Friday, June 14, 2024

ಸತ್ಯ | ನ್ಯಾಯ |ಧರ್ಮ

ಸ್ವಾಮೀಜಿಗಳೂ ಮಠ ಮಾನ್ಯಗಳೂ..

ಜನರಿಗೆ ರಕ್ಷಣೆ ಕೊಡಲು ಸರ್ಕಾರ ಒಂದು ಸಾಕು. ಅಥವಾ ಮಾರ್ಗಸೂಚಿಗಾಗಿ ಸಂವಿಧಾನ ಇರುವುದು ಸಾಕು. ಹೀಗಿರುವಾಗ  ಇಂತೆಲ್ಲ ಮಠಗಳು ಹುಟ್ಟಿಕೊಂಡು ಇಷ್ಟೆಲ್ಲಾ ಅವ್ಯವಹಾರಗಳ ಕೇಂದ್ರಗಳಾಗಿ ಮಠಗಳು ಬೆಳೆಯಬೇಕಿದೆಯೇ? ಇವರ ಶಾಲೆಗಳ ಮಕ್ಕಳು, ಹಾಸ್ಟೆಲ್ ನಲ್ಲಿರುವ ಮಕ್ಕಳು, ಮಠಕ್ಕೆ ಬರುವ ಮಹಿಳೆಯರು ಇವರೆಲ್ಲರೂ ಇವರ ಕಾಮ ತೃಷೆಗೆ ಬಲಿಯಾಗುತ್ತಿರಬೇಕೇ? ಸ್ವಾಮೀಜಿ ಹುದ್ದೆಯ ಗೌರವವನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ಒಬ್ಬ ಸ್ವಾಮೀಜಿ ಶಕ್ತರೇ? ಈ ಎಲ್ಲ ಪ್ರಶ್ನೆಗಳನ್ನು ಮುರುಘಾ ಮಠದ‌ ಘಟನೆಯ ಹಿನ್ನೆಲೆಯಲ್ಲಿ ಎತ್ತಿದ್ದಾರೆ ಲೇಖಕಿ, ಚಿಂತಕಿ ಮಮತಾ ಆರ್.

ಮುರುಘಾ ಮಠದ ಸ್ವಾಮಿಗಳ ವಿಚಾರದಲ್ಲಿ ಇದೊಂದು ಪೊಲಿಟಿಕಲ್ ಗೇಮ್ ಆಗಿರಬಹುದು. ಚುನಾವಣಾ ಸಮಯದಲ್ಲಿ ಈ ರಾದ್ಧಾಂತ ಆಚೆ ಬಂದಿರುವುದರಿಂದ ಯಾರಾದರೂ ಮಠದ ಏಳ್ಗೆಯನ್ನು ಸಹಿಸದೇ ಪಿತೂರಿ ನಡೆಸಿದ್ದಿರಬಹುದು. ಸ್ವಾಮಿಗಳು ಹಾಸ್ಟೆಲ್ ಬಾಲಕಿಯರನ್ನು ಲೈಂಗಿಕ ತೃಷೆಗಾಗಿ ಬಳಸಿಕೊಂಡಿರಬಹುದು, ಇಲ್ಲದೆಯೂ ಇರಬಹುದು. ಇದೆಲ್ಲ ನಿರಂತರವಾಗಿ ನಡೆದು ಬಂದಿದ್ದು ಕಾರಣಾಂತರಗಳಿಂದ ಈ ಸಮಯದಲ್ಲಿ ವಿಷಯ ಬೆಳಕಿಗೆ ಬಂದಿರಬಹುದು ಎಂಬೆಲ್ಲ ಬಹು ಆಯಾಮಗಳಲ್ಲಿ ಈಗ ಚರ್ಚೆಯಾಗುತ್ತಿದೆ.

ಮೊದಲಿಗೆ ಮಠಗಳು ಹೇಗೆ ಹುಟ್ಟಿಕೊಂಡವು, ಸ್ವಾಮೀಜಿಗಳು ಹೇಗೆ ಮಠಗಳಲ್ಲಿ ಪೀಠಾಧಿಪತಿಗಳಾಗುವರು ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಧಾರ್ಮಿಕ ಶಕ್ತಿ ಪ್ರದರ್ಶನಗಳಿಗೆ ಮಠಗಳು ಹುಟ್ಟಿಕೊಂಡವು. ಯಾವುದೇ ಸ್ವಾಮೀಜಿಗೆ ಇಂತಿಷ್ಟೇ ವಿದ್ಯಾರ್ಹತೆ ಎನ್ನುವುದು ನಿಗದಿಯಾಗಿರುವುದಿಲ್ಲ. ಸ್ವಾಮೀಜಿಗಳಿಗಾಗಿಯೇ ಯಾವುದೇ ಪವಿತ್ರ ಗ್ರಂಥಗಳು ಇರುವುದಿಲ್ಲ. ಆಯಾ ಜಾತಿಗಳನ್ನು ಪ್ರತಿನಿಧಿಸುವ ಗಣ್ಯರೊಬ್ಬರು ದೀಕ್ಷೆ ತೆಗೆದುಕೊಂಡು ಸುಲಭದಲ್ಲಿ ಸ್ವಾಮೀಜಿಗಳಾಗುತ್ತಾರೆ. ಹಿಂದಿನ ದಿನಗಳಲ್ಲಿ ಜನರಲ್ಲಿ ಮುಗ್ಧತೆ ಇತ್ತು. ಸ್ವಾಮೀಜಿಗಳಲ್ಲೂ ಇತ್ತು. ನನ್ನಲ್ಲಿ ದೈವೀ ಶಕ್ತಿ ಇದೆ ಎಂದು ಅವರು ಹೇಳಿದರೆ ನೂರಾರು ಜನರು ನಂಬುತ್ತಿದ್ದರು .ಆ ಪೀಠಾಧಿಪತಿಗಳ ಸ್ಥಾನಕ್ಕೆ ಗೌರವವೂ ಇತ್ತು. ಅದರೆ ಈಗ ಹಾಗಿಲ್ಲ. ಮೊದಲು ಜನರಿಗೆ ಸ್ವಾಮೀಜಿಗಳ ಬಗೆಗಿದ್ದ ಧಾರ್ಮಿಕ ಭಾವನೆಗಳು ಈಗೀಗ ಕಡಿಮೆಯಾಗುತ್ತಿವೆ. ಒಂದು ಮಠ ಎಂದರೆ ಅಲ್ಲಿ ಸಾವಿರ ಕೋಟಿ ರುಪಾಯಿಗಳ ವ್ಯವಹಾರ ನಡೆಯುತ್ತಿರುತ್ತದೆ. ಸ್ವಾಮೀಜಿಗಳ ಮಾಲ್ ಗಳು ಅಂಗಡಿ ಮಳಿಗೆಗಳು ಮಠದ ಹಣದಲ್ಲಿ ನಡೆಯುತ್ತಿರುತ್ತವೆ.  ಮುಗ್ಧ ಮಕ್ಕಳು ಮಹಿಳೆಯರು ಇವರಿಗೆ ಆಹಾರವಾಗುತ್ತಿದ್ದಾರೆ. ಒಂದು ದಿನದ ಮಟ್ಟಿಗೆ ಮಠಗಳಿಗೆ ಭೇಟಿ ಕೊಟ್ಟು ಅಲ್ಲಿಯ ಒಳ ವಿಚಾರಗಳನ್ನು ಗಮನಿಸಿದರೆ ಬಹುತೇಕ ಮಠಗಳು ಹಣ, ಮೋಜು, ಮಸ್ತಿಗಳಲ್ಲಿ ತೇಲಾಡುತ್ತಿರುವುದರ ಪ್ರತೀಕವಾಗಿ ಆ ದಿನದಲ್ಲಿ ಸಂಗ್ರಹವಾದ ಹಣ ಮತ್ತು ಇಶ್ಯೂ ಆದ ಚೆಕ್ ಗಳು ಇವೆಲ್ಲ ಗಮನಕ್ಕೆ ಬರುತ್ತವೆ.

ಸ್ವಾಮೀಜಿ ಒಂದು ಮಠ ಕಟ್ಟಿದರೆ ಗಂಡಸೊಬ್ಬ ಸಂಸಾರಿಯಾಗಿ ಬಂಧನದಲ್ಲಿ ಸಿಲುಕಿದ ಕತೆ ನೆನಪಾಗುತ್ತದೆ..ಒಬ್ಬನೇ ಇದ್ದ ಎಂದು ಹಸು ತರುತ್ತಾನೆ ಹಸು ನೋಡಿಕೊಳ್ಳಲು ಹೆಂಗಸನ್ನು ಮದುವೆಯಾಗುತ್ತಾನೆ. ನಂತರ ಹಸುವಿನ ಹಾಲು ಕುಡಿಯಲು ಬೆಕ್ಕು ಬಂದು ಸೇರಿಕೊಳ್ಳುತ್ತದೆ. ನಂತರ ಇಲಿಗಳು ಬಂದು ಸೇರಿದಂತೆ ಸ್ವಾಮೀಜಿಯೊಬ್ಬರು ಮಠ ಕಟ್ಟಿದರೆ ಅಲ್ಲೊಂದು ಹೆಡ್ ಆಫೀಸ್ ಬರುತ್ತದೆ ಅದೊಂದು ಧಾರ್ಮಿಕ ಸ್ಥಳವಾಗುತ್ತದೆ. ನಂತರ ʼಕ್ಯಾಸ್ಟ್ ಕಾರ್ಡ್ʼ ಆಗಿ ರಾಜಕಾರಣಿಗಳಿಗೆ ಲಾಭಕ್ಕೆ ಬರುತ್ತದೆ. ಟ್ಯಾಕ್ಸ್ ಲೆಕ್ಕಕ್ಕೆ ಸಿಗದ ರಾಜಕಾರಣಿಗಳ ಹಣಕ್ಕೆ ಮಠಗಳಲ್ಲಿ ಭಧ್ರತೆ ಸಿಗುತ್ತದೆ. ಒಂದರ್ಥದಲ್ಲಿ ರಾಜಕಾರಣಿಗಳ ಪ್ರೋತ್ಸಾಹದಿಂದಲೇ ಅವುಗಳು ನಡೆಯುತ್ತವೆ ಅಂದರೆ ಅದು ನಿಜವೇ ಆಗಿರುತ್ತದೆ!.

ಈ ಮಠಗಳು ಜನರಿಗೆ ಯಾವುದೇ ಗೈಡಿಂಗ್ಸ್ ಗಳನ್ನು ಕೊಡುವುದಿಲ್ಲ. ಆದರೆ ವಿಪುಲವಾದ ಧಾರ್ಮಿಕ ಗುಂಪುಗಳು ತಮ್ಮ ಧಾರ್ಮಿಕ ಭಕ್ತಿಗನುಗುಣವಾಗಿ ಇಂತಹ ಧಾರ್ಮಿಕ ಕೇಂದ್ರಗಳನ್ನು ಸ್ಥಾಪನೆ ಮಾಡಿಕೊಳ್ಳುತ್ತಾರೆ. ಇಂದು ಯಾವ ಸ್ವಾಮೀಜಿಗಳೂ ಹೇಳಿರುವ ಮಾತುಗಳು ನಿಜವಾಗಿಲ್ಲ. ಇಂತಹ ಕಡೆ ಬೆಂಕಿ ಬೀಳುತ್ತದೆ ಎಂದರೆ ಬಿದ್ದಿಲ್ಲ. ಅವರಲ್ಲಿ ಯಾವುದೋ ಒಂದು ಅತಿಮಾನುಷ ಶಕ್ತಿ ಇದೆ ಎಂಬುದೂ ಗೋಚರವಾಗಿಲ್ಲ. ಹೀಗಿರುವಾಗ, ಕೆಲವೊಂದು ಸಾಂಪ್ರದಾಯಿಕ ಮೌಲ್ಯಗಳ ಸಲುವಾಗಿ ಮಠಗಳನ್ನು ಕಾಯ್ದಿರಿಸಿಕೊಳ್ಳಬೇಕೇ ವಿನಃ ಸ್ವಾಮೀಜಿಗಳು ಸುಪರ್ ಪವರ್ ಎಂದಾಗಲಿ ಸ್ವಾಮೀಜಿಗಳು ಹೇಳಿದ್ದೆಲ್ಲ ನಿಜವಾಗುತ್ತದೆ ಎಂದಾಗಲೀ ಇವರನ್ನು ಮೇಲಿನ ಸ್ಥಾನದಲ್ಲಿ ಕೂಡಿಸಿದರೆ ಒಂದಲ್ಲಾ ಒಂದು ಇಂತಹ ಅವಘಡಗಳು ಘಟಿಸಿ ಹೋಗುತ್ತಿರುತ್ತವೆ.

ದೂರದ ಊರುಗಳಿಂದ, ಮಠದ ಹಾಸ್ಟೆಲ್ ಗಳಲ್ಲಿ ಭದ್ರತೆ ಸಿಗುತ್ತದೆ ಮತ್ತು ಸುರಕ್ಷೆಯ ದೃಷ್ಟಿಯಿಂದ ಮಠಗಳು ಒಳ್ಳೆಯದೆಂದು ಪೋಷಕರು ಹೊರಗಡೆ ಹೆಚ್ಚಿನ ಹಣ ಭರಿಸಲಾಗದೇ ಇಲ್ಲಿಗೆ ತಂದು ಸೇರಿಸುತ್ತಾರೆ. ಆಗ ಬೇಲಿಯೇ ಎದ್ದು ಹೊಲ ಮೇಯ್ದರೆ ಕೇಳುವವರಾರು? ಈಗಾಗಲೇ ಹಲವಾರು ಆಪಾದನೆಗಳು ಬೇರೆ ಮಠದ ಸ್ವಾಮೀಜಿಗಳ ಮೇಲೂ ಬಂದಿರುವುದರಿಂದ ಮತ್ತು ಬಾಲಕಿಯರ ಮೇಲೆ ನಡೆಸಿದ ಈ ಅತ್ಯಾಚಾರ ಘಟನೆಗಳಿಂದ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕಾವಿಧಾರಿಗಳಿಂದ ಎಚ್ಚರದಲ್ಲಿರಬೇಕಾಗಿ ಬಂದಿರುವುದು ಜನರ ದುರ್ದೈವ.

ಸರ್ಕಾರ ಒಂದು ಸಾಕು ಜನರಿಗೆ ರಕ್ಷಣೆ ಕೊಡಲು. ಅಥವಾ ಮಾರ್ಗಸೂಚಿಗಾಗಿ ಸಂವಿಧಾನ ಇರುವುದು ಸಾಕು. ಹೀಗಿರುವಾಗ  ಇಂತೆಲ್ಲ ಮಠಗಳು ಹುಟ್ಟಿಕೊಂಡು ಇಷ್ಟೆಲ್ಲಾ ಅವ್ಯವಹಾರಗಳ ಕೇಂದ್ರಗಳಾಗಿ ಮಠಗಳು ಬೆಳೆಯಬೇಕಿದೆಯೇ? ಇವರ ಶಾಲೆಗಳ ಮಕ್ಕಳು, ಹಾಸ್ಟೆಲ್ ನಲ್ಲಿರುವ ಮಕ್ಕಳು, ಮಠಕ್ಕೆ ಬರುವ ಮಹಿಳೆಯರು ಇವರೆಲ್ಲರೂ ಇವರ ಕಾಮ ತೃಷೆಗೆ ಬಲಿಯಾಗುತ್ತಿರಬೇಕೇ? ಸ್ವಾಮೀಜಿ ಹುದ್ದೆಯ ಗೌರವವನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ಒಬ್ಬ ಸ್ವಾಮೀಜಿ ಶಕ್ತರೇ? ಈ ಎಲ್ಲ ಪ್ರಶ್ನೆಗಳು ಇಂದು ಮುಖ್ಯವಾಗುತ್ತವೆ.

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ಸ್ವಂತ ಅಭಿಪ್ರಾಯಗಳಾಗಿರುತ್ತವೆ)

ಮಮತಾ ಆರ್
ಚಿಂತಕರು

Related Articles

ಇತ್ತೀಚಿನ ಸುದ್ದಿಗಳು