Monday, March 31, 2025

ಸತ್ಯ | ನ್ಯಾಯ |ಧರ್ಮ

ವಾಟ್ಸಾಪ್‌ ಮೂಲಕ ಇತಿಹಾಸದ ಕುರಿತು ತಿಳಿದುಕೊಳ್ಳುವುದನ್ನು ನಿಲ್ಲಿಸಿ: ಮಹಾರಾಷ್ಟ್ರದ ಜನರಿಗೆ ರಾಜ್‌ ಠಾಕ್ರೆ ಕರೆ

ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಔರಂಗಜೇಬನ ಸಮಾಧಿಯ ವಿಷಯದಲ್ಲಿ ಕೋಮು ಉದ್ವಿಗ್ನತೆ ಉಂಟುಮಾಡುವ ಪ್ರಯತ್ನಗಳನ್ನು ಟೀಕಿಸಿದ್ದಾರೆ. ಇತಿಹಾಸವನ್ನು ಜಾತಿ ಮತ್ತು ಧರ್ಮದ ದೃಷ್ಟಿಕೋನದಿಂದ ವಿಶ್ಲೇಷಿಸಬಾರದು ಎಂದು ಒತ್ತಿ ಹೇಳಿದ ಅವರು, ಇತಿಹಾಸದ ಸತ್ಯಗಳಿಗಾಗಿ ವಾಟ್ಸಾಪ್ ಫಾರ್ವರ್ಡ್‌ಗಳನ್ನು ಅವಲಂಬಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ತಮ್ಮ ವಾರ್ಷಿಕ ಗುಡಿ ಪಡ್ವಾ ರ್ಯಾಲಿಯಲ್ಲಿ ಮಾತನಾಡಿದ ಠಾಕ್ರೆ, ಮೊಘಲ್ ದೊರೆ ಔರಂಗಜೇಬ್ “ಶಿವಾಜಿ ಎಂಬ ಚಿಂತನೆಯನ್ನು ನಾಶಮಾಡಲು” ಬಯಸಿದ್ದ ಎಂದು ಹೇಳಿದರು. ಆದರೆ ಅದರಲ್ಲಿ ವಿಫಲನಾಗಿ ಮಹಾರಾಷ್ಟ್ರದಲ್ಲಿ ಮೃತಪಟ್ಟ ಎಂದರು. ಬಿಜಾಪುರದ ಸೇನಾಪತಿ ಅಫ್ಜಲ್ ಖಾನ್‌ರನ್ನು ಪ್ರತಾಪಗಢ ಕೋಟೆಯ ಬಳಿ ಸಮಾಧಿ ಮಾಡಲಾಗಿತ್ತು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಒಪ್ಪಿಗೆ ಇಲ್ಲದೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ತಿಳಿಸಿದರು.

ಠಾಕ್ರೆ ಅವರ ಈ ಹೇಳಿಕೆ, ಛತ್ರಪತಿ ಸಂಭಾಜಿನಗರ ಜಿಲ್ಲೆಯ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂದು ಬಲಪಂಥೀಯ ಸಂಘಟನೆಗಳು ಮಾಡುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಬಂದಿದೆ. ಈ ವಿವಾದವು ಈ ತಿಂಗಳ ಆರಂಭದಲ್ಲಿ ನಾಗ್ಪುರದಲ್ಲಿ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿತ್ತು.

“ವಾಟ್ಸಾಪ್‌ನಲ್ಲಿ ಇತಿಹಾಸ ಓದುವುದನ್ನು ಬಿಡಿ”

“ಮರಾಠರನ್ನು ನಾಶಮಾಡಲು ಯತ್ನಿಸಿದ ಈ ಜನರು ತಾವೇ ನಾಶವಾದರು ಎಂಬುದನ್ನು ಜಗತ್ತಿಗೆ ತಿಳಿಸಲು ನಾವು ಬಯಸುವುದಿಲ್ಲವೇ? ವಾಟ್ಸಾಪ್‌ನಲ್ಲಿ ಇತಿಹಾಸ ಓದುವುದನ್ನು ಬಿಟ್ಟು, ಇತಿಹಾಸ ಪುಸ್ತಕಗಳನ್ನು ಗಂಭೀರವಾಗಿ ಓದಿ” ಎಂದು ಅವರು ಹೇಳಿದರು.

ಜನರು ಪ್ರಚೋದನೆಗೆ ಒಳಗಾಗಬಾರದು ಮತ್ತು ಗಮನ ಬೇರೆಡೆಗೆ ಸರಿಯಬಾರದು ಎಂದು ಕರೆ ನೀಡಿದ ಅವರು, ಶಿವಾಜಿ ಪೂರ್ವ ಮತ್ತು ಶಿವಾಜಿ ನಂತರದ ಯುಗಗಳಲ್ಲಿ ಸಾಮಾಜಿಕ-ರಾಜಕೀಯ ಪರಿಸ್ಥಿತಿಗಳು ಸಂಪೂರ್ಣವಾಗಿ ಭಿನ್ನವಾಗಿದ್ದವು ಎಂದು ತಿಳಿಸಿದರು.

“ನಾವು ಈಗಿನ ನಿಜವಾದ ಸಮಸ್ಯೆಗಳನ್ನು ಮರೆತಿದ್ದೇವೆ. ಸಿನಿಮಾ ನೋಡಿದ ನಂತರ ಜಾಗೃತರಾದ ಹಿಂದೂಗಳಿಂದ ಯಾವ ಪ್ರಯೋಜನವೂ ಇಲ್ಲ. ಸಂಭಾಜಿ ಮಹಾರಾಜರ ತ್ಯಾಗವನ್ನು ವಿಕ್ಕಿ ಕೌಶಲ್‌ರಿಂದ ಮತ್ತು ಔರಂಗಜೇಬನ ಬಗ್ಗೆ ಅಕ್ಷಯ್ ಖನ್ನಾರಿಂದ ತಿಳಿದುಕೊಂಡಿದ್ದೀರಾ?” ಎಂದು ಅವರು ಪ್ರಶ್ನಿಸಿದರು.

ಔರಂಗಜೇಬ ಗುಜರಾತ್‌ನ ದಾಹೋದ್‌ನಲ್ಲಿ ಜನಿಸಿದ್ದ ಎಂದು ಹೇಳಿದರು. ಸ್ವಾರ್ಥದ ರಾಜಕೀಯ ಆಸೆಗಳಿಗಾಗಿ ಜನರ ನಡುವೆ ಜಗಳ ಹಚ್ಚುವವರಿಗೆ ಇತಿಹಾಸದ ಬಗ್ಗೆ ಕಾಳಜಿ ಇಲ್ಲ ಎಂದು ಅವರು ಆರೋಪಿಸಿದರು. ಧರ್ಮದ ಆಧಾರದಲ್ಲಿ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಟರ್ಕಿಯ ಉದಾಹರಣೆಯನ್ನು ನೀಡಿ, ಅದು ಹೇಗೆ “ಸುಧಾರಿಸಿದೆ” ಎನ್ನುವುದನ್ನು ವಿವರಿಸಿದರು.

“ಧರ್ಮ ಮನೆಯ ನಾಲ್ಕು ಗೋಡೆಗಳ ಒಳಗೆ ಇರಬೇಕು”

“ಧರ್ಮವು ನಿಮ್ಮ ಮನೆಯ ನಾಲ್ಕು ಗೋಡೆಗಳ ಒಳಗೆ ಇರಬೇಕು. ಮುಸ್ಲಿಮರು ರಸ್ತೆಗಿಳಿದಾಗ ಅಥವಾ ಗಲಭೆಗಳ ಸಮಯದಲ್ಲಿ ಮಾತ್ರ ಹಿಂದೂ ತಾನು ಹಿಂದೂ ಎಂದು ಗುರುತಿಸಿಕೊಳ್ಳುತ್ತಾನೆ; ಇಲ್ಲದಿದ್ದರೆ ಹಿಂದೂಗಳು ಜಾತಿಗಳಾಗಿ ವಿಭಜಿತರಾಗಿರುತ್ತಾರೆ” ಎಂದು ಅವರು ಹೇಳಿದರು.

ಠಾಕ್ರೆ ಅವರು ಸರ್ಕಾರಿ ಕೆಲಸಗಳಿಗೆ ಮರಾಠಿ ಭಾಷೆಯ ಬಳಕೆಯನ್ನು ಕಡ್ಡಾಯಗೊಳಿಸುವ ತಮ್ಮ ಪಕ್ಷದ ನಿಲುವನ್ನು ಪುನರುಚ್ಚರಿಸಿದರು. “ನೀವು ಇಲ್ಲಿ ವಾಸಿಸುತ್ತಿದ್ದು, ಇಲ್ಲಿನ ಭಾಷೆಯನ್ನು ಮಾತನಾಡದಿದ್ದರೆ, ಅದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದರು.

ಧರ್ಮದ ಹೆಸರಿನಲ್ಲಿ ನದಿಗಳ ಮಾಲಿನ್ಯವನ್ನು ಅವರು ಖಂಡಿಸಿದರು ಮತ್ತು ಗಂಗಾ ನದಿಯಲ್ಲಿ ಶವಗಳನ್ನು ಸುಡಲಾಗುತ್ತಿದೆ ಮತ್ತು ಬಿಸಾಡಲಾಗುತ್ತಿದೆ ಎಂದು ಆರೋಪಿಸುವ ವಿಡಿಯೊವನ್ನು ತೋರಿಸಿದರು.

“ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಾಶಪಡಿಸಿದರೆ ಇದು ಯಾವ ರೀತಿಯ ಧರ್ಮ? ಗಂಗೆಯನ್ನು ಸ್ವಚ್ಛಗೊಳಿಸಲು 33,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಮತ್ತು ಅದು ಇನ್ನೂ ನಡೆಯುತ್ತಿದೆ. ನಾವು ಸುಧಾರಿಸಬಾರದೇ?” ಎಂದು ಅವರು ಪ್ರಶ್ನಿಸಿದರು.

ಮಹಾರಾಷ್ಟ್ರದ ನದಿಗಳು ಸಹ ತೀವ್ರವಾಗಿ ಮಾಲಿನ್ಯಗೊಂಡಿವೆ ಎಂದು ಠಾಕ್ರೆ ಆರೋಪಿಸಿದರು. ದೇಶದಲ್ಲಿ ಅತ್ಯಂತ ಮಾಲಿನ್ಯಗೊಂಡ 311 ನದಿ ಭಾಗಗಳಲ್ಲಿ 55 ಮಹಾರಾಷ್ಟ್ರದವು ಎಂದು ಅವರು ಹೇಳಿದರು.

ಮುಂಬೈನಲ್ಲಿ ಐದು ನದಿಗಳಿದ್ದವು ಮತ್ತು ಅವುಗಳಲ್ಲಿ ನಾಲ್ಕು ಸತ್ತಿವೆ ಎಂದು ಅವರು ತಿಳಿಸಿದರು. ಉಳಿದಿರುವ ಏಕೈಕ ನದಿಯಾದ ಮಿಥಿ ಸಹ ಸಾಯುವ ಹಂತದಲ್ಲಿದೆ ಎಂದು ಅವರು ಹೇಳಿದರು. ಕೊಳಚೆ ನೀರು, ಒತ್ತುವರಿ ಮತ್ತು ರಾಸಾಯನಿಕ ತ್ಯಾಜ್ಯವನ್ನು ನದಿಗಳಿಗೆ ಬಿಡುವುದು ಜಲಮೂಲಗಳನ್ನು ನಾಶಪಡಿಸುತ್ತಿದೆ ಎಂದು ಅವರು ಆರೋಪಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page