Monday, June 23, 2025

ಸತ್ಯ | ನ್ಯಾಯ |ಧರ್ಮ

ಇರಾನ್ ಅಧ್ಯಕ್ಷರೊಂದಿಗೆ ಮೋದಿ ದೂರವಾಣಿ ಮಾತುಕತೆ: ಅಮೆರಿಕದ ದಾಳಿಗಳ ಬಗ್ಗೆ ‘ಕಳವಳ’ ಮಾತ್ರ, ಖಂಡನೆ ಇಲ್ಲ!

ಇರಾನ್‌ನ ಮೂರು ಪರಮಾಣು ಘಟಕಗಳ ಮೇಲೆ ಅಮೆರಿಕ ಜೂನ್ 22, 2025 ಭಾನುವಾರ ಮುಂಜಾನೆ ವೈಮಾನಿಕ ದಾಳಿ ನಡೆಸಿದ ಹಲವು ಗಂಟೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಬಗ್ಗೆ “ತೀವ್ರ ಕಳವಳ” ವ್ಯಕ್ತಪಡಿಸಿದರು. ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ “ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು” ಕರೆ ನೀಡಿದರು. ಈ ಫೋನ್‌ ಕರೆಯನ್ನು ಪೆಜೆಶ್ಕಿಯಾನ್ ಮಾಡಿದ್ದಾರೆ.

ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ ಮೋದಿ, ಇಬ್ಬರು ನಾಯಕರು “ಪ್ರಸ್ತುತ ಸಂದರ್ಭದ ಪರಿಸ್ಥಿತಿಯನ್ನು ವಿವರವಾಗಿ” ಚರ್ಚಿಸಿದರು ಮತ್ತು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆ ಕಂಡುಕೊಳ್ಳಲು ಭಾರತ ಬೆಂಬಲಿಸುವುದಾಗಿ ಹೇಳಿದರು. “ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಮರು ಕಟ್ಟುವ” ಅಗತ್ಯವನ್ನು ಒತ್ತಿ ಹೇಳಿದ ಅವರು, ರಾಜತಾಂತ್ರಿಕತೆ ಮತ್ತು ಮಾತುಕತೆಯೇ ಮುಂದಿನ ಕಾರ್ಯಸಾಧ್ಯತೆಯ ಮಾರ್ಗವಾಗಿದೆ ಎಂದು ಹೇಳಿದರು.

“ಇರಾನ್‌ನ ಪರಮಾಣು ಸಾಮರ್ಥ್ಯವನ್ನು ನಾಶಮಾಡಲು” ಅಮೆರಿಕದ ಬಾಂಬರ್‌ಗಳು ಇರಾನಿನ ಮೂರು ಪರಮಾಣು ತಾಣಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ನಂತರ ಭಾರತ ನೀಡಿದ ಮೊದಲ ಸಾರ್ವಜನಿಕ ಪ್ರತಿಕ್ರಿಯೆ ಇದಾಗಿದೆ. ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಮಾಡಿದ ವರದಿಗಳ ಪ್ರಕಾರ, ಫೋರ್ಡೋ ಮತ್ತು ನಟಾಂಜ್ ಪರಮಾಣು ಸೌಲಭ್ಯಗಳ ಮೇಲೆ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಹಾಕಲಾಯಿತು, ಆದರೆ ಕ್ರೂಸ್ ಕ್ಷಿಪಣಿಗಳನ್ನು ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಎರಡನೇ ತಾಣದ ಮೇಲೆ ಜಲಾಂತರ್ಗಾಮಿ ನೌಕೆಗಳನ್ನು ಬಳಸಿ ಹಾರಿಸಲಾಯಿತು.

ಕೇವಲ ಎರಡು ತಿಂಗಳ ಹಿಂದೆ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪೆಜೆಶ್ಕಿಯಾನ್ ಅವರು ಮೋದಿಯವರೊಂದಿಗೆ ಫೋನ್ ಮೂಲಕ ಮಾತನಾಡಿದ್ದರು, ಉಗ್ರರ ದಾಳಿಯನ್ನು ಬಲವಾಗಿ ಖಂಡಿಸಿದ್ದರು.

ನರೇಂದ್ರ ಮೋದಿಯವರ X ಪೋಸ್ಟ್

ಭಾರತದ ವಿದೇಶಾಂಗ ಸಚಿವಾಲಯದ (MEA) ಪತ್ರಿಕಾ ಪ್ರಕಟಣೆಯ ಪ್ರಕಾರ, ಅಧ್ಯಕ್ಷ ಪೆಜೆಶ್ಕಿಯಾನ್ ಅವರು ಈ ಫೋನ್‌ ಕರೆಯನ್ನು ಮಾಡಿದರು. ಇರಾನಿನ ಅಧ್ಯಕ್ಷರ ವೆಬ್‌ಸೈಟ್ ನಲ್ಲಿ ಇವರು ಈಜಿಪ್ಟ್, ಪಾಕಿಸ್ತಾನ, ಫ್ರಾನ್ಸ್ ಮತ್ತು ಭಾರತ ಸೇರಿದಂತೆ ಹಲವಾರು ವಿಶ್ವ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ಕಂಡುಬಂದಿದೆ.

“ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ತೀವ್ರ ಕಳವಳ” ವ್ಯಕ್ತಪಡಿಸುವುದಕ್ಕೆ ಸೀಮಿತವಾದ ಮೋದಿಯವರ ಹೇಳಿಕೆಯಲ್ಲಿ, ಅಮೆರಿಕದ ದಾಳಿಗಳನ್ನು ಖಂಡಿಸದೆ ಇರುವುದು ಕಂಡು ಬಂದಿದೆ. ದಾಳಿಗಳ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ, ಅಥವಾ ಕೃತ್ಯದ ಜವಾಬ್ದಾರಿಯನ್ನು ಯಾರ ಮೇಲೂ ಆರೋಪಿಸುವ ಯತ್ನವನ್ನೂ ಮಾಡಲಾಗಿಲ್ಲ. “ಪ್ರಸ್ತುತ ಪರಿಸ್ಥಿತಿ” ಮತ್ತು “ಇತ್ತೀಚಿನ ಉಲ್ಬಣಗಳು” ಎಂಬಂತಹ ವಿಶಾಲಾರ್ಥದ ಪದಗಳನ್ನು ಮಾತ್ರ ಬಳಸಲಾಯಿತು.

ಇಸ್ರೇಲ್ ಇರಾನಿನ ತಾಣಗಳನ್ನು ಗುರಿಯಾಗಿಸಲು ಪ್ರಾರಂಭಿಸುವ ಮೊದಲು ತನ್ನ ಪರಮಾಣು ಕಾರ್ಯಕ್ರಮದ ಕುರಿತು ಯುರೋಪಿಯನ್ ದೇಶಗಳೊಂದಿಗೆ ಇರಾನ್‌ ತಾನು ಮಾತುಕತೆಗಳಲ್ಲಿ ತೊಡಗಿಕೊಂಡಿರುವುದಾಗಿ ಹೇಳಿತ್ತು. ಅಮೆರಿಕದ ವೈಮಾನಿಕ ದಾಳಿಗೆ ಕೆಲವೇ ದಿನಗಳ ಮೊದಲು, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಯುರೋಪಿಯನ್ ಸಹವರ್ತಿ ದೇಶಗಳೊಂದಿಗೆ ಸಭೆಗಳನ್ನು ನಡೆಸಿದ್ದರು.

ಇರಾನ್ ಅಧ್ಯಕ್ಷರ ಕಚೇರಿಯ ಫಾರ್ಸಿ ಭಾಷೆಯಲ್ಲಿ ಪ್ರಕಟವಾದ ಪತ್ರದ ಪ್ರಕಾರ, ಅಧ್ಯಕ್ಷ ಪೆಜೆಶ್ಕಿಯಾನ್ ಕೂಡ ಇದನ್ನೇ ಒತ್ತಿ ಹೇಳಿದರು. ದಾಳಿಯ ಸಮಯದಲ್ಲಿ ಇರಾನ್ ಅಮೆರಿಕದೊಂದಿಗೆ ಮಾತುಕತೆಗಳಲ್ಲಿ ತೊಡಗಿತ್ತು ಎಂದು ಅವರು ಹೇಳಿದರು. ಇದು ಅಮೇರಿಕಾ ತಾನು ನಡೆಸುವ ಸಂವಾದಕ್ಕೆ ಬದ್ಧತೆಯಿಂದ ನಡೆದುಕೊಳ್ಳದೆ, ಯಾವಾಗಲೂ “ಟೊಳ್ಳು ಮತ್ತು ಆಧಾರರಹಿತ” ಸಂವಾದ ನಡೆಸುವುದಕ್ಕೆ ಪುರಾವೆಯಾಗಿದೆ ಎಂದು ಅವರು ಹೇಳಿದರು.

“ಇಂದು ಜಗತ್ತು ನೋಡುತ್ತಿರುವುದು ಆತಂಕಕಾರಿ ಮತ್ತು ಸ್ವೀಕಾರಾರ್ಹವಲ್ಲದ ಪ್ರವೃತ್ತಿ ಇದಾಗಿದೆ. ಇದರಲ್ಲಿ ಅಂತರರಾಷ್ಟ್ರೀಯ ನಿಯಮಗಳು ಮತ್ತು ಕಟ್ಟುಪಾಡುಗಳ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವ ದೇಶವೊಂದು – ವಿಶೇಷವಾಗಿ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ – ಅಮೇರಿಕಾ ಮತ್ತು ಝಿಯೋನಿಸ್ಟ್ ಆಡಳಿತದ ದೇಶದಿಂದ ನೇರವಾಗಿ ಮತ್ತು ಬಹಿರಂಗವಾಗಿ ದಾಳಿಗೊಳಗಾಗುತ್ತಿದೆ” ಎಂದು ಪೆಜೆಶ್ಕಿಯನ್ ಹೇಳಿದ್ದಾರೆ. “ಶಾಂತಿ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ನಿಯಮಗಳ ಅನುಸರಣೆಗೆ ಸಂಬಂಧಿಸಿದ ಅವರ ಎಲ್ಲಾ ಹಕ್ಕುಗಳು ಘೋಷಣೆಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳು ನಾಶವಾಗಿದೆ ಎಂಬುದನ್ನು ಇದು ತೋರಿಸುತ್ತದೆ,” ಎಂದು ಅವರು ಹೇಳಿದ್ದಾರೆ.

ಅಮೆರಿಕ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಇರಾನ್ ಮೇಲಿನ ಇಸ್ರೇಲಿ ದಾಳಿಗಳನ್ನು ಬೆಂಬಲಿಸಿವೆ ಎಂದು ಅವರು ಆರೋಪಿಸಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೂನ್ 13 ರಂದು ಮೋದಿ ಅವರಿಗೆ ಕರೆ ಮಾಡಿದ್ದರು, ಈ ಸಂದರ್ಭದಲ್ಲಿ ಅವರು “ಭಾರತದ ಕಳವಳಗಳನ್ನು ಹಂಚಿಕೊಂಡರು ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದರು” ಎಂದು ವರದಿಯಾಗಿದೆ.

ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸೃಷ್ಟಿಸುತ್ತಿದೆ ಎಂಬ ಅಮೆರಿಕ ಮತ್ತು ಇಸ್ರೇಲ್‌ನ ಆರೋಪಗಳನ್ನು “ದೊಡ್ಡ ಮತ್ತು ಐತಿಹಾಸಿಕ ಸುಳ್ಳು” ಎಂದು ಇರಾನ್ ಅಧ್ಯಕ್ಷರು ತಳ್ಳಿಹಾಕಿದರು.

“ಸರ್ವೋಚ್ಚ ನಾಯಕ ಹೊರಡಿಸಿದ ಸ್ಪಷ್ಟ ಫತ್ವಾ ಪ್ರಕಾರ, ಪರಮಾಣು ಶಸ್ತ್ರಾಸ್ತ್ರಗಳ ನಿರ್ಮಾಣ ಮತ್ತು ಬಳಕೆಯನ್ನು ಧಾರ್ಮಿಕವಾಗಿ ಹಾಗೂ ನೈತಿಕವಾಗಿ ನಿಷೇಧಿಸಲಾಗಿದೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ರಕ್ಷಣಾ ಸಿದ್ಧಾಂತದಲ್ಲಿ ಅದಕ್ಕೆ ಯಾವುದೇ ಸ್ಥಾನವಿಲ್ಲ.‌ ಇವೆಲ್ಲವೂ ಜಾಗತಿಕ ವೇದಿಕೆಯಲ್ಲಿ ಇರಾನ್ ವಿರುದ್ಧ ನಡೆಸುವ ಎಲ್ಲಾ ಅಪಪ್ರಚಾರಗಳು ಶುದ್ಧ ಸುಳ್ಳು” ಎಂದು ಪೆಜೆಶ್ಕಿಯನ್ ಹೇಳಿದ್ದಾರೆ.

ಇರಾನ್ ತನ್ನ ಕಾನೂನು ಮತ್ತು ಕಾನೂನುಬದ್ಧ ಹಕ್ಕುಗಳನ್ನು ಪ್ರತಿಪಾದಿಸಲು ತಡೆಯನ್ನು ಉಂಟು ಮಾಡುವ ಪ್ರಯತ್ನಗಳನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು. “ನಮ್ಮ ರಾಷ್ಟ್ರ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವ ಹಕ್ಕನ್ನು ನಾವು ಕಾಪಾಡಿಕೊಂಡಿದ್ದೇವೆ,” ಎಂದು ಅವರು ಹೇಳಿದರು.

ನಂತರ, ಭಾನುವಾರ ಮಧ್ಯಾಹ್ನ ಇಸ್ತಾನ್‌ಬುಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಇರಾನ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲು ಅರಾಘ್ಚಿ ನಿರಾಕರಿಸಿದರು. ದೇಶವು “ಎಲ್ಲಾ ಆಯ್ಕೆಗಳನ್ನು ಕಾಯ್ದಿರಿಸಿದೆ” ಎಂದು ಹೇಳಿದರು. “ಸಾಮಾನ್ಯವಾಗಿ, ಸಂವಾದ ಮತ್ತು ಮಾತುಕತೆಗೆ ಬಾಗಿಲು ಯಾವಾಗಲೂ ತೆರೆದಿರಬೇಕು, ಆದರೆ ಪ್ರಸ್ತುತ ಪರಿಸ್ಥಿತಿ ಸಾಮಾನ್ಯವಲ್ಲ. ನನ್ನ ದೇಶವು ದಾಳಿಗೆ ಒಳಗಾಗಿದೆ, ಆಕ್ರಮಣಕ್ಕೆ ಒಳಗಾಗಿದೆ ಮತ್ತು ನಾವು ನಮ್ಮ ಸ್ವರಕ್ಷಣೆಯ ಕಾನೂನುಬದ್ಧ ಹಕ್ಕನ್ನು ಆಧರಿಸಿ ಪ್ರತಿಕ್ರಿಯಿಸಬೇಕಾಗಿದೆ,” ಅವರು ಹೇಳಿದರು.

ಇರಾನ್‌ನಲ್ಲಿರುವ ಭಾರತೀಯರನ್ನು ವಾಪಾಸ್‌ ದೇಶಕ್ಕೆ ಅವರ ದೇಶಕ್ಕೆ ಕಳುಹಿಸಲು ಇರಾನ್ ನೀಡಿದ ನಿರಂತರ ಬೆಂಬಲಕ್ಕಾಗಿ ಮೋದಿ ಧನ್ಯವಾದ ಅರ್ಪಿಸಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವ್ಯಾಪಾರ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜೂನ್ 13 ರಂದು ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ಮಾಡುವ ಮೊದಲು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಉದ್ಯಮಿಗಳು ಸೇರಿದಂತೆ 10,000 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಇರಾನ್‌ನಲ್ಲಿ ವಾಸಿಸುತ್ತಿದ್ದರು. ಇಲ್ಲಿಯವರೆಗೆ, ಆಪರೇಷನ್ ಸಿಂಧು ಅಡಿಯಲ್ಲಿ 1,428 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ. ಹೆಚ್ಚಿನ ವೈಮಾನಿಕ ಮಾರ್ಗಗಳು ಮುಚ್ಚಲ್ಪಟ್ಟಿರುವುದರಿಂದ, ವಿಶೇಷ ವಿಮಾನಗಳು ಈಶಾನ್ಯ ಇರಾನಿನ ನಗರವಾದ ಮಶಾದ್‌ನಿಂದ ಕಾರ್ಯನಿರ್ವಹಿಸುತ್ತಿವೆ. ಇತರರು ವಾಣಿಜ್ಯ ವಿಮಾನಗಳನ್ನು ಬಳಸಿ ದೆಹಲಿಗೆ ಹೋಗಲು ಭೂ ಗಡಿಗಳನ್ನು ದಾಟಿ ಅರ್ಮೇನಿಯಾ ಅಥವಾ ತುರ್ಕಮೆನಿಸ್ತಾನಕ್ಕೆ ಹೋಗುತ್ತಿದ್ದಾರೆ.

ಇರಾನ್‌ನಲ್ಲಿ ಅತ್ಯಂತ ಹೆಚ್ಚು ಭಾರತೀಯ ವಲಸಿಗರು ಇರುವುದರಿಂದ ಮತ್ತು ಕೊಲ್ಲಿ ರಾಷ್ಟ್ರದ ಇಂಧನವನ್ನು ಭಾರತವು ಹೆಚ್ಚು ಆಮದು ಮಾಡಿಕೊಳ್ಳುತ್ತಿರುವುದರಿಂದ, ಈ ಸಂಘರ್ಷವು ಭಾರತದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.

ಇರಾನ್ ಈಗಾಗಲೇ ಹಾರ್ಮುಜ್ ಜಲಸಂಧಿಯ ಮೂಲಕ ಸಮುದ್ರ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ ಎಂದು ಸೂಚಿಸಿದೆ. ಭಾರತಕ್ಕೆ ಇಂಧನ ಸರಬರಾಜುಗಳು ನಡೆಯುವ ಪ್ರಮುಖ ತೈಲ ಸಾಗಣೆಯು ಈ ಮಾರ್ಗಗಳಲ್ಲಿ ಬರುವ ಚಾಕ್‌ಪಾಯಿಂಟ್ ಮೂಲಕ ನಡೆಯುತ್ತದೆ. ಕೇಂದ್ರ ಪೆಟ್ರೋಲ್ ಸಚಿವ ಹರ್ದೀಪ್ ಸಿಂಗ್ ಪುರಿ ಅವರು X ನಲ್ಲಿ ಪೋಸ್ಟ್‌ನಲ್ಲಿ, “… ನಾವು ಕಳೆದ ಕೆಲವು ವರ್ಷಗಳಿಂದ ನಮ್ಮ ಸರಬರಾಜುಗಳನ್ನು ವೈವಿಧ್ಯಗೊಳಿಸಿದ್ದೇವೆ ಮತ್ತು ನಮ್ಮ ಹೆಚ್ಚಿನ ಪ್ರಮಾಣದ ಸರಬರಾಜುಗಳು ಈಗ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುದಿಲ್ಲ. ನಮ್ಮ ತೈಲ ಮಾರುಕಟ್ಟೆ ಕಂಪನಿಗಳು ಹಲವಾರು ವಾರಗಳಿಗೆ ಬೇಕಾದ ಸರಬರಾಜುಗಳನ್ನು ಹೊಂದಿವೆ, ಹಲವಾರು ಮಾರ್ಗಗಳಿಂದ ಇಂಧನ ಸರಬರಾಜುಗಳನ್ನು ಪಡೆಯುತ್ತಲೇ ಇವೆ. ನಮ್ಮ ನಾಗರಿಕರಿಗೆ ಬೇಕಾದ ಇಂಧನವನ್ನು ಪೂರೈಸುವುದರಲ್ಲಿ ಯಾವುದೇ ಅಡೆತಡೆಯಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ,” ಎಂದು ಹೇಳಿದರು.

ಈಗಾಗಲೇ ಅಸ್ಥಿರವಾಗಿರುವ ತೈಲ ಬೆಲೆಗಳು, ಮಾರುಕಟ್ಟೆಗಳು ಮತ್ತೆ ತೆರೆದಾಗ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಹತ್ತು ದಿನಗಳ ಹಿಂದೆ ಇರಾನ್ ಮೇಲೆ ಇಸ್ರೇಲ್‌ನ ಆರಂಭಿಕ ಕ್ಷಿಪಣಿ ದಾಳಿಯ ನಂತರ, ಕಚ್ಚಾ ತೈಲ ಬೆಲೆಗಳು ಈಗಾಗಲೇ 10% ರಷ್ಟು ಏರಿಕೆಯಾಗಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page