Thursday, December 26, 2024

ಸತ್ಯ | ನ್ಯಾಯ |ಧರ್ಮ

ಶ್ರೀಲಂಕಾ : ಸುನಾಮಿಯ ಮರಣ ಮೃದಂಗಕ್ಕೆ ಇಂದಿಗೆ 20 ವರ್ಷ

ಲೇಖನ: ಸಂತೋಷ್ ಕುಮಾರ್ ಎಲ್‌ ಎಂ

ಶ್ರೀಲಂಕಾದ ಹಿಕ್ಕಡುವ ಬೀಚಿನಲ್ಲಿ ಒಂದಷ್ಟು ಹೊತ್ತು ಕುಣಿದಾಡಿ ನೀರಿನ ಅಲೆಗಳನ್ನು ಆಸ್ವಾದಿಸಿ ಮನಸ್ಸಿಗೆ ತೃಪ್ತಿಯಾದ ಮೇಲೆ ಮತ್ತೊಂದು ನಗರ ಬೆಂಟೋಟಾಗೆ ಪ್ರಯಾಣ ಬೆಳೆಸಿದ್ದೆವು. ಆ ಪ್ರಯಾಣವಂತೂ ಅದ್ಬುತ. ಏಕೆಂದರೆ ಹತ್ತಾರು ಕಿಲೋಮೀಟರುಗಳ ತನಕ ಒಂದು ಕಡೆ ಹಿಂದೂಮಹಾಸಾಗರ, ಮತ್ತೊಂದು ಕಡೆಗೆ ರೈಲುದಾರಿ! ಮಧ್ಯದಲ್ಲಿರುವ ರಸ್ತೆಯಲ್ಲಿ ಇವೆರಡನ್ನೂ ನೋಡುತ್ತಲೇ ಸಾಗುತ್ತೇವೆ. ಆದರೆ ಇಲ್ಲೇನೋ ವಿಚಿತ್ರವಾಗಿತ್ತು. ಹಿಂದಿನ ಎರಡು ಬೀಚುಗಳಲ್ಲಿ ನೋಡಿದ ಅಲೆಗಳ ತೀವ್ರತೆಗಿಂತ ಈ ಮಾರ್ಗದಲ್ಲಿ ಕಂಡ ಅಲೆಗಳಲ್ಲಿ ಹೆಚ್ಚು ತೀವ್ರತೆಯಿತ್ತು. ರಸ್ತೆಯ ಪಕ್ಕದಲ್ಲಿ ಕಟ್ಟಿದ್ದ ಕಲ್ಲುಗಳ ಅಡ್ಡಗೋಡೆಗೆ ಕೋಪದಿಂದಲೇ ಬಂದು ಡಿಕ್ಕಿ ಹೊಡೆಯುತ್ತಿವೆಯೇನೋ ಎಂಬಷ್ಟು ಶಕ್ತಿ ಆ ಅಲೆಗಳಿಗಿತ್ತು. ಕೊಂಚ ಗಂಭೀರವಾಗಿಯೇ ಆ ಅಲೆಗಳನ್ನು ನಾನು ಗಮನಿಸುತ್ತಿದ್ದನ್ನು ನಮ್ಮ ಟ್ಯಾಕ್ಸಿ ಓಡಿಸುತ್ತಿದ್ದ ಸಹೋದರ ಚರಿತ್ ಗಮನಿಸುತ್ತಿದ್ದ.

“ಅದೇನು ಇಲ್ಲಿ ಮಾತ್ರ ಈ ಅಲೆಗಳು ಅಷ್ಟೊಂದು ಶಕ್ತಿಶಾಲಿಗಳಾಗಿವೆ?” ಎಂದು ಚರಿತ್ ನಲ್ಲಿ ನನ್ನ ಸಂದೇಹವನ್ನು ಹೊರಹಾಕಿದೆ. ಆತ ಕೇವಲ “ಹೌದು ಸರ್” ಎಂದು ಹೇಳಿ ಸುಮ್ಮನಾದ. ಕೊಂಚ ಹೊತ್ತು ಮೌನ. ಆ ಮೌನವನ್ನು ಮುರಿಯಬೇಕೆಂದು ನಾನೇ ನಿರ್ಧರಿಸಿದೆ. ತಕ್ಷಣಕ್ಕೆ ರಸ್ತೆಯ ಮತ್ತೊಂದು ಬದಿಯಲ್ಲಿ ಪಾಳು ಬಿದ್ದ ಮನೆಯೊಂದು ಕಂಡಿತು. ಸುತ್ತ ಬೆಳೆದು ನಿಂತ ಹಸಿರು. ಚರಿತ್’ಗೆ ಮತ್ತೆ ಪ್ರಶ್ನೆ ಹಾಕಿದೆ ” ಈ ಪಾಳು ಬಿದ್ದ ಮನೆ ಎಷ್ಟು ಚೆನ್ನಾಗಿದೆ ಅಲ್ವಾ? ಸಿನಿಮಾಗಳಲ್ಲಿ ಭೂತ ಬಂಗಲೆ ತೋರಿಸ್ತಾರಲ್ಲ. ಆ ಥರದ್ದು. ಫೋಟೋ ಕ್ಲಿಕ್ಕಿಸಿದರೆ ತುಂಬಾ ಚೆನ್ನಾಗಿ ಬರುತ್ತೆ” ಅಂತ. ಚರಿತ್ ಕಾರು ನಿಲ್ಲಿಸಿದವನೇ ” ಫೋಟೋ ಬೇಕಿದ್ರೆ ತೆಗೆದುಕೊಳ್ಳಿ ಸರ್” ಅಂದ. ಮೂರ್ನಾಲ್ಕು ಫೋಟೋ ಕ್ಲಿಕ್ಕಿಸಿದೆ. ಕಾರು ಮತ್ತೆ ಮುಂದೆ ಚಲಿಸಿತು. ವಿಚಿತ್ರವೆಂದರೆ ಅದೇ ರಸ್ತೆಯಲ್ಲಿ ಅದೇ ರೀತಿಯ ಇನ್ನೊಂದಷ್ಟು ಮನೆಗಳು ಕಂಡವು. ” ಇಲ್ಲಿ ಯಾಕೆ ಇಷ್ಟು ಪಾಳು ಬಿದ್ದ ಮನೆಗಳಿವೆ ಚರಿತ್?” ಅಂತ ಮತ್ತೊಂದು ಪ್ರಶ್ನೆ ಹಾಕಿದೆ.

ಚರಿತ್ ಎರಡು ಕ್ಷಣ ಸುಮ್ಮನಿದ್ದವನೇ ತಣ್ಣಗೆ ಹೇಳಿದ “ಸರ್….. ಆ ಮನೆಯವರೆಲ್ಲ 20 ವರ್ಷಗಳ ಹಿಂದೆಯೇ ಸುನಾಮಿಯಲ್ಲಿ ಕೊಚ್ಚಿ ಹೋದರು” ಅಂತ. ಅನಿರೀಕ್ಷಿತ ಪ್ರತಿಕ್ರಿಯೆಗೆ ದಂಗಾಗಿ ಹೋದೆ. ಆ ಕ್ಷಣ ಆ ರೀತಿಯ ಉತ್ತರ ಬರಬಹುದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಆ ಕ್ಷಣದವರೆಗೆ ಶ್ರೀಲಂಕಾ ದೇಶ ಕೂಡ ಸುನಾಮಿಯಿಂದ ತತ್ತರಿಸಿ ಹೋಗಿತ್ತು ಅನ್ನುವುದೇ ನನಗೆ ಮರೆತು ಹೋಗಿತ್ತು.

ತಕ್ಷಣವೇ ಸುಧಾರಿಸಿಕೊಳ್ಳುತ್ತಾ ” ಸುನಾಮಿಯ ಬಗ್ಗೆ ನಿನಗೆ ಗೊತ್ತಾ ಚರಿತ್?” ಅಂತ ಕೇಳಿದೆ. “ಗೊತ್ತಿರೋದೇನು ಬಂತು ಸರ್? ಅದರಲ್ಲೇ ಬಿದ್ದು ಬಂಧುಮಿತ್ರರೆಲ್ಲ ಒದ್ದಾಡಲಿಲ್ವಾ? ಎಷ್ಟು ಸಾವಿರ ಜನ ತೀರಿಕೊಂಡರು. ಮೂರ್ನಾಲ್ಕು ತಿಂಗಳು ಸುನಾಮಿ ಸಂತ್ರಸ್ತರಿಗಾಗಿಯೇ ಸ್ವಯಂಸೇವಕನಾಗಿ ದುಡಿದೆ” ಅಂದ.

ಮುಂದುವರಿಸುತ್ತಾ ” ಈ ಬೀಚಿನಲ್ಲಿ ನಿಮಗೆ ಕಾಣಿಸುವ ಅಲೆಗಳ ರಭಸ ಈಗಲೇ ಇಷ್ಟಿರಬೇಕಾದರೆ, ಇನ್ನು ಸುನಾಮಿಯ ಅಲೆ ಇಲ್ಲಿ ಎಷ್ಟಿದ್ದಿರಬಹುದು ಅಂದಾಜು ಮಾಡಿಕೊಳ್ಳಿ” ಅಂದ. ನನ್ನಲ್ಲಿ ಉತ್ತರವಿರಲಿಲ್ಲ, “ಕೇವಲ ಮುಕ್ಕಾಲು ಗಂಟೆ ಸಮಯವಿದ್ದರೆ ಕೊಡುತ್ತೀರಾ? ನಿಮ್ಮನ್ನೊಂದು ಬೇರೆ ರೀತಿಯ ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ” ಅಂದ. “ಹೂಂ” ಎನ್ನುತ್ತಾ ತಲೆಯಾಡಿಸಿದೆ. ಏಕೆಂದರೆ ಆ ಸ್ಥಳ ನಮ್ಮ ಪ್ರವಾಸದ ಸ್ಥಳಗಳ ಪಟ್ಟಿಯಲ್ಲಿ ಇರಲಿಲ್ಲ. ಮುಂದೆ ಚರಿತ್ ನಮ್ಮನ್ನು ಕರೆದುಕೊಂಡು ಹೋಗಿದ್ದು ಸುನಾಮಿ ಫೋಟೋ ಮ್ಯೂಸಿಯಂ ಕಡೆಗೆ!

ಅಂದು 2004 ಡಿಸೆಂಬರ್ 26. ಬೆಳಗ್ಗೆ ಸಮಯ 9:26

ಭಾನುವಾರವಾದ್ದರಿಂದ ಬಹುತೇಕ ಜನರು ಮನೆಗಳಲ್ಲಿಯೇ ಇದ್ದರು. ಮಕ್ಕಳೆಲ್ಲ ಹೊರಗೆ ಆಟವಾಡುತ್ತಿದ್ದವು. . ಇದ್ದಕ್ಕಿದ್ದಂತೆ ನೂರಾರು ಜನರು ಕಿವಿ ಕಿತ್ತು ಹೋಗುವಂತೆ “ಓಡಿ….ಓಡಿ” ಅಂತ ಕಿರುಚಿಕೊಳ್ಳಲಾರಂಬಿಸಿದರು. ಹೀಗೇಕೆ ಎಂದು ಅಚ್ಚರಿಪಡುತ್ತಲೇ ಪ್ರಶ್ನೆ ಕೇಳಿದವರಿಗೆ ಸಮುದ್ರದತ್ತ ಕೈ ತೋರಿಸಿ “ಅಲೆ…. ಅಲೆ” ಎಂದು ಕೂಗುತ್ತ ದಿಕ್ಕಾಪಾಲಾಗಿ ಓಡತೊಡಗಿದರು. ಆಗ ತಾನೆ ಏನೋ ಕೆಲಸ ಮಾಡುತ್ತಿದ್ದ 48 ವರ್ಷದ ವಿಕ್ರಮರತ್ನ ಜನರ ಕೂಗಾಟವನ್ನು ಕೇಳಿ ರಸ್ತೆಗೆ ಓಡಿ ಬಂದು ಸಮುದ್ರದತ್ತ ತಿರುಗಿ ನೋಡಿದರು. ಎದುರಿಗಿನ ದೃಶ್ಯ ಕಂಡು ಎದೆ ಒಡೆದು ಹೋದಂತಾಯಿತು. 30 ಅಡಿ ಎತ್ತರದ ದೈತ್ಯ ಅಲೆಯೊಂದು ಇಡೀ ಭೂಮಿಯನ್ನೇ ನುಂಗಿ ಹಾಕುವಂತೆ ಸಮುದ್ರದಂಡೆಯ ಕಡೆಗೆ ಧಾವಿಸಿ ಬರುತ್ತಿತ್ತು.

ವಿಕ್ರಮ ರತ್ನ ಅವರ ಇಬ್ಬರು ಗಂಡು ಮಕ್ಕಳು ಅಲ್ಲೇ ಅಂಗಳದಲ್ಲಿ ಆಟವಾಡಿಕೊಳ್ಳುತ್ತಿದ್ದರು. ಒಂದು ಕ್ಷಣವೂ ತಡ ಮಾಡದೆ “ಮಕ್ಕಳಾ….. ಈಗ ನಾವು ಜೀವ ಉಳಿಸಿಕೊಳ್ಳಬೇಕೆಂದರೆ ಓಡಲೇಬೇಕು” ಎಂದು ಅವರಿಬ್ಬರ ಕೈಹಿಡಿದು ಓಡತೊಡಗಿದರು. ಎರಡು ಮೂರು ಹೆಜ್ಜೆ ಹಾಕಿಯೇ ಇಲ್ಲ. ಆಗಲೇ ನೆನಪಾದದ್ದು ಮಡದಿ ಅಡುಗೆ ಮನೆಯಲ್ಲಿ ಇದ್ದಳು ಅಂತ. ಆಕೆಗೆ ಹುಷಾರಿಲ್ಲ ಬೇರೆ. ಅವಳು ಓಡಲಾರಳು ಅಂತ ನೆನಪಾಗಿದ್ದೆ ತಡ ದೊಡ್ಡ ಮಗನಿಗೆ ಹೇಳಿದರು. “ಏನೇ ಕಾರಣಕ್ಕು ನಿಲ್ಲಲೇಬೇಡ. ತಮ್ಮನ ಕೈ ಹಿಡಿದುಕೊಂಡು ಬೆಟ್ಟದತ್ತ ಓಡು” ಅಂತ.

ಮುಂದಿನ ಕ್ಷಣದಲ್ಲೇ ಮನೆಯೊಳಗೆ ಓಡಿದರು. ವಿಕ್ರಮ ರತ್ನ ಅವರ ಹೆಂಡತಿ ಮಾಮೂಲಿ ಯಾವುದೋ ಗದ್ದಲವಿರಬೇಕು ಎಂಬಂತೆ ಅಡುಗೆಮನೆಯೊಳಗೆ ಏನೋ ಕೆಲಸ ಮಾಡುತ್ತಿದ್ದರು. ಆಕೆಯ ಕೈ ಹಿಡಿದುಕೊಂಡು “ಓಡು ಓಡು” ಅಂತ ಹೇಳಿದ್ದು ಆಕೆಗೆ ಯಾಕೆ ಅಂತ ಅರ್ಥವಾಗಲಿಲ್ಲ. ತಕ್ಷಣವೇ ಅವಳಿಗೆ ಒಂದು ವಾಕ್ಯದಲ್ಲಿ ಏನಾಗಿದೆ ಅಂತ ವಿವರಿಸಿ ಅಲೆ ಬರುತ್ತಿದ್ದ ವಿರುದ್ಧ ದಿಕ್ಕಿನಲ್ಲಿ ಓಡತೊಡಗಿದರು. ಇವರ ಮನೆಯಿಂದ ಹೆಚ್ಚು ಕಡಿಮೆ ಒಂದೂವರೆ ಕಿಲೋಮೀಟರ್ ದೂರದಲ್ಲಿ ಒಂದು ಬೆಟ್ಟವಿತ್ತು. ಇಡೀ ಊರಿನ ಜನ ಆ ಬೆಟ್ಟದತ್ತ ಓಡತೊಡಗಿದರು.

ಆಗಲೇ ಬಂದು ಅಪ್ಪಳಿಸಿದ್ದು ಆ ರಾಕ್ಷಸ ಅಲೆ. ಯಾವುದೋ ಸಿನಿಮಾದಲ್ಲಿ ನೋಡುತ್ತಿದ್ದೇವೆ ಎನ್ನುವ ರೀತಿಯಲ್ಲಿ ಒಂದೇ ಹೊಡೆತಕ್ಕೆ ಹಿಡಿ ಊರನ್ನೇ ಸ್ಮಶಾನವನ್ನಾಗಿ ಬದಲಾಯಿಸಿಬಿಟ್ಟಿತು. ಪಾಪ, ಅದು ಯಾರು ಇನ್ನು ಮಲಗಿಯೇ ಇದ್ದರೋ? ಮಲಗಿದಂತಹ ಸ್ಥಿತಿಯಲ್ಲಿಯೇ ಹೆಣವಾಗಿ ಹೋಗಿದ್ದರು. ಕೆಲವರು ತಪ್ಪಿಸಿಕೊಳ್ಳಬಹುದು ಎಂಬ ಆಶಯದೊಂದಿಗೆ ಹತ್ತಿರದಲ್ಲಿದ್ದ ಮರವನ್ನೇರಿದ್ದರು. ಆದರೆ ಸಮುದ್ರದಿಂದ ಅಷ್ಟೊಂದು ವೇಗವಾಗಿ ಬರುತ್ತಿರುವ 30 ಮೀಟರ್ ಗಳಿಗಿಂತಲೂ ಎತ್ತರದ ಅಲೆಯ ಶಕ್ತಿ ಎಷ್ಟಿರಬಹುದು ಎಂದು ಅವರು ಅಂದಾಜು ಕೂಡ ಮಾಡಿರಲಿಲ್ಲ. ದೈತ್ಯ ಮರಗಳೆಲ್ಲಾ ಬುಡ ಸಮೇತ ಕಿತ್ತು ಪುಟ್ಟ ಗಿಡಗಳಂತೆ ಕೊಚ್ಚಿಕೊಂಡು ಹೋಗತೊಡಗಿದವು.

ಅಷ್ಟು ಹೊತ್ತಿಗಾಗಲೇ ನೂರಾರು ಜನ ಆ ಬೆಟ್ಟದ ಹತ್ತಿರ ಓಡಿ ಹೋಗಿ ಸುರಕ್ಷಿತ ಎತ್ತರ ಅನ್ನುವಷ್ಟರ ಮಟ್ಟಿಗೆ ಹತ್ತಿ ತಮ್ಮ ಕಣ್ಣ ಮುಂದೆಯೇ ನಡೆಯುತ್ತಿದ್ದ ನರಕವನ್ನು ನೋಡುತ್ತಿದ್ದರು. . ತಮ್ಮ ಹೆಂಡತಿಯ ಕೈ ಹಿಡಿದು ಓಡುತ್ತಿದ್ದ ವಿಕ್ರಮ ರತ್ನ ಅವರಿಗೆ ಮುಂದಾಗುವ ಪರಿಸ್ಥಿತಿ ಅರ್ಥವಾಗಿತ್ತು. ಏಕೆಂದರೆ ಅವರ ಹೆಂಡತಿ ಓಡಲಾಗದೆ ಕುಸಿದು ಕುಳಿತರು. ಅಲೆ ಇನ್ನೇನು ಹತ್ತಿರ ಬಂದುಬಿಟ್ಟಿತು. ಅವರ ಹೆಂಡತಿ “ನನ್ನ ಬಿಟ್ಟು ಓಡಿ. ನಿಮ್ಮ ಜೀವ ಉಳಿಸಿಕೊಳ್ಳಿ. ಮೊದಲು ಮಕ್ಕಳನ್ನು ನೋಡಿ ಹೋಗಿ” ಅಂದರು. ಹಾಗಂದ ಮಾತ್ರಕ್ಕೆ ಪ್ರೀತಿಯ ಮಡದಿಯನ್ನು ಬಿಟ್ಟು ಓಡಲಾದೀತೇ? ವಿಕ್ರಮ ರತ್ನ ಮೂಲತಃ ಮೀನುಗಾರರು. ಚಿಕ್ಕಂದಿನಿಂದ ಅವರಿಗೆ ಗೊತ್ತಿದ್ದ ಕಾಯಕವೊಂದೇ. ಮಾಲೀಕರ ಬೋಟಿನಲ್ಲಿ ಸಮುದ್ರಕ್ಕೆ ಇಳಿದು ಮೀನು ಹಿಡಿಯುವುದು. ಕೆಲವೊಮ್ಮೆ ಮೀನು ಹಿಡಿಯಲು ಹೊರಟರೆಂದರೆ ತಿಂಗಳುಗಳ ಲೆಕ್ಕದಲ್ಲಿ ವಾಪಸ್ ಬರುವುದಿಲ್ಲ. ಆಗೆಲ್ಲ ಊರನ್ನು, ಮನೆಮಂದಿಯನ್ನು ತಿಂಗಳುಗಟ್ಟಲೆ ನೋಡುವುದೇ ಇಲ್ಲ. ಆಗೆಲ್ಲ ಅವರನ್ನು ನೋಡಿಕೊಂಡಿದ್ದು ಸಮುದ್ರದ ತಾಯಿಯೊಬ್ಬಳೇ!

ಹಾಗಾಗಿ ದೈತ್ಯಾಕಾರದ ಅಲೆ ಭೂಮಿಯತ್ತ ಬರುವಾಗ ವಿಕ್ರಮರತ್ನ ಅವರಿಗೆ ಅನಿಸಿದ್ದು ಒಂದೇ. ಭೂಮಿಯ ಮೇಲೆ ಬದುಕಿರುವ ನಾವುಗಳೆಲ್ಲ ಮಾಡುತ್ತಿರುವ ಕೆಟ್ಟ ಕಾರ್ಯಗಳು ನಿಯಂತ್ರಿಸಲಾಗದಷ್ಟು ಹೆಚ್ಚಾದಾಗ ಕಡೆಗೊಮ್ಮೆ ಭೂಮಿಯೇ ಅವಸಾನಗೊಂಡು ನಾಶವಾಗಿಬಿಡುತ್ತೆ ಅಂತ ನಂಬುತ್ತೇವಲ್ಲ. ಬಹುಶ ಆ ಕ್ಷಣವನ್ನು ನೋಡುತ್ತಿದ್ದೇನೆ ಅಂತ. ಬಹುಶಃ ಇಡೀ ಭೂಮಿಯನ್ನು ಮಹಾಸಾಗರವೊಂದು ನುಂಗಿ ಎಲ್ಲವನ್ನೂ ಬರಿದು ಮಾಡುವಂತಹ ಮಹಾಪ್ರಳಯಕ್ಕೆ ಸಾಕ್ಷಿಯಾಗುತ್ತಿದ್ದೇನೆ ಅಂತ.

ವಿಕ್ರಮರತ್ನ ಮೂಲತಃ ಮೀನುಗಾರರಾದ್ದರಿಂದ ಚಿಕ್ಕ ವಯಸ್ಸಿನಿಂದಲೇ ಈಜು ಎನ್ನುವುದು ದಿನನಿತ್ಯದ ಭಾಗವಾಗಿತ್ತು. ಸಮುದ್ರದ ಆಳದಲ್ಲಿ ಹತ್ತು ನಿಮಿಷಗಳ ಕಾಲ ಉಸಿರು ಬಿಗಿಹಿಡಿದು , ಈಜಬಲ್ಲ ಸಾಮರ್ಥ್ಯ ಅವರಿಗಿತ್ತು. ಆದರೆ ಅವರ ಹೆಂಡತಿಗೆ ಈಜು ಬರುತ್ತಿರಲಿಲ್ಲ. ಕೈ ಹಿಡಿದ ಹೆಂಡತಿಯನ್ನು ಹೇಗೆ ತಾನೇ ಬಿಟ್ಟು ಹೊರಡುವುದು. ” ಸತ್ತರೆ ಒಟ್ಟಿಗೆ ಸಾಯೋಣ” ಅಂತ ಹೇಳುತ್ತಲೇ ಆಕೆಯನ್ನು ಅನಾಮತ್ತಾಗಿ ಎತ್ತಿ ಹೆಗಲ ಮೇಲೆ ಕೂರಿಸಿಕೊಂಡು ಶಕ್ತಿಯನ್ನೆಲ್ಲ ಒಟ್ಟಾಗಿ ಕಾಲಿಗೆ ತಂದುಕೊಂಡು ಎತ್ತರದ ಪ್ರದೇಶದತ್ತ ಓಡತೊಡಗಿದರು

ಅಲೆ ಹತ್ತಿರ ಬಂದು ಅಪ್ಪಳಿಸಿಯೇ ಬಿಟ್ಟಿತು. ಅದು ಅಪ್ಪಳಿಸಿದ ರಭಸಕ್ಕೆ ಎಷ್ಟೊ ಜನ ಓಡುತ್ತಿದ್ದವರು ಬೋರಲಾಗಿ ಬಿದ್ದರು. ಯಾವುದನ್ನೂ ಲೆಕ್ಕಿಸದೆ ಓಡುತ್ತಿದ್ದ ವಿಕ್ರಮರತ್ನ ಅವರಿಗೆ ಅಡ್ಡ ಸಿಕ್ಕ ಮರದ ತುಂಡೊಂದು ಇವರ ತೊಡೆಯನ್ನು ಬಗೆದು ಹಾಕಿತು. ರಕ್ತ ಧಾರಾಕಾರವಾಗಿ ಚಿಮ್ಮಿತು. ಒಂದು ಕಡೆ ಮಕ್ಕಳು ಏನಾಗಿರಬಹುದೆಂಬ ಆತಂಕ. ಮತ್ತೊಂದೆಡೆ ಹೆಚ್ಚಾಗುತ್ತಿರುವ ನೀರಿನ ಮಟ್ಟ. ಇನ್ನೊಂದೆಡೆ ತೊಡೆ ಗಾಯದಿಂದಾಗಿ ಅಸಾಧ್ಯ ನೋವು. ನೀರಿನ ಮಟ್ಟ ಹೆಚ್ಚಿ ಇನ್ನು ಮುಂದೆ ಓಡಲು ಕಷ್ಟ ಅನ್ನುವಾಗ ಈಜಲು ಪ್ರಾರಂಭಿಸಿದರು. ಹೆಂಡತಿ “ಕಾಲಿಂದ ಸಿಕ್ಕಾಪಟ್ಟೆ ರಕ್ತ ಸುರಿಯುತ್ತಿದೆ. ನನ್ನನ್ನು ಬಿಟ್ಟು ನಿಮ್ಮನ್ನು ನೋಡಿಕೊಳ್ಳಿ” ಅಂತ ಅಳತೊಡುಗಿದರು. ವಿಕ್ರಮರತ್ನ ಆ ಮಾತಿಗೆ ಕಿವಿಗೊಡಲಿಲ್ಲ. ಎಲ್ಲೆಲ್ಲೂ ಕಿರುಚಾಟದ ಧ್ವನಿಗಳೇ. ಕಡೆಗೂ ಎತ್ತರದ ಪ್ರದೇಶವನ್ನು ಸೇರುವ ಹೊತ್ತಿಗೆ ನೀರಿನ ಅಲೆಯ ತೀವ್ರತೆ ಕಡಿಮೆಯಾಯಿತು. ಅಲ್ಲಾಗಲೇ ಮೊದಲೇ ಓಡಿದ್ದವರು ಸುಮಾರು ಜನ ಸೇರಿದ್ದರು. ಆದರೆ ಎಲ್ಲರ ಮುಖದಲ್ಲೂ ತಮ್ಮ ಜೀವ ಉಳಿಯಿತು ಅನ್ನುವುದಕ್ಕಿಂತ ಇಲ್ಲಿ ಬರದೆ ಜೀವ ಕಳೆದುಕೊಂಡವರ ಬಗೆಯದೇ ಆತಂಕವಾಗಿತ್ತು.

ಅಲೆ ಕಡಿಮೆಯಾಯಿತು. ಆದರೆ ಊರು ಮಾತ್ರ ಕೊಚ್ಚಿಹೋಗಿತ್ತು.

ಆಗಲೇ ಅನೇಕ ಜನರಲ್ಲಿ ಆ ಆಲೋಚನೆ ಬಂದಿದ್ದು. ಕೆಲವರು ತಮ್ಮ ಮನೆಗಳಲ್ಲಿ ಇಟ್ಟಿದ್ದ ಆಸ್ತಿಯ ಬಗ್ಗೆ ಆಲೋಚಿಸತೊಡಗಿದರು. ಅಲೆ ಕಡಿಮೆಯಾದಂತೆ ವಾಪಸ್ ತಮ್ಮ ಮನೆಗಳತ್ತ ಓಡಿ ಬೀರು, ಪೆಟ್ಟಿಗೆ, ಟ್ರಂಕುಗಳಲ್ಲಿದ್ದ ಆಭರಣ, ಹಣ, ಆಸ್ತಿಪತ್ರದಂತಹವುಗಳನ್ನು ಎತ್ತಿಕೊಳ್ಳಲು ಶುರುಮಾಡಿದರು. ಓಡುತ್ತಿದ್ದವರಿಗೆ ಬೇಡವೆಂದು ಕೂಗಿ ಕೂಗಿ ಹೇಳಿಕೊಂಡರು ಯಾರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆಗ ಮತ್ತೊಂದು ದುರಂತ ಸಂಭವಿಸುತ್ತದೆಂದು ಯಾರಿಗೂ ಅನ್ನಿಸಿರಲಿಲ್ಲ. ಇವರೆಲ್ಲ ವಾಪಸ್ ಮನೆಗೆ ಬರುವಷ್ಟರಲ್ಲಿ ಮತ್ತೊಂದು ದೈತ್ಯ ಅಲೆ ಸಮುದ್ರದಿಂದ ಬಂತು. ಈಗ ಅದು ಹಿಂದಿನ ಅಲೆಗಿಂತಲೂ ಎತ್ತರ ಮತ್ತು ಶಕ್ತಿಶಾಲಿಯಾಗಿತ್ತು. ಹೀಗಾಗಿ ತಮ್ಮ ಆಸ್ತಿಗಳನ್ನು ತೆಗೆದುಕೊಳ್ಳಲು ವಾಪಸ್ ಓಡಿ ಹೋದ ಬಹುತೇಕ ಜನ ಜೀವಂತವಾಗಿ ಮರಳಲೇ ಇಲ್ಲ. ಮೊದಲ ಅಲೆಯಲ್ಲಿ ಸತ್ತವರಿಗಿಂತ ಎರಡನೇ ಅಲೆಯಲ್ಲಿ ಸತ್ತವರ ಸಂಖ್ಯೆಯೇ ದುಪ್ಪಟ್ಟಾಗಿತ್ತು. ಹೀಗೆ ತಾವು ಮಾಡಿಟ್ಟಿದ್ದ ಆಸ್ತಿಯನ್ನು ಸಂರಕ್ಷಿಸಿಕೊಳ್ಳಲು ಹೋಗಿ ಜೀವ ಬಿಟ್ಟವರು ಸಾವಿರಾರು ಮಂದಿ.

ಅಂದು ಅಪ್ಪನ ಮಾತು ಕೇಳಿ ಒಬ್ಬರನ್ನೊಬ್ಬರು ಕೈಹಿಡಿದು ಒಂದೇ ಸಮನೆ 3-4 ಮೈಲಿ ಓಡಿ ಜೀವ ಉಳಿಸಿಕೊಂಡಿದ್ದು ವಿಕ್ರಮ ರತ್ನ ಅವರ ಮಕ್ಕಳು. ನಂತರ ತಮ್ಮ ಮಕ್ಕಳು ತಮ್ಮ ಕೈ ಸೇರಿದಾಗ ವಿಕ್ರಮರತ್ನ ದಂಪತಿಗೆ ಆಗಿದ್ದ ಖುಷಿಗೆ ಪಾರವೇ ಇರಲಿಲ್ಲ. ಆದರೆ ಆ ಖುಷಿ ಬಹಳ ಹೊತ್ತು ಉಳಿದುಕೊಳ್ಳಲಿಲ್ಲ. ಏಕೆಂದರೆ ವಿಕ್ರಮ ರತ್ನ ಅವರ ಸಹೋದರಿಯ ಮಗುವೊಂದು ಈ ದುರಂತದಲ್ಲಿ ಕೊಚ್ಚಿಹೋಗಿತ್ತು. ಮತ್ತೆ ಅದು ಸಿಗಲೇ ಇಲ್ಲ.”ಅಂದು ವಿಕ್ರಮ ರತ್ನ ಅವರು ನನ್ನನ್ನು ಬಿಟ್ಟು ಹೋಗಿದ್ದರೆ ಇಂದು ನಾನು ಜೀವಂತವಾಗಿ ಇರುತ್ತಿರಲಿಲ್ಲ” ಅನ್ನುವುದನ್ನು ನೆನಪಿಸಿಕೊಳ್ಳುವ ಅವರ ಹೆಂಡತಿ ಈ ಮಾತನ್ನು ಹೇಳುವಾಗ ಕಣ್ಣೀರಾಗುತ್ತಾರೆ. “ಕಟ್ಟಿಕೊಂಡ ಪ್ರೀತಿಯ ಮಡದಿಯನ್ನು ಹೇಗೆ ತಾನೇ ಬಿಟ್ಟುಹೋಗಲಿ ನೀವೇ ಹೇಳಿ” ಅನ್ನುವಾಗ ವಿಕ್ರಮರತ್ನ ಅವರ ಕಣ್ಣುಗಳು ಸಹ ಒದ್ದೆಯಾಗುತ್ತವೆ.

ಸುನಾಮಿ ಎನ್ನುವ ವಿದ್ಯಮಾನವೊಂದು ತಮ್ಮನ್ನು ಬೇರೊಂದು ಮನುಷ್ಯನನ್ನಾಗಿ ರೂಪಿಸಿತು ಅನ್ನುವ ವಿಕ್ರಮ ರತ್ನ ಅವರ ಮಾತುಗಳಲ್ಲಿ ಸತ್ಯವಿದೆ. ಸುನಾಮಿಗೆ ಮುಂಚೆ ಕೇವಲ ತಾನು , ತನ್ನ ಕುಟುಂಬ ಅಂತ ಯೋಚನೆ ಮಾಡುತ್ತಿದ್ದ ಅವರು ಇದೀಗ ಜೀವನವನ್ನು ಬೇರೊಂದು ದೃಷ್ಟಿಯಿಂದ ನೋಡುತ್ತಿದ್ದಾರೆ. ನಾವು ಬದುಕಿರುವವರೆಗೆ ಆಸ್ತಿ ಅಂತಸ್ತು ಅಂತ ಯೋಚನೆ ಮಾಡುವ ಮನುಷ್ಯ ಪ್ರಕೃತಿಯ ಕೈಯಲ್ಲಿ ಒಂದು ಕ್ಷಣದಲ್ಲಿ ಹೇಗೆ ನಿರ್ನಾಮವಾಗಿ ಬಿಡಬಲ್ಲ ಅನ್ನುವುದನ್ನು ಕಣ್ಣಾರೆ ಕಂಡಿದ್ದಾರೆ. ಈ ಅಲೆ ಬಂದ ಸಮಯದಲ್ಲೇ ಹಿಕ್ಕಡುವ ಬೀಚಿನ ಪಕ್ಕದಲ್ಲಿ ಹಿಂದೂ ಮಹಾಸಾಗರಕ್ಕೆ ಸಮಾನಾಂತರವಾಗಿ ಸಾಗುವ ರೈಲಿಗೆ ಸುನಾಮಿ ಅಪ್ಪಳಿಸಿದಾಗ ಅಂದು ಆ ರೈಲಿನಲ್ಲಿದ್ದ ಅಷ್ಟೂ ಜನ ಪ್ರಾಣ ಬಿಟ್ಟಿದ್ದರು. ಹಿಕ್ಕಡುವ ಬೀಚಿನ ಪಕ್ಕದಲ್ಲೇ ಅಂದರೆ ನೂರಾರು ಜನಗಳನ್ನು ಹೂತ ಜಾಗದಲ್ಲೇ ಇದೀಗ ಸುನಾಮಿ ಸ್ಮಾರಕವಿದೆ.

ಅನೇಕ ಜನರಿಗೆ ಸುನಾಮಿಯ ನಂತರದ ಬದುಕು ಕೂಡ ಅಷ್ಟೇ ಯಾತನಾಮಯವಾಯಿತು. ಏಕೆಂದರೆ ಸುನಾಮಿಯಲ್ಲಿ ಅನೇಕ ಪುಟ್ಟ ಮಕ್ಕಳು ತಮ್ಮ ತಂದೆ ತಾಯಿಯರನ್ನೇ ಕಳೆದುಕೊಂಡು ಅನಾಥರಾಗಿದ್ದರು. ತಮ್ಮ ಹತ್ತಿರದ ಕುಟುಂಬದ ಸದಸ್ಯರೇ ಜೀವ ಕಳೆದುಕೊಂಡ ಮೇಲೆ ಬೇಸರವಾಗಿ ಕುಳಿತಿದ್ದ ವಿಕ್ರಮರತ್ನ ಅವರಿಗೆ ಮತ್ತೊಮ್ಮೆ ಏನಾದರೂ ಮಾಡಬೇಕೆಂಬ ಹುರುಪು ತುಂಬಿದ್ದೇ ಈ ಮಕ್ಕಳ ಪರಿಸ್ಥಿತಿ. ಇನ್ನು ಮುಂದೆ ತನ್ನ ಜೀವನ ಅರ್ಥಪೂರ್ಣವಾಗಿ ಕಳೆಯಬೇಕು ಅನ್ನುವ ಉದ್ದೇಶದಿಂದ ಆ ಅನಾಥ ಮಕ್ಕಳ ಕಷ್ಟಕ್ಕೆ ನೆರವಾಗಲೆಂದು NGO ಒಂದನ್ನು ಸ್ಥಾಪಿಸಿ ಈ ಮೂಲಕ ಬಂದ ಹಣದಿಂದ ಆ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗುತ್ತಿದ್ದಾರೆ. ಇವರು ಮಾಡುತ್ತಿರುವ ಪರೋಪಕಾರಿ ಕೆಲಸಗಳನ್ನು ಮೆಚ್ಚಿ ಅನೇಕ ಸಂಸ್ಥೆಗಳು ಇವರಿಗೆ ಪ್ರಶಸಿಯನ್ನು ನೀಡಿ ಗೌರವಿಸಿವೆ.

2018ರಲ್ಲಿ ಸುನಾಮಿ ಫೋಟೋ ಮ್ಯೂಸಿಯಂ ಅನ್ನುವುದನ್ನ ಸ್ಥಾಪಿಸಿ ಇಡೀ ಮನೆಯ ತುಂಬಾ ಸುನಾಮಿಗೆ ಸಂಬಂಧಿಸಿದ ಫೋಟೋಗಳನ್ನು, ಲೇಖನಗಳನ್ನು, ವಸ್ತುಗಳನ್ನು ಆ ಮ್ಯೂಸಿಯಂನಲ್ಲಿ ಸಂಗ್ರಹಿಸಿದ್ದಾರೆ. ಈ ಮ್ಯೂಸಿಯಂಗೆ ನಾವು ಭೇಟಿ ಕೊಟ್ಟದ್ದು. ಇದಕ್ಕೆ ಪ್ರವೇಶದ ಟಿಕೆಟ್ ಕೂಡ ಇಲ್ಲ. ಜೊತೆಗೆ ಅವರು ಪ್ರವಾಸಿಗರಿಂದ ಯಾವುದೇ ಡೊನೇಷನ್ ಕೇಳುವುದಿಲ್ಲ. ಮನಸ್ಸಿಗೆ ಅನ್ನಿಸಿದರೆ ಏನಾದರೂ ಕೊಡಬಹುದು. ಅವರ ಕೆಲಸಗಳಿಗೆ ಮನಸಾರೆ ಅಭಿನಂದಿಸಿ ಮನಸ್ಸಿಗೆ ಅನ್ನಿಸಿದಷ್ಟನ್ನು ಅವರ ಕೈಗೆ ಕೊಟ್ಟು ಹೊರಬಂದೆವು. ಒಂದಂತೂ ಹೇಳಬಲ್ಲೆ. ಈ ಮ್ಯೂಸಿಯಂ ಒಳಗೆ ಒಬ್ಬ ಮನುಷ್ಯ ಹೋದರೆ ಹೊರಗೆ ಬರುವಾಗ ಆತ ಮೊದಲಿನವನಾಗಿರುವುದಿಲ್ಲ. ನೀವೇನಾದರೂ ಮುಂದೊಮ್ಮೆ ಶ್ರೀಲಂಕಾಗೆ ಪ್ರವಾಸ ಕೈಗೊಂಡರೆ ಸಾಧ್ಯವಾದರೆ ಇಲ್ಲೊಮ್ಮೆ ಭೇಟಿ ಕೊಡಿ.

ಇಂದು ಡಿಸೆಂಬರ್ 26. ಆ ಭಯಾನಕ ದುರಂತ ಸಂಭವಿಸಿ ಇಂದಿಗೆ ಸರಿಯಾಗಿ 20 ವರ್ಷಗಳು ಕಳೆದಿವೆ. ಕೇವಲ ಶ್ರೀಲಂಕಾ ಒಂದರಲ್ಲಿ 30,000ಕ್ಕೂ ಹೆಚ್ಚು ಜನರನ್ನು ಸುನಾಮಿಯ ದೈತ್ಯ ಅಲೆ ಕೊಚ್ಚಿಕೊಂಡು ಹೋಗಿದೆ. ಲಕ್ಷಾಂತರ ಜನ ಮನೆಮಠಗಳನ್ನು, ಆಸ್ತಿಯನ್ನು ಪ್ರೀತಿಸಿದವರನ್ನು ಕಳೆದುಕೊಂಡಿದ್ದಾರೆ. ಶ್ರೀಲಂಕಾದಲ್ಲಿ ಡಿಸೆಂಬರ್ 26ನ್ನು ಸುನಾಮಿಯಲ್ಲಿ ತೀರಿಕೊಂಡವರ ಹೆಸರಲ್ಲಿ “National Safety Day” ಯನ್ನಾಗಿ ಆಚರಿಸುತ್ತಾರೆ.

(2024ರ ಜನವರಿಯಲ್ಲಿ ಶ್ರೀಲಂಕಾಗೆ ಪ್ರವಾಸ ಹೋದಾಗ ಕಂಡ ವಿಷಯದ ಬಗೆಗಿನ ಟಿಪ್ಪಣಿ)

ಸಂತೋಷ್ ಕುಮಾರ್ ಎಲ್.ಎಂ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page