ಹಾಸನ : ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಮಸೂದೆ 2025 ಸಂವಿಧಾನ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ದಾಳಿಯಾಗಿದೆ. ಇದು ಒಂದು ಸಮುದಾಯದ ಧ್ರುವೀಕರಣವನ್ನು ಹೆಚ್ಚಿಸಿ, ರಾಷ್ಟçದ ಧರ್ಮನಿರಪೇಕ್ಷ ಬುನಾದಿಯನ್ನು ಹಾನಿಗೊಳಿಸುತ್ತದೆ. ಇದರ ವಿರುದ್ಧ ದಿನಾಂಕ 3 ಮೇ 2025 ರಂದು ಹಾಸನದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ನಡೆಸುತ್ತಿರುವ ಪ್ರತಿಭಟನಾ ಸಮಾವೇಶಕ್ಕೆ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಬೆಂಬಲವನ್ನು ಘೋಷಿಸುತ್ತಿರುವುದಾಗಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಹಿಂದಿನ ಕಾಯ್ದೆಯಲ್ಲಿ ಇದ್ದ ಮೂಲಭೂತ ತತ್ವಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ. ಈ ತಿದ್ದುಪಡಿಯ ಮೂಲಕ ಬಿಜೆಪಿ ಸರ್ಕಾರ ತನ್ನ ಹಿಂದುತ್ವ ಕಾರ್ಯಸೂಚಿಯ ಮೂಲಕ ಜನರನ್ನು ವಿಭಜಿಸುವ ಗುರಿಯನ್ನು ಹೊಂದಿದೆ. ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ ವಕ್ಫ್ ಮಂಡಳಿಗಳಿಗೆ ಮುಸ್ಲಿಮರಲ್ಲದವರನ್ನು ಸೇರ್ಪಡೆ ಮಾಡಲು ಅವಕಾಶ ನೀಡಿರುವುದು ಹಾಗೂ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಸದಸ್ಯರ ಸಂಖ್ಯೆಯನ್ನೇ ಕಡಿಮೆ ಮಾಡಿ ಮುಸ್ಲಿಂ ಅಲ್ಲದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿರುವುದು ಮುಸ್ಲಿಮರಿಂದ ವಕ್ಫ್ ಆಸ್ತಿಯನ್ನು ಕಸಿಯುವ ಹುನ್ನಾರವಾಗಿದೆ ಎಂದು ದೂರಿದರು.
ಇದು ಅತ್ಯಂತ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಹಿಂದೂ, ಕ್ರೆಸ್ತ, ಜೈನ ಮತ್ತು ಸಿಖ್ ಧರ್ಮಗಳ ಧಾರ್ಮಿಕ ದತ್ತಿ ಸಂಸ್ಥೆ, ಪೀಠ ಇತ್ಯಾದಿಗಳಲ್ಲಿರುವ ಆಸ್ತಿ ಮತ್ತು ಸಂಪತ್ತುಗಳ ವಿಷಯದಲ್ಲಿ ಇಲ್ಲದಿರುವ ಕಾನೂನು ಕೇವಲ ಮುಸ್ಲಿಂ ಧರ್ಮದ ಪಕ್ಷ ಮಂಡಳಿಯ ಆಸ್ತಿ, ಸಂಪತ್ತಿನ ವಿಷಯದಲ್ಲಿ ಮಾತ್ರ ಏಕೆ ಜಾರಿ ಮಾಡಲಾಗಿದೆ ಎನ್ನುವುದೇ ಇದರ ಹಿಂದಿನ ನೈಜ ಹುನ್ನಾರ ಹಾಗೂ ಕಾರಣವಾಗಿದೆ ಎಂದರು. ವಕ್ಸ್ ಸ್ವತ್ತುಗಳನ್ನು ರಚಿಸಲು ಅಥವಾ ಅದಕ್ಕೆ ಕೊಡುಗೆ ನೀಡಲು, ಕನಿಷ್ಠ 5 ವರ್ಷಗಳ ಕಾಲ ಇಸ್ಲಾಮ್ ಧರ್ಮವನ್ನು ಪಾಲಿಸಿದ್ದಾರೆಂದು ಸಾಬೀತುಪಡಿಸಬೇಕೆಂದು ಕಡ್ಡಾಯಗೊಳಿಸುತ್ತದೆ. ಇದು ಮುಸ್ಲಿಮರಿಗೆ ಕಿರುಕುಳ ನೀಡುವ ಮಾರ್ಗವಾಗಿದೆ. ಅನೇಕ ಮುಸ್ಲಿಮೇತರರು ಮಸೀದಿಗಳ ನಿರ್ಮಾಣಕ್ಕೆ ಕೊಡುಗೆ ನೀಡುತ್ತಾರೆ. ಆದರೆ ಈ ತಿದ್ದುಪಡಿಯ ನಂತರ ಸಹೋದರತ್ವದ ಇಂತಹ ಅಭಿವ್ಯಕ್ತಿ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ ಮತ್ತು ದೇಶದ ಜಾತ್ಯಾತೀತ ತತ್ವಗಳ ವಿರೋಧಿಯಾಗಿದ್ದು, ಇದರ ವಿರುದ್ಧ ನಡೆಯುವ ಪ್ರತಿಭಟನೆಗಳಿಗೆ ಸಂವಿಧಾನ ರಕ್ಷಕರು, ಜಾತ್ಯಾತೀತ ತತ್ವಗಳಿಗೆ ಬದ್ದರಾಗಿರುವವರೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮುಬಷಿರ್ ಅಹಮದ್, ಸಂಚಾಲಕ ಸಯ್ಯಾದ್ ಅನ್ಸರ್, ಡಿ.ವೈ.ಎಫ್.ಐ. ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್, ಸಂಚಾಲಕ ಅಯ್ಯಬ್ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.