Home ದೇಶ ಟಿಇಟಿ ಪೇಪರ್ ಎಲ್ಲಿ ಮುದ್ರಣವಾಗಿದೆ ಎನ್ನುವುದು ಶಿಕ್ಷಣ ಸಚಿವರಿಗೇ ತಿಳಿದಿಲ್ಲವಂತೆ!: ಸ್ವಂತ ಸರ್ಕಾರದ ವಿರುದ್ಧವೇ ಬಿಜೆಪಿ...

ಟಿಇಟಿ ಪೇಪರ್ ಎಲ್ಲಿ ಮುದ್ರಣವಾಗಿದೆ ಎನ್ನುವುದು ಶಿಕ್ಷಣ ಸಚಿವರಿಗೇ ತಿಳಿದಿಲ್ಲವಂತೆ!: ಸ್ವಂತ ಸರ್ಕಾರದ ವಿರುದ್ಧವೇ ಬಿಜೆಪಿ ನಾಯಕ ಮುಂಗಂಟಿವಾರ್ ವಾಗ್ದಾಳಿ

0

ಮುಂಬೈ: ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಪ್ರಶ್ನೆ ಪತ್ರಿಕೆಯನ್ನು ಎಲ್ಲಿ ಮುದ್ರಿಸಲಾಗಿದೆ ಎಂಬುದು ಸ್ವತಃ ರಾಜ್ಯದ ಶಿಕ್ಷಣ ಸಚಿವರಿಗೇ ತಿಳಿದಿಲ್ಲ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಸುಧೀರ್ ಮುಂಗಂಟಿವಾರ್ ಹೇಳಿದ್ದಾರೆ.

ಈ ವಿಷಯವನ್ನು ಸ್ವತಃ ಶಿಕ್ಷಣ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. “ಟೆಟ್ ಪ್ರಶ್ನೆ ಪತ್ರಿಕೆಗಳನ್ನು ಆಗ್ರಾದಲ್ಲಿ ಮುದ್ರಿಸಲಾಗುತ್ತಿದೆ ಎಂಬ ವಿಷಯ ತಮಗೆ ತಿಳಿದಿರಲಿಲ್ಲ ಎಂದು ಶಿಕ್ಷಣ ಸಚಿವ ದಾದಾಜಿ ಭೂಸೆ ಅವರು ನನ್ನೊಂದಿಗೆ ವೈಯಕ್ತಿಕವಾಗಿ ಹೇಳಿದ್ದಾರೆ. ಅಧಿಕಾರಿಗಳು ಈ ವಿವರಗಳನ್ನು ತಮಗೆ ಎಂದಿಗೂ ತಿಳಿಸಿರಲಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ,” ಎಂದು ಮುಂಗಂಟಿವಾರ್ ಬಹಿರಂಗಪಡಿಸಿದ್ದಾರೆ.

ಜೂನ್ 28 ರಂದು ನಡೆಯಬೇಕಿದ್ದ ಟೆಟ್ ಪರೀಕ್ಷೆಯು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಮುಂದೂಡಲ್ಪಟ್ಟಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಈ ವಿಷಯದ ಕುರಿತು ವಿರೋಧ ಪಕ್ಷಗಳು ಮತ್ತು ಅಭ್ಯರ್ಥಿಗಳು ಬಿಜೆಪಿ ಸರ್ಕಾರದ ವೈಫಲ್ಯವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. “ರಾಜಕೀಯ ಪಕ್ಷಗಳನ್ನು ಒಡೆಯುವಲ್ಲಿ ತೋರಿಸುವ ಆಸಕ್ತಿಯನ್ನು ಪರೀಕ್ಷೆಗಳನ್ನು ನಡೆಸುವಲ್ಲಿ ತೋರಿಸಿದ್ದರೆ ಚೆನ್ನಾಗಿರುತ್ತಿತ್ತು” ಎಂದು ವಿಪಕ್ಷಗಳು ಆರೋಪಿಸಿವೆ.

ಇತ್ತೀಚೆಗೆ ವಿಧಾನಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆದಾಗ, ಬಿಜೆಪಿ ನಾಯಕ ಮುಂಗಂಟಿವಾರ್ ಕೂಡ ತಮ್ಮದೇ ಸರ್ಕಾರದ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಿವಸೇನೆ ನಾಯಕ ದಾದಾಜಿ ಭೂಸೆ ಅವರ ಸಚಿವ ಸಂಪುಟದ ಕಾರ್ಯವೈಖರಿಯ ವಿರುದ್ಧವೂ ಅವರು ಟೀಕೆಗಳನ್ನು ಮಾಡಿದ್ದಾರೆ.

You cannot copy content of this page

Exit mobile version