ಬೆಂಗಳೂರು: ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಎರಡು-ಮೂರು ವಾರಗಳಲ್ಲಿ ಸಂಪೂರ್ಣ ಚಿತ್ರಣವು ಬಯಲಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನಕ್ಕೆ ಸಂಬಂಧಿಸಿದ ಸತ್ಯಗಳು ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯಿಂದ ಒಂದೊಂದೇ ಹೊರಬರುತ್ತಿವೆ. ಎರಡು ಮೂರು ವಾರಗಳಲ್ಲಿ ಪೂರ್ಣಚಿತ್ರ ಹೊರಬರಲಿದೆ ಎಂದು ಹೇಳಿದರು.
ಚುನಾವಣಾ ಆಯೋಗದ ವಿರುದ್ಧ ಆರೋಪ:
ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಪ್ರಶ್ನಿಸಿದಾಗ ಚುನಾವಣಾ ಆಯೋಗ ಅಫಿಡವಿಟ್ ಕೊಡಿ ಎಂದು ಕೇಳಿತ್ತು. ಈಗ ಏನು ಹೇಳುತ್ತಾರೆ? ಎಂದು ಖರ್ಗೆ ಪ್ರಶ್ನಿಸಿದರು.
“ಚುನಾವಣೆಗಳು ಮುಕ್ತ ಮತ್ತು ಪಾರದರ್ಶಕವಾಗಿ ನಡೆಯಬೇಕು ಎಂಬುದು ನಮ್ಮ ಕಳಕಳಿ. ಆದರೆ, ಮಹದೇವಪುರ, ಆಳಂದ, ಬಿಹಾರ ಇವೆಲ್ಲವನ್ನು ನೋಡುತ್ತಿದ್ದರೆ ಚುನಾವಣಾ ಆಯೋಗವು ಒಂದು ಪಕ್ಷದ ಕಪಿಮುಷ್ಠಿಯಲ್ಲಿ ಸಿಲುಕಿದೆ ಎನ್ನುವುದು ಗೊತ್ತಾಗುತ್ತದೆ,” ಎಂದು ಅವರು ಗಂಭೀರ ಆರೋಪ ಮಾಡಿದರು.
ಇವರೇನು ಹಣ ಕೊಟ್ಟು ಪ್ರಜಾಪ್ರಭುತ್ವವನ್ನ ಖರೀದಿ ಮಾಡುತ್ತಾರಾ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಚಿಲುಮೆ ಪ್ರಕರಣ ಸೇರಿದಂತೆ ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.
