ಅಕ್ರಮ ಸ್ಪೋಟಕ ದಾಸ್ತಾನು ಮತ್ತು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂದಿತರಾದವರನ್ನು ಬಿಡುಗಡೆ ಮಾಡುವಂತೆ ನಡೆದ ಪ್ರತಿಭಟನೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧಿಕಾರಿಗಳಿಗೆ ಅವಾಚ್ಯವಾಗಿ ಬೈದು, ಅಧಿಕಾರಿಗಳ ತಲೆ ಕಡಿಯುವುದಾಗಿ ನಾಲಿಗೆ ಹರಿಬಿಟ್ಟಿದ್ದಾರೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಪಕ್ಷ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರೀಶ್ ಪೂಂಜ ಮೇಲೆ ಬಿಜೆಪಿ ಪಕ್ಷದ ಕ್ರಮಕ್ಕೆ ಆಗ್ರಹಿಸಿದೆ.
ಅಕ್ರಮ ಚಟುವಟಿಕೆ ನಡೆಸಿದವರ ಬಿಡುಗಡೆ ಮಾಡಲು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ “ಬೇ*ರ್ಸಿ ಸರ್ಕಲ್ ಇನಿಸ್ಪೆಕ್ಟರ್, ನಾಯಿಮಗ ತಹಶೀಲ್ದಾರ್ ತಲೆ ಕಡಿಯುತ್ತೇನೆ..” ಎಂಬ ರೀತಿಯ ಪದ ಪ್ರಯೋಗ ನಡೆಸಿ ಬೈದಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ರೋಷ ವ್ಯಕ್ತಪಡಿಸಿ “ಕಾನೂನು ಪಾಲನೆಯ ತಮ್ಮ ಕರ್ತವ್ಯ ಮಾಡುವ ಅಧಿಕಾರಿಗಳಿಗೆ ಬಿಜೆಪಿಯ ಶಾಸಕ ಹರೀಶ್ ಪೂಂಜಾ ಪ್ರಾಯೋಗಿಸಿದ ಅಶ್ಲೀಲ ಬೈಗುಳಗಳು ಹೀಗಿವೆ.
ಸಭ್ಯ ಸಮಾಜ ಕೇಳಿಸಿಕೊಳ್ಳಲು ನಾಚಿಕೆಪಡುವ ಇಂತಹ ಅನಾಗರಿಕ ಪದಗಳು ಶಾಖೆಯಲ್ಲಿ ಹೇಳಿಕೊಟ್ಟಿದ್ದೋ? ಜಗನ್ನಾಥ ಭವನದ ಪಾಠವೋ?” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಸಾರ್ವಜನಿಕ ಸಭ್ಯತೆಯ ಬಗ್ಗೆ ಅರಿಯದ ಬಿಜೆಪಿ ಪಕ್ಷದವರ ನೈಜ ಸಂಸ್ಕೃತಿ, ಪರಂಪರೆ ಇದು. ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಲು ಬಿಡದೆ ದೌರ್ಜನ್ಯ ಎಸಗುವ ಬಿಜೆಪಿ ನಾಯಕರು ಕಾನೂನು ಸುವ್ಯವಸ್ಥೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ನೈತಿಕತೆ ಇಲ್ಲ. ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನಾಗಿ ಆರ್.ಅಶೋಕ್ ಅವರು ತಮ್ಮ ಶಾಸಕನ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಹೇಳಬೇಕು.” ಎಂದು ಆಗ್ರಹಿಸಿದೆ.