Friday, June 20, 2025

ಸತ್ಯ | ನ್ಯಾಯ |ಧರ್ಮ

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಸ್ಥಾನಮಾನ ; ಬುಗಿಲೇಳುತ್ತಾ ಅಸಮಾಧಾನ?

ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ತೀರಾ ಹಿಂದುಳಿದಿದ್ದ ಬಿಜೆಪಿ ಅಂತೂ ವಿಪಕ್ಷ ನಾಯಕನ ಆಯ್ಕೆ ಜೊತೆಗೆ ಹೊಸ ರಾಜ್ಯಾಧ್ಯಕ್ಷನ ಆಯ್ಕೆಗೂ ಮುಹೂರ್ತ ನಿಗದಿ ಮಾಡಿದೆ. ನಾಳೆ ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ಪಕ್ಷದ ಹೈವೋಲ್ಟೇಜ್ ಸಭೆಗೆ ಮಾಜಿ ಶಾಸಕ ಸಿಟಿ ರವಿಗೆ ಆಹ್ವಾನಿಸಿದ್ದು, ಈ ವಾರದಲ್ಲಿ ಬಿಜೆಪಿ ಹೊಸ ರಾಜ್ಯಾಧ್ಯಕ್ಷರ ಘೋಷಣೆ ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇನ್ನೇನು ಲೋಕಸಭಾ ಚುನಾವಣೆ ವರ್ಷದ ಒಳಗೇ ಬರುವುದರಿಂದ ಬಿಜೆಪಿ ಕೂಡಾ ಈ ವಿಚಾರದಲ್ಲಿ ತಡ ಮಾಡುವಂತಿಲ್ಲ. ಜೊತೆಗೆ ಸಾಂವಿಧಾನಿಕವಾಗಿ ವಿಪಕ್ಷ ನಾಯಕನ ಆಯ್ಕೆ ಕೂಡಾ ತೀರಾ ಅನಿವಾರ್ಯ. ಈಗಾಗಲೇ ಸರ್ಕಾರದ ಒಂದು ಹಂತದ ಅಧಿವೇಶನ ಕೂಡಾ ಮುಗಿದಿದ್ದರೂ ವಿಪಕ್ಷ ನಾಯಕನ ಆಯ್ಕೆ ಆಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ದಿನಕ್ಕೊಮ್ಮೆ ಟ್ರೋಲ್ ಮಾಡುತ್ತಿದೆ. ಹಾಗಾಗಿಯೇ ಮಾಜಿ ಶಾಸಕ ಸಿ.ಟಿ.ರವಿಯವರನ್ನು ಹೈಕಮಾಂಡ್ ದೆಹಲಿಗೆ ಕರೆದಿದೆ.

ಬಿಜೆಪಿ ಪಕ್ಷದ ಹೀನಾಯ ಸೋಲು, ಅಸಮರ್ಥ ನಾಯಕತ್ವ, ಆಡಳಿತದಲ್ಲಿ ನಿರಂತರ ಲೋಪ ಇವೆಲ್ಲವುಗಳಿಂದ ಎಚ್ಚೆತ್ತುಕೊಳ್ಳುವ ದಾರಿಯಲ್ಲಿರುವ ಬಿಜೆಪಿ ಪಕ್ಷ, ಕಾಂಗ್ರೆಸ್‌ ಸರ್ಕಾರವನ್ನ ಎದುರಿಸುವ ನಿಟ್ಟಿನಲ್ಲಿ ಅಳೆದು ತೂಗಿ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಗೆ ಮುಂದಾಗಿದೆ. ಇದೇ ಕಾರಣಕ್ಕೆ ರಾಷ್ಟ್ರೀಯ ಹುದ್ದೆಯಿಂದ ಸಿ ಟಿ ರವಿ ಅವರನ್ನ ಕೆಳಗಿಳಿಸಿದ್ದು ಎನ್ನುವುದಕ್ಕೆ ಈ ಎಲ್ಲಾ ಬೆಳವಣಿಗೆ ಸಾಕ್ಷಿಯಂತಿದೆ.

ಇತ್ತ ‘ಹಿಂದೂ ನಾವೆಲ್ಲ ಒಂದು’ ಎಂಬ ಘೋಷಣೆ ಮೂಲಕ ಸುದ್ದಿ ಮಾಡುತ್ತಿದ್ದ ಬಿಜೆಪಿ ಈಗ ಜಾತಿ ಸೂತ್ರಕ್ಕೆ ಬಿದ್ದಿತೇ ಎಂಬ ಅನುಮಾನ ವ್ಯಕ್ತವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗರನ್ನು, ವಿಪಕ್ಷ ನಾಯಕನ ಸ್ಥಾನಕ್ಕೆ ಲಿಂಗಾಯತರನ್ನು ಆಯ್ಕೆ ಮಾಡುವುದು ಪಕ್ಕಾ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಆ ನಿಟ್ಟಿನಲ್ಲಿ ಸಿ.ಟಿ.ರವಿಯನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದು ಪಕ್ಕಾ ಎನ್ನಲಾಗಿದೆ.

ಅದೇ ರೀತಿ ವಿಪಕ್ಷ ನಾಯಕನ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಇದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಯಡಿಯೂರಪ್ಪ ಬಣದಿಂದ ಬಿ.ವೈ.ವಿಜಯೇಂದ್ರ ಕೂಡಾ ವಿಪಕ್ಷ ನಾಯಕನ ರೇಸ್ ನಲ್ಲಿ ಇದ್ದಾರೆ. ನಿರಾಣಿ ಮತ್ತು ಯತ್ನಾಳ್ ಈಗಾಗಲೇ ತಮ್ಮ ಒಳಜಗಳವನ್ನು ಬೀದಿಗೆ ತಂದಿರುವುದರಿಂದ ಪಟ್ಟಿಯಿಂದ ಅವರನ್ನು ಕೈಬಿಡುವುದೇ ಸೂಕ್ತ ಎನ್ನಲಾಗಿದೆ.

ಇತ್ತ ಪ್ರಬಲ ಪೈಪೋಟಿ ನೀಡುತ್ತಿರುವ ಇನ್ನೊಬ್ಬ ವ್ಯಕ್ತಿ ಎಂದರೆ ಯಡಿಯೂರಪ್ಪ ಪುತ್ರ, ಬಿ.ವೈ.ವಿಜಯೇಂದ್ರ. ವಿಜಯೇಂದ್ರ ಯಡಿಯೂರಪ್ಪ ಅವರ ಏಕೈಕ ಆಯ್ಕೆಯಾಗಿದೆ. ಆದರೆ ಬಿಜೆಪಿ ಹೈಕಮಾಂಡ್ ಗೆ ಯಡಿಯೂರಪ್ಪ ಸೂಚಿಸುವ ವ್ಯಕ್ತಿಗೆ ವಿಪಕ್ಷ ನಾಯಕನ ಪಟ್ಟ ಕಟ್ಟುವುದು ಅಷ್ಟು ಒಪ್ಪಿಗೆ ಇಲ್ಲ ಎಂದು ತಿಳಿದು ಬಂದಿದೆ. ಆ ಕಾರಣಕ್ಕೇ ಇತ್ತ ಎಲ್ಲಾ ಕಡೆಗೂ ಸಲ್ಲುವ ಬಸವರಾಜ ಬೊಮ್ಮಾಯಿಗೇ ವಿಪಕ್ಷ ನಾಯಕನ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಚಿಂತಿಸಿದೆ ಎನ್ನಲಾಗಿದೆ.

ಇನ್ನೊಂದು ಕಡೆ, ಅಶ್ವಥ್ ನಾರಾಯಣ್, ಆರ್.ಅಶೋಕ್ ಕೂಡಾ ವಿಪಕ್ಷ ನಾಯಕನ ರೇಸ್ ನಲ್ಲಿ ಇದ್ದರೂ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಎರಡೂ ಸ್ಥಾನಕ್ಕೆ ಒಂದೇ ಸಮುದಾಯದವರನ್ನು ಕೂರಿಸಿದರೆ ಮತ್ತೆ ಲಿಂಗಾಯತರ ವಿರೋಧ ಕಟ್ಟಿಕೊಳ್ಳುವ ಭಯ ಕೂಡಾ ಬಿಜೆಪಿ ಹೈಕಮಾಂಡ್ ಗೆ ಇದೆ. ಹಾಗಾಗಿಯೇ ಇವರಿಬ್ಬರನ್ನು ಎರಡೂ ಆಯ್ಕೆಯಿಂದ ದೂರ ಇಡಲಾಗಿದೆ.

ಇತ್ತೀಚೆಗಷ್ಟೇ ಸಿ.ಟಿ.ರವಿ. ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಅಲ್ಲದೇ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಅವರು ಸಹ ಸಿಟಿ ರವಿ ಅವರಿಗೆ ಅಧ್ಯಕ್ಷ ಸ್ಥಾನ ಎಂದು ಬಹಿರಂಗವಾಗಿಯೇ ಹೇಳಿದ್ದರು. ಇದೆಲ್ಲರ ಮಧ್ಯೆ ಇದೀಗ ಹೈಕಮಾಂಡ್​ನಿಮದ ಬುಲಾವ್ ಬಂದಿದ್ದು, ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಬಹುತೇಕ ಸಿ ಟಿ ರವಿಯವರು ನೂತನ ಬಿಜೆಪಿ ಸಾರಥಿಯಾಗಲಿದ್ದು, ಈ ವಾರದೊಳಗೆ ಹೈಕಮಾಂಡ್‌ ಅಧಿಕೃತವಾಗಿ ಪ್ರಕಟಗೊಳಿಸುವ ಸಾಧ್ಯತೆ ಇದೆ.

ಇದರ ಬೆನ್ನಲ್ಲೇ ವಿಪಕ್ಷ ನಾಯಕನಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಬಣದ ಆಪ್ತ ನಾಯಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸ್ಥಾನ ಒಲಿಯಬಹುದು ಎಂದು ಹೇಳಲಾಗಿದ್ದು, ಬಿ.ಎಲ್. ಸಂತೋಷ್‌ ಬಣದ ಸಿ.ಟಿ ರವಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎರಡೂ ಸಮುದಾಯಕ್ಕೂ ನ್ಯಾಯ ಎಂಬ ತೇಪೆ ಹಚ್ಚುವ ಕೆಲಸ ಸರಾಗವಾಗಲಿದೆ.

ಇಷ್ಟಾದರೂ ಬಿಜೆಪಿಯಲ್ಲಿ ಬಿನ್ನಮತ ಮತ್ತೊಮ್ಮೆ ಬುಗಿಲೇಳುವ ಸಾಧ್ಯತೆ ಇದೆ. ಯಾಕೆಂದರೆ, ನಾನೊಬ್ಬ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದೇ ಹೇಳಿಕೊಂಡು ಬಂದಿರುವ ಲಿಂಗಾಯತ ನಾಯಕ ವಿ.ಸೋಮಣ್ಣ ಪಕ್ಷದಿಂದ ಕಾಲ್ಕಿತ್ತರೂ ಆಶ್ಚರ್ಯವಿಲ್ಲ ಎನ್ನಲಾಗಿದೆ. ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಚಾಮರಾಜನಗರ ಮತ್ತು ವರುಣಾ ಎರಡೂ ಕ್ಷೇತ್ರಗಳಲ್ಲಿ ನಿಂತು, ಸೋಲುಂಡ ನಂತರ ರೆಬೆಲ್ ಆಗಿರುವ ವಿ.ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದು ಕೂತಿದ್ದಾರೆ. ಹಾಗಾಗಿ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಸ್ಥಾನ ಏನೇ ಘೋಷಣೆ ಆದರೂ ಬಿನ್ನಮತ ಏಳುವುದು ಪಕ್ಕಾ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page