Friday, June 14, 2024

ಸತ್ಯ | ನ್ಯಾಯ |ಧರ್ಮ

ಅವನು ಉಸ್ರಾಡಿದ್ರೆ ಹಾವು, ಚೇಳೆಲ್ಲಾ ಒಮ್ಮಿಕೆ ಮೈ ಮೇಲೆ ಹರ್ದಂಗ್ ಆಗದು….

‌(ಈ ವರೆಗೆ)

ಲಕ್ಷ್ಮೀ ಗಂಗೆಯೊಂದಿಗೆ ಮಾತಾಡುತ್ತಾ ತನ್ನವ್ವ ಬಂದು ಹೋದ ಘಟನೆಯನ್ನು ಹಂಚಿ ಕೊಳ್ಳುತ್ತಾಳೆ. ಆಕೆಯ ನೆನಪು ಹಿಂದಕ್ಕೋಡುತ್ತದೆ. ಇದ್ದಕ್ಕಿದ್ದ ಹಾಗೆ ಧುತ್ತನೆ ತನ್ನೆದುರಿಗೆ ಬಂದು ನಿಂತ ತನ್ನ ಹೆತ್ತವ್ವನನ್ನು ಕಂಡು ಮೂಕಳಾದ ಆಕೆ ತನ್ನನ್ನು ತೊರೆದು ಹೋದ ಅವ್ವನ ಮೇಲೆ ಸಿಟ್ಟು ಗೊಳ್ಳುವುದಿಲ್ಲ. ಬದಲಿಗೆ ಅವ್ವನನ್ನು ಚೆನ್ನಾಗಿ ಉಪಚರಿಸಿ ನೀನೇಕೆ ಹಾಗೆ ಮಾಡಿದೆ ಎಂದು ಮುಗ್ಧವಾಗಿ ಕೇಳುತ್ತಾಳೆ. ಲಕ್ಷ್ಮಿಯ ಅವ್ವ ಏನು ಹೇಳುತ್ತಾಳೆ? ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ೧೨ನೇ ಕಂತು ಓದಿ.

ಇದುವರೆಗೂ “ನೀನೇ” ಎಂದು ಕೇಳುವವರಿಲ್ಲದೆ ಅನಾಥತೆಯಿಂದ ದಿಕ್ಕೆಟ್ಟಿದ್ದ ಆ ಹೆಂಗಸಿನ ಮನಸ್ಸು ಇಂದು ತಾನೇ ನೀಡಿದ ಜೀವದ ಎದುರು ಎಲ್ಲಾ ಮುಜುಗರಗಳನ್ನು ಕಳಚಿ ಬಾಯಾರಿದಂತೆ ಮಾತಿಗಿಳಿಯಿತು.

“ಮಗ, ಇಲ್ಲಿಗಂಟ ಎಲ್ರು ನನ್ನ್ ತೊಗಲು ನೋಡಿದ್ರೆ ವಿನ ಆ ತೊಗಲೊಳಗೆ ಸುಟ್ಟು ಕರಕಲಾಗ್ತಿರೋ ಜೀವದ ಸಂಕಟಕ್ಕೆ ಯಾರು ಕಿವಿ ಕೊಡ್ಲೇ ಇಲ್ಲ ಕನವ್ವ” ಎಂದು ನಿಟ್ಟುಸಿರು ಬಿಟ್ಟು ತುಸು ಹೊತ್ತು ಮೌನಕ್ಕೆ ಜಾರಿದಳು. ಹೆತ್ತವ್ವನ ಮುಂದೆ ಸಣ್ಣ ಮಗುವಿನಂತೆ ಹಿಡಿಯಾಗಿ ಕುಳಿತಿದ್ದ ಲಕ್ಷ್ಮಿ ಅರಳು ಗಣ್ಣಿನಿಂದ ಅವ್ವನನ್ನೇ ದೃಷ್ಟಿಸಿದಳು. ಈಗಲೂ ಮುಟ್ಟಿದರೆ ರಕ್ತ ಚಿಮ್ಮುವಂತೆ ಕೆಂಪಾಗಿ ಲಕ್ಷಣವಾಗಿದ್ದ ಅವ್ವನ ತಿದ್ದಿ ತೀಡಿದಂತಹ ಮೂಗು, ಬಟ್ಟಲು ಗಣ್ಣು, ತುಂಬು ಗೆನ್ನೆ, ಎಲೆ ಅಡಿಕೆಯ ಕೆಂಪಿನಲ್ಲಿ ಅದ್ದಿದ್ದ ಮುತ್ತು ಜೋಡಿಸಿದಂತಹ ಹಲ್ಲುಗಳು ಇವೆಲ್ಲವೂ ಅವ್ವನ ಒಂದು ಕಾಲದ ಸೌಂದರ್ಯದ ಕತೆಯನ್ನೇ ಹೇಳುವಂತಿತ್ತು. ಲಕ್ಷ್ಮಿ ಅನ್ನಕ್ಕಿಟ್ಟ ಎಸರು ನೋಡುವ ನೆವದಲ್ಲಿ ಎದ್ದು ಹಜಾರದಲ್ಲಿ ತೂಗು ಹಾಕಿದ್ದ ಅಂಗೈ ಅಗಲದ ಕನ್ನಡಿ‌ ಎದುರು ಬಂದು ನಿಂತಳು. ತಾನು ಕೂಡ ಥೇಟ್ ಅವ್ವನಂತೆಯೇ ಇದ್ದೇನಲ್ಲ ಎನ್ನಿಸಿ,  ಮುಖದ ಮೇಲೊಮ್ಮೆ ಪ್ರೀತಿಯಿಂದ ಕೈ ಆಡಿಸಿ ಕೊಂಡಳು. ಇದೇ ಮೊದಲ ಬಾರಿಗೆ ಅವಳಿಗೆ ತನ್ನ ಸೌಂದರ್ಯದ ಬಗ್ಗೆ ಖುಷಿ ಎನ್ನಿಸಿದ್ದು.  ನೆನೆಸಿಟ್ಟ ಅಕ್ಕಿಯನ್ನು ಕುದಿಯುವ ಎಸರಿನೊಳಗೆ ಸುರಿದು ಸೌದೆಯನ್ನು ತುಸುವೇ ಒಲೆಯಿಂದ ಹೊರಗೆಳೆದು ಉರಿ ಕಡಿಮೆ ಮಾಡಿ ಮರಳಿ ಅವ್ವನ ಎದುರು ಬಂದು ಕುಳಿತಳು.

ಹಿಂದಕ್ಕೆ ಚಲಿಸಿದ್ದ ಅವ್ವನ ಮನಸ್ಸು, ಇನ್ನೂ ತನ್ನ ಕಳೆದು ಹೋದ ಜೀವನ ಗಾಥೆಯ ಎಳೆ ಹಿಡಿದು ಭಾರವಾದ ಮನಸ್ಸಿನಿಂದ ಜೀಕುತ್ತಲೇ ಇತ್ತು. ಲಕ್ಷ್ಮಿ ಅವ್ವನ ಗಲ್ಲವನ್ನು ಮುಟ್ಟಿ “ಅವ್ವ ತಡ ಮಾಡ್ಬ್ಯಾಡ ಬೇಗ ಬೇಗ ಹೇಳು. ಆಮೇಲೆ ಸಂದೆ ಆಗ್ಬುಟ್ರೆ  ಮನೆಯವ್ರೆಲ್ಲಾ ಬಂದು ಬುಡ್ತಾರೆ ಎಂದಳು. ಕೂಡಲೇ ಎಚ್ಚೆತ್ತುಕೊಂಡ ಅವ್ವ ದೀರ್ಘವಾದ ಉಸಿರೆಳೆದು ಕೊಂಡು  “ನಮ್ಮಪ್ಪ ಅವ್ವುಂಗೆ ನಡ್ವಯಸ್ಸ್ನಲ್ಲಿ ಹುಟ್ಟ್ದೊಳು  ನಾನು. ನಾನು ಬೆಳೆದು ದೊಡ್ಡ್ ದಾಗೋ ಹೊತ್ತಿಗಾಗಲೇ ಅಣ್ಣದಿರೆಲ್ಲಾ ಬೆಳೆದು ಮದುವೆ ಮಾಡ್ಕೊಂಡಿದ್ರು. ಬಂದ್ ಹೆಂಡ್ತೀರ್ ಜೊತೆ ಕೂಡಿ ಅಪ್ಪ ಅವ್ವ ಕಷ್ಟಪಟ್ಟು ದುಡಿದಿದ್ದ ಆಸ್ತಿ ಪಾಸ್ತಿನಿಲ್ಲ ಹರ್ದು ಹಂಚ್ಕೊಂಡು ನನ್ನ, ಅವ್ವುನ್ನ, ಅಪುನ್ನ, ಕೊಟ್ಟಿಗೆ ಮನೆಗ್ ಹಾಕಿ ಕೈ ತೊಳ್ಕೊಂಡ್ರು. ಅಪ್ಪ ಅವ್ವ ಇದೇ ಚಿಂತೆಲಿ ಒಬ್ರಾದ್ ಮೇಲ್ ಒಬ್ರು ನಾಲ್ಕ್ ದಿನ ಹಿಂದೂ ಮುಂದು ಅನ್ನಂಗೆ ನನ್ ಬುಟ್ಟು ದ್ಯಾವ್ರ್ ಪಾದ ಸೇರ್ಕೊಂಡ್ರು ಮಗ.

 ನಮ್ಮ ಅತ್ತಿಗೆದಿರು ಇದುಕ್ಕೆ ಕಾಯ್ತಾ ಇದ್ರೋ.. ಅನ್ನುವಂಗೆ ಹಿಂದು ಮುಂದು ನೋಡ್ದೆ  ನನ್ನ ಅವ್ರಗೊಳ್ ಮನೆ ಜೀತ ಉಜ್ಜಕಾಕ್ಕಂಡ್ರು. ಅದ್ಯಾವ ಕೇಡುಗಾಲುಕ್ಕೋ ಏನೋ ಕನವ.. ದಿನ ಕಳ್ದಂಗೆ ನನ್ ಮೈಯಾಗೆ ರಕ್ತ ಮಾಂಸ ಕೂಡ್ಕೊಂಡು ಎಲ್ಲರ ಕಣ್ಣು ಕುಕ್ಕುವಂಗೆ ಬೆಳೆದು ಬುಟ್ಟೆ. ಸಾಲ್ಮುನ್ನಾಗಿ ಹೆಣ್ಣು ಕೇಳ್ಕೊಂಡು ಬರಕ್ ಸುರುವಾದ್ರು ನೋಡು, ಕೊನೆಗೆ ಅಳ್ದು ಸುರ್ದು  ನೂರು ಹಸ ಕಟ್ಟಿದ ಮ್ಯಾಗಳ ಗೊಲ್ಲರಟ್ಟಿ ಸೌಕಾರುನ್ನ್  ಮಗುಂಗೆ ನನ್ ಕೊಟ್ಟು ಮದುವೆ ಮಾಡಿದ್ರು. ಮದುವೆ ಮಾಡಿದ್ರು ಅನ್ನಕಿಂತ ಕೈ ತುಂಬ ದುಡ್ಡ್ ಇಸ್ಕೊಂಡು ವ್ಯವಹಾರ ಕುದ್ರುಸ್ಕೊಂಡ್ರು ಅನ್ನದೇ ಸರಿ‌ ಎಂದು ನಿಟ್ಟುಸಿರು ಬಿಟ್ಟಳು.  “ಯಾಕೋ ಗಂಟ್ಲು ಒಣುಗ್ತೈತೆ ಈಸು ನೀರ್ ಕೊಡವ್ವ” ಎಂದು ಮಗಳ ಕಡೆ ಖಾಲಿಯಾಗಿದ್ದ ತಂಬಿಗೆ ಹಿಡಿದಳು. ಒಳ ಬಂದ ಲಕ್ಷ್ಮಿ  ಲಗು ಬಗೆಯಿಂದ ಅನ್ನ ಬಸಿದು ಪಕ್ಕಕ್ಕಿಟ್ಟು  ತಂಬಿಗೆ ನೀರು ಮೊಗೆದು ತಂದು ಅವ್ವನ ಕೈಗಿಟ್ಟು  ಕೂತಳು. 

ಗಂಟಲು ಹಸಿ ಮಾಡಿ ಕೊಂಡ ಅವ್ವ ಲಕ್ಷ್ಮಿಯ ಹೂವಿನಂತ ಕೈ ಹಿಡಿದು “ನಿನ್ನ ನನ್ನವ್ವ ಅಂತ ಅಂದ್ಕೊಂಡು ಮಾನ ಮರ್ವಾದೆನೆಲ್ಲಾ ಬುಟ್ಟು  ನನ್ನ ಕತೆ ಹೇಳ್ಕೊತಿದ್ದೀನಿ ಮಗ ಹೊಟ್ಟೆಗಾಕೊಳವ್ವ”  ಎಂದು ತನ್ನ ಮಾತು ಮುಂದುವರೆಸಿದಳು ಆ ಹೆಂಗಸು.

 “ಪುಂಡು ಪಟಾಲಮ್ ಆಗಿ ಊರೂರು ಅಲಿತಿದ್ದ ಆ ಸಾವುಕಾರನ  ಮಗ, ನನ್ನ ಕುತ್ತಿಗೆಗೆ ಮೂರು ಗಂಟಾಕಿದ್ದೆ ತಡ ಊರು ಅಲಿಯದಿರಲಿ ಮಲಗ ಕ್ವೊಣೆ ಬುಟ್ಟು ಈಚೆ ಕಡಿದಂಗಾದ. ಅವನ ಮನೆಯವರ್ಗೆ ಬೇಕಾಗಿದ್ದು ಅದೇ ಮಗ. ಅವುನು ನನ್ನ ಹೊರಗೆ ಕಡಿಯಾಕೆ ಬುಡ್ಲೇ ಇಲ್ಲ.  ಮೂರು ಹೊತ್ತು ಹಾಸಿಗೆ ಮೇಲೆ ನನ್ನ ಕೆಡಿಕೊಂಡು ಬೀಳಕೆ ಸುರುವಾದ. ನನಗೋ ಬಾಯಿ ಬಡ್ಕೊಳ್ಳೊ ಅಂತ ಸಂಕ್ಟ. ಅವನ್ ಕೊಡ್ತಿದ್ದ ಕಾಟವ ಯಾರ್ ಹತ್ರ ಹೇಳ್ಳವ್ವ.   ಒಂದಿನ ತಡ್ದೆ, ಎರಡು ದಿನ ತಡ್ದೆ  ಮೂರ್ನೆದಿನ ನಾಚ್ಕೆ ಪಾಚ್ಕೆನೆಲ್ಲ ಮೂಲೆಗಾಕಿ ಅವನ ಅವ್ವುನ ಮುಂದೆ ರವಕೆ ಬಿಚ್ಚಿ ನಿತ್ಕೊಂಡೆ ಬುಟ್ಟೆ. “ನಾನೆಂಗೆ ತಡ್ಕೊಳ್ಳವ್ವ ಹಿಂಗ್ ಮಾಡ್ತಾವ್ನಲ್ಲ ನಿನ್ನ್ ಮಗ” ಅಂದೆ. ಆ ವಮ್ಮ ತನ್ನ್ ಮಖ ಮುಚ್ಚ್ಕೊಂಡು “ಥೂ ನಿನ್ ವಂಸ ಹಾಳಗ.. ಮೂರುನ್ನ್ ಬುಟ್ಟ್ ರಂಡೆಹಂಗ್ ನಿಂತಿದ್ದಿಯಲ್ಲ. ನಿನ್ನ್ ಗಂಡ ಮಾಡ್ದೆ ಇನ್ಯಾರ್ ಮಾಡ್ತರೆ. ಇರೋನು ಒಬ್ಬನೆ ಮಗ ಅವನ ಸುಖವೇ ನಮಗೆ ಮುಖ್ಯ, ಹೋಗೋಗು ಅವನು ಮನೆ ಬುಟ್ಟ್ ಕಡಿದಂಗೆ ನೋಡ್ಕೊ.. ಏನ್ ಬೇಕಿದ್ರು ಅಲ್ಲಿಗೆ ತಂದು ಕೊಟ್ಟೇನು  ಅಂತ ಹೇಳಿ ಪುನ ನನ್ನ ಅವನ್ ಕ್ವೋಣೆಗೆ ದಬ್ಬುದ್ಲು. 

ದಿನ ಕಳ್ದಂಗೆ ಕಳ್ದಂಗೆ ಅವನ ಈ ರೋಗ ಜಾಸ್ತಿನೇ ಆಯ್ತು ಬುಟ್ರೆ ಕಡಿಮೆ ಆಗ್ಲಿಲ್ಲ ಕನವ್ವ. ಈ ಹಾಸಿಗೆ ನೋಡಿದ್ರೆ ಹೇಸಿಗೆ ಬರಕ್ ಸುರುವಾತು. ಅವನು ಉಸ್ರಾಡಿದ್ರೆ ಹಾವು, ಚೇಳೆಲ್ಲಾ ಒಮ್ಮಿಕೆ ಮೈ ಮೇಲೆ ಹರ್ದಂಗ್ ಆಗದು. ಆ ಮನೆಗೋಗಿ  ತಿಂಗಳೊಪ್ಪತ್ತಾದ್ರು ನಮ್ಮನೆ ಕಡೆವ್ರು ಒಂದಪನು ನನ್ನ ನೋಡಕೆ ಬರ್ಲೆ ಇಲ್ಲ. ನನಗೂ ಸಾಕಾಯ್ತು ಇನ್ನು ಅಲ್ಲಿರಕೆ ಆಗದೇ ಇಲ್ಲ ಅನ್ಸಿ  ಗಟ್ಟಿ ಮನಸ್ಸು ಮಾಡ್ಕೊಂಡು ರಾತ್ರೋರಾತ್ರಿ ಕದ್ದು ನಮ್ಮಟ್ಟಿಗೆ ಬಂದ್ಬುಟ್ಟೆ ಮಗ.  ನಮ್ಮ ಅಣ್ಣದಿರೆಲ್ಲಾ ಹೊಡುದ್ರು ಬಡುದ್ರು, ಅವನ ಮನೆಯವ್ರು ಬಂದು ರಂಪ ರಾಮಾಯಣ ಮಾಡುದ್ರು ನಾನ್ ಮಾತ್ರ ಕಲ್ಲ್ ಬಂಡೆ ಹಂಗೆ ಯಾವುದಕ್ಕೂ ಜಗ್ಲಿಲ್ಲ. ಕೊನೆಗೊಂದಿನ ಆ ಸಾವ್ಕಾರುನ್ ತವ ಇಸ್ಕೊಂಡಿದ್ದ ವಡವೆ ವಸ್ತ್ರ, ದುಡ್ಡ್ನೆಲ್ಲಾ ವಾಪಸ್ಸು ಕೊಟ್ಟು  ನನ್ನ ಕೊಟ್ಟಿಗೆ ಮನೆಗೆ ಹಾಕಿದ್ರು. ಒಂದಿನ ಉಪವಾಸ ಕೆಡುವುದ್ರು ಎರಡು ದಿನ ಉಪವಾಸ ಕೆಡುವುದ್ರು ನಾನು ಜಗ್ಗಲಿಲ್ಲ. ಎಷ್ಟೇ ಆದ್ರೂ ಬೆನ್ನಿಗೆ ಬಿದ್ದೋಳಲ್ವಾ, ಕೊನೆಗೆ ಅವರು ಕಳ್ಳೇ ಚೂರ್ ಅಂತೋ ಏನೋ  ಒಳಿಕೆ ಕರ್ಕೊಂಡ್ರು. ಅವತ್ತಿಂದ ಸುರುವಾತು ನೋಡು ನನ್ ಜೀತ. ಮನೆ, ಕಸ, ಮುಸ್ರೆ, ಹೊಲ, ದನ, ಕರ ಒಂದ ಎರಡ  ಒಂದು ಗಳಿಗೆ ಅಂಡೂರಕ್ಕು ಪುರುಸೊತ್ತಿಲ್ಲದಂಗೆ ಗಾಣುದ ಎತ್ತ್ನಂಗೆ ದುಡ್ದೆ. ನಾನು ಯಾವತ್ತೂ ಈ ಕೆಲಸುಕ್ಕೆ ಹೆದ್ರುದ್ ಮಗಳಲ್ಲ, ಆದ್ರೆ ಇಷ್ಟೆಲ್ಲಾ ಮಾಡಿ ಬಾಯಿಗೆ ಬಂದಂಗೆ ಅನ್ನದುನ್ನ ಕೇಳೋದ್ ಐತೆ ನೋಡು ಅದಕ್ಕಿಂತ ನರಕ ಬ್ಯಾರೆ ಇಲ್ಲ. ಕುಡ್ದಿದ್ದ್ ನೀರು ಹೊಟ್ಟೆಗೆ ಇಳಿದಂಗೆ ಮಾಡ್ಬುಡ್ತಿದ್ರು. ಏನ್ ಮಾಡದು ದೇವರು ಕೊಟ್ಟ್ ಜೀವ ನೀಕ್ಕೊಳ್ದಂಗೆ, ಇರತಂಕ ನೀಸದು ಅಂತ ನಿರ್ಧಾರ ಮಾಡಿ ಬದುಕಕ್ಕೆ ಸುರು ಮಾಡಿದೆ.

ದಿನಾಲು ನಾನು ಹೊಲಕೋಗೋ ದಾರಿನಾಗ ಈ ಕಾಫಿ ತೋಟಗಳಿಗೆ ಜನ ಬುಡ್ತಿದ್ದ ಮೇಸ್ತ್ರಿ ಒಬ್ಬ ಎದ್ರೈತಿದ್ದ. ಹಿಂಗೆ ನೋಡ್ತಾ ನೋಡ್ತಾ ಪರಿಚಯ ಆತು. ಹಿಂಗೆ ತ್ವೋಟುಕ್ಕೆ ಹೋಗೋ ಜನಗಳ ಬಾಯಿಂದ  ನನ್ನ ಬಗ್ಗೆ ಎಲ್ಲಾ ಕೇಳಿ ತಿಳ್ಕೊಂಡಿದ್ದ. ಒಂದಪ್ಪ ನನ್ನ ದಾರಿ ಮಧ್ಯ ನಿಲ್ಲಿಸ್ಕೊಂಡು ತೋಟದ್  ಕೆಲಸಕ್ಕೆ ಬತ್ತಿಯ ಅಲ್ಲಿ ನಿನ್ನ ದುಡಿಮೆಗೆ ತಕ್ಕನಾದ ದುಡ್ಡ್ ಸಿಕ್ತದೆ ಅಂದ. ನನಗೂ ಈ ಹರ್ದು ಹೋಗಿರೋ ರವಿಕೆ, ಸೀರೆ, ಚಪ್ಪಲಿ ಹಾಕಿ ಹಾಕಿ ಸಾಕಾಗ್ ಹೋಗಿತ್ತು. ಒಂದ್ ದಪ್ಪ ನಮ್ಮ ಅಣ್ಣದಿರುನ್ ಕೇಳಿ ಅಂದೆ. ಅವನು ಬಂದು ತೋಟದ್ ಕೆಲಸಕ್ಕೆ ಜನ ಕಮ್ಮಿ ಅವ್ರೆ ನಿಮ್ ತಂಗಿನ ಕಳುಸುದ್ರೆ ಕೈ ತುಂಬಾ ದುಡ್ಡು ಸಿಕ್ತದೆ ನೋಡಿ ಅಂದ. ಅವರಿಗೇನು ನನ್ನ ಕಳ್ಸೊ ಮನಸ್ಸಿರಲಿಲ್ಲ. ನನ್ನಂಗೆ ಜೀತ ಉಜ್ಜೋ ಗಟ್ಟಿ ಆಳು ಅವರಿಗೆ ಎಲ್ಲಿ ಸಿಕ್ತಾರೇಳು. ಆಮೇಕೆ  ನಾನೆಯ ದಮ್ಮಯ್ಯ ದಕ್ಕಯ್ಯ ಹಾಕಿ ನನ್ನ ದುಡ್ದಿದ್ದು ದುಡ್ಡ್ನೆಲ್ಲಾ ನಿಮಗೆ ಕೊಡ್ತಿನಿ ಅಂದು ಮಾತು ಕೊಟ್ಟು, ನಮ್ಮ ಹಟ್ಟಿ  ಜನ್ರು ಜೊತೆ ಆರು ತಿಂಗುಳು ಮಟ್ಟಿಗೆ ನಾನು ತ್ವೋಟುದ ಕೆಲಸುಕ್ಕೆ ಹೊಂಟೆ ಬುಟ್ಟೆ.

ನಮ್ಮುನ್ನ ಕರ್ಕೊಂಡು ಹೋದ ಮೇಸ್ತ್ರಿ ಒಂದೊಂದು ತ್ವೋಟುಕ್ಕೆ ಒಬ್ಬೊಬ್ರುನ್ನ ಬುಡ್ತಾ ಹೋದ. ಹಂಗೆ ನನ್ನ ಸೋಪಾನ್ ಪೇಟೆ ಸಾವುಕಾರುನ ತ್ವೋಟಕ್ಕೆ ಬುಟ್ಟ. ನನಗೆ ಅಲ್ಲೇ ಉಳಿಯಕೆ ಲೈನ್ ಮನೆ ಕೊಟ್ರು. ತಿಂಗುಳು ಹೆಂಗ್ ಕಳಿತು ಅಂತನೇ ಗೊತ್ತಾಗ್ಲಿಲ್ಲ ಮಗ. ಯಾರ್ ಹಂಗೂ ಭಯವು ಇಲ್ದಂಗೆ ಬೇಕಾದ್ದು ಉಣ್ಣ್ಕೊಂಡು ತಿಂದ್ಕೊಂಡು  ಎಲ್ರು ಜೊತೆ ಸೇರಿ ನಕ್ಕುಂತ ನಿಯತ್ತಾಗಿ ತ್ವೋಟದ ಕೆಲಸ ಮಾಡ್ಕೊಂತ ನೆಮ್ಮದಿಯಾಗಿದ್ದೆ. ನನ್ನ ಖರ್ಚಿಗೆ ಬೇಕಾದಷ್ಟು ದುಡ್ಡಿಟ್ಕೊಂಡು ಮಿಕ್ಕಿದ್ದುನ್ನ ನಮ್ಮಣ್ಣದಿರಗೆ ಮೇಸ್ತ್ರಿ ನೆ ಕೊಟ್ಟ್ ಬತ್ತಿದ್ದ. ಹಿಂಗೆ ದಿನ ಕಳಿತಾ ಕಳಿತಾ ಆ ತ್ವೋಟಕ್ಕ್ ಬತ್ತಿದ್ದ ಕೆಲವು ಗಂಡುಸ್ರು ನನ್ನ ಹತ್ರ ಒಂತರ ನಡ್ಕೊಳ್ಳಕೆ ಸುರು ಮಾಡುದ್ರು. ನನಗೆ ಬಾಳ ಇರುಸು ಮುರ್ಸಾಗದು. ಒಂದಪ ಹಿಂಗೆ ಬಂದ ಮೇಸ್ತ್ರಿ ತವ ಈ ಸುದ್ದಿ ಹೇಳ್ದೆ. ಆ ಮೇಸ್ತ್ರಿ ಆ ಗಂಡುಸ್ರುಗಳ್ಗೆ ಉಗ್ದು, ಅವಳು ನಾನು ಮದುವೆ ಆಗಕಿರೋ ಹುಡುಗಿ ಯಾರಾದ್ರು ಕೆಟ್ನಾಗಿ ನಡ್ಕೊಂಡ್ರೆ ನಾ ಸುಮ್ಕಿರಕಿಲ್ಲ ಅಂತ ದಮ್ಕಿ ಹಾಕುದ್ನಂತೆ.  ಅವತ್ನಿಂದ ಎಲ್ಲ ಗಪ್ ಚುಪ್ಪಾಗೋದ್ರು. ಈ ಮಾತು ನನಗೆ ಬ್ಯಾರೆ ಅವರಿಂದ ಆಮೇಲೆ ಗೊತ್ತಾತು. ಇದಾದ ಮೇಲೆ ನನಗೆ ಗೊತ್ತಿಲ್ಲದಂಗೆ ಅವನ ಮೇಲೆ ಅಭಿಮಾನ ಸುರುವಾತು. ಅದು ಹಂಗೆ ಪ್ರೀತಿಗೂ ತಿರಿಕೊತು ಮಗ ಎಂದು ದೀರ್ಘವಾದ ನಿಟ್ಟುಸಿರು ಬಿಟ್ಟು ಮಗಳ ಪ್ರತಿಕ್ರಿಯೆ ಏನಿರಬಹುದೆಂದು ಲಕ್ಷ್ಮಿಯ ಮುಖವನ್ನೋದಲು ಪ್ರಯತ್ನಿಸಿದಳು. 

(ಮುಂದುವರೆಯುವುದು..)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು