Friday, June 20, 2025

ಸತ್ಯ | ನ್ಯಾಯ |ಧರ್ಮ

UP Slapping Case: ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ; ಸುಪ್ರೀಂ ಕೋರ್ಟಿನಿಂದ ಯೋಗಿ ಸರ್ಕಾರಕ್ಕೆ ಛೀಮಾರಿ

ಉತ್ತರಪ್ರದೇಶದ ಮುಜಾಫರ್‌ನಗರ ಶಾಲೆಯ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಈ ಘಟನೆಯಲ್ಲಿ ಖಾಸಗಿ ಶಾಲೆಯೊಂದರ ಮಹಿಳಾ ಶಿಕ್ಷಕಿಯೊಬ್ಬರು ಮುಸ್ಲಿಂ ವಿದ್ಯಾರ್ಥಿಗೆ ಸಹ ವಿದ್ಯಾರ್ಥಿಗಳಿಂದ ಕಪಾಳಮೋಕ್ಷ ಮಾಡಿಸಿದ್ದರು.

ಈ ಘಟನೆಗೆ ಸುಪ್ರೀಂ ಕೋರ್ಟ್ ತನ್ನ ಆಕ್ರೋಶ ವ್ಯಕ್ತಪಡಿಸಿದೆ. ಇದು ಸರ್ಕಾರದ ಸಂಪೂರ್ಣ ವೈಫಲ್ಯ ಎಂದು ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಉತ್ತರ ಪ್ರದೇಶದ ಮುಜಾಫರ್‌ನಗರದ ಖಾಸಗಿ ಶಾಲೆಯೊಂದರ ಶಿಕ್ಷಕಿಯು ಶಾಲೆಯ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಮಕ್ಕಳಿಂದ ಕಪಾಳಕ್ಕೆ ಹೊಡೆಸಿದ್ದಲ್ಲದೆ, ವಿದ್ಯಾರ್ಥಿಯೊಬ್ಬನ ಬಳಿ ʼನಿನ್ನ ಕೈಯಲ್ಲಿ ಶಕ್ತಿಯಿಲ್ಲವೇ ಜೋರಾಗಿ ಹೊಡೆʼ ಎಂದು ಕೂಡಾ ಹೇಳಿದ್ದರು. ಅಲ್ಲದೆ ಧಾರ್ಮಿಕ ನಿಂದನೆ ಮಾತುಗಳನ್ನು ಕೂಡಾ ಆಡಿದ್ದರು. ಈ ವಿಡಿಯೋ ಶೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವುದರೊಂದಿಗೆ ಸಾಕಷ್ಟು ಜನರು ಶಿಕ್ಷಕಿಯನ್ನು ಟೀಕಿಸಿದ್ದರು. ವಿದ್ಯಾರ್ಥಿಯ ತಂದೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಪೊಲೀಸರು ಸ್ಪಂದಿಸಿರಲಿಲ್ಲ. ಎಫ್‌ಐಆರ್‌ ದಾಖಲು ವಿಳಂಬವಾಗಿತ್ತು.

ಈ ಘಟನೆಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ನೀಡಿದೆ. ನ್ಯಾಯಮೂರ್ತಿ ಪಂಕಜ್ ಮಿಥಲ್ ದರ್ಮಾಸನಂ ಅವರು ವಿಚಾರಣೆಯನ್ನು ಕೈಗೆತ್ತಿಕೊಂಡರು. ಇದು ಖಂಡಿತವಾಗಿಯೂ ಸರ್ಕಾರದ ವೈಫಲ್ಯ. ಸಂತ್ರಸ್ತನ ತಂದೆ ದೂರಿನ ಬಗ್ಗೆ ಏಕೆ ಗಮನ ಹರಿಸಲಿಲ್ಲ? ಶಿಕ್ಷಣ ಹಕ್ಕು ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಒಂದು ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯ ಮೇಲೆ ಈ ರೀತಿಯ ಹಲ್ಲೆ ನಡೆದರೆ ಅಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಘಟನೆ ಕುರಿತು ತನಿಖೆ ನಡೆಸಿ ಕೂಡಲೇ ವರದಿ ಸಲ್ಲಿಸಲು ವಿಶೇಷ ಐಪಿಎಸ್ ಅಧಿಕಾರಿಯನ್ನು ನೇಮಿಸಬೇಕು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯಲ್ಲಿ ಸಂತ್ರಸ್ತ ಬಾಲಕನಿಗೆ ಕೌನ್ಸೆಲಿಂಗ್‌ಗೆ ಸೂಚಿಸಲಾಗಿದೆ. ಇತರ ವಿದ್ಯಾರ್ಥಿಗಳೊಂದಿಗೂ ಮಾತನಾಡುವಂತೆ ಯುಪಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಸಂದರ್ಭದಲ್ಲಿ ನ್ಯಾಯಾಲಯ ನೀಡಿರುವ ಹೇಳಿಕೆಗಳು ಚರ್ಚೆಯಾಗುತ್ತಿವೆ. ಯುಪಿ ಸರ್ಕಾರದ ವಿರುದ್ಧ ಕೋರ್ಟ್ ಕಟುವಾದ ಟೀಕೆಗಳನ್ನು ಮಾಡಿದೆ.

ಇದು ಅತ್ಯಂತ ಗಂಭೀರವಾದ ವಿಚಾರವಾಗಿದ್ದು, ನಿರ್ದಿಷ್ಟ ಗುಂಪಿಗೆ ಸೇರಿದ ವಿದ್ಯಾರ್ಥಿಯನ್ನು ಗುರಿಯಾಗಿಸಿಕೊಂಡು ಸಹವರ್ತಿ ವಿದ್ಯಾರ್ಥಿಗಳಿಂದ ಕಪಾಳಕ್ಕೆ ಹೊಡೆಸುವುದನ್ನು ಸಹಿಸಲಾಗದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೇ ನೀವು ಶಾಲೆಯಲ್ಲಿ ಮಕ್ಕಳಿಗೆ ಕಲಿಸುವುದೇ ಎಂದು ಕೋರ್ಟ್‌ ಪ್ರಶ್ನಿಸಿದೆ. ಸಂತ್ರಸ್ತ ವಿದ್ಯಾರ್ಥಿಯ ಶಿಕ್ಷಣದ ಹೊಣೆಗಾರಿಕೆ ಸರಕಾರದ್ದು ಎಂದು ನ್ಯಾಯಾಲಯ ಆದೇಶಿಸಿದೆ. ಉದ್ದೇಶಪೂರ್ವಕವಾಗಿ ನಿರ್ದಿಷ್ಟ ಗುಂಪಿಗೆ ಸೇರಿದ ವಿದ್ಯಾರ್ಥಿಗೆ ಥಳಿಸಲಾಗಿದೆ ಎಂಬ ಆರೋಪ ನಿಜವಾಗಿದ್ದರೆ, ಅದರಿಂದ ದೇಶದಲ್ಲಿ ಕೋಲಾಹಲವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page