Wednesday, June 19, 2024

ಸತ್ಯ | ನ್ಯಾಯ |ಧರ್ಮ

ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಅಥವಾ ಜೀವಮಾನವಿಡೀ ಜೈಲಿನಲ್ಲಿಡಬೇಕು: ಬಿಲ್ಕಿಸ್ ಬಾನೋ ಪ್ರಕರಣದ ಪ್ರತ್ಯಕ್ಷದರ್ಶಿ

ಅಹಮದಾಬಾದ್, ಜ 12 (ಪಿಟಿಐ) ಘೋರ ಅಪರಾಧಕ್ಕಾಗಿ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ತಮ್ಮ ಗಲ್ಲಿಗೇರಿಸಬೇಕು ಅಥವಾ ಜೀವನದುದ್ದಕ್ಕೂ ಜೈಲಿನಲ್ಲಿಡಬೇಕು ಆಗ ಮಾತ್ರ ನ್ಯಾಯ ಸಿಗುತ್ತದೆ ಎಂದು ಬಿಲ್ಕಿಸ್ ಬಾನೊ ಪ್ರಕರಣದ ಏಕೈಕ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

2002ರಲ್ಲಿ ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಗಲಭೆಯಲ್ಲಿ ಗುಜರಾತ್‌ನ ದಾಹೋದ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನಲ್ಲಿ ಜನಸಮೂಹವು ಅವರ ಸೋದರ ಸಂಬಂಧಿ ಬಿಲ್ಕಿಸ್ ಬಾನೋ ಮತ್ತು ಅಲ್ಪಸಂಖ್ಯಾತ ಸಮುದಾಯದ ಇತರ ಸದಸ್ಯರ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಗೆ ಏಳು ವರ್ಷ ಪ್ರಾಯ.

ಪ್ರಸ್ತುತ ಅವರಿಗೆ 28 ವರ್ಷ ಮತ್ತು ಅವರ ಪತ್ನಿ ಮತ್ತು 5 ವರ್ಷದ ಮಗನೊಂದಿಗೆ ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.

“ನನ್ನ ಕಣ್ಣ ಮುಂದೆಯೇ ನನ್ನ ಪ್ರೀತಿಪಾತ್ರರು ಕಗ್ಗೊಲೆಯಾಗುವುದನ್ನು ನೋಡಿದ್ದೇನೆ. ಈಗಲೂ ಒಮ್ಮೊಮ್ಮೆ ರಾತ್ರಿ ಅದು ಕಣ್ಮುಂದೆ ಬಂದು ಎಚ್ಚರಗೊಂಡು ಕಿರುಚುತ್ತೇನೆ. ಇಷ್ಟು ವರ್ಷಗಳು ಕಳೆದಿದ್ದರೂ ಆ ಘಟನೆ ನಿನ್ನೆ ನಡೆಯಿತೇನೋ ಎನ್ನುವಂತೆ ಕಾಡುತ್ತಿದೆ” ಎಂದು ಅವರು ಹೇಳಿದರು.

ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು 14 ಜನರ ಹತ್ಯೆಗೆ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿರುವ 11 ಅಪರಾಧಿಗಳನ್ನು ಅಕಾಲಿಕವಾಗಿ ಬಿಡುಗಡೆ ಮಾಡುವ ಆಗಸ್ಟ್ 2022ರ ಗುಜರಾತ್ ಸರ್ಕಾರದ ನಿರ್ಧಾರವನ್ನು ಈ ವರ್ಷದ ಜನವರಿ 8ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.

“ಅವರನ್ನು ಬಿಡುಗಡೆಗೊಳಿಸಿದ ಸುದ್ದಿ ಕೇಳಿ ನನಗೆ ಬಹಳ ನೋವಾಗಿತ್ತು. ಈಗ ಮತ್ತೆ ಅವರು ಕಂಬಿಗಳ ಹಿಂದೆ ಹೋಗಲಿದ್ದಾರೆನ್ನುವ ಸುದ್ದಿ ಒಂದಷ್ಟು ಸಮಾಧಾನ ನೀಡಿದೆ. ಆ ದಿನ ಕಗ್ಗೊಲೆಯಾದ ಹದಿನಾಲ್ಕು ಮಂದಿಯಲ್ಲಿ ನನ್ನ ತಾಯಿ ಮತ್ತು ಅಕ್ಕ ಕೂಡ ಇದ್ದರು.” ಎಂದು ಅವರು ನೋವಿನಿಂದ ಹೇಳಿದರು

“ಈ ಎಲ್ಲಾ ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಅಥವಾ ಅವರನ್ನು ಬದುಕಿರುವವರೆಗೂ ಕಂಬಿಯ ಹಿಂದೆ ಇಡಬೇಕು. ಆಗ ಮಾತ್ರ ನ್ಯಾಯ ಸಿಗುತ್ತದೆ. ಆ ಪಾಪಿಗಳನ್ನು ಮತ್ತೆ ಎಂದಿಗೂ ಬಿಡುಗಡೆ ಮಾಡಬಾರದು” ಎಂದು ಅವರು ಪ್ರತಿಪಾದಿಸಿದರು.

ಫೆಬ್ರವರಿ 27, 2002ರಂದು ಗೋಧ್ರಾ ರೈಲು ದಹನ ಘಟನೆಯ ನಂತರ, ರಾಜ್ಯದ ವಿವಿಧ ಭಾಗಗಳಲ್ಲಿ ಗಲಭೆಗಳು ಭುಗಿಲೆದ್ದವು.

ತಮ್ಮನ್ನು ರಕ್ಷಿಸಿಕೊಳ್ಳಲು, 17 ಜನರ ಗುಂಪು, ಅವರಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು, ದಾಹೋದ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನ ರಂಧಿಕ್‌ಪುರ ಗ್ರಾಮವನ್ನು ತೊರೆದು ಕಾಡಿನ ಮೂಲಕ ದೇವಗಢ್ ಬರಿಯಾ ಪಟ್ಟಣದ ಕಡೆಗೆ ಹೊರಟಿದ್ದರು ಎಂದು ಆ ಹುಡುಗನಿಗೆ ಆಶ್ರಯ ನೀಡಿದ ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದರು.

“ಬಿಲ್ಕಿಸ್ ಬಾನೋ ಜೊತೆಗೆ ಈ ಹುಡುಗ (ಪ್ರತ್ಯಕ್ಷದರ್ಶಿ) ಮತ್ತು ಅವನ ತಾಯಿ ಮತ್ತು ಅಕ್ಕ ಕೂಡ ಆ ಗುಂಪಿನಲ್ಲಿದ್ದರು, ಮಾರ್ಚ್ 3ರಂದು ಗುಂಪೊಂದು ದಾಳಿ ಮಾಡಿತು. ಆ 17 ಜನರಲ್ಲಿ, ಜನಸಮೂಹವು ಒಂದು ಮಗು ಸೇರಿದಂತೆ 14 ಜನರನ್ನು ಕೊಂದು ನಂತರ ಸಾಮೂಹಿಕ ಅತ್ಯಾಚಾರ ನಡೆಸಿತು. ಅವರು ಬಿಲ್ಕಿಸ್ ಮತ್ತು ಈ ಹುಡುಗನನ್ನು ಕೊಲ್ಲಲು ಪ್ರಯತ್ನಿಸಿದರು ಆದರೆ ಅವರು ಬದುಕುಳಿದರು. ಜನಸಮೂಹವು ಎಲ್ಲರೂ ಸತ್ತಿದ್ದಾರೆಂದು ಭಾವಿಸಿ ಅಲ್ಲಿಂದ ಹೊರಟುಹೋದ ನಂತರ 4 ವರ್ಷದ ಬಾಲಕ ಕೂಡ ದಾಳಿಯಿಂದ ಬದುಕುಳಿದನು” ಎಂದು ಹೆಸರು ಹೇಳಲಿಚ್ಛಿಸದ ಕಾರ್ಯಕರ್ತ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಘಟನೆಯ ನಂತರ ಬಾಲಕನು ಗೋಧ್ರಾದಲ್ಲಿನ ಪರಿಹಾರ ಶಿಬಿರದಲ್ಲಿ ಸ್ವಲ್ಪ ಸಮಯ ಕಳೆದನು ಮತ್ತು ನಂತರ ಅವನನ್ನು ಕಚ್‌ನ ವಸತಿ ಶಾಲೆಗೆ ಸ್ಥಳಾಂತರಿಸಲಾಯಿತು ಎಂದು ಅವನ ಗಾರ್ಡಿಯನ್ ಮತ್ತು ಅವನನ್ನು ಬೆಳೆಸಿದ ಕಾರ್ಯಕರ್ತ ಹೇಳಿದರು.

“ಅವರು ಒಬ್ಬರೇ ಪ್ರತ್ಯಕ್ಷದರ್ಶಿಯಾಗಿರುವುದರಿಂದ, 2005ರಲ್ಲಿ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದರು. ಅವರ ಸಾಕ್ಷ್ಯವು ನಿರ್ಣಾಯಕವಾಗಿತ್ತು. ಏಕೆಂದರೆ ಅದು ದೂರುದಾರ ಬಿಲ್ಕಿಸ್ ಬಾನೋ ನಿರೂಪಿಸಿದ ಘಟನೆಗಳ ಅನುಕ್ರಮಕ್ಕೆ ಹೊಂದಿಕೆಯಾಯಿತು. ವಿಚಾರಣೆಯ ಸಮಯದಲ್ಲಿ ಅವರು 11 ಆರೋಪಿಗಳ ಪೈಕಿ ನಾಲ್ವರನ್ನು ಗುರುತಿಸಿದ್ದಾರೆ.” ಕಾರ್ಯಕರ್ತ ಹೇಳಿದರು.

bilkis bano,
bilkis bano case verdict,
bilkis bano case explained,
bilkis bano interview,
bilkis bano aropi,
bjp on bilkis bano case,
bilkis bano case update,
2002 gujarat danga bilkis bano

Related Articles

ಇತ್ತೀಚಿನ ಸುದ್ದಿಗಳು