Home ರಾಜಕೀಯ ಡಿ.ಕೆ.ಶಿವಕುಮಾರ್ ಗೆ ಮತ್ತೆ ಇಡಿ ಸಮನ್ಸ್ : ಕಾಂಗ್ರೆಸ್ ಆಕ್ರೋಶ

ಡಿ.ಕೆ.ಶಿವಕುಮಾರ್ ಗೆ ಮತ್ತೆ ಇಡಿ ಸಮನ್ಸ್ : ಕಾಂಗ್ರೆಸ್ ಆಕ್ರೋಶ

0

#BharatJodoYatra ಹಾಗೂ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಮಧ್ಯೆಯೇ ಮತ್ತೊಮ್ಮೆ ಇಡಿ ನನಗೆ ಸಮನ್ಸ್‌ ನೀಡಿದೆ.
ನಾನು ಸಹಕರಿಸಲು ಸಿದ್ಧ ಆದರೆ ಈ ಸಮನ್ಸ್‌ ನೀಡಿರುವ ಸಮಯ, ಹಾಗೂ ಮೇಲಿಂದ ಮೇಲೆ ನೀಡುತ್ತಿರುವ ಕಿರುಕುಳದಿಂದಾಗಿ ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಏಜೆನ್ಸಿಯ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಅವರಿಗೆ ಮತ್ತೊಂದು ಸಮನ್ಸ್ ಜಾರಿ ಮಾಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುರುವಾರ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಪಕ್ಷವು ಕಾಂಗ್ರೆಸ್‌ಗೆ ಹೆಚ್ಚುತ್ತಿರುವ ಬೆಂಬಲದಿಂದ ಹೆದರುತ್ತಿದೆ ಮತ್ತು ಭ್ರಷ್ಟಾಚಾರದ ಆರೋಪದಿಂದ ಬಿಜೆಪಿ ವರ್ಚಸ್ಸು ಸಹ ಕುಂದಿದೆ. ಇದು ಮುಂದಿನ ಚುನಾವಣೆಗೆ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗುವ ಭಯದಲ್ಲಿ ಬಿಜೆಪಿಯವರಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ಕಾಂಗ್ರೆಸ್‌ಗೆ ಹೆಚ್ಚುತ್ತಿರುವ ಸಾರ್ವಜನಿಕ ಬೆಂಬಲ ಮತ್ತು ಭಾರತ್‌ ಜೋಡೋ ಯಾತ್ರೆಯ ಸಿದ್ದತೆಗೆ ಜನಸ್ಪಂದನೆ ನೋಡಿದ ಮೋದಿ ಸರ್ಕಾರವು ಡಿ.ಕೆ ಶಿವಕುಮಾರ್ ಅವರನ್ನು ಗುರಿಯಾಗಿಸಲು ಬಿಜೆಪಿಯ ಅಂಗಸಂಸ್ಥೆಯಂತೆ ಕೆಲಸ ಮಾಡುವ ಇಡಿಯನ್ನು ತಂದಿದೆ. ಇಂತಹ ಹೇಡಿತನದ ಕೃತ್ಯಗಳು ಭ್ರಷ್ಟ ಬೊಮ್ಮಾಯಿ ಸರ್ಕಾರವನ್ನು ನಿರ್ನಾಮ ಮಾಡುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಕುಮಾರ್ ಮತ್ತು ಇತರ ನಾಲ್ವರಿಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದ ಒಂದು ತಿಂಗಳ ನಂತರ ಇಡಿ ಸಮನ್ಸ್ ಬಂದಿದೆ.

ಆಗಸ್ಟ್ 2017 ರಲ್ಲಿ, ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಅವರ ಕುಟುಂಬ ಮತ್ತು ಸಹಚರರ ಒಡೆತನದ ಹಲವಾರು ನಿವೇಶನಗಳ ಮೇಲೆ ದಾಳಿ ನಡೆಸಿತ್ತು. ಹಾಗೇ “ಕೋಟ್ಯಂತರ ರೂಪಾಯಿ ಲೆಕ್ಕಕ್ಕೆ ಸಿಗದ ಆದಾಯವನ್ನು ಪತ್ತೆಹಚ್ಚಿದೆ” ಎಂದು ಹೇಳಿಕೊಂಡಿತ್ತು.

ನಂತರ ಸೆಪ್ಟೆಂಬರ್ 3, 2019 ರಂದು ಡಿ.ಕೆ.ಶಿವಕುಮಾರ್ ಅವರನ್ನು ಇದೇ ಪ್ರಕರಣದ ಅಡಿಯಲ್ಲಿ ಬಂಧಿಸಿದ ನಂತರ, ಶಿವಕುಮಾರ್ ಅವರು ಜಾಮೀನಿಗಾಗಿ ಸೆಪ್ಟೆಂಬರ್ 26 ರಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 2019 ರಲ್ಲಿ ದೆಹಲಿ ಹೈಕೋರ್ಟ್ ಶಿವಕುಮಾರ್ ಅವರಿಗೆ ಜಾಮೀನು ನೀಡಿತು.

ಡಿ.ಕೆ.ಶಿವಕುಮಾರ್ ಅವರ ಪ್ರಭಾವಿ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಸಾಕ್ಷ್ಯಾಧಾರಗಳನ್ನು ಹಾಳುಮಾಡುತ್ತಾರೆ ಎಂಬ ಆತಂಕದಿಂದ ಇಡಿ ಆ ಸಮಯದಲ್ಲಿ ಶಿವಕುಮಾರ್ ಅವರಿಗೆ ಜಾಮೀನು ನೀಡುವುದನ್ನು ವಿರೋಧಿಸಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ತನಿಖಾ ಸಂಸ್ಥೆಯ ಬಳಿ ಇದ್ದ ಕಾರಣ ನ್ಯಾಯಾಲಯ ಅಂತಹ ಯಾವುದೇ ಸಾಕ್ಷಾಧಾರ ನಾಶ ಆಗುವುದಿಲ್ಲ ಎಂದು ಶಿವಕುಮಾರ್ ಅವರಿಗೆ ಜಾಮೀನು ನೀಡಿದೆ.

ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು “ಭಾರತ್ ಜೋಡೋ ಯಾತ್ರೆಯ ಸಿದ್ಧತೆಗಳನ್ನು ವಿಫಲಗೊಳಿಸುವ ಮತ್ತು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುವ ಪ್ರಯತ್ನದಲ್ಲಿ ಇ.ಡಿ. ಮತ್ತೊಮ್ಮೆ ಡಿ.ಕೆ.ಶಿವಕುಮಾರ್ ಅವರಿಗೆ ಸಮನ್ಸ್ ನೀಡಿದೆ. ಕಾಂಗ್ರೆಸ್ ಪಕ್ಷ ’40 ಪರ್ಸೆಂಟ್’ ಸರ್ಕಾರವನ್ನು ಬಹಿರಂಗಗೊಳಿಸಿದರೆ ಇತ್ತ ಬಿಜೆಪಿ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ” ಎಂದು ಟ್ವಿಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

You cannot copy content of this page

Exit mobile version