<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>muslims &#8211; Peepal Media</title>
	<atom:link href="https://peepalmedia.com/tag/muslims/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 31 May 2025 09:31:50 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>muslims &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ರಹಿಮಾನ್ ಕೊಲೆಯ ಕತೆ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಹೆಮ್ಮೆಯ ತುಳುನಾಡಿಗೆ ಈ ಗತಿ ತಂದಿಟ್ಟವರು ಯಾರು ?</title>
		<link>https://peepalmedia.com/you-will-be-shocked-to-hear-the-story-of-rahimans-murder-who-brought-this-fate-to-the-proud-tulunadi/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 31 May 2025 09:29:07 +0000</pubDate>
				<category><![CDATA[ಕೋಮುವಾದ]]></category>
		<category><![CDATA[communalism]]></category>
		<category><![CDATA[Dakshina kananda]]></category>
		<category><![CDATA[fascism]]></category>
		<category><![CDATA[hindu]]></category>
		<category><![CDATA[hindutva]]></category>
		<category><![CDATA[koltamajal]]></category>
		<category><![CDATA[mangalore]]></category>
		<category><![CDATA[muslims]]></category>
		<category><![CDATA[rahim]]></category>
		<guid isPermaLink="false">https://peepalmedia.com/?p=60130</guid>

					<description><![CDATA[ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ನಿಯೋಗ ಇತ್ತೀಚೆಗೆ ಮತಾಂಧರಿಂದ ಹತ್ಯೆಗೀಡಾದ ಕೊಳ್ತಮಜಲು ಅಬ್ದುಲ್ ರೆಹಮಾನ್ ಮನೆಗೆ ಇಂದು ಭೇಟಿ ನೀಡಿತು. ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಿತು. ಪೊಳಲಿ ದೇವಸ್ಥಾನದಿಂದ ಸುಮಾರು ನಾಲ್ಕು ಕಿ ಮೀ ದೂರದ ಕೊಳತ್ತಮಜಲು ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಅಬ್ದುಲ್ ರೆಹಮಾನ್ ಮನೆಗೆ ಭೇಟಿ ನೀಡಿದಾಗ, ಮನೆಯ ಮುಂಭಾಗ ಸಾವಿನ ಮೂರನೆ ದಿನದ ಪ್ರಾರ್ಥನೆಯ ಅಡುಗೆಯ ಸಿದ್ದತೆ ನಡೆಯುತ್ತಿತ್ತು. ನಿರ್ಮಾಣ ಹಂತದ ರೆಹಮಾನ್ ಮನೆಯ ಮುಂಭಾಗ ಪ್ರಾರ್ಥನಾ ಕೂಟಕ್ಕಾಗಿ ಚಪ್ಪರ ಹಾಕಲಾಗಿತ್ತು. ಅಜ್ಜನ [&#8230;]]]></description>
										<content:encoded><![CDATA[
<p>ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ನಿಯೋಗ ಇತ್ತೀಚೆಗೆ ಮತಾಂಧರಿಂದ ಹತ್ಯೆಗೀಡಾದ ಕೊಳ್ತಮಜಲು ಅಬ್ದುಲ್ ರೆಹಮಾನ್ ಮನೆಗೆ ಇಂದು ಭೇಟಿ ನೀಡಿತು. ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಿತು.</p>



<p>ಪೊಳಲಿ ದೇವಸ್ಥಾನದಿಂದ ಸುಮಾರು ನಾಲ್ಕು ಕಿ ಮೀ ದೂರದ ಕೊಳತ್ತಮಜಲು ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಅಬ್ದುಲ್ ರೆಹಮಾನ್ ಮನೆಗೆ ಭೇಟಿ ನೀಡಿದಾಗ, ಮನೆಯ ಮುಂಭಾಗ ಸಾವಿನ ಮೂರನೆ ದಿನದ ಪ್ರಾರ್ಥನೆಯ ಅಡುಗೆಯ ಸಿದ್ದತೆ ನಡೆಯುತ್ತಿತ್ತು. ನಿರ್ಮಾಣ ಹಂತದ ರೆಹಮಾನ್ ಮನೆಯ ಮುಂಭಾಗ ಪ್ರಾರ್ಥನಾ ಕೂಟಕ್ಕಾಗಿ ಚಪ್ಪರ ಹಾಕಲಾಗಿತ್ತು. ಅಜ್ಜನ (ತಾಯಿಯ ತಂದೆ) ಕೈಯಲ್ಲಿದ್ದ ರೆಹಮಾನ್ ನ ಎರಡು ಪುಟಾಣಿ ಮಕ್ಕಳು (ಮೂರು ವರ್ಷ ಹಾಗೂ ಎಂಟು ತಿಂಗಳಿನ) ಮನೆಯ ಮುಂಭಾಗ ದೊಡ್ಡ, ದೊಡ್ಡ ಪಾತ್ರೆಗಳಲ್ಲಿ ನಡೆಯುತ್ತಿದ್ದ ಅಡುಗೆ ತಯಾರಿ, ಸಂಬಂಧಿಗಳ ಓಡಾಟವನ್ನು ಅಮಾಯಕ ಕಣ್ಣುಗಳಲ್ಲಿ ನೋಡುತ್ತಿದ್ದರು. ಮನೆಯ ಒಳಗಡೆ ಗಂಡನನ್ನು ಕಳೆದುಕೊಂಡ ಯುವ ವಿಧವೆಯ, ಮಗನನ್ನು ಕಳೆದುಕೊಂಡ ತಾಯಿಯ ಮೂಕ ರೋಧನೆ ನಮ್ಮ ಹೃದಯಕ್ಕೆ ತಟ್ಟುತ್ತಿತ್ತು.</p>



<p>ನಾವು ಮನೆಯ ಅಂಗಳ ತಲುಪಿದ ಸುದ್ದಿ ತಿಳಿದು ಊರಿನ ಯುವಕರು ನಮ್ಮ ಸುತ್ತ ಜಮಾಯಿಸಿದರು. ರೆಹಮಾನ್ ತಂದೆ ಸ್ವರ ಹೊರಡದ ಗಂಟಲಿನಲ್ಲಿ ತಮ್ಮ ನೋವನ್ನು ಕಣ್ಣೀರು ಸುರಿಸುತ್ತಲೆ ಒಂದಿಷ್ಟು ಹಂಚಿಕೊಂಡರು. ರೆಹಮಾನ್ ನ ಆತ್ಮೀಯ ಗೆಳಯರು, ಒಡನಾಡಿಗಳು ತಮ್ಮ ಮನಸ್ಸಿಗಾದ ಘಾಸಿಯನ್ನು, ಒಳಗಡೆ ಕಟ್ಟಿಕೊಂಡಿರುವ ನೋವನ್ನು, ಜೊತೆಗೆ ಓಡಾಡಿದವರೆ ಕತ್ತರಿಸಿ ಕೊಂದದ್ದನ್ನು ಅರಗಿಸಿಕೊಳ್ಳಲು ಅಸಾಧ್ಯವಾದ ಭಾವದೊಂದಿಗೆ ನಮ್ಮೊಂದಿಗೆ ತಡೆ ರಹಿತವಾಗಿ ತೆರೆದಿಟ್ಟರು.</p>



<p>ಅಲ್ಲಿದ್ದ ಸ್ಥಳೀಯರು ರೆಹಮಾನ್ ಕೊಲೆಯ ದಾರುಣತೆಯನ್ನು, ಅದರ ರಾಜಕಾರಣವನ್ನು, ಕೊಲೆಗಡುಕರ ಮನಸ್ಥಿತಿಯನ್ನು ವಿವರಿಸುತ್ತಿದ್ದರೆ, ಕಳೆದ ಮೂರು ದಶಕದಲ್ಲಿ ಕರಾವಳಿಯ ಕೋಮು ಸಂಘರ್ಷ, ಅದರ ರಾಜಕಾರಣವನ್ನು ಹತ್ತಿರದಿಂದ ಕಂಡಿರುವ ನಾವೇ ರೆಹಮಾನ್ ಕೊಲೆಯ ಭಯಾನಕತೆಗೆ ಬೆಚ್ಚಿಬಿದ್ದೆವು. ಅವರ ವಿವರಣೆ ಹೀಗಿದೆ.</p>



<p>ಅಬ್ದುಲ್ ರೆಹಮಾನ್ ಯಾರೊಂದಿಗೂ ಜಗಳಗಳಿಲ್ಲದ ಸ್ನೇಹಮಯಿ ವ್ಯಕ್ತಿತ್ವದ ಯುವಕ. ತನ್ನ ಶ್ರಮದ ದುಡಿಮೆಯಿಂದ ಮೂರು ಪಿಕಪ್ ಗಳನ್ನು ಖರೀದಿಸಿದ್ದಾನೆ. ಮರಳು, ಕಟ್ಟಡ ನಿರ್ಮಾಣ ಸಾಮಾಗ್ರಿಗಳು, ತೋಟದ ಗೊಬ್ಬರ ಸಾಗಾಟ ಮಾಡುತ್ತಾನೆ. ಸಂಬಂಧಿಯಾದ ತೀರಾ ಬಡ ಕುಟುಂಬದ ಹೆಣ್ಣು ಮಗಳನ್ನು ಮದುವೆಯಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಸ್ಥಳೀಯ ಮಸೀದಿಯ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸುತ್ತಿದ್ದರು. ಊರಿನ ಹಿಂದುಗಳಿಗೂ ರೆಹಮಾನ್ ಅಂದರೆ ಅಚ್ಚು ಮೆಚ್ಚು. ಅವರೆ ರೆಹಮಾನ್‌ಗೆ<br>ದೊಡ್ಡ ಗ್ರಾಹಕರು. ಶಾರದೋತ್ಸವ ಮೆರವಣಿಗೆ ಸಂದರ್ಭ ಮನೆಯ ಮುಂದೆಯೆ ಗೆಳೆಯರನ್ನು ಸಂಘಟಿಸಿ ತಂಪು ಪಾನೀಯ ವಿತರಿಸುತ್ತಿದ್ದ. ಶಾರದೆಯ ವಿಗ್ರಹದ ಮೆರವಣಿಗೆಗೆ ರೆಹಮಾನ್ ಸಹೋದರ ಪಿಕಪ್ ಒದಗಿಸುತ್ತಿದ್ದ, ಸ್ವತಹ ಶಾರದೆ ಇದ್ದ ಪಿಕಪ್ ಚಲಾಯಿಸುತ್ತಿದ್ದ. ಇಂತಹ ಊರಲ್ಲಿ ಹೀಗಾಯ್ತಲ್ಲ….. !!</p>



<p>ಕೊಲೆಯ ಮುಂಚೂಣಿಯಲ್ಲಿದ್ದ ದೀಪಕ್ (21 ವರ್ಷ) ರೆಹಮಾನ್ ಗೆ ತೀರಾ ಪರಿಚಿತ. ಊರಿನ ಹುಡುಗ. ಬಡ ಕುಟುಂಬದ ಆತ ಮನೆ ಕಟ್ಟಲು ಆರಂಭಿಸಿದಾಗ ರೆಹಮಾನ್ ಒಂದು ಲೋಡ್ ಮರಳು ಉಚಿತವಾಗಿ ಒದಗಿಸಿದ್ದ. ಕಟ್ಟಡ ನಿರ್ಮಾಣದ ಸಾಮಾಗ್ರಿಗಳನ್ನು ರೆಹಮಾನ್ ನೆ ಸಾಗಾಟ ಮಾಡಿದ್ದ‌. ಅದರಲ್ಲಿ 30 ಸಾವಿರ ರೂಪಾಯಿ ದೀಪಕ್ ಬಾಕಿ ಉಳಿಸಿಕೊಂಡಿದ್ದ.</p>



<p>ರೆಹಮಾನ್ ಅದಕ್ಕಾಗಿ ದೀಪಕ್ ಮೇಲೆ ಒತ್ತಡ ಏನೂ ಹಾಕಿರಲಿಲ್ಲ. ಇದಲ್ಲದೆ ದೀಪಕ್ ತಂದೆ ವಿದ್ಯುತ್ ತಂತಿ ತಾಗಿ ವರ್ಷದ ಹಿಂದೆ ನಿಧನ ಹೊಂದಿದ್ದರು. ಆ ಸಂದರ್ಭ ತುರ್ತು ಚಿಕಿತ್ಸೆಗೆ ರಕ್ತದ ಅಗತ್ಯ ಬಿದ್ದಾಗ ಇದೇ ರೆಹಮಾನ್, ದೀಪಕ್ ತಂದೆಗೆ ರಕ್ತದ ಏರ್ಪಾಡು ಮಾಡಿದ್ದ.</p>



<p>ಕೊಲೆಯ ಹಿಂದಿನ ದಿವಸ ರೆಹಮಾನ್ ನನ್ನು ಸಂಪರ್ಕಿಸಿದ ದೀಪಕ್, &#8220;ಅರ್ಜೆಂಟ್ ಒಂದು ಲೋಡ್ ಮರಳು ಬೇಕಿತ್ತು, ಮನೆಯ ಕೆಲಸ ಪೂರ್ಣ ಗೊಳಿಸಬೇಕಿದೆ, ನಾಳೆಯ ಹಾಕಬೇಕು &#8221; ಎಂದು ವಿನಂತಿಸಿದ್ದಾನೆ. ಅದರಂತೆ, ಕೊಲೆಯಾದ ದಿನ ಮಧ್ಯಾಹ್ನ ಕೂಲಿ ಕಾರ್ಮಿಕ ಶಾಫಿಯನ್ನು ಜೊತೆ ಸೇರಿಸಿ, ನಿರ್ಮಾಣ ಹಂತದ ತನ್ನ ಮನೆಯ ಮುಂಭಾಗದಲ್ಲಿ ಇದ್ದ ಮರಳನ್ನೆ ಪಿಕಪ್ ನಲ್ಲಿ ಲೋಡ್ ಮಾಡಿ ಕೊಂಡು ದೀಪಕ್ ನ ಮನೆಗೆ ತೆರಳಿದ್ದಾನೆ. ಮರಳು ಅನ್ ಲೋಡ್ ಮಾಡಿದ್ದಾರೆ. ಅಷ್ಟು ಹೊತ್ತಿಗೆ ಸುತ್ತಮುತ್ತ ಅವಿತು ಹೊಂಚು ಹಾಕುತ್ತಿದ್ದ ಮತಾಂಧತೆಯ ಅಫೀಮು ಸೇವಿಸಿದ ಪರಿಚಿತ ಯುವಕರ ದಂಡು ಪಿಕಪ್ ಮುಂದೆ ಆಯುಧಗಳ ಸಹಿತ ಪ್ರತ್ಯಕ್ಷಗೊಂಡಿದೆ. ಕೊಲೆಯ ಸಂಚಿನ ಸಣ್ಣ ಸುಳಿವೂ ಇಲ್ಲದ, ರೆಹಮಾನ್ ನಗುತ್ತಲೆ ಮಾತಾಡಲು ಯತ್ನಿಸಿದ್ದಾನೆ. ದೀಪಕ್ ನಗು ನಗುತ್ತಲೆ ಮಚ್ಚು ಬೀಸಿದ್ದಾನೆ. ವಿಷಯ ಅರ್ಥ ಆಗುವಷ್ಟರಲ್ಲಿ ರೆಹಮಾನ್ ಕುಸಿದಿದ್ದಾನೆ. ಜೊತೆಗಿದ್ದ ಶಾಫಿಗೆ ಓಡಲು ತಿಳಿಸಿದ್ದಾನೆ. ಶಾಫಿ ಪರಿಚಿತ ಕೊಲೆಗಡುಕರ ಕಾಲು ಹಿಡಿದು ರೆಹಮಾನ್ ನನ್ನು ಬಿಟ್ಟು ಬಿಡಿ ಎಂದು ಅಂಗಲಾಚಿದ್ದಾನೆ. ಆದರೆ ನಿರ್ದಯಿ ಹಂತಕರು ಗುರಿಯಿಟ್ಟು ಕಡಿಯತೊಡಗಿದ್ದಾರೆ. ಅಡ್ಡ ಬಂದ ಶಾಫಿಯ ಕಡೆಗೂ ಮಚ್ಚು ತಿರುಗಿದೆ. ರೆಹಮಾನ್, ನನ್ನ ಕತೆ ಮುಗಿಯಿತು, ನೀನು ಓಡು ಓಡು&#8221; ಎಂದು ಕೂಗಿದ್ದಾನೆ. ಗಾಯಗೊಂಡ ಶಾಫಿ ತಪ್ಪಿಸಿಕೊಂಡು ಓಡಿ ಹೋಗಿ ಊರಿನ ಯುವಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.‌</p>



<p>ಊರಿನ ಮುಸ್ಲಿಂ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟು ಹೊತ್ತಿಗೆ ರೆಹಮಾನ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇಷ್ಟೆಲ್ಲಾ ನಡೆಯುವಾಗ ದೀಪಕ್ ನ ತಾಯಿ ಹಾಗು ಇತರೆ ಮಕ್ಕಳು ಆ ಮನೆಯ ಒಳಗಡೆಯೇ ಇದ್ದರು. ಮತಾಂಧತೆಯಿಂದ ಕುರುಡಾಗಿದ್ದ ದೀಪಕ್, ಮೇಲಿನ &#8220;ನಾಯಕ&#8221; ರ ಮಾತು ಕೇಳಿ ತನ್ನ ಹೊಸ ಮನೆಯ ಅಂಗಳದಲ್ಲಿ ತನಗೆ ಹಲವು ಬಾರಿ ನೆರವಾಗಿದ್ದ ಪರಿಚಿತ ಮುಸಲ್ಮಾನನ್ನು ತನ್ನ ತಾಯಿ, ಸಣ್ಣ ಸಹೋದರರ ಕಣ್ಣ ಮುಂದೆಯೆ ಸಹಚರರ ಜೊತೆ ಕಡಿದು ನಿರ್ದಯವಾಗಿ ಕೊಂದು ಹಾಕಿದ್ದ. &#8220;ಧರ್ಮ&#8221; ರಕ್ಷಣೆಯ ಕಾರ್ಯ ಮಾಡಿದೆ ಎಂದು ಬೀಗಿದ್ದ.</p>



<p>ರೆಹಮಾನ್ ನ ಗೆಳೆಯರ ಈ ವಿವರಣೆ ನಮ್ಮನ್ನು ದಿಗ್ಮೂಢರನ್ನಾಗಿಸಿತು. ಕೋಟಿ ಚೆನ್ನಯರು, ಕಾನದ ಕಟರು, ಕೊರಗ ತನಿಯ, ಮಾಲಿಕುದ್ದಿನಾರ್, ಸಯ್ಯದ್ ಮದನಿ, ಸಿರಿಯಪ್ಪೆ, ರಾಣಿ ಅಬ್ಬಕ್ಕ, ಕುದ್ಮಲ್ ರಂಗರಾಯರು ಮುನ್ನಡೆಸಿದ ಕರಾವಳಿಯ ಸ್ಥಿತಿ ಯಾವ ಪಾತಾಳಕ್ಕೆ ಕುಸಿಯಿತು…!</p>



<p>ಕೊಳತ್ತಮಜಲು ಕೋಮು ಸೋಂಕು ಪೂರ್ಣ ಪ್ರಮಾಣದಲ್ಲಿ ತಾಗದ ಒಂದು ಸಾಮಾನ್ಯ ಹಳ್ಳಿ. ಇಲ್ಲಿ ಯಾವ ರಾಜಕೀಯವೂ ಇರಲಿಲ್ಲ, ನಾವು ಮನುಷ್ಯರಾಗಿ ಅಷ್ಟೆ ಬದುಕಿದ್ದೆವು ಎಂದು ನುಡಿಯುವ ಊರಿನ ಮುಸ್ಲಿಮರಿಗೆ, ತಮ್ಮ ಊರಿನಲ್ಲಿ ಇಂತಹ ಭೀಕರ ಘಟನೆ ನಡೆದಿರುವುದು ನಂಬಲೆ ಆಗುತ್ತಿಲ್ಲ. ದೂರದ ಬಜ್ಪೆಯ ಸುಹಾಸ್ ಶೆಟ್ಟಿಯ ಹತ್ಯೆಯ ಪ್ರತೀಕಾರ ತಮ್ಮ ಊರಿಗೆ ತಲುಪುತ್ತದೆ ಎಂಬುದು ಅವರಿಗೆ ನಂಬಲು ಸಾಧ್ಯವಾಗುತ್ತಿಲ್ಲ.</p>



<p>ಈಗ ಅವರ ಆಗ್ರಹ ಒಂದೇ ಇರುವುದು. ರೆಹಮಾನ್ ಕೊಲೆಯ ಆರೋಪಿಗಳು, ಪಿತೂರಿದಾರರಿಗೆ ಕಠಿಣ ಶಿಕ್ಷೆ ಆಗಬೇಕು, ಊರಿನ ನೆಮ್ಮದಿ, ಸೌಹಾರ್ದತೆ ಉಳಿಯಬೇಕು, ದೀಪಕ್ ಹಾಗೂ ಗೆಳೆಯರನ್ನು ಈ ಕೊಲೆಗೆ ಪ್ರೇರೇಪಿಸಿದ್ದು, ಸಂಚು ರೂಪಿಸಿದ್ದು ಬಜರಂಗ ದಳದ ನಾಯಕ ಭರತ್ ಕುಮ್ಡೇಲು (ಈತ ಸುಹಾಸ್ ಕೊಲೆಗೆ ಪ್ರತೀಕಾರ ಭೀಕರವಾಗಿ ಮಾಡುತ್ತೇವೆ ಎಂದು ಪತ್ರಿಕಾಗೋಷ್ಟಿ ನಡೆಸಿ ಹೇಳಿದ್ದ, ಈ ಹೇಳಿಕೆ ಮೇಲೆ ಎಫ್ಐಆರ್ ಆಗಿದೆ, ಅಶ್ರಪ್ ಕಲಾಯಿ ಹತ್ಯೆಯಲ್ಲೂ ಈತ ಆರೋಪಿ) ಆತ, ಕೊಲೆಯ ಹಿಂದಿನ ದಿನ ಕೊಳತ್ತಮಜಲಿಗೆ ಬಂದು ದೀಪಕ್ ಹಾಗು ಸಹಚರರ ಜೊತೆ ಮೀಟಿಂಗ್ ಮಾಡಿದ್ದ, ಸೂಚನೆ ನೀಡಿದ್ದ, ಆತನನ್ನು ತಕ್ಷಣ ಬಂಧಿಸಬೇಕು ಎಂಬುದು.‌</p>



<p>ರೆಹಮಾನ್ ನ ವೃದ್ಧ ತಂದೆ ಹಾಗೂ ಕೆಲವು ಹಿರಿಯರು ಇನ್ನೊಂದು ನೋವನ್ನು ನಮ್ಮಲ್ಲಿ ತೋಡಿಕೊಂಡರು. ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಕನಿಷ್ಟ ಸಾಂತ್ವನವನ್ನೂ ಹೇಳಲಿಲ್ಲ ಎಂಬುದು ಅವರ ಸಂಕಟವನ್ನು ಹೆಚ್ಚಿಸಿತು. ಸುಹಾಸ್ ಶೆಟ್ಟಿ ಕೊಲೆಯ ಸಂದರ್ಭ ಶವ ಮೆರವಣಿಗೆ, ಅಂತ್ಯ ಕ್ರಿಯೆಯವರೆಗೂ ಸ್ಥಳ ಬಿಟ್ಟು ಕದಲದ, ಆ ಮೇಲಿನ ಸುಹಾಸ್ ಕೊಲೆ ಖಂಡಿಸಿ ನಡೆದ ಪ್ರತಿಭಟನಾ ಸಭೆಗಳು, ಪ್ರತೀಕಾರದ ಮಾತುಗಳಿಗೆ ಸಾಕ್ಷಿ ಆದ ರಾಜೇಶ್ ನಾಯ್ಕ್ ತನ್ನ ಕ್ಷೇತ್ರದಲ್ಲಿ ನಡೆದ ಅಮಾಯಕನೊಬ್ಬ ಹತ್ಯೆಗೆ ಆತನ ಧರ್ಮದ ಗುರುತಿನ ಕಾರಣಕ್ಕೆ ಕನಿಷ್ಟ ಸಂತಾಪವನ್ನೂ ಸೂಚಿಸಲಿಲ್ಲ ಎಂಬದು ಕರಾವಳಿ ರಾಜಕಾರಣದ ಸದ್ಯದ ಹೆಗ್ಗುರುತು. ದೀಪಕ್ ಬೀಸಿದ ಮಚ್ಚಿನ ಏಟಿಗಿಂತಲೂ ಬಿಜೆಪಿ ಶಾಸಕರುಗಳ ಸದ್ಯದ ನಿಲುವುಗಳು ಕಡಿಮೆ ಅಪಾಯಕಾರಿ ಏನಲ್ಲ.</p>



<pre class="wp-block-code"><code><strong>ಲೇಖನ:</strong> <strong>ಮುನೀರ್ ಕಾಟಿಪಳ್ಳ</strong>, ಜಿಲ್ಲಾ ಕಾರ್ಯದರ್ಶಿ,  ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲೆ</code></pre>



<p></p>
]]></content:encoded>
					
		
		
			</item>
		<item>
		<title>ಭಾರತ 2024: ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣದಲ್ಲಿ 74% ಹೆಚ್ಚಳ- ವರದಿ</title>
		<link>https://peepalmedia.com/india-2024-74-increase-in-anti-minority-hate-speech-report/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 11 Feb 2025 07:04:34 +0000</pubDate>
				<category><![CDATA[ದೇಶ]]></category>
		<category><![CDATA[anti-minority hate speech]]></category>
		<category><![CDATA[bjp]]></category>
		<category><![CDATA[Christians]]></category>
		<category><![CDATA[hinduism]]></category>
		<category><![CDATA[hindutva]]></category>
		<category><![CDATA[india hate lab]]></category>
		<category><![CDATA[islam]]></category>
		<category><![CDATA[modi]]></category>
		<category><![CDATA[muslims]]></category>
		<category><![CDATA[narendra modi]]></category>
		<category><![CDATA[yogi adityanath]]></category>
		<guid isPermaLink="false">https://peepalmedia.com/?p=53699</guid>

					<description><![CDATA[ವಾಷಿಂಗ್ಟನ್ ಡಿಸಿ ಮೂಲದ ಸಂಶೋಧನಾ ಗುಂಪು ಇಂಡಿಯಾ ಹೇಟ್ ಲ್ಯಾಬ್ ಸೋಮವಾರ ಪ್ರಕಟಿಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2024 ರಲ್ಲಿ ಶೇ. 74.4 ರಷ್ಟು ಹೆಚ್ಚಾಗಿದೆ. &#8220;ಭಾರತದಲ್ಲಿ ಸಾಮಾಜಿಕ ಮಾಧ್ಯಮ ಮತ್ತು ದ್ವೇಷ ಭಾಷಣ ಇನ್ ಇಂಡಿಯಾ- Social Media and Hate Speech in India&#8221; ಎಂಬ ಅಧ್ಯಯನವು ಕಳೆದ ವರ್ಷ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು, ಮುಖ್ಯವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣದ 1,165 ಪ್ರಕರಣಗಳು ದಾಖಲಾಗಿವೆ ಎಂದಿದೆ. [&#8230;]]]></description>
										<content:encoded><![CDATA[
<pre class="wp-block-code"><code><strong>ದ್ವೇಷ ಭಾಷಣ ಮಾಡುವ 10 ಜನರಲ್ಲಿ ಆರು ಜನರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಪಟಾಲಂ ಎಂದು ಇಂಡಿಯಾ ಹೇಟ್ ಲ್ಯಾಬ್ ಸಂಶೋಧನಾ ತಂಡ ತಿಳಿಸಿದೆ</strong></code></pre>



<p>ವಾಷಿಂಗ್ಟನ್ ಡಿಸಿ ಮೂಲದ ಸಂಶೋಧನಾ ಗುಂಪು <a href="https://www.csohate.org/2025/02/10/social-media-and-hate-speech-in-india/" target="_blank" rel="noreferrer noopener">ಇಂಡಿಯಾ ಹೇಟ್ ಲ್ಯಾಬ್</a> ಸೋಮವಾರ ಪ್ರಕಟಿಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2024 ರಲ್ಲಿ ಶೇ. 74.4 ರಷ್ಟು ಹೆಚ್ಚಾಗಿದೆ.</p>



<p><em>&#8220;ಭಾರತದಲ್ಲಿ ಸಾಮಾಜಿಕ ಮಾಧ್ಯಮ ಮತ್ತು ದ್ವೇಷ ಭಾಷಣ ಇನ್ ಇಂಡಿಯಾ- <em>Social Media and Hate Speech in India</em>&#8221; ಎಂಬ</em> ಅಧ್ಯಯನವು ಕಳೆದ ವರ್ಷ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು, ಮುಖ್ಯವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣದ 1,165 ಪ್ರಕರಣಗಳು ದಾಖಲಾಗಿವೆ ಎಂದಿದೆ.</p>



<p>&#8220;ಇದು 2023 ಕ್ಕೆ ಹೋಲಿಸಿದರೆ 74.4% ಹೆಚ್ಚಳವನ್ನು ತೋರಿಸುತ್ತದೆ, ಹಿಂದೆ 668 ಇಂತಹ ಘಟನೆಗಳು ದಾಖಲಾಗಿದ್ದವು. ಇವುಗಳಲ್ಲಿ1,147 (98.5%) ಘಟನೆಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗಿತ್ತು. 1,050 ಘಟನೆಗಳು ಸ್ಪಷ್ಟವಾಗಿ ಮಾತ್ರ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ. 97 ಘಟನೆಗಳು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಇಬ್ಬರನ್ನೂ ಗುರಿಯಾಗಿಸಿಕೊಂಡಿವೆ. 115 (9.9%) ಘಟನೆಗಳಲ್ಲಿ ಕ್ರಿಶ್ಚಿಯನ್ನರನ್ನು ಗುರಿಯಾಗಿಸಲಾಗಿತ್ತು. ಇವುಗಳಲ್ಲಿ 18 ಘಟನೆಗಳು ಸ್ಪಷ್ಟವಾಗಿ ಕ್ರೈಸ್ತರನ್ನು ಮಾತ್ರ ಗುರಿಯಾಗಿಸಿಕೊಂಡಿವೆ. 97 ಘಟನೆಗಳು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಬ್ಬರನ್ನೂ ಗುರಿಯಾಗಿಸಿಕೊಂಡಿವೆ.&#8221;</p>



<p>ವರದಿಯ ಪ್ರಕಾರ, ದ್ವೇಷ ಭಾಷಣ ಮಾಡುವ 10 ಜನರಲ್ಲಿ ಆರು ಮಂದಿ ರಾಜಕಾರಣಿಗಳಾಗಿದ್ದು, ಅವರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದ್ದಾರೆ.</p>



<p>&#8220;ಆದಿತ್ಯನಾಥ್ 86 (7.4%) ದ್ವೇಷ ಭಾಷಣ ಘಟನೆಗಳಿಗೆ ಕಾರಣರಾಗಿದ್ದರೆ, ಮೋದಿ 67 ಭಾಷಣಗಳನ್ನು ಮಾಡಿದ್ದಾರೆ, ಇವರ ಕೃತ್ಯಗಳು 2024 ರಲ್ಲಿ ನಡೆದಿರುವ ದ್ವೇಷ ಭಾಷಣಗಳ 5.7% ರಷ್ಟಿದೆ,&#8221; ಎಂದು ಅದು ಹೇಳಿದೆ.</p>



<p>2024 ರಲ್ಲಿ ಭಾರತದಲ್ಲಿ ದ್ವೇಷ ಭಾಷಣದ ಪರಿಶೀಲಿಸಲ್ಪಟ್ಟ ವ್ಯಕ್ತಿಗತ ಭಾಷಣ ಘಟನೆಗಳ (verified in-person hate speech events) ಪ್ರಸಾರ ಮತ್ತು ವರ್ಧನೆಯಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರವನ್ನು ಅಧ್ಯಯನವು ವಿಶ್ಲೇಷಿಸಿದೆ, ಈ ಕೃತ್ಯಗಳು ರಾಜಕೀಯ ರ್ಯಾಲಿಗಳು, ಚುನಾವಣಾ ಪ್ರಚಾರ ಕಾರ್ಯಕ್ರಮಗಳು, ಧಾರ್ಮಿಕ ಮೆರವಣಿಗೆಗಳು ಮತ್ತು ಪ್ರತಿಭಟನಾ ಮೆರವಣಿಗೆಗಳಂತಹ ವಿವಿಧ ರೀತಿಯ ಸಾರ್ವಜನಿಕ ಸಭೆಗಳಲ್ಲಿ ನಡೆದಿವೆ.</p>



<p>ದ್ವೇಷ ಭಾಷಣ ದಾಖಲಾಗಿರುವ 931 ಅಥವಾ 79.9% ಘಟನೆಗಳು ಭಾರತೀಯ ಜನತಾ ಪಕ್ಷದ ಆಳ್ವಿಕೆಯಲ್ಲಿರುವ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿವೆ ಎಂದು ವರದಿ ಹೇಳಿದೆ. &#8220;ರಾಜಕೀಯ ನಿಯಂತ್ರಣ ಮತ್ತು ದ್ವೇಷ ಭಾಷಣದ ಹರಡುವಿಕೆಯ ನಡುವೆ ಬಲವಾದ ಸಂಬಂಧವಿದೆ ಎಂದು ದತ್ತಾಂಶವು ಸೂಚಿಸುತ್ತದೆ&#8221; ಎಂದು ಸಂಶೋಧನೆ ಹೇಳಿದೆ.</p>



<p>2024 ರಲ್ಲಿ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳು 234 ಅಥವಾ 20% ರಷ್ಟು ಇಂತಹ ದ್ವೇಷ ಭಾಷಣ ಘಟನೆಗಳನ್ನು ದಾಖಲಿಸಿವೆ ಎಂದು ಅದು ಹೇಳಿದೆ.</p>



<p>&#8220;ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಅತಿ ಹೆಚ್ಚು ದ್ವೇಷ ಭಾಷಣ ಘಟನೆಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ, 2024 ರಲ್ಲಿ ಇಲ್ಲಿ ದಾಖಲಾದ ಎಲ್ಲಾ ಘಟನೆಗಳಲ್ಲಿ ಒಟ್ಟಾರೆಯಾಗಿ 47% ರಷ್ಟಿದೆ,&#8221; ಎಂದು ಅಧ್ಯಯನ ಹೇಳಿದೆ.</p>



<p>&#8220;ಬಿಜೆಪಿಯೇ ಅತಿ ಹೆಚ್ಚು ದ್ವೇಷ ಭಾಷಣದ ಆಯೋಜಕರಾಗಿದ್ದು, 340 ದ್ವೇಷ ಭಾಷಣ ಕಾರ್ಯಕ್ರಮಗಳಿಗೆ ಕಾರಣವಾಗಿದೆ, ಹೆಚ್ಚಾಗಿ ಮಾರ್ಚ್ ಮತ್ತು ಜೂನ್ ನಡುವಿನ ಸಾರ್ವತ್ರಿಕ ಚುನಾವಣೆಗಳು ಮತ್ತು ಜಾರ್ಖಂಡ್ ಮತ್ತು ಮಹಾರಾಷ್ಟ್ರದ ನಿರ್ಣಾಯಕ ರಾಜ್ಯ ಚುನಾವಣೆಗಳ ಸಮಯದಲ್ಲಿ &#8211; 2023 ಕ್ಕೆ ಹೋಲಿಸಿದರೆ ಶೇ. 580 ರಷ್ಟು ಹೆಚ್ಚಳ ಕಂಡಿದೆ,&#8221; ಎಂದು ಸಂಶೋಧನೆ ತಿಳಿಸಿದೆ.  </p>



<p>2024 ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೋದಿ <a href="https://www.hrw.org/news/2024/08/14/india-hate-speech-fueled-modis-election-campaign" target="_blank" rel="noreferrer noopener">110 ಭಾಷಣಗಳಲ್ಲಿ</a> ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಆಗಸ್ಟ್ ವರದಿ ತಿಳಿಸಿದೆ. ಕನಿಷ್ಠ 110 ಭಾಷಣಗಳಲ್ಲಿ, ಮೋದಿ ಅವರು ರಾಜಕೀಯ ವಿರೋಧವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದಾರೆ.</p>



<p>&#8220;ಮೋದಿಯವರ 2024 ರ ಚುನಾವಣಾ ಪ್ರಚಾರವು ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣವನ್ನು ಆಗಾಗ್ಗೆ ಬಳಸುತ್ತಿತ್ತು. ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುವ ಪ್ರಚಾರದ ಸಮಯದಲ್ಲಿ, ಮೋದಿಯ ಹಿಂದೂ ಬಹುಸಂಖ್ಯಾತ ಬಿಜೆಪಿಯ ನಾಯಕತ್ವವು ಅಂಚಿನಲ್ಲಿರುವ ಗುಂಪುಗಳ ವಿರುದ್ಧ ತಾರತಮ್ಯ, ಹಗೆತನ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಹೇಳಿಕೆಗಳನ್ನು ಪದೇ ಪದೇ ನೀಡುತ್ತಿತ್ತು,&#8221;  ಎಂದು ವರದಿ ಹೇಳಿದೆ.</p>



<p><a href="https://peepalmedia.com/fear-of-defeat-bjp-turns-to-hate-politics/">ಏಪ್ರಿಲ್ 21 ರಂದು</a> ರಾಜಸ್ಥಾನದ ಬನ್ಸ್ವಾರಾದಲ್ಲಿ ಮೋದಿ ಮಾಡಿದ ಭಾಷಣವನ್ನು ಮಾನವ ಹಕ್ಕುಗಳ ಕಾವಲು ಸಂಸ್ಥೆ ನಿರ್ದಿಷ್ಟವಾಗಿ ಉಲ್ಲೇಖಿಸಿತ್ತು , ಅಲ್ಲಿ ಅವರು ಮುಸ್ಲಿಮರನ್ನು &#8220;ಒಳನುಸುಳುವವರು&#8221; ಮತ್ತು &#8220;ಹೆಚ್ಚು ಮಕ್ಕಳನ್ನು ಹೊಂದಿರುವವರು&#8221; ಎಂದು ಕರೆದರು.</p>



<p>ಪ್ರಚಾರದ ಸಮಯದಲ್ಲಿ ಪ್ರಧಾನಿಯವರು ಹಲವಾರು ಬಾರಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅದು ಹೇಳಿದೆ.</p>



<p></p>
]]></content:encoded>
					
		
		
			</item>
	</channel>
</rss>
