Friday, June 14, 2024

ಸತ್ಯ | ನ್ಯಾಯ |ಧರ್ಮ

ಮಾತುಕತೆ ತುಂಡರಿಸಿದ ಈಶ್ವರಪ್ಪ ; ಬರಿಗೈಲಿ ವಾಪಸಾದ ಬಿಜೆಪಿ ಹೈಕಮಾಂಡ್

ಶಿವಮೊಗ್ಗ ಲೋಕಸಭಾ ಕಣಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಈಗ ಶಿವಮೊಗ್ಗ ರಾಜಕೀಯ ಮತ್ತಷ್ಟು ರಂಗೇರಿದೆ. ಈ ನಡುವೆ ಭಾನುವಾರ ಈಶ್ವರಪ್ಪ ಮನವೊಲಿಸಲು ಬಂದಿದ್ದ ಹೈಕಮಾಂಡ್ ಗೆ ಈಗ ಈಶ್ವರಪ್ಪ ಸರಿಯಾದ ತಿರುಗೇಟು ನೀಡಿದ್ದಾರೆ. ಆ ಮೂಲಕ ತನ್ನ ಸ್ಪರ್ಧೆ ಖಚಿತ ಎಂಬ ಸಂದೇಶ ರವಾನಿಸಿದ್ದಾರೆ.

ಭಾನುವಾರ ಬೆಳಿಗ್ಗೆಯೇ ದೆಹಲಿಯಿಂದ ಬಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರವಾಲ್ ಅವರು ಈಶ್ವರಪ್ಪ ನಿವಾಸಕ್ಕೆ ತೆರಳಿ ಸಂಧಾನ ಮಾತುಕತೆಗೆ ಮುಂದಾಗಿದ್ದರು. ಈ ನಡುವೆ ಒಂದು ಗಂಟೆಯ ಕಾಲ ಮಾತುಕತೆ ನಡುವೆ ಈಶ್ವರಪ್ಪ ತನ್ನ ಬೆಂಬಲಿಗರ ಸಭೆಯ ನೆಪ ಹೇಳಿ ಹೊರಟಿದ್ದಾರೆ. ಮಧ್ಯಾಹ್ನದ ವರೆಗೂ ಈಶ್ವರಪ್ಪ ಮನೆಗೆ ಬಾರದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರವಾಲ್ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.

ಈಶ್ವರಪ್ಪ ಮನೆಯಿಂದ ಹೊರ ಬಂದ ನಂತರ ಮಾಧ್ಯಮಗಳ ಬಳಿ ಮಾತನಾಡಿದ ರಾಧಾ ಮೋಹನ್‌ ಅಗರ್ ವಾಲ್ ನಾವು ಆತ್ಮೀಯ ಸ್ನೇಹಿತರು ಇದೊಂದು ವೈಯಕ್ತಿಕ ಭೇಟಿ ಅಷ್ಟೆ ರಾಜಕೀಯದ ವಿಚಾರ ಚರ್ಚಿಸಿಲ್ಲ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಈಶ್ವರಪ್ಪ ಸ್ಪರ್ಧೆ ಬಗ್ಗೆ ಅವರ ಕುಟುಂಬದವರ ಬಳಿ ಮಾತನಾಡಿದ್ದೇನೆ ಎಲ್ಲಾ ಸರಿ ಹೋಗುತ್ತೆ ಎಂಬ ವಿಶ್ವಾಸವಿದೆ. ನಾವು ದೆಹಲಿಯಿಂದ ಬಂದು ಒಂದು ತಿಂಗಳು ಕಳೆದಿದೆ. ಚುನಾವಣೆ ಉದ್ದೇಶಕ್ಕೆ ನಾವು ಬಂದಿರುವುದಾಗಿಯೂ ಅಗರವಾಲ್ ತಿಳಿಸಿದ್ದಾರೆ.

ಆದರೆ ಈ ಸಂದರ್ಭದಲ್ಲಿ ಈಶ್ವರಪ್ಪ ಭೇಟಿಯ ಹಿಂದೆ ರಾಜಕೀಯ ಉದ್ದೇಶವೇ ಇರುವುದು ಸ್ಪಷ್ಟವಾಗಿದೆ. ಅಲ್ಲದೇ ಈಶ್ವರಪ್ಪ ಮನೆಯಲ್ಲಿ ಎರಡು ತಾಸಿಗೂ ಹೆಚ್ಚು ಗಂಟೆಗಳ ಕಾಲ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೂತದ್ದು, ಮಾತುಕತೆಯ ನಡುವೆ ಈಶ್ವರಪ್ಪ ಹೊರನಡೆದದ್ದು, ಈಶ್ವರಪ್ಪ ಬರುವಿಕೆಗಾಗಿ ಕಾದು ಕೂತದ್ದು ಎಲ್ಲವೂ ಸಹ ಲೋಕಸಭಾ ಕಣದಿಂದ ಈಶ್ವರಪ್ಪರ ಮನವೊಲಿಸಿ ಹಿಂತೆಗೆಯಲು ಮಾಡಿದ ಕಸರತ್ತು ಎಂಬುದು ಸ್ಪಷ್ಟ.

ಅಂತೂ ಶಿವಮೊಗ್ಗದಲ್ಲಿ ಇನ್ನೇನು ಗೆದ್ದೇಬಿಡುವೆನೆಂದು ಬೀಗುತ್ತಿದ್ದ ಯಡಿಯೂರಪ್ಪ ಕುಟುಂಬಕ್ಕೆ ಈಗ ಕೆ.ಎಸ್.ಈಶ್ವರಪ್ಪ ಕಬ್ಬಿಣದ ಕಡಲೆಯಂತಾಗಿದ್ದಾರೆ. ಬಿ.ವೈ.ರಾಘವೇಂದ್ರ ನಾಲ್ಕನೇ ಅವಧಿಯ ಸಂಸತ್ತಿನ ಪಯಣಕ್ಕೆ ಈಶ್ವರಪ್ಪ ಸ್ಪಷ್ಟ ಅಡ್ಡಲಾಗಿ ನಿಂತಿದ್ದಾರೆ. ಇಬ್ಬರ ಜಗಳದ ನಡುವೆ ಕಾಂಗ್ರೆಸ್ ಪಕ್ಷದ ಗೀತಾ ಶಿವರಾಜಕುಮಾರ್ ತಣ್ಣಗೆ ತನ್ನ ಪಕ್ಷದ್ದೇ ಮತ ಪಡೆದು ಮೇಲೆ ಬಂದರೂ ಗೆಲುವು ನಿಶ್ಚಿತ ಎಂಬ ವಾತಾವರಣ ಶಿವಮೊಗ್ಗದಲ್ಲಿ ಸೃಷ್ಟಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು