Wednesday, June 25, 2025

ಸತ್ಯ | ನ್ಯಾಯ |ಧರ್ಮ

ರೋಹಿತ್ ವೇಮುಲಾ ಸಾವಿಗೆ ೭ ವರ್ಷ: ಚುರುಕುಗೊಳ್ಳದ ತನಿಖೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಹೈದರಾಬಾದ್ ನ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಇಲ್ಲವಾಗಿ ಇಂದಿಗೆ ಏಳು ವರ್ಷಗಳು‌. ರೋಹಿತ್ ವೆಮುಲಾ ಜೊತೆಗೆ 2016 ರಲ್ಲಿ ಹೈದರಾಬಾದ್ ಯೂನಿವರ್ಸಿಟಿಯಿಂದ ಹೊರಬಿದ್ದ ನಾಲ್ವರು ವಿದ್ಯಾರ್ಥಿಗಳು ದಾಖಲಿಸಿದ ಮೊಕದ್ದಮೆ ಈವರೆಗೆ ಯಾವುದೇ ಪ್ರಗತಿ ಕಂಡಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2016 ಅಂದ್ರೆ ಇಲ್ಲಿಗೆ 8 ವರ್ಷಗಳ ಹಿಂದೆ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್” (ASA) ಬ್ಯಾನರ್ ಅಡಿಯಲ್ಲಿ ಯೂನಿವರ್ಸಿಟಿ ಹಾಗೂ ದಲಿತ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನ್ಯಾಯ ಪ್ರಶ್ನಿಸಿದ ಹಾಗೂ ಪ್ರಮುಖ ಸಮಸ್ಯೆಗಳನ್ನು ಎತ್ತಿದ್ದಕ್ಕಾಗಿ ರೋಹಿತ್ ವೇಮುಲಾ ಸೇರಿದಂತೆ ನಾಲ್ವರನ್ನು ಕ್ಯಾಂಪಸ್ ನಿಂದ ಅಮಾನತುಗೊಳಿಸಲಾಯಿತು. ಇದರ ಜೊತೆಗೆ ಅವರಿಗೆ ಬರುತ್ತಿದ್ದ 25,000 ರೂ.ಗಳ ಫೆಲೋಶಿಪ್ ಅನ್ನು ಸಹ ಯೂನಿವರ್ಸಿಟಿ ಕಡೆಯಿಂದ ತಡೆ ಹಿಡಿಯಲಾಯಿತು.

ಎಎಸ್‌ಎ (ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್) ವಿರುದ್ಧ ಎಬಿವಿಪಿಯ ದೂರುಗಳನ್ನು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರು ಗಂಭೀರವಾಗಿ ತಗೆದುಕೊಂಡು, ಅವುಗಳನ್ನು ಆಗಿನ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ರವಾನಿಸಿದರು ಮತ್ತು ಅವುಗಳನ್ನು ಪರಿಶೀಲಿಸುವಂತೆ ವಿಶ್ವವಿದ್ಯಾಲಯದ ಆಡಳಿತವನ್ನು ಕೇಳಿದರು.

ಈ ನಡುವೆ ಅಮಾನತುಗೊಂಡ ರೋಹಿತ್ ವೇಮುಲಾ ತನ್ನ ಖರ್ಚುಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು. ಅವರು ಮತ್ತು ಇತರ ನಾಲ್ವರು ವಿದ್ಯಾರ್ಥಿಗಳನ್ನು ತಮ್ಮ ಹಾಸ್ಟೆಲ್ ಕೊಠಡಿಗಳಿಂದ ಹೊರಹಾಕಿದ ನಂತರ, ಅವರು ಕ್ಯಾಂಪಸ್‌ನಲ್ಲೇ ಟೆಂಟ್ ಹಾಕಿ, ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.

ಆದರೆ ತಮ್ಮ ಬೇಡಿಕೆ ಈಡೇರಿಸದ ಹಾಗೂ ತಮಗೆ ಅನ್ಯಾಯ ಎಸಗಿದವರ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರೂ ಸಹ ಯಾವುದೇ ಪ್ರಯೋಜನ ಆಗಲಿಲ್ಲ ಎಂಬ ನೋವು ರೋಹಿತ್ ವೆಮುಲಾ ಅವರಿಗೆ ಇತ್ತು. ಈ ಎಲ್ಲಾ ಬೆಳವಣಿಗೆಯಿಂದ ಮನನೊಂದ ರೋಹಿತ್ ವೆಮುಲಾ ಜನವರಿ 17 2016 ರಂದು ಒಂದು ಭಾವನಾತ್ಮಕ ಸುಧೀರ್ಘ ಪತ್ರ ಬರೆದು ಆತ್ಮಹತ್ಯೆಗೆ ಶರಣಾದರು. ಈ ಪತ್ರ ದೇಶಾದ್ಯಂತ ಹೆಚ್ಚು ಸಂಚಲನ ಉಂಟು ಮಾಡಿತ್ತು.

“ಈ ರೀತಿಯ ಪತ್ರವನ್ನು ನಾನು ಮೊದಲ ಬಾರಿಗೆ ಬರೆಯುತ್ತಿದ್ದೇನೆ. ಇದು ನನ್ನ ಮೊದಲ ಪ್ರಯತ್ನದ ಕೊನೆಯ ಪತ್ರ. ಈ ಪತ್ರವನ್ನು ಅರ್ಥ ಮಾಡಿಕೊಳ್ಳಲು ನೀವು ವಿಫಲರಾದರೆ ನನ್ನ ಕ್ಷಮೆ ಇರಲಿ. ಬಹುಶಃ ಈ ಪ್ರಪಂಚವನ್ನ ಅರ್ಥ ಮಾಡಿಕೊಳ್ಳುವುದರಲ್ಲಿ ನಾನು ತಪ್ಪಿದ್ದೇನೆ. ಪ್ರೀತಿ, ನೋವು, ಬದುಕು, ಸಾವು ಇವನ್ನೆಲ್ಲಾ ಅರ್ಥ ಮಾಡ್ಕೊಳೋದ್ರಲ್ಲಿ ತಪ್ಪಿದ್ದೇನೆ. ಆತುರವೇನೂ ಇರಲಿಲ್ಲ… ಕೆಲವರಿಗೆ ಬದುಕೇ ಒಂದು ಶಾಪ. ಆದರೆ ನನಗೆ, ನನ್ನ ಹುಟ್ಟೇ ಮಾರಾಣಾಂತಿಕ ಅಪಘಾತವಾಗಿತ್ತು. ನನ್ನ ಬಾಲ್ಯದ ಏಕಾಂಗಿತನದಿಂದ ನಾನು ಎಂದೂ ಚೇತರಿಸಿಕೊಳ್ಳಲಾರೆ ಈ ಕ್ಷಣದಲ್ಲಿ ನನಗೆ ನೋವಿಲ್ಲ, ದುಃಖವಿಲ್ಲ, ಆತಂಕವಿಲ್ಲ…” ಎನ್ನುವ ರೀತಿಯಲ್ಲಿ ಜಾತಿಯ ಕಾರಣಕ್ಕಾಗಿ, ದೌರ್ಜನ್ಯದ ಕಾರಣಕ್ಕಾಗಿ, ಸಿದ್ಧಾಂತದ ಹಿನ್ನೆಲೆಯಲ್ಲಿ ಆದ ಅನ್ಯಾಯದ ಕಾರಣಕ್ಕಾಗಿ ಇಲ್ಲಿಯವರೆಗೆ ನೋವು ತಿಂದ ಕ್ಷಣಗಳನ್ನು ರೋಹಿತ್ ವೆಮುಲಾ ಭಾವನಾತ್ಮಕವಾಗಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆ ನಂತರ ಈ ಪತ್ರ ರಾಜಕೀಯವಾಗಿ ಅತಿ ಹೆಚ್ಚು ಸಂಚಲನ ಮೂಡಿಸಿತ್ತು. ದೇಶಾದ್ಯಂತ ಬಹುತೇಕ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ರೋಹಿತ್ ವೆಮುಲಾ ಸಾವಿಗೆ ಬೀದಿಗಿಳಿದು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು. ಅನೇಕ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಕಾರ್ಯಕರ್ತರು ಮತ್ತು ಶಿಕ್ಷಕರು ‘ರೋಹಿತ್ ಆಕ್ಟ್’ ಅನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಜೆಎಸಿ ಸದಸ್ಯರು ಆಗ್ರಹಿಸಿದರು. ಈ ಶಾಸನದ ಹಿಂದಿನ ಉದ್ದೇಶವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಾಸಕಾಂಗ ರಕ್ಷಣೆಯನ್ನು ಖಚಿತಪಡಿಸುವುದಾಗಿತ್ತು.

ರೋಹಿತ್ ಸಾವಿನ ನಂತರ ಕೇಂದ್ರ ಸರ್ಕಾರ ನಡೆದುಕೊಂಡ ನಡೆ ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು. ಇಂದಿಗೂ ಸಹ ಈ ಪ್ರಕರಣದ ಅಡಿಯಲ್ಲಿ ಯಾವುದೇ ಮಹತ್ವದ ಬೆಳವಣಿಗೆ ನಡೆದಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಮಾನತುಗೊಂಡ ನಾಲ್ವರು ಸಂಶೋಧನಾ ವಿದ್ಯಾರ್ಥಿಗಳು ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಹೆಚ್) ಆಗಿನ ಉಪಕುಲಪತಿ ಪಿ ಅಪ್ಪಾ ರಾವ್ ಮತ್ತು ಇತರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದರಲ್ಲಿ ಯಾವುದೇ ಪ್ರಗತಿಯನ್ನು ಕಂಡಿಲ್ಲ. ರೋಹಿತ್‌ನ ಜಾತಿ ಪ್ರಮಾಣ ಪತ್ರದ ಕೊರತೆಯ ಪ್ರಕರಣದಲ್ಲಿ ಆರೋಪಪಟ್ಟಿ ಕೂಡ ಸಲ್ಲಿಕೆಯಾಗಿಲ್ಲ.

ಈ ಬಗ್ಗೆ ಪ್ರಕರಣ ದಾಖಲಿಸಿದ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಇದರಿಂದ ಯಾವುದೇ ವಿದ್ಯಾರ್ಥಿಗಳು ತಮ್ಮಂತೆ ಹೋರಾಟ ಮಾಡುವ ವ್ಯವಸ್ಥೆ ಬರಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ನಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಪ್ರಗತಿ ಇದೆ, ಆದರೆ ಅಪ್ಪಾ ರಾವ್, ಬಿಜೆಪಿ ನಾಯಕರಾದ ಬಂಡಾರು ದತ್ತಾತ್ರೇಯ, ಸ್ಮೃತಿ ಇರಾನಿ ಮತ್ತು ಇತರರ ವಿರುದ್ಧ ನಾವು ದಾಖಲಿಸಿರುವ ಪ್ರಕರಣದಲ್ಲಿ ಬೆಳವಣಿಗೆ ಕಂಡುಬಂದಿಲ್ಲ ಎಂದು ರೋಹಿತ್ ಜೊತೆಗೆ ಹೊರಹಾಕಲ್ಪಟ್ಟ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

“ರೋಹಿತ್‌ಗೆ ನ್ಯಾಯ ಸಿಗುವವರೆಗೆ, ನಮಗೆ ನ್ಯಾಯ ಸಿಗುವವರೆಗೆ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.

ಇನ್ನು ಅಮಾನತುಗೊಂಡ ವಿದ್ಯಾರ್ಥಿಗಳು, ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ ​​(ಎಎಸ್‌ಎ) ಹಾಗೂ ಜೆಎಸಿ ಸದಸ್ಯರ ವಿರುದ್ಧ ಯುಒಎಚ್‌ (ಯೂನಿವರ್ಸಿಟಿ ಆಫ್ ಹೈದರಾಬಾದ್) ನಿಂದ ಮೂರು ಮತ್ತು ಎಬಿವಿಪಿ ನಾಯಕ ಸುಶೀಲ್ ಕುಮಾರ್ ಅವರ ತಾಯಿಯಿಂದ ನಾಲ್ಕು ಪ್ರಕರಣಗಳು ದಾಖಲಾಗಿದ್ದರೆ, ಮಾಜಿ ಕುಲಪತಿ ಅಪ್ಪಾರಾವ್ ವಿರುದ್ಧ ಅಮಾನತುಗೊಂಡ ವಿದ್ಯಾರ್ಥಿಗಳು ಅಥವಾ ಜೆಎಸಿಯಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಎಸ್‌ಸಿ/ಎಸ್‌ಟಿ ದೌರ್ಜನ್ಯ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಪೈಕಿ ಎಬಿವಿಪಿ ನಾಯಕ ಸುಶೀಲ್ ಕುಮಾರ್‌ನ ತಾಯಿ ಸಲ್ಲಿಸಿರುವ ಒಂದು ಪ್ರಕರಣ ಹೈಕೋರ್ಟ್‌ನಲ್ಲಿದೆ. ಸೈಬರಾಬಾದ್ ಪೊಲೀಸ್ ಡೇಟಾಬೇಸ್ ಮತ್ತು ಅಮಾನತುಗೊಂಡ ವಿದ್ಯಾರ್ಥಿಗಳ ಜೈ ಭೀಮಾ ರಾವ್ ಅವರ ವಕೀಲರ ಪ್ರಕಾರ, ಈ ಎರಡು ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ ಮತ್ತು ಎರಡು ತನಿಖೆ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.

ಹಾಗೆಯೇ “ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣ (ಅಟ್ರಾಸಿಟಿ) ಮುಂದುವರಿಯದಿರಲು ಮುಖ್ಯ ಕಾರಣ ರೋಹಿತ್‌ನ ಜಾತಿ ಪ್ರಮಾಣಪತ್ರದ ಕೊರತೆ” ಎಂದು ವಕೀಲ ಭೀಮಾ ರಾವ್ ಹೇಳಿದರು. “ಉಳಿದ ಪ್ರಕರಣಗಳಲ್ಲಿ, ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗುತ್ತದೆ ಮತ್ತು ಅವು ಸಮನ್ಸ್‌ನ ಹಂತದಲ್ಲಿವೆ.” ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page