Sunday, June 23, 2024

ಸತ್ಯ | ನ್ಯಾಯ |ಧರ್ಮ

ಎಂಟು  ವರ್ಷಗಳ ಹಿಂದೆ ಆ ಒಂದು ಕ್ಷಣ-ಮಿಶೆಲ್ ಯೋಹ್

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸದ್ಭಾವನಾ ರಾಯಭಾರಿ ಆಗಿರುವ ಮಿಶೆಲ್ ಯೋಹ್ ಈ ವರ್ಷದ ಅತ್ಯುತ್ತಮ ನಟಿ ಆಸ್ಕರ್ ಪ್ರಶಸ್ತಿ ವಿಜೇತರಾಗಿದ್ದಾರೆ. ಈ ಪ್ರಶಸ್ತಿ ಪಡೆದ ಮೊದಲ ಏಷ್ಯನ್ – ಮಲೇಷಿಯಾ – ನಟಿ ಎಂಬ ಹೆಗ್ಗಳಿಕೆ ಅವರದು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗಾಗಿ ಅವರು ಬರೆದ ಲೇಖನವನ್ನು ರಂಜಿತಾ ಎಚ್‌ ಅನುವಾದ ಮಾಡಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ, ಪ್ರಪಂಚದಾದ್ಯಂತದ ಅನೇಕ ಜನರು ನನ್ನ ವೃತ್ತಿ ಜೀವನದ ಹಲವು ಪ್ರಥಮಗಳನ್ನು  ಆಚರಿಸಲು,  ನನ್ನ ಮೊದಲ ಗೋಲ್ಡನ್ ಗ್ಲೋಬ್, ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಮತ್ತು ಇಂಡಿಪೆಂಡೆಂಟ್  ಸ್ಪಿರಿಟ್ ಪ್ರಶಸ್ತಿಯಿಂದ ನನ್ನ ಮೊದಲ ಆಸ್ಕರ್  ಗಳಿಸುವವರೆಗೆ ನನ್ನೊಂದಿಗೆ ಜೊತೆಯಾದರು. ನನ್ನ ವೃತ್ತಿಪರ ಜೀವನದ ಈ ಮರೆಯಲಾಗದ ಕ್ಷಣಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಆ ಜಾಗತಿಕ ಗಮನವನ್ನು ನನಗೆ ತುಂಬಾ ವೈಯಕ್ತಿಕವಾದ ಮತ್ತು ಪ್ರಪಂಚದ ಗಮನದ ಅಗತ್ಯ ವಿರುವ  ವಿಷಯದೆಡೆಗೆ ಸೆಳೆಯಲು ನಾನು ಬಯಸುತ್ತೇನೆ.

ಎಂಟು ವರ್ಷಗಳ ಹಿಂದೆ…

ಎಂಟು ವರ್ಷಗಳ ಹಿಂದೆ ಆ ಒಂದು ಕ್ಷಣ ಪ್ರಪಂಚದ ಬಗ್ಗೆ ನನ್ನ ದೃಷ್ಟಿಕೋನವನ್ನು ಅಲುಗಾಡಿಸಿತು, ಅದು ನನ್ನ ಜೀವನವನ್ನು  ಬದಲಾಯಿಸಿತು. 

 ಏಪ್ರಿಲ್ 25, 2015ರಂದು   ನಾನು ನನ್ನ ಜತೆಗಾರ  ಜೀನ್ ಟಾಡ್ ಅವರೊಂದಿಗೆ ನೇಪಾಳದಲ್ಲಿ   ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದೆ. ಇದ್ದಕ್ಕಿದ್ದಂತೆ, ಭೂಮಿಯು ಉಗ್ರವಾಗಿ  ನಡುಗಲು ಪ್ರಾರಂಭಿಸಿತು. ನಾನು ತಂಗಿದ್ದ ಆ  ಕಟ್ಟಡದ ಬಾಗಿಲುಗಳ ಹೊರಗೆ, ಮಾರಣಾಂತಿಕ ಭೂಕಂಪವು ದೇಶವನ್ನು ಧ್ವಂಸಗೊಳಿಸಿತು. ನನ್ನ ಪಾದದಡಿಯ  ನೆಲವು ತುಂಬಾ ಜೋರಾಗಿ ಅಲುಗಾಡಿದ ಆ ದಿನ ನಾನು ಅನುಭವಿಸಿದ ಭಯ ಮತ್ತು ಗಾಬರಿಯನ್ನು  ನಾನು ಎಂದಿಗೂ ಅನುಭವಿಸಿಲ್ಲ. ನನ್ನ ಕಾಲಿನ ಮೇಲೆ ನಿಲ್ಲಲು ನನಗೆ ಸಾಧ್ಯವಾಗಲಿಲ್ಲ. ತಪ್ಪಿಸಿಕೊಳ್ಳಲು ಬಾಗಿಲಿಗೆ ಹೋಗಲು ನಾನು ತೆವಳ ಬೇಕಾಯಿತು. ನಾವು ಹೊರಬಂದ ಆನಂತರ ಯಾವ ಕಟ್ಟಡಗಳು ಹಿಂತಿರುಗಲು  ಸುರಕ್ಷಿತವಾಗಿವೆ ಎಂಬ ಖಚಿತ ಮಾಹಿತಿಯಿಲ್ಲದೆ ಗಂಟೆಗಳ ಕಾಲ ಬಯಲಲ್ಲಿ  ಉಳಿಯ ಬೇಕಾಯಿತು.

ಆ ದಿನ ಯಾವುದೇ ಹಾನಿಯಾಗದಂತೆ ಪಾರಾದ  ನಾನು ಅದೃಷ್ಟಶಾಲಿಯಾಗಿದ್ದೆ. ಆದರೆ ಆ ಘಟನೆ ಮಾತ್ರ  ಭಯಾನಕ  ಅನುಭವ. ಅದರ ಪರಿಣಾಮಗಳು ಈಗಲೂ ನನ್ನಲ್ಲಿ ಉಳಿದು ಕೊಂಡಿವೆ.

ಭೂಕಂಪದ ಸಮಯದಲ್ಲಿ ನಮ್ಮ ಹೋಟೆಲ್  ವಾಸಿಸಲಾಗದಷ್ಟು ಹಾನಿಗೊಳಗಾಯಿತು. ಆದ್ದರಿಂದ ನಾವು ನೇರವಾಗಿ ವಿಮಾನ ನಿಲ್ದಾಣಕ್ಕೆ ತಲುಪಿ, ಅಲ್ಲಿ  ಎರಡು ರಾತ್ರಿಗಳನ್ನು ಕಳೆದ ಬಳಿಕ ವಿಮಾನದ ಮೂಲಕ ಸ್ಥಳಾಂತರಗೊಂಡೆವು. ನಾವು ಮತ್ತೆ ರಸ್ತೆಗಿಳಿದಾಗ ನನ್ನ ಸುತ್ತಲೂ ಇದ್ದ ಅವಶೇಷಗಳು ಮತ್ತು ಅದ ಹಾನಿಯನ್ನು ನಾನು ನೋಡಿದೆ. ಇಡೀ ಜೀವನವು ಹಠಾತ್ತನೆ ಕುಸಿದು ಹೋದ ಸಾವಿರಾರು ಕುಟುಂಬಗಳ ನಡುವೆ ʼನನಗೆ ಹೋಗಿ ನಿದ್ರಿಸಲು  ಒಂದು ಮನೆ ಇರುವುದು ಎಷ್ಟು ಅನ್ಯಾಯ’ ಎಂಬ ಆಲೋಚನೆಯನ್ನು ನಾನು ತೊಡೆಯಲು  ಸಾಧ್ಯವಾಗಲಿಲ್ಲ.

ಅಷ್ಟು ದೊಡ್ಡ ಪ್ರಮಾಣದ ವಿಪತ್ತುಗಳು ಈಗಾಗಲೇ ಕನಿಷ್ಠ ಸವಲತ್ತುಗಳಲ್ಲಿ ಬದುಕು  ನಡೆಸುತ್ತಿರುವ ಜನರ  ಜೀವನಕ್ಕೆ ಬಹುಶ: ಎಂದೂ ಸರಿಪಡಿಸಲಾಗದಂಥ  ಹಾನಿಯನ್ನುಂಟುಮಾಡುತ್ತವೆ. ಭೂಕಂಪದ ಮೂರು ವಾರಗಳ ಆನಂತರ ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ನೇಪಾಳಕ್ಕೆ ಹಿಂದಿರುಗಿದಾಗ ಮತ್ತು ಒಂದು ವರ್ಷದ ಆನಂತರ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸದ್ಭಾವನಾ ರಾಯಭಾರಿಯಾಗಿ (Goodwill Ambassador) ಮತ್ತೆ ನೇಪಾಳಕ್ಕೆ ಹೋದಾಗ ನಾನು ಇದನ್ನು ಗಮನಿಸಿದೆ .

ಟರ್ಕಿ ಮತ್ತು ಸಿರಿಯಾ ಭೂಕಂಪ ಹೀಗೆ ಯೋಚನೆಗೆ ಹಚ್ಚಿತು…

ಕಳೆದ ತಿಂಗಳು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಕುರಿತ ವರದಿಗಳನ್ನು ವೀಕ್ಷಿಸಿದಾಗ ನಾನು ನೇಪಾಳದ ಬಗ್ಗೆ ಮತ್ತೊಮ್ಮೆ ಯೋಚಿಸಿದೆ. ಭೂಕಂಪ ಸಂಭವಿಸುವ ಮುಂಚೆಯೇ, ಸಿರಿಯಾದಲ್ಲಿ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಭೀಕರವಾಗಿದ್ದವು. ಅಲ್ಲಿನ  ಸರಿಸುಮಾರು ಶೇಕಡಾ 90  ಜನಸಂಖ್ಯೆಯು ಬಡತನದಲ್ಲಿ ವಾಸಿಸುತ್ತಿದೆ. ಅನೇಕರು ಈಗ ನಿರಾಶ್ರಿತರಾಗಿದ್ದಾರೆ ಮತ್ತು ಅವರ ಜೀವನವನ್ನು ಪುನರ್ನಿರ್ಮಿಸಲು ಅಥವಾ ಅವರ ಕುಟುಂಬಗಳನ್ನು ಸುರಕ್ಷಿತವಾಗಿರಿಸಲು ಅಗತ್ಯವಿರುವ ಸಂಪನ್ಮೂಲಗಳ ಕೊರತೆಯಿದೆ.

ವಿಪತ್ತುಗಳು  ಕೇವಲ ದುರಂತದ ಕ್ಷಣಗಳಲ್ಲ…

ಅವು ಆಳದಲ್ಲಿ  ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ಬಹಿರಂಗ ಪಡಿಸುತ್ತವೆ. ಬಡತನದಲ್ಲಿ ಬದುಕುತ್ತಿರುವವರು, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರು ಇಲ್ಲಿ ಅತೀವ ಭಾರ ಹೊರುತ್ತಾರೆ.  ದುರಂತದ ಬಳಿಕದ ಕ್ಷಣಗಳಲ್ಲಿ , ನೈರ್ಮಲ್ಯ, ಆರೋಗ್ಯ ಸೌಲಭ್ಯಗಳು ಮತ್ತು ಸುರಕ್ಷತೆಯ ಕೊರತೆಯು ಮಹಿಳೆಯರ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತದೆ.  ಸದ್ಭಾವನಾ ರಾಯಭಾರಿಯಾಗಿದ್ದ ಸಮಯದಲ್ಲಿ, ಮಹಿಳೆಯರು ಮತ್ತು ಹುಡುಗಿಯರು ಸಾಮಾನ್ಯವಾಗಿ ಶಾಲೆಗೆ ಮರಳುವವರಲ್ಲಿ  ಕೊನೆಯವರು.  ಮತ್ತು ಶುದ್ಧ ನೀರು, ಲಸಿಕೆಗಳು, ಗುರುತಿನ ಚೀಟಿಗಳು, ಕೌನ್ಸೆಲಿಂಗ್‌ನಂತಹ ಮೂಲಭೂತ ಸೇವೆಗಳನ್ನು ಪಡೆಯುವಲ್ಲಿಯೂ  ಕೊನೆಯವರಾಗಿರುತ್ತಾರೆ  ಎಂಬುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಹಾಗೂ  ಅವರು ಸಾಮಾನ್ಯವಾಗಿ ಉದ್ಯೋಗಗಳು ಮತ್ತು ಸಾಲಗಳನ್ನು ಪಡೆಯುವವವರಲ್ಲಿ  ಕೊನೆಯವರು.

ಸಿರಿಯಾದಲ್ಲಿ ಮುಂಬರುವ ತಿಂಗಳುಗಳಲ್ಲಿ ನೈರ್ಮಲ್ಯ ವ್ಯವಸ್ಥೆಗಳನ್ನು ಹೊಂದದೆಯೇ  ಸುಮಾರು 40,000 ಮಹಿಳೆಯರು  ತಾಯಂದಿರಾಗಲಿದ್ದಾರೆ  ಎಂದು UN ನ ಅಂಕಿ ಅಂಶಗಳು ಹೇಳುತ್ತಿವೆ. ಮಹಿಳೆಯರು, ಕಟ್ಟಡಗಳು ಅಸುರಕ್ಷಿತವೆನಿಸಿದಾಗ ಅಥವಾ  ಕುಸಿದಾಗ   ಸಾಕಷ್ಟು ಗೌಪ್ಯತೆ ಅಥವಾ ರಕ್ಷಣೆಯಿಲ್ಲದೆ  ಗುಂಪುಗಳ  ಆಶ್ರಯದಲ್ಲಿ ತೆರೆದ ಸ್ಥಳದಲ್ಲಿ ಮಲಗಬೇಕಾದಾಗ, ಲೈಂಗಿಕ ದೌರ್ಜನ್ಯ ಮತ್ತು ಆಕ್ರಮಣಗಳಂತಹ   ಅಪಾಯಕ್ಕೀಡಾಗುತ್ತಾರೆ.  ದುರಂತದ ನಂತರದ ಸಮಯದಲ್ಲಿ ಈ ಪ್ರಕರಣಗಳ ಸಂಖ್ಯೆ  ಗಗನಕ್ಕೇರುತ್ತದೆ.

ವಿಪತ್ತಿನಿಂದ ಚೇತರಿಸಿಕೊಳ್ಳಲು

ವಿಪತ್ತಿನಿಂದ ಚೇತರಿಸಿಕೊಳ್ಳಲು ಮತ್ತು ಮುಂದಿನದಕ್ಕೆ ಸಿದ್ಧರಾಗಿರಲು, ಮುಖ್ಯವಾಗಿ  ಮಹಿಳೆಯರು ಮತ್ತು ಹುಡುಗಿಯರ ನಿರ್ದಿಷ್ಟ ಅಗತ್ಯಗಳನ್ನು ಆಧರಿಸಿ ಸಹಾಯ, ಸ್ಪಂದನೆಯ ಕಾರ್ಯಕ್ರಮಗಳು  ತಯಾರಾಗಬೇಕು. ಮಹಿಳೆಯರು ತಮ್ಮ ಸಮುದಾಯಗಳ ಆಧಾರವಾಗಿರುತ್ತಾರೆ  ಎಂದು ನಮಗೆ ತಿಳಿದಿದೆ. ಅವರ ಧ್ವನಿಗಳು, ನಾಯಕತ್ವ ಮತ್ತು ಪೂರ್ಣ ಭಾಗವಹಿಸುವಿಕೆಯು ಎಲ್ಲರನ್ನೂ ಒಳಗೊಳ್ಳುವ ಯಶಸ್ವಿ ಮತ್ತು ಸುಸ್ಥಿರ ಚೇತರಿಕೆಗೆ ಪ್ರಮುಖವಾಗಿದೆ. ನೆರೆಹೊರೆಗಳನ್ನು ಮರು ನಿರ್ಮಾಣ ಮಾಡುವಾಗ ಮತ್ತು ಶಾಲೆಗಳು, ಮಾರುಕಟ್ಟೆ ಸ್ಥಳಗಳನ್ನು ನಿರ್ಮಿಸುವಾಗ ಮಹಿಳೆಯರ ಅಗತ್ಯಗಳು, ಆದ್ಯತೆಗಳು ಮತ್ತು ಸುರಕ್ಷತೆಯನ್ನು ಮೊದಲು ಪರಿಗಣಿಸಬೇಕಿದೆ.  ಮಹಿಳೆಯರಿಗೆ ಮಾಹಿತಿ, ಉದ್ಯೋಗದ ಅವಕಾಶಗಳು ಮತ್ತು ಕೌಶಲ್ಯ ತರಬೇತಿಯ ಜೊತೆಗೆ ಆರ್ಥಿಕ ಸ್ಥಿರತೆಯನ್ನು ಮರಳಿ ಪಡೆಯಲು ನಿರ್ಣಾಯಕವಾಗಿರುವ ಸಾಲಗಳು ಮತ್ತು ವಿಮಾ ಕಾರ್ಯವಿಧಾನಗಳಿಗೆ  ಸಮಾನ ಪ್ರವೇಶವನ್ನು ಖಾತರಿ ಪಡಿಸಬೇಕಿದೆ. 

 ಸಮುದಾಯ, ರಾಷ್ಟ್ರೀಯ ಮತ್ತು ಸಾಂಸ್ಥಿಕ ಹಂತಗಳಲ್ಲಿ ಅಧಿಕಾರಯುತ ಹಾಗೂ ನಿರ್ಧಾರ ತೆಗೆದುಕೊಳ್ಳುವಂಥ  ಸ್ಥಾನಗಳಲ್ಲಿ ಹೆಚ್ಚಿನ ಮಹಿಳೆಯರಿದ್ದಲ್ಲಿ , ಎಲ್ಲಾ ಹಂತಗಳಲ್ಲಿ ಲಿಂಗ ಸಮಾನತೆಯನ್ನು ರಕ್ಷಿಸುವಂಥ  ಭಾಗೀದಾರಿಕೆಯ ನೀತಿಗಳು, ಕಾನೂನುಗಳು ಮತ್ತು ಅಭ್ಯಾಸಗಳಿಗೆ ಕಾರಣವಾಗುತ್ತದೆ ಎಂದು ನಮಗೆ ತಿಳಿದಿದೆ. ಇಂಥ ಸ್ಥಾನಗಳಲ್ಲಿ ಅವರ ಪ್ರತಿಭೆಯ ಪೂರ್ಣ ಉಪಯೋಗ ಪಡೆಯಲು ನಾವು ಮೊದಲು  ಮನೆಯಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ, ಆನ್‌ಲೈನ್‌ನಲ್ಲಿ ಅಥವಾ ಎಲ್ಲೆಡೆ  ಲಿಂಗ ಆಧಾರಿತ ಹಿಂಸೆಯೆಡೆಗೆ  ಶೂನ್ಯ ಸಹಿಷ್ಣುತೆಗಾಗಿ (zero tolerance ) ಶ್ರಮಿಸಬೇಕು. ಅವರ ಧ್ವನಿಯು ಸರ್ಕಾರ ಮತ್ತು ಸಮಾಜದ ಉನ್ನತ ಮಟ್ಟದಲ್ಲಿ ಪ್ರತಿನಿಧಿಸುವುದನ್ನು ಖಚಿತ ಪಡಿಸಿಕೊಳ್ಳುವುದಕ್ಕಾಗಿ ಮಹಿಳಾ ಶಿಕ್ಷಣದಲ್ಲಿ ಹೂಡಿಕೆ ಮಾಡುವುದರ ಅಗತ್ಯದ ಕಡೆ ಇದು ಬೊಟ್ಟು ಮಾಡುತ್ತಿದೆ. 

ಮರುಕಳಿಸುವ ಸಾಂಕ್ರಾಮಿಕಗಳು, ಯುದ್ಧ ಹಾಗೂ ವಿಪತ್ತುಗಳಿಂದ ಪೀಡಿತ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ ಮತ್ತು ಹವಾಮಾನ ಬದಲಾವಣೆಯೊಂದಿಗೆ ಹೋರಾಡುತ್ತಿದ್ದೇವೆ. ಇದು ದುಸ್ತರವೆಂದು ಎನಿಸಬಹುದು. ಆದರೆ, ನಂಬಲಾಗದಷ್ಟು ವೇಗದ  ತಾಂತ್ರಿಕ ಪ್ರಗತಿಯ ಸಮಯದಲ್ಲಿ ನಾವು ವಾಸಿಸುತ್ತಿದ್ದೇವೆ. ಈ ಬಿಕ್ಕಟ್ಟುಗಳನ್ನು ಎದುರಿಸುವಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ನಮ್ಮ ಅತ್ಯಂತ ಶಕ್ತಿಶಾಲಿ ಸ್ನೇಹಿತರಾಗಿವೆ. ವಿಪತ್ತಿಗೆ  ಪ್ರತಿಕ್ರಿಯೆಯ ಗತಿಯನ್ನು  ತಂತ್ರಜ್ಞಾನವು ಸುಧಾರಿಸುತ್ತಿದೆ. ಸಮುದಾಯಗಳನ್ನು ಬಲಪಡಿಸುತ್ತ, ಆರ್ಥಿಕ ಚೇತರಿಕೆಯನ್ನು ಹೆಚ್ಚಿಸುತ್ತಿದೆ.

ಡಿಜಿಟಲ್ ಪ್ರಪಂಚವು ಅಸಮಾನತೆಯ ಸ್ಥಳವಾಗಿದೆ…

ಆದರೆ  ಡಿಜಿಟಲ್ ಪ್ರಪಂಚವು ಇನ್ನೂ ಅಸಮಾನತೆಯ ಸ್ಥಳವಾಗಿದೆ. ಜಾಗತಿಕವಾಗಿ, 2.7 ಬಿಲಿಯನ್ ಜನರನ್ನು ಡಿಜಿಟಲ್ ಸಂಪರ್ಕದಿಂದ ಹೊರಗಿಡಲಾಗಿದೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು.  ವಿಶ್ವಬ್ಯಾಂಕ್ ಪ್ರಕಾರ ವಿಪತ್ತನ್ನು  ಎದುರಿಸಲು  ಸಮರ್ಪಕ ತಯಾರಿ, ಪ್ರತಿಕ್ರಿಯೆ  ಮತ್ತು ನಿಭಾಯಿಸುವುದು ಇವೇ ಮುಂತಾದ ವಿಷಯಗಳು ಸೇರಿದಂತೆ ಮಹಿಳೆಯರು ತಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಾಹಿತಿ ಮತ್ತು ಸಂಪನ್ಮೂಲಗಳಿಗೆ  ಪ್ರವೇಶ ಪಡೆಯುವಲ್ಲಿ ಅಡೆತಡೆಗಳನ್ನು ಎದುರಿಸುತ್ತಾರೆ. ಈ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು ನಾವು ಡಿಜಿಟಲ್ ಸಾಕ್ಷರತೆ ಮತ್ತು STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ) ಕ್ಷೇತ್ರಗಳನ್ನು ಪ್ರೋತ್ಸಾಹಿಸುವಂಥ  ಮಹಿಳಾ ಶಿಕ್ಷಣದಲ್ಲಿ ಉತ್ತಮ ಹೂಡಿಕೆ ಮಾಡಬೇಕು.

ಈ ವರ್ಷ ನಾವು ವಿಶ್ವಸಂಸ್ಥೆಯು ‘ಸುಸ್ಥಿರ ಅಭಿವೃದ್ಧಿ ಗುರಿಗಳು-2030 (Sustainable Development Goals) ಎಂದು ಕರೆಯುವ ಘಟ್ಟವನ್ನು  ಸಾಧಿಸುವಲ್ಲಿ  ಅರ್ಧದಾರಿಯನ್ನಷ್ಟೇ  ಕ್ರಮಿಸಿದ್ದೇವೆ. ಇದು ಬಡತನ ಅಥವಾ ಅಸಮಾನತೆ ಇಲ್ಲದ ಜಾಗತಿಕ ದೃಷ್ಟಿಕೋನದ ನೀಲನಕ್ಷೆಯಾಗಿದೆ. UNDP ಯೊಂದಿಗಿನ ನನ್ನ ಕೆಲಸದ ಮೂಲಕ ನಾನು ಕಲಿತದ್ದೇನೆಂದರೆ  ಈ ಜಾಗತಿಕ ಗುರಿಗಳನ್ನು ಕೈಗೂಡಿಸಲು ನಾವು ಎಲ್ಲೆಡೆ, ಮತ್ತು ಜೀವನದ ಎಲ್ಲಾ ಅಂಶಗಳಲ್ಲಿ ಅದರಲ್ಲೂ ವಿಶೇಷವಾಗಿ ಬಿಕ್ಕಟ್ಟಿನ ಸಮಯದಲ್ಲಿ ಮತ್ತು ಮುಂದಿನ ದುರಂತದ ಪೂರ್ವ ನಿರೀಕ್ಷಣೆಯ ತಯಾರಿಯ ಪ್ರಕ್ರಿಯೆಯಲ್ಲಿ   ನಿಜವಾದ ಲಿಂಗ ಸಮಾನತೆಯನ್ನು ಸಾಧಿಸಿದರೆ ಮಾತ್ರ ಸಾಧ್ಯ. 

ಮಹಿಳೆಯರೆಡೆಗೆ ವಿಶ್ವದ ಗಮನ ಸೆಳೆಯುವುದು ನನ್ನ ಆದ್ಯತೆ…

ನನ್ನ  60 ನೇ ವಯಸ್ಸಿನಲ್ಲಿ  ನಾನು ನನ್ನ ಮೊದಲ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಆದ್ದರಿಂದ  ದೃಢ, ಅವಿರತ  ಪ್ರಯತ್ನದ ಕುರಿತು ಸ್ವಲ್ಪ  ತಿಳಿದಿದ್ದೇನೆ ಎನ್ನಬಹುದು.  ಹಾಗೂ  ಸಮಾಜವು ಮಹಿಳೆಯರಿಂದ ಏನನ್ನು ನಿರೀಕ್ಷಿಸುತ್ತದೆ ಎಂಬುದರ ಬಗ್ಗೆಯೂ  ನನಗೆ ತಿಳಿದಿದೆ. ನಾನು ಭೇಟಿಯಾದ ವಿಪತ್ತು ನಿರ್ವಹಣೆಯ  ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುವ ವೀರ ವನಿತೆಯರ ಅನುಭವದೊಂದಿಗೆ ನನ್ನ ಅನುಭವವನ್ನು ಹೋಲಿಸಲಾಗುವುದಿಲ್ಲ ಎಂದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ನನ್ನ ವೃತ್ತಿಪರ ಜೀವನದ ಅತೀ  ಸಂತೋಷದ ಈ ಕ್ಷಣದಲ್ಲಿ ನಾನು ಮಾಡಲು ಸಾಧ್ಯವಿರುವ ಒಂದು ಕೆಲಸವೆಂದರೆ ಸಾಮಾನ್ಯವಾಗಿ ತೆರೆಮರೆಯಲ್ಲಿ ಗುರುತಿಸಲ್ಪಡದೆ, ತಮ್ಮ ಸಮುದಾಯಗಳನ್ನು ಪುನರ್ನಿರ್ಮಿಸುವ, ಮಕ್ಕಳನ್ನು ಮತ್ತು ವಯಸ್ಸಾದವರನ್ನು ನೋಡಿಕೊಳ್ಳುವ ಮತ್ತು ಸಮಯಕ್ಕೆ ಸರಿಯಾಗಿ  ಮೇಜಿನ ಮೇಲೆ ಆಹಾರ ತಂದಿರಿಸುವ ಮಹಿಳೆಯರೆಡೆಗೆ ವಿಶ್ವದ ಗಮನ ಸೆಳೆಯುವುದು. ಅವರ ಮೇಲೆ ಹೆಚ್ಚು ಪರಿಣಾಮ ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಚರ್ಚೆ ನಡೆಯುತ್ತಿರುವ ಪ್ರತೀ  ಕೊಠಡಿಯಿಂದ ಅವರು ಕಾಣೆಯಾಗಿರುವುದಿಲ್ಲ  ಎಂದು ಖಚಿತ ಪಡಿಸಿಕೊಳ್ಳೋಣ.

ಮೂಲ   : ಮಿಶೆಲ್ ಯೋಹ್ ‌

ಅನುವಾದ : ರಂಜಿತಾ ಜಿ ಹೆಚ್

Related Articles

ಇತ್ತೀಚಿನ ಸುದ್ದಿಗಳು