ದರ್ಶನ್ ಪ್ರಕರಣದಲ್ಲಿ ಮಗ ಜೈಲುಪಾಲು: ಮಗನ ಶೋಕದಲ್ಲಿ ಕೊರಗಿ ಕೊರಗಿ ತಾಯಿ ಮಣ್ಣುಪಾಲು

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು ಎಂಬಾತನ ತಾಯಿ ಮಂಜುಳಮ್ಮ (65) ನಿಧನ ಹೊಂದಿದ್ದಾರೆ.

ಜಿಲ್ಲೆಯ ಕೋಳಿ ಬುರುಜನಹಟ್ಟಿಯ ಮನೆಯಲ್ಲಿ ಮಂಜುಳಮ್ಮ ವಾಸವಾಗಿದ್ದರು. ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ ಮಗನ ಜೈಲು ಸುದ್ದಿ ಮತ್ತಷ್ಟು ಆತಂಕ ಬಾಧಿಸುವಂತೆ ಮಾಡಿತ್ತು.

ರೇಣುಕಾಸ್ವಾಮಿ ಅಪಹರಣ ಮತ್ತು ಮರ್ಡರ್ ಕೇಸ್​ಗೆ ಸಂಬಂಧಿಸಿದಂತೆ ಎ4 ಆರೋಪಿಯಾಗಿದ್ದಾರೆ. ಇದೀಗ ಮಂಜುಳಮ್ಮ ಅವರ ಅಂತ್ಯ ಸಂಸ್ಕಾರಕ್ಕೆ ಪುತ್ರ ರಘುನನ್ನು ಕರೆತರಲು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ರಘು ತಾಯಿ ನಿಧನದ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಆತನ ಸಹೋದರಿ, ನಮ್ಮ ತಮ್ಮ ಕೊಲೆ ಆರೋಪಿ ಆಗಿದ್ದ ಚಿಂತೆಯಲ್ಲಿ ತಾಯಿ ಚಿಂತೆ ಮಾಡಿ ನಿಧನರಾಗಿದ್ದಾರೆ. ಅವನು ಅಂದ್ರೆ ನಮ್ಮ ಅಮ್ಮನಿಗೆ ಬಹಳ ಜೀವ, ಅಷ್ಟು ದೊಡ್ಡವನಾದರೂ ಮುದ್ದಾಡುತ್ತಿದ್ದರು. ಅವನು ಇಂಥ ಕೆಲಸ ಮಾಡುವವನೇ ಅಲ್ಲ. ಅದು ಹೇಗಾಯ್ತು ಅಂತ ಗೊತ್ತಿಲ್ಲ. ಒಬ್ಬರಿಗೆ ಒಂದೇಟು ಹೊಡೆದವನಲ್ಲ, ಡ್ರಿಂಕ್ಸ್ ಮಾಡಿದಾಗ ಹೆಂಡತಿ ಹತ್ತಿರ ಬಾಯಿ ಮಾಡ್ತಿದ್ದ. ಬೇರೆ ಯಾರತ್ರನೂ ಗುದ್ದಾಡಿ, ಹೊಡೆದಾಡಿದ್ದನ್ನು ನಾವು ನೋಡಿಲ್ಲ ಎಂದರು.

ನನ್ನ ಸಹೋದರನನ್ನು ಅಂತ್ಯಕ್ರಿಯೆಗೆ ಕರೆಸಬೇಕು. ಅವನಿಂದಲೇ ನರಳಿ ನರಳಿ, ನೊಂದಿದ್ದಾರೆ. ಚೆನ್ನಾಗಿಯೇ ಓಡಾಡಿಕೊಂಡು ಇದ್ದರು. ಆದರೆ ಮಗ ಜೈಲಿಗೆ ಹೋದ ಬಳಿಕ ಹಾಸಿಗೆ ಹಿಡಿದಿದ್ದರು ಎಂದು ಹೇಳಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೊತೆಗೆ ಜೈಲು ಸೇರಿರುವ 17 ಆರೋಪಿಗಳ ಪೈಕಿ ಇಬ್ಬರು ಆರೋಪಿಗಳ ಸಂಬಂಧಿಕರು ಸಾವನ್ನಪ್ಪಿದ್ದಾರೆ. ಈ ಹಿಂದೆ ಅನುಕುಮಾರ್ ಎಂಬ ಆರೋಪಿಯ ತಂದೆ ಕೆಲ ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದರು. ಈಗ ಮತ್ತೊಂದು ಆರೋಪಿಗೆ ತೀವ್ರ ಅಘಾತ ಎದುರಾಗಿದೆ.

Related Articles

ಇತ್ತೀಚಿನ ಸುದ್ದಿಗಳು