ರವಲ್ಲದೆ, ಅದೊಂದು ಬೃಹತ್‌ ಸಾಂಸ್ಕೃತಿಕ ಚಳುವಳಿ ಎಂದು ಮತ್ತೆ ಮತ್ತೆ ಸಾರಿ ಹೇಳಿದರು.

ನರೇಂದ್ರ ದೇವ ಅವರು ಬಡತನ ಮತ್ತು ಶೋಷಣೆಯ ನಿರ್ಮೂಲನೆಗಾಗಿ ಮಾರ್ಕ್ಸ್‌ವಾದಿ ಭೌತವಾದದ ನುಡಿಗಟ್ಟಿನಲ್ಲಿ ಮಾತ್ರವಲ್ಲದೆ, ನೈತಿಕ ಮತ್ತು ಮಾನವೀಯ ನೆಲೆಯಲ್ಲಿ ಕೂಡ ಪ್ರತಿಪಾದಿಸಿರು. “ರಾಜಕೀಯ ಪ್ರಜಾಪ್ರಭುತ್ವವಿಲ್ಲದ ಸಾಮಾಜಿಕ ಪ್ರಜಾಪ್ರಭುತ್ವವು ಕೇವಲ ಒಂದು ನೆಪಕ್ಕಾಗಿ ಮಾತ್ರ” ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.

ಅವರು ಸಾಮಾನ್ಯವಾಗಿ ತದ್ವಿರುದ್ಧವಾದ ಕೆಲವು ಗುಣಗಳ ಅಪರೂಪದ ಸಂಯೋಜನೆಯಂತಿದ್ದರು. ಅವರೊಬ್ಬ ಮಾರ್ಕ್ಸ್‌ವಾದಿಯಾಗಿದ್ದರೂ ಕೂಡ ರಾಷ್ಟ್ರೀಯ ಅಸ್ಮಿತೆ ಮತ್ತು ಏಕೀಕರಣದಲ್ಲಿ ಆಳ ನಂಬಿಕೆಯಿಟ್ಟಿದ್ದರು. ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅವರಿಗೆ ಆಳವಾದ ಆಸಕ್ತಿ ಇತ್ತು. ಭಾಷೆಯ ಪ್ರಶ್ನೆ ಎದುರಾದಾಗ, “ಹಿಂದೂಸ್ತಾನಿಯಲ್ಲಿ ಮಾತನಾಡಲು ಬಯಸುವವರಿಗೆ ಆ ಭಾಷೆಯಲ್ಲಿ ಮಾತನಾಡಲು ಅವಕಾಶ ನೀಡಬೇಕು” ಎಂದು ಹೇಳಿದ್ದರು. ಯುಪಿ ವಿಧಾನಸಭೆಯಲ್ಲಿ ಅವರು ಸೊಗಸಾದ ಹಿಂದೂಸ್ತಾನಿ ಭಾಷೆಯಲ್ಲಿಯೇ ಮಾತನಾಡುತ್ತಿದ್ದರು.

ಆಚಾರ್ಯ ನರೇಂದ್ರ ದೇವ ಅವರು ಫೆಬ್ರವರಿ 19, 1956 ರಂದು ತಮಿಳುನಾಡಿನ ಈರೋಡ್‌ನ ಪೆರುಂದುರೈನಲ್ಲಿ ನಿಧನರಾದರು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page