Home ವಿಶೇಷ ಸಮಾಜದಂಚಿನಲ್ಲಿರುವ ಸಮುದಾಯಗಳನ್ನು ಇನ್ನಷ್ಟು ಅಂಚಿನತ್ತ ತಳ್ಳುತ್ತಿರುವ ʼಟಿಬಿʼಯೆನ್ನುವ ಕಾಯಿಲೆ

ಸಮಾಜದಂಚಿನಲ್ಲಿರುವ ಸಮುದಾಯಗಳನ್ನು ಇನ್ನಷ್ಟು ಅಂಚಿನತ್ತ ತಳ್ಳುತ್ತಿರುವ ʼಟಿಬಿʼಯೆನ್ನುವ ಕಾಯಿಲೆ

0

ಲೇಖಕ ರಾಧೇಶ್ಯಾಮ್‌ ಅವರ ‘Lives on The Edge: Tuberculosis in Marginalised Populations’, ಎನ್ನುವ ಪುಸ್ತಕವು ಸಮಾಜದ ಅಂಚಿನಲ್ಲಿರುವ ಜನರು ಮತ್ತು ಟ್ರಾನ್ಸ್‌ಜೆಂಡರ್‌ ಸಮುದಾಯದ ಮೇಲೆ ಟಿಬಿ ಕಾಯಿಲೆಯು ಹೇಗೆ ಪರಿಣಾಮ ಬೀರುತ್ತದೆನ್ನುವುದನ್ನು ಪರಿಣಾಮಕಾರಿಯಾಗಿ ದಾಖಲಿಸಿದೆ. ಆ ಪುಸ್ತಕದ ಒಂದು ಭಾಗವನ್ನು ನಮ್ಮ ಓದುಗರಿಗಾಗಿ ನೀಡಲಾಗಿದೆ

ಇನ್ನೇನು ಸೂರ್ಯ ಮುಳುಗಿ ಕತ್ತಲಾಗುವ ಹೊತ್ತು. ಕೆಂಪು ಬೆಳಕಿನಲ್ಲಿ ಧೂಳಿನ ಕಣಗಳು ಚಿನ್ನದ ಬಣ್ಣಕ್ಕೆ ತಿರುಗುತ್ತಿದ್ದವು. ಆ ಧೂಳಿನ ರಾಶಿಯ ನಡುವೆ ಸೌಮ್ಯ ದೇವಸ್ಥಾನದ ಜನಜಂಗುಳಿಯಲ್ಲಿ ತೂರಿಕೊಂಡು ನಡೆಯತೊಡಗಿದರು. ಕೆಂಪು ಸೀರೆ ಮತ್ತು ಸ್ಲೀವ್‌ಲೆಸ್‌ ರವಿಕೆ ತೊಟ್ಟಿದ್ದ ಸೌಮ್ಯ ಗುಂಪಿನ ನಡುವೆಯೂ ಗಮನ ಸೆಳೆಯುವಂತಿದ್ದರು. ರೋಲ್ಡ್‌ ಗೋಲ್ಡ್‌ ಬಳೆ, ಹೊಳೆಯುವ ನೆಕ್ಲೇಸ್‌ ತೊಟ್ಟಿದ್ದ ಅವಳು ತನ್ನ ಸ್ನೇಹಿತರನ್ನು ಹುಡುಕಲಾಗದೆ ಚಡಪಡಿಸುತ್ತಿದ್ದರು.

ಜನರ ನಡುವೆ ದಾರಿ ಮಾಡಿಕೊಂಡು, ಸೌಮ್ಯ ಮೆಲ್ಲನೆ ಕೆಮ್ಮುತ್ತಾ ಮುಂದಕ್ಕೆ ನಡೆಯತೊಡಗಿದರು.

ಹಣೆಯ ಮೇಲಿನ ಬೆವರು ರೆಪ್ಪೆಗಳ ಮೇಲಿಳಿದು ಅವಳ ಗಾಢ ಮೇಕಪ್ಪನ್ನು ಕರಗಿಸುತ್ತಿತ್ತು. ಇದರಿಂದ ಕಿರಿಕಿರಿಗೊಳಗಾಗುತ್ತಿದ್ದ ಸೌಮ್ಯ, ತನ್ನ ಮೈಮೇಲೆ ಬೀಳಲು ಯತ್ನಿಸುತ್ತಿದ್ದ ಗಂಡಸರತ್ತ ಕೂಗಾಡತೊಡಗಿದರು. “ಬನ್ನಿ ನನ್ನ ಸೀರೇನ ಬಿಚ್ಚಿ, ಇಲ್ಲೇ ನನ್ಜೊತೆ ಮಲಗುವಿರಂತೆ ಬನ್ನಿ. ಹುಟ್ಟಿದ್ಮೇಲೆ ಒಂದ್ಸಲನೂ ಚಂದ ಇರೋ ಹೆಣ್ಮಕ್ಳನ್ನ ನೋಡಿಲ್ವ? ಮನೇಲಿ ಅಕ್ಕ ತಂಗೀರಿಲ್ವ ನಿಮಗೆ?” ಎನ್ನುತ್ತಾ ಒಬ್ಬ ಮಧ್ಯವಯಸ್ಕ ಗಂಡಸನ್ನು ತಮಿಳಿನಲ್ಲಿ ಬಯ್ಯತೊಡಗಿದರು. ಅವನು ಕಾಮ ತುಂಬಿದ ಕಣ್ಣುಗಳಿಂದ ಅವಳತ್ತ ನೋಡುತ್ತಾ ಗುಂಪಿನಲ್ಲಿ ಕಣ್ಮರೆಯಾದ…

ಸೌಮ್ಯ ಅವನತ್ತ ಕೂಗಾಡುವುದನ್ನು ಇನ್ನೂ ಮುಂದುವರೆಸಿದ್ದರು. ಅವರು ದೇವಸ್ಥಾನ ತಲುಪುವ ಹೊತ್ತಿಗೆ ಅವರ ಕೋಪಕ್ಕೆ ತುತ್ತಾದ ಗಂಡಸರ ಸಂಖ್ಯೆ ಬೆರಳೆಣಿಕೆಯನ್ನು ಮೀರಿತ್ತು.

ಅವರಿಗಾಗಿ ಅವರ ಸ್ನೇಹಿತರು ದೇವಸ್ಥಾನದ ಬಾಗಿಲಿನಲ್ಲೇ ಕಾಯುತ್ತಿದ್ದರು. ಕೊನೆಗೂ ಅವರನ್ನು ನೋಡಿ ಖುಷಿಯಾದ ಅವರು ಅವರತ್ತ ನಡೆದರು. ಇದೆಲ್ಲ ರಂಪಾಟದಿಂದ ದಣಿದಿದ್ದ ಅವರು ಅಲ್ಲೇ ಒಂದೆಡೆ ಹೂವಿನ ಅಂಗಡಿಯ ಬಳಿಯಿದ್ದ ಮರದಡಿ ಅದರ ಬುಡಕ್ಕೆ ಒರಗಿ ವಿರಮಿಸಲು ಕುಳಿತರು. ಅವರ ಸುತ್ತ ಸುತ್ತುತ್ತಿದ್ದ ಸ್ನೇಹಿತರು ಆಕೆಗೆ ಒಂದಿಷ್ಟು ನೀರು ನೀಡಿದರು.

ಸೌಮ್ಯ ಮತ್ತು ಆಕೆಯ ಗೆಳತಿಯರು ಇನ್ನು ಕೆಲವೇ ಕ್ಷಣಗಳಲ್ಲಿ ನಡೆಯಲಿರುವ ಹುಣ್ಣಿಮೆ ಹಬ್ಬದಲ್ಲಿ ಸಾಮೂಹಿಕವಾಗಿ ಮದುವೆಯಾಗಲಿದ್ದಾರೆ, ದೇವಸ್ಥಾನದ ಸುತ್ತಾಲೂ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ. ಅಲ್ಲಲ್ಲಿ ಸಣ್ಣ ಪವಿತ್ರ ಬೆಂಕಿ ಉರಿಯುತ್ತಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಸೌಮ್ಯ ಮತ್ತು ಇನ್ನಿತರರು ಮದುವೆಯಾಗಿ ಹೆಮ್ಮೆಯಿಂದ ತಮ್ಮ ಕುತ್ತಿಗೆಯಲ್ಲಿ ಮಂಗಳ ಸೂತ್ರ ಧರಿಸಲಿದ್ದಾರೆ. ಇದೆಲ್ಲ ಆಚರಣೆ ಕೆಲವೇ ಕ್ಷಣಗಳಲ್ಲಿ ಮುಗಿಯುತ್ತದೆ. ಇವರೆಲ್ಲರೂ ಒಬ್ಬನನ್ನೇ ಮದುವೆಯಾಗುವುದು ವಿಶೇಷ. ಅವರನ್ನು ಮದುವೆಯಾಗುವವನ ಹೆಸರು ಅರವನ್‌, ಅವನು ಇವರೊಡನೆ ಇರುವುದಿಲ್ಲ ಅವನು ಗುಡಿಯೊಳಗಿರುತ್ತಾನೆ.

ಮದುವೆ ಮುಗಿದ ನಂತರ ಸೌಮ್ಯ ಮತ್ತು ಆಕೆಯ ಸ್ನೇಹಿತರು ಚಪ್ಪಾಳೆ ತಟ್ಟುತ್ತಾ ನರ್ತಿಸತೊಡಗುತ್ತಾರೆ. ಪರಸ್ಪರ ಅಭಿನಂದಿಸಿಕೊಳ್ಳುತ್ತಾ ತಬ್ಬಿಕೊಳ್ಳುತ್ತಾರೆ. “ಇನ್ನು ನನ್ನ ಫ್ರೆಂಡ್ಸ್‌ಗೆ ಹನಿಮೂನ್‌ ಮಾಡೋ ಸಮಯ. ʼರಿಪೋರ್ಟರ್‌ ಅವ್ರೇ ನೀವು ಅವರ ಜೊತೆ ಹನಿಮೂನ್‌ ಮಾಡೋದಿಲ್ಲ ಅಂದ್ರೆ ನಾವಿಬ್ರೂ ಈ ಕೂತು ಮಾತಾಡ್ಬಹುದು,ʼ” ಎಂದು ನನ್ನನ್ನ ಕಿಚಾಯಿಸಿದ ಸೌಮ್ಯ ಬನ್ನಿ ಮಾತಾಡೋಣ ನಾನೀಗ ಫ್ರೀ ಎಂದರು.

ಈ ನಡುವೆ ಆಕೆಯ ಸ್ನೇಹಿತೆಯರು ಒಬ್ಬೊಬ್ಬರಾಗಿ ಯಾವುದೇ ʼಪ್ರೊಟೆಕ್ಷನ್‌ʼ ಇಲ್ಲದೆ ಲೈಂಗಿಕ ಕ್ರಿಯೆಗೆ ಸಿದ್ಧರಾಗಿದ್ದ ಪುರುಷರೊಡನೆ ಚೌಕಾಶಿಗೆ ತೊಡಗಿದ್ದರು. ಒಂದಿಷ್ಟು ಹೊತ್ತಿನ ಚೌಕಾಶಿಯ ನಂತರ ವ್ಯವಹಾರ ಕುದುರಿದವರು ತಮ್ಮ ತಮ್ಮ ತಾತ್ಕಾಲಿಕ ಸಂಗಾತಿಗಳೊಡನೆ ಹತ್ತಿರದ ಹೊಲಗಳ ಕಡೆ ನಡೆಯತೊಡಗುತ್ತಾರೆ. ಸೌಮ್ಯ ಗುಂಪಿನಿಂದ ಬೇರಾಗಿ ದೇವಾಲಯದಿಂದ ಒಂದಷ್ಟು ದೂರದಲ್ಲಿದ್ದ ಸಣ್ಣ ತಗಡಿನ ಗೂಡಂಗಡಿಯ ಬಳಿ ನಡೆದರು.

“ಓಹ್‌! ನಾನು ನಿನಗೆ ನನ್ನ ಗಂಡನ್ನ ಪರಿಚಯ ಮಾಡಿಸ್ಲೇ ಇಲ್ಲ. ನೋಡಿದ್ದೀಯಾ ಅವನನ್ನ? ಅವನು ದೊಡ್ಡ ಮೀಸೆ ಹೊತ್ತ ಸೊಗಸಾದ ಗಂಡಸು. ನೀನು ನಾಳೆ ಅವನನ್ನ ನೋಡಬಹುದು. ನಾಳೆ ಅವ ದೇವಸ್ಥಾನದಿಂದ ಹೊರಕ್ಕೆ ಬರ್ತಾನೆ,” ಎಂದು ಸೌಮ್ಯ ಉತ್ಸಾಹದಿಂದ ಹೇಳಿದಳು. ಇಷ್ಟಾಗುವ ಹೊತ್ತಿಗಾಗಲೇ ಮಧ್ಯರಾತ್ರಿ ದಾಟಿತ್ತು. ಇಡೀ ಮೈದಾನಕ್ಕೆ ಮೈದಾನವೇ ಮುಕ್ತ ಲೈಂಗಿಕತೆ ತೆರೆದುಕೊಂಡಂತಿತ್ತು.

 ಇದು ಕೂವಗಮ್‌, ನಿಮಗೆ ಇಲ್ಲಿಗೆ ಸ್ವಾಗತ. ರಾಜ್ಯದ ರಾಜಧಾನಿ ಚೆನ್ನೈನಿಂದ ದಕ್ಷಿಣಕ್ಕೆ 200 ಕಿ.ಮೀ ದೂರದಲ್ಲಿರುವ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಧೂಳು ತುಂಬಿದ ಈ ಊರಿನಲ್ಲಿ ಪ್ರತಿ ವರ್ಷ ಚಿತ್ರ (ಏಪ್ರಿಲ್/ಮೇ) ಮಾಸದಲ್ಲಿ ಜೀವಕಳೆ ತುಂಬಿಕೊಳ್ಳುತ್ತದೆ, ಆ ದಿನ ಸಾವಿರಾರು ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರು ಅರವಣನನ್ನು (ಕೂತಾಂಡವರ್) ಮದುವೆಯಾಗಲು ಅಲ್ಲಿಗೆ ಬರುತ್ತಾರೆ.

ಈ ಹಬ್ಬವು ಮಂಗಳಮುಖಿಯರು ಅಥವಾ ಅರವಣಿಯರೆಂದು ತಮಿಳುನಾಡಿನಲ್ಲಿ ಕರೆಸಿಕೊಳ್ಳುವ ಈ ಸಮುದಾಯಕ್ಕೆ ಬಹಳ ಮಹತ್ವವಾದದ್ದು. ಹಲವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರಣಗಳಿಗಾಗಿಯೂ ಇದೊಂದು ಮಹತ್ವದ ಹಬ್ಬವಾಗಿದೆ. ಇದನ್ನು ಶ್ರೀ ಕೃಷ್ಣ ಅವತಾರವೆತ್ತಿದ ದಿನವೆಂದೂ ಗುರುತಿಸಲಾಗುತ್ತದೆ. ಒಂದು ಪುರಾಣದ  ಕತೆಯ ಪ್ರಕಾರ ಮಹಾಭಾರತ ಯುದ್ಧದ ಸಮಯದಲ್ಲಿ ಪಾಂಡವರು ಕೌರವರೆದುರು ಗೆಲ್ಲಲು ಅರ್ಜುನನ ಮಕ್ಕಳಲ್ಲಿ ಒಬ್ಬನಾದ ಅರವಣನನ್ನು ಬಲಿ ನೀಡಬೇಕಿರುತ್ತದೆ. ಆದರೆ ಅರವಣ ತಾನು ಬಲಿಪೀಠಕ್ಕೇರುವ ಮೊದಲು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. ಆದರೆ ಒಂದು ದಿನದ ಮಟ್ಟಿಗೆ ಹೆಂಡತಿಯಾಗಿ ಮರುದಿನ ವಿಧವೆಯಾಗಲೂ ಯಾವ ಕನ್ಯೆಯೂ ಸಿದ್ಧಳಿರುವುದಿಲ್ಲ. ಆಗ ಕೃಷ್ಣ ಮೋಹಿನಿಯ ರೂಪ ತಾಳಿ ಅರವಣನನ್ನು ಮದುವೆಯಾಗುತ್ತಾನೆ.

ಹೀಗಾಗಿ ತಮಿಳುನಾಡಿನ ಟ್ರಾನ್ಸ್‌ಜೆಂಡರ್‌ ಸಮುದಾಯವು ತಮ್ಮನ್ನು ತಾವು ಕೃಷ್ಣನ ಮೋಹಿನಿಯ ರೂಪವೆಂದು ಗುರುತಿಸಿಕೊಳ್ಳುತ್ತದೆ. ಅವರು ಅರವಣನನ್ನು ಹುಣ್ಣಿಮೆಯ ರಾತ್ರಿ ಮದುವೆಯಾಗಿ ಮರುದಿನ ಅವನು ಸಾಯುವುದರೊಂದಿಗೆ ಇವರು ವಿಧವೆಯರಾಗುತ್ತಾರೆ.

“ಇದು ನಮಗೆ ಒಂದು ಘನತೆಯನ್ನು ನೀಡುವ ದಿನ, ಈ ದಿನ ನಾವು ನಮ್ಮನ್ನು ಕೃಷ್ಣನ ಒಂದು ಭಾಗವೆಂಬಂತೆ ನೋಡುತ್ತೇವೆ,” ಎನ್ನುತ್ತಾರೆ ಸೌಮ್ಯ.

ಏದುಸಿರು ಬಿಡುತ್ತಾ ಸೌಮ್ಯ, ಬೀಡಾ ಮತ್ತು ಹೂ ಮಾರುವ ಅಂಗಡಿಯ ಬಳಿ ಬಂದು ನಿಂತರು, ಆ ಅಂಗಡಿಯವರಿಗೆ ಸೌಮ್ಯಾರ ಪರಿಚಯವಿತ್ತು. ಆತ ನಮ್ಮನ್ನು ಕರೆದು, “ಬನ್ನಿ, ನೀವಿಲ್ಲಿ ಕೂತು ಮಾತಾಡ್ಬಹುದು. ನಾನು ನಿಮಗೆ ಒಂದೊಂದು ಲೋಟ ಟೀ ಕಳಿಸ್ತೀನಿ,” ಎನ್ನುತ್ತಾ ನಮ್ಮನ್ನು ಆಹ್ವಾನಿಸಿದರು. ಒಳಗಿದ್ದ ಕೋಣೆಯೆಡೆಗೆ ನಡೆದ ಸೌಮ್ಯ ಬನ್ನಿ ಎಂದು ಕರೆಯುತ್ತಾ, “ದಯವಿಟ್ಟ ಒಂದಿಷ್ಟು ದೂರ ಕೂತ್ಕೊ,” ಎಂದು ವರದಿಗಾರನನ್ನು ವಿನಂತಿಸಿದರು. “ಆಮೇಲೆ ನೀವು ಸುಮ್ನೆ ವರದಿಗಾರನಿಗೆ ಟಿಬಿ ಮತ್ತು ಎಚ್‌ಐವಿ ಅಂಟಿಸಿದ ಟ್ರಾನ್ಸ್‌ಜೆಂಡರ್‌ ಸೌಮ್ಯ, ಅದೂ ಸಹ ಲೈಂಗಿಕ ಸಂಪರ್ಕ ಹೊಂದದೆ ಅಂತ ವರದಿ ಮಾಡ್ತೀರಿ,” ಎಂದು ನಗುತ್ತಾ ಮಾತು ಮುಂದುವರೆಸಿದ ಆಕೆ, “ನೀವು ನಮ್ಮ ಬದುಕಿನ ರಿಯಾಲಿಟಿ ಅರ್ಥ ಮಾಡ್ಕೊಳ್ಳೋ ಬದ್ಲು ನಮಗೆ ಟಿಬಿ ಮತ್ತೆ ಎಚ್‌ಐವಿ ಬಗ್ಗೆ ಪ್ರವಚನ ನೀಡೋದ್ರಲ್ಲೇ ಜಾಸ್ತಿ ಇಂಟ್ರೆಸ್ಟ್‌ ತೋರಿಸ್ತೀರಿ,” ಎಂದು ನಕ್ಕರು.

ಏದುಸಿರು ಬಿಡುತ್ತಾ ಸೌಮ್ಯ, ಬೀಡಾ ಮತ್ತು ಹೂ ಮಾರುವ ಅಂಗಡಿಯ ಬಳಿ ಬಂದು ನಿಂತರು, ಆ ಅಂಗಡಿಯವರಿಗೆ ಸೌಮ್ಯಾಳ ಪರಿಚಯವಿತ್ತು. ಆತ ನಮ್ಮನ್ನು ಕರೆದು, “ಬನ್ನಿ, ನೀವಿಲ್ಲಿ ಕೂತು ಮಾತಾಡ್ಬಹುದು. ನಾನು ನಿಮಗೆ ಒಂದೊಂದು ಲೋಟ ಟೀ ಕಳಿಸ್ತೀನಿ,” ಎನ್ನುತ್ತಾ ನಮ್ಮನ್ನು ಆಹ್ವಾನಿಸಿದರು. ಒಳಗಿದ್ದ ಕೋಣೆಯೆಡೆಗೆ ನಡೆದ ಸೌಮ್ಯ ಬನ್ನಿ ಎಂದು ಕರೆಯುತ್ತಾ, “ದಯವಿಟ್ಟ ಒಂದಿಷ್ಟು ದೂರ ಕೂತ್ಕೊಳ್ಳಿ,” ಎಂದು ವರದಿಗಾರನನ್ನು ವಿನಂತಿಸಿದಳು. “ಆಮೇಲೆ ನೀವು ಸುಮ್ನೆ ವರದಿಗಾರನಿಗೆ ಟಿಬಿ ಮತ್ತು ಎಚ್‌ಐವಿ ಅಂಟಿಸಿದ ಟ್ರಾನ್ಸ್‌ಜೆಂಡರ್‌ ಸೌಮ್ಯ, ಅದೂ ಸಹ ಲೈಂಗಿಕ ಸಂಪರ್ಕ ಹೊಂದದೆ ಅಂತ ವರದಿ ಮಾಡ್ತೀರಿ,” ಎಂದು ನಗುತ್ತಾ ಮಾತು ಮುಂದುವರೆಸಿದ ಆಕೆ, “ನೀವು ನಮ್ಮ ಬದುಕಿನ ರಿಯಾಲಿಟಿ ಅರ್ಥ ಮಾಡ್ಕೊಳ್ಳೋ ಬದ್ಲು ನಮಗೆ ಟಿಬಿ ಮತ್ತೆ ಎಚ್‌ಐವಿ ಬಗ್ಗೆ ಪ್ರವಚನ ನೀಡೋದ್ರಲ್ಲೇ ಜಾಸ್ತಿ ಇಂಟ್ರೆಸ್ಟ್‌ ತೋರಿಸ್ತೀರಿ,” ಎಂದು ನಕ್ಕಳು.

“ನಿಮಗೆ HIV ಮತ್ತೆ TB ಇದೆಯಾ?” ನಾನು ಕೇಳಿದೆ

“ಹ್ಹ! ಹ್ಹ! ನನ್‌ ಬದ್ಕಲ್ಲಿ ಎಲ್ಲಾನೂ ಇದೆ. ನನ್ನ ಕತೆ ಬರೆದ್ರೆ ಒಂದೊಳ್ಳೆ ಮಸಾಲೆ ಇರೋ ಸಿನೆಮಾ ಮಾಡ್ಬಹುದು. ಅದ್ರಲ್ಲಿ ಎಮೋಷನ್ಸ್, ಬಡಿದಾಟ ಎಲ್ಲಾ ಇದೆ. ಆದ್ರೆ ನನ್ನ ಲೈಫ್‌ ಬಗ್ಗೆ ಯಾರಿಗೆ ಇಂಟ್ರೆಸ್ಟ್‌ ಇದೆ ಹೇಳು? ಹಾಗೆ ನೋಡಿದ್ರೆ ನನ್‌ ಜೊತೆ ಇಷ್ಟೊಂದು ಮಾತಾಡಿದ ನಿಮಗೆ ನಾನು ತ್ಯಾಂಕ್ಸ್‌ ಹೇಳಬೇಕು. ಇಲ್ದಿದ್ರೆ ಜನರ ಕಣ್ಣಿಗೆ ನಾನೊಂದು ಸೆಕ್ಸ್‌ ಟಾಯ್‌ ಮಾತ್ರ. ಯಾರಿಗೂ ನನ್ಜತೆ ಮಾತಾಡೋದು ಬೇಕಿಲ್ಲ. ಎಲ್ರಿಗೂ ಬೇಕಿರೋದು ನನ್ಜತೆ ಸೆಕ್ಸ್‌ ಮಾಡೋದು ಮಾತ್ರ. ಜನರ ಕಣ್ಣಲ್ಲಿ ನಾವು ಲೈಂಗಿಕವಾಗಿ ಹಸಿದ ಜನರು,” ಎಂದು ಆಕೆ ಉಸಿರನ್ನೂ ತೆಗೆದುಕೊಳ್ಳದೆ ಹೇಳಿದರು.

ಸೌಮ್ಯ ತನ್ನ ಕುಟುಂಬದ ವಿವರಗಳನ್ನು ಹೇಳಲು ಹಿಂಜರಿಯುತ್ತಿದ್ದಳು. ಆಕೆ ಶಾಲೆಗೆ ಹೋಗುತ್ತಿರುವಾಗ ಅವಳಿಗೆ ತಾನು ʼಭಿನ್ನʼ ಎನ್ನುವುದು ಗಮನಕ್ಕೆ ಬಂತು, ತನಗೆ ಹುಡುಗಿಯರಿಗಿರುವ ಭಾವನೆಗಳಿವೆ ಎನ್ನುವುದು ಸೌಮ್ಯಾಳ ಗಮನಕ್ಕೆ ಬರತೊಡಗಿತು. ಅವಳು ಅದನ್ನು ತನ್ನ ಅಮ್ಮನ ಗಮನಕ್ಕೆ ತಂದಾಗ ಅವಳಿಗೆ ಸಿಕ್ಕಿದ್ದು ಪೆಟ್ಟು.

ನಂತರ ಆಕೆಯನ್ನು ಒಬ್ಬ ಗುರುವಿನ ಬಳಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ನಿಮ್ಮ ಮಗನ ಮೇಲೆ ದೇವರ ಕೆಟ್ಟ ಕಣ್ಣು ಬಿದ್ದಿದೆ ಆ ದೇವರನ್ನು ತೃಪ್ತಿಪಡಿಸಲು ಕೆಲವು ಆಚರಣೆಗಳನ್ನು ನಡೆಸಬೇಕಿದೆಯೆಂದು ತಿಳಿಸಿದರು. ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಒಂದು ದಿನ ಮನೆಯಿಂದ ಓಡಿ ಹೋದ ಸೌಮ್ಯ, ಬದುಕು ನಡೆಸುವ ಸಲುವಾಗಿ ಚೈನೈ ನಗರದ ಬೀದಿಗಳಲ್ಲಿ ಭಿಕ್ಷೆ ಬೇಡಲಾರಂಭಿಸಿದಳು.ನಗರದ ಬೀದಿಗಳೇ ಆಗ ಅವಳ ಮನೆಯಾಗಿತ್ತು. ಕೊನೆಗೆ ಅಲ್ಲಿನ ಬೀದಿಗಳಲ್ಲಿ ಒಂದಷ್ಟು ಟ್ರಾನ್ಸ್‌ಜೆಂಡರ್ ಸಮುದಾಯದವರ ಪರಿಚಯವಾಗುವುದರೊಂದಿಗೆ ಆಕೆಯ ಪಾಲಿಗೊಂದು ಹೊಸ ಜಗತ್ತು ತೆರದುಕೊಂಡಿತು.

“ಅದು ನನ್ನ ಬದುಕಿಗೆ ದೊರೆತ ತಿರುವಾಗಿತ್ತು. ಈಗ ಅದೆಲ್ಲ ನಡೆದು ಹದಿನೈದು ವರ್ಷಗಳಾಗಿವೆ, ಈಗ ನಾನು ನನ್ನದೇ ಆದ ಬದುಕನ್ನ ಬದುಕ್ತಿದ್ದೀನಿ,” ಎಂದು ಆಕೆ ಘೋಷಿಸುತ್ತಾರೆ. ಕಮರ್ಷಿಯಲ್‌ ಸೆಕ್ಸ್‌ ವರ್ಕ್‌ ಅನ್ನೋದು ಹಲವು ವರ್ಷಗಳಿಂದ ಇವರ ಮೂಲವೃತ್ತಿಯಾಗಿದೆ. “ನಾನು ಮೊದಲಿಗೆ ಕೆಲಸ ಹುಡುಕಿದೆ. ಆದರೆ ಯಾರೂ ಕೆಲಸ ಕೊಡೋದಕ್ಕೆ ರೆಡಿ ಇರ್ಲಿಲ್ಲ. ಮನೆಕೆಲಸ, ಕಸ ಗುಡಿಸೋದು ಹೀಗೆ ಯಾವ ಕೆಲಸ ಸಿಕ್ಕಿದ್ರೂ ಮಾಡ್ತಿದ್ದೆ. ಆದ್ರೆ ಸಿಗ್ಲಿಲ್ಲ. ಜನರು ನನ್ನನ್ನ ಗೇಲಿ ಮಾಡ್ತಿದ್ರು. ಮಂಗಳಮುಖಿಯರಿಗೆ ಯಾರೂ ಕೆಲಸ ಕೊಡೋದಿಲ್ಲ, ಹೀಗಿರೋವಾಗ ನಾವು ಬದುಕೋದಾದ್ರೂ ಹೇಗೆ?” ಎಂದು ಕೇಳುವಾಗ ಆಕೆ ಪೂರ್ತಿಯಾಗಿ ಕುಸಿದುಹೋಗಿದ್ದರು.

‘ಸರ್ಕಾರ ಮತ್ತೆ ಎನ್ ಜಿಒಗಳು ಎಚ್‌ಐವಿ ಬಗ್ಗೆ ಗಮನ ಹರಿಸ್ತಿರೋದ್ರಿಂದ ನೀವು ಇಲ್ಲಿಗೆ ಎಚ್‌ಐವಿ ಸ್ಟಡಿಗೆ ಬಂದಿದ್ದೀರಿ. ಆದರೆ ಎಚ್ಐವಿ ಮತ್ತು ಟಿಬಿ ನಮಗೆ ಹೊಸದೇನಲ್ಲ. ಅವು ನಮ್ಮ ಬದುಕಿನ ಭಾಗ ಆಗಿವೆ. ಈ ಕಾಯಿಲೆಗಳ ಜೊತೆ ಬದುಕೋದು ಅನಿವಾರ್ಯ ಅನ್ನೋ ಸತ್ಯವನ್ನು ನಾವು ಅಕ್ಸೆಪ್ಟ್‌ ಮಾಡ್ಕೊಂಡಿದ್ದೀವಿ.”

ಟ್ರಾನ್ಸ್‌ಜೆಂಡರ್‌ ಸಮುದಾಯದ ವ್ಯಕ್ತಿಗಳಲ್ಲಿ ಕ್ಷಯರೋಗದ ಸಂಭವನೀಯತೆಗಳ ಬಗ್ಗೆ ಹೆಚ್ಚು ಮಾಹಿತಿ ತಿಳಿದಿಲ್ಲ. ಅದರ ಕುರಿತು ಸಂಶೋಧನೆ ನಡೆಯಬೇಕಿದೆ. ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ (RNTCP) ಮೂರು ವರ್ಗಗಳಲ್ಲಿ ಲಿಂಗಗಳನ್ನು ಗುರುತಿಸುತ್ತದೆ: ಮಹಿಳೆಯರು, ಪುರುಷರು, ಮತ್ತು ಟ್ರಾನ್ಸ್‌ಜೆಂಡರ್ಸ್.‌ 2018 ರಲ್ಲಿ, ಒಟ್ಟು 1,676 ತೃತೀಯ ಲಿಂಗಿಗಳು ಕ್ಷಯರೋಗದಿಂದ ಬಳಲುತ್ತಿದ್ದಾರೆಂದು (RNTCP) ವರದಿಯಲ್ಲಿ ಹೇಳಲಾಗಿದೆ.

ಕೆಲವು ವರ್ಷಗಳ ಹಿಂದೆ, ಸೌಮ್ಯಾ ಎಚ್ಐವಿಯಿಂದ ಬಳಲುತ್ತಿದ್ದರು. ಆದರೆ ಅವರು ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆಯಲಿಲ್ಲ, ಮತ್ತು ನಿಲ್ಲದ ಕೆಮ್ಮು ಮತ್ತು ಜ್ವರ ಕಾಡಲು ಆರಂಭಿಸಿದ ನಂತರ, ಆಕೆಯನ್ನು ಪರೀಕ್ಷಿಸಿದಾಗ ಶ್ವಾಸಕೋಶದ ಟಿಬಿಯಿಂದ ಬಳಲುತ್ತಿರುವುದು ತಿಳಿದುಬಂತು ಎಂದು ಅವರು ಹೇಳುತ್ತಾರೆ. “ನನಗೆ ಬದುಕುವುದು ಕಷ್ಟವಾಗುತ್ತಿದೆ. ಈ ಕಾಯಿಲೆಗಳಿಂದಾಗಿ ಈಗ ನನಗೆ ಸೆಕ್ಸ್‌ವರ್ಕ್ ಇಲ್ಲ. ಒಂದಷ್ಟು ಹಣ ಉಳಿಸಿದ್ದೇನೆ ಆದರೆ ನನ್ನ ಚಿಕಿತ್ಸೆಗಾಗಿ ಎಲ್ಲವನ್ನೂ ಖರ್ಚು ಮಾಡಲು ನನಗೆ ಇಷ್ಟವಿಲ್ಲ. ಉಚಿತ ಚಿಕಿತ್ಸೆ ಇದೆ ಎಂದು ಸರ್ಕಾರ ಹೇಳುತ್ತದೆ, ಆದರೆ ಅವೆಲ್ಲವೂ ಎಲ್ಲ ರೂಪದಲ್ಲೂ ಬಹಳ ಹಿಂದುಳಿದಿವೆ (ಅಸಂಬದ್ಧ). ನಮಗೆ ಸಕಾಲದಲ್ಲಿ ಚಿಕಿತ್ಸೆ ಮತ್ತು ಔಷಧಿಗಳು ಸಿಗುವುದಿಲ್ಲ” ಎಂದು ಅವರು ದೂರುತ್ತಾರೆ.

ಸೌಮ್ಯ ಹೇಳುವಂತೆ ದೇವರಾದ ಆಕೆಯ ಪತಿ ಅರವಣ ಅವರಿಗೆ ಎಚ್‌ಐವಿ ಕಾಯಿಲೆ ನೀಡಿದ್ದಾನೆ. ಎಚ್‌ಐವಿ ತಗುಲಿದ ನಂತರ ತಕ್ಷಣವೇ ಟಿಬಿ ಕಾಯಿಲೆಗೆ ತುತ್ತಾಗಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. “ಡಾಕ್ಟರ್‌ ಒಬ್ರು ನಂಗೆ ಹೇಳಿದ್ರು. ಎಚ್‌ಐವಿ ಇದೆ ಅಂದ್ರೆ ನಿಂಹೆ ಟಿಬಿನೂ ಬರುತ್ತೆ. ಅವೆರಡೂ ಒಡಹುಟ್ಟಿದವರಿದ್ದಂತೆ. ಅವು ಒಂದನ್ನು ಬಿಟ್ಟು ಇನ್ನೊಂದು ಇರುವುದಿಲ್ಲ,” ಎನ್ನುತ್ತಾರೆ ಸೌಮ್ಯ.

ಭಾವೋದ್ವೇಗದಿಂದ ಹೊರಬಂದ ಅವರು ಇದ್ದಕ್ಕಿದ್ದಂತೆ ಕಣ್ಣೀರು ಸುರಿಸತೊಡಗಿದರು. “ಯಾಕೆ ಎಂದು ನನಗೆ ಗೊತ್ತಿಲ್ಲ, ಆದರೆ ಇಂದು ನಾನು ನನ್ನ ತಂಗಿ ಮತ್ತು ನನ್ನ ಹೆತ್ತವರನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರು ಹೇಗಿದ್ದಾರೆಂದು ನನಗೆ ತಿಳಿದಿಲ್ಲ…,” ಮಾತನಾಡಲು ಸಾಧ್ಯವಾಗದೆ, ಆಕೆ ಒಂದರೆ ಕ್ಷಣ ಮಾತು ನಿಲ್ಲಿಸಿದರು. “… ಆದರೆ ನನ್ನ ಸ್ವಂತ ಬದುಕನ್ನು ನನಗೆ ಬೇಕಿರುವಂತೆ ನಡೆಸುವ ಎಲ್ಲಾ ಹಕ್ಕು ನನಗಿದೆ ಎಂದು ನಾನು ಭಾವಿಸುತ್ತೇನೆ, ಎಂದು ಅವಳು ಮಾತು” ಪುನರಾರಂಭಿಸಿದರು. “ಒಬ್ಬ ಹುಡುಗಿಯ ಆತ್ಮವು ಹುಡುಗನ ದೇಹದಲ್ಲಿ ಸಿಕ್ಕಿಹಾಕಿಕೊಂಡಂತೆ ನನಗೆ ಅನಿಸಿತು ಮತ್ತು ನನ್ನ ಪೋಷಕರು ಮತ್ತು ಸಮಾಜವು ನನ್ನನ್ನು ಈ ರೂಪದಲ್ಲಿ ಸ್ವೀಕರಿಸಲು ಸಿದ್ಧವಿರಲಿಲ್ಲ. ಒಬ್ಬರ ಬದುಕನ್ನು ನಿಯಂತ್ರಿಸಲು ಯಾರನ್ನೂ, ಹೆತ್ತವರನ್ನು ಸಹ ಅನುಮತಿಸಬಾರದು ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿಯೇ ನಾನು ನನ್ನ ಮನೆಯನ್ನು ತೊರೆದೆ. ಸ್ವಾತಂತ್ರ್ಯಕ್ಕೆ ಅದರದೇ ಆದ ಬೆಲೆಯಿರುತ್ತದೆ. ನಾನು ಭಾರಿ ಬೆಲೆಯನ್ನೇ ತೆತ್ತಿದ್ದೇನೆ’. ಸೌಮ್ಯ ಅವರು ಸಾವು ಸಮೀಪಿಸುತ್ತಿರುವುದನ್ನು ಗ್ರಹಿಸಿರಬಹುದು ಮತ್ತು ಟಿಬಿ ತನ್ನ ಪ್ರಯಾಣವನ್ನು ಬದುಕಿನ ಈ ಹಂತ ವೇಗಗೊಳಿಸಿ ಸಾವಿನತ್ತ ಕರೆದೊಯ್ಯತೊಡಗಿದೆ ಎಂದು ಹೇಳುತ್ತಾರೆ.

(ಈ ಲೇಖನ ಮೂಲತಃ Scroll.in ವೆಬ್‌ ಮ್ಯಾಗಝೀನ್‌ನಲ್ಲಿ ಪ್ರಕಟವಾಗಿತ್ತು. ಇದು ಅದರ ಕನ್ನಡ ಅವತರಣಿಕೆ)

You cannot copy content of this page

Exit mobile version