Saturday, June 21, 2025

ಸತ್ಯ | ನ್ಯಾಯ |ಧರ್ಮ

ಬಡತನದ ರಾಜಕೀಯ ಮತ್ತು ರಾಜಕೀಯದ ಬಡತನ

ಬೊಗಸೆಗೆ ದಕ್ಕಿದ್ದು….10

-ನಿಖಿಲ್ ಕೋಲ್ಪೆ

ಪ್ರತೀ ವರ್ಷವೂ ವಿಶ್ವ ಬಡತನ ನಿವಾರಣಾ ದಿನ ಆಚರಿಸಲಾಗುತ್ತದೆ. ಒಂದು ಅರ್ಥಹೀನ ಧಾರ್ಮಿಕ ಆಚರಣೆಯಂತೆ ಆಗಿಬಿಟ್ಟಿರುವ ಇದನ್ನು ಮೂವತ್ತು ವರ್ಷಗಳ ಹಿಂದೆ ಆರಂಭಿಸಲಾಯಿತು. ಅದಕ್ಕಿಂತಲೂ ಹಿಂದೆ- ಅಂದರೆ, ಮೂವತ್ತೈದು ವರ್ಷಗಳ ಹಿಂದೆ ವಿಶ್ವ “ಕಡು ಬಡತನ” ನಿವಾರಣಾ ದಿನ ಆರಂಭಿಸಲಾಗಿತ್ತು. ಐದು ವರ್ಷಗಳಲ್ಲಿ “ಕಡು ಬಡತನ” ನಿವಾರಣೆ ಆಯಿತೆಂದು “ಬರೇ ಬಡತನ” ನಿವಾರಣಾ ದಿನ ಆರಂಭಿಸಲಾಯಿತೆ ಎಂಬ ಪ್ರಶ್ನೆ ಮೂಡುವುದು ಸಹಜ. ಇಲ್ಲ! ಪರಿಸ್ಥಿತಿ ಇನ್ನಷ್ಟು ಕೆಟ್ಟಿತ್ತು!

ಈಗಿನ ಕಹಿ ವಾಸ್ತವ ಎಂದರೆ, 2022ರಲ್ಲಿ ಇನ್ನೂ 26 ಕೋಟಿ ಜನರು ಕಡು ಬಡತನಕ್ಕೆ ಜಾರಿದರು. ಹಾಗಾದರೆ, ಈ ಆಚರಣೆಗಳ ಅರ್ಥವೇನು? ವಿಶ್ವಸಂಸ್ಥೆಯ ನೇತೃತ್ವದಲ್ಲಿ ಹಲವಾರು ದೇಶಗಳಲ್ಲಿ ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದರೂ, ಬಡತನ ಹೆಚ್ಚಾಗುತ್ತಿರುವುದು ಯಾಕೆ? ಯಾಕೆಂದರೆ, ನಾವು ರೋಗಕ್ಕೆ ಔಷಧಿ ನೀಡದೇ, ರೋಗ ಲಕ್ಷಣಗಳಿಗೆ ಮಾತ್ರ ಔಷಧಿ ನೀಡುತ್ತಿದ್ದೇವೆ. ರೋಗ ಉಲ್ಬಣಿಸುತ್ತಲೇ ಇದೆ. ಬಡವರ ಹೆಸರಿನಲ್ಲಿ ಪ್ರಭುತ್ವಗಳು ಅಧಿಕಾರ ನಡೆಸುತ್ತಿವೆ. ಮಾನವ ಕುಲದ ಸಮಾನ ಸಂಪತ್ತನ್ನು ದೋಚುತ್ತಿವೆ. ಬಡತನವು ತೀರಾ ಉಲ್ಬಣಗೊಂಡು, ಅದೊಂದು ಬಹುಜನರ ರಾಜಕೀಯ ಶಕ್ತಿಯಾಗಿ, ತನ್ನ ಅಧಿಕಾರಕ್ಕೆ ಕುತ್ತುಬರದಂತೆ ತಡೆಯಲು ಪ್ರಭುತ್ವವು ಕೆಲವೊಂದು ನೆರವು, ಕೊಡುಗೆಗಳನ್ನು ನೀಡುತ್ತದೆ. ಇವುಗಳನ್ನು ಬಡತನ ನಿರ್ಮೂಲನಾ ಕಾರ್ಯಕ್ರಮ ಎಂದು ಕರೆಯಲಾಗುತ್ತದೆ. ಈ ಕಣ್ಕಟ್ಟಿನ ಮಾಯಾಜಾಲವನ್ನೇ ಬಡತನದ ರಾಜಕೀಯ ಎನ್ನುವುದು.

ಹಾಗಾದರೆ, ರಾಜಕೀಯದ ಬಡತನ ಎಂದರೇನು? ಬಡತನವು ವಾಸ್ತವಿಕವಾಗಿ ಸಂಪತ್ತು ಮತ್ತು ಸಂಪನ್ಮೂಲಗಳ, ಅವಕಾಶಗಳ ಅಸಮಾನ ಹಂಚಿಕೆಯಿಂದ ಉಂಟಾಗುತ್ತದೆ. ಈ ಅಸಮಾನ ಹಂಚಿಕೆಯ ವ್ಯವಸ್ಥೆಯನ್ನು, ಬಡಜನರು ತಮ್ಮ ಶೋಷಕರನ್ನು ತಾವೇ ಆಯ್ಕೆ ಮಾಡಿ ಅವರಿಗೆ ಮಾನ್ಯತೆ ನೀಡುವ ವ್ಯವಸ್ಥೆಯನ್ನು ಮೂಲಭೂತವಾಗಿ ಬದಲಿಸಬೇಕು. ಇದು ಸುಲಭದ ಕೆಲಸವೇನಲ್ಲ. ಇದಕ್ಕೆ ರಾಜಕೀಯ ಪಕ್ಷಗಳ, ನಾಯಕತ್ವದ ಸಂಕಲ್ಪ ಬೇಕು. ಅದಕ್ಕೆ ಸಹ ಮಾನವರ ಕುರಿತು ಪ್ರಾಮಾಣಿಕವಾದ ಪ್ರೀತಿ, ಕಾಳಜಿ, ಉದ್ದೇಶ, ಯೋಜನೆ ಬೇಕು. ನಮ್ಮ ಬಹುತೇಕ ರಾಜಕೀಯ ಪಕ್ಷಗಳಲ್ಲಿ, ನಾಯಕತ್ವದಲ್ಲಿ ಅದು ಇಲ್ಲ. ಅಷ್ಟೇ ಏಕೆ ಬಹುತೇಕ ರಾಜಕೀಯ ಪಕ್ಷಗಳ ಮೂಲ ಸಿದ್ಧಾಂತದಲ್ಲಿಯೇ ಈ ಅಂಶಗಳಿಲ್ಲ. ಇದ್ದರೂ, ಮೇಲುನೋಟಕ್ಕೆ ಮಾತ್ರ ಕಾಣುವ ತಿಪ್ಪೆಸಾರಿಸುವಷ್ಟಕ್ಕೆ ಮಾತ್ರ ಇವೆ. ಸಾಮಾನ್ಯ ಜನರಿಗೆ ಇದನ್ನು ಬದಲಿಸುವ ಶಕ್ತಿ ತಾತ್ವಿಕವಾಗಿ ಇದ್ದರೂ, ವಾಸ್ತವಿಕವಾಗಿ ಇಲ್ಲ. ಈ ಇಲ್ಲದಿರುವಿಕೆಯನ್ನು ಬಡತನ ಎಂದು ಕರೆಯುವುದಾದರೆ, ಈಗ ಕಂಡುಬರುತ್ತಿರುವ- ಮೇಲೆ ಹೇಳಿದ ಇಲ್ಲದಿರುವಿಕೆಯನ್ನೇ ರಾಜಕೀಯದ ಬಡತನ ಎನ್ನಬಹುದು.

ಬಡತನದ ರಾಜಕೀಯ ಮತ್ತು ರಾಜಕೀಯದ ಬಡತನ ಎಂಬುದು ಒಂದು ಅತ್ಯಂತ ಆಳ ಮತ್ತು ಅಗಲವುಳ್ಳ ಸಂಕೀರ್ಣ ವಿಷಯವಾಗಿದ್ದು, ಸಾಮಾಜಿಕ, ಆರ್ಥಿಕ, ಭೌತಿಕ, ದೈಹಿಕ, ಬೌದ್ಧಿಕ, ಭೌಗೋಳಿಕ, ಲಿಂಗತ್ವದ, ರಾಜಕೀಯ ಆಯಾಮಗಳನ್ನು ಹೊಂದಿರುವುದರಿಂದ ಇಲ್ಲಿನ ಮಿತಿಯಲ್ಲಿ ಅವುಗಳನ್ನು ಮೇಲುಮೇಲಕ್ಕೆ ತಿಳಿದುಕೊಳ್ಳುವ ಪ್ರಯತ್ನವನ್ನು ಮಾತ್ರ ಮಾಡಲಾಗಿದೆ.

ಪ್ರತೀ ವರ್ಷ ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್), ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಇತ್ಯಾದಿಯಾಗಿ ಹಲವಾರು ಬಂಡವಾಳಶಾಹಿ ವ್ಯವಸ್ಥೆಗಳು ಬಡತನದ ಅಂಕಿ ಅಂಶಗಳನ್ನು ಪ್ರತೀ ವರ್ಷವೂ ಧಾರ್ಮಿಕ ಆಚರಣೆಯಂತೆ ಬಿಡುಗಡೆ ಮಾಡುತ್ತಾ ಬರುತ್ತಿವೆ. ತಮ್ಮ ಹೂಡಿಕೆ ಮತ್ತು ಲಾಭದ ಅವಕಾಶಗಳ ಲೆಕ್ಕಾಚಾರಕ್ಕಾಗಿ ಮಾಡಲಾಗುವ ಈ ಹೃದಯಹೀನ, ನಿರ್ಜೀವ ಅಂಕಿಅಂಶಗಳಲ್ಲಿ- ಅವುಗಳ ಅನುಕೂಲಕ್ಕೆ ತಕ್ಕಂತೆ ಬಹಳಷ್ಟು ವ್ಯತ್ಯಾಸಗಳು ಇರುತ್ತವೆ. ಅದರಂತೆಯೇ, ಬಡತನ ನಿರ್ಮೂಲನೆಗಾಗಿ ಕೆಲಸ ಮಾಡುವ ಕೆಲವು ಸ್ವತಂತ್ರ ಸೇವಾಸಂಸ್ಥೆಗಳೂ ಇಂತಾ ಅಂಕಿ ಅಂಶಗಳನ್ನು ಕಲೆ ಹಾಕುತ್ತವೆ (ಸ್ವಂತ ಸಂಗ್ರಹಿಸಲಾಗದು). ಇವು ಕೂಡಾ ತಮ್ಮ ಸಂಸ್ಥೆಗಳಿಗೆ ದಾನಿಗಳಿಂದ ಹಣ ಪಡೆಯಲು ಕೂಡಿ ಹಾಕಿದ ಅಂಕಿ ಅಂಶಗಳೇ. ಇವು ಕೂಡಾ ಬಡತನದ ರಾಜಕೀಯದ ಒಂದು ಭಾಗವೇ. ಆದರೂ, ಇಂತಾ ಸಂಸ್ಥೆಗಳ ಅಂಕಿ ಅಂಶಗಳಲ್ಲಿ ಹೆಚ್ಚು ಸತ್ಯವಿರುತ್ತದೆ.

ಆದುದರಿಂದ ಮೊದಲಿಗೆ, ಸ್ವತಂತ್ರ ನೆರವು ಸಂಸ್ಥೆಗಳ ಜಾಗತಿಕ ಜಾಲವಾಗಿರುವ ಆಕ್ಸ್‌ಫ್ಯಾಮ್ (Oxfam) ಬಿಡುಗಡೆಗೊಳಿಸಿದ ಕೆಲವು ಅಂಕಿಅಂಶಗಳು ಮತ್ತು ವಾಸ್ತವಾಂಶಗಳ ಮೇಲೆ ಮೇಲುಮೇಲಕ್ಕೆ ಕಣ್ಣುಹಾಯಿಸೋಣ.

  • ಬಡವರು ಮತ್ತು ಶ್ರೀಮಂತರ ನಡುವಿನ ಕಂದರ ಹಿಂದೆಂದೂ ಕಾಣದ ದರದಲ್ಲಿ ಬೆಳೆಯುತ್ತಿದ್ದು, ವಿಶ್ವದ 660 ಕೋಟಿ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಅಂದರೆ, 330 ಕೋಟಿ ಜನರು ಬಡತನದಲ್ಲಿ ಬದುಕುತ್ತಿದ್ದಾರೆ.
  • ಕೆಲವೇ ಅತಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾದರೆ, ಶ್ರೀಮಂತರು ಮಧ್ಯಮ ವರ್ಗಕ್ಕೆ, ಮಧ್ಯಮ ವರ್ಗದವರು ಬಡತನಕ್ಕೆ, ಬಡವರು ಕಡು ಬಡತನಕ್ಕೆ ಕುಸಿಯುತ್ತಿದ್ದಾರೆ. ಪ್ರತೀ 26 ಗಂಟೆಗಳಲ್ಲಿ ಒಬ್ಬ ಬಿಲಿಯಾಧಿಪತಿ (100 ಕೋಟಿ ಡಾಲರ್ ಮೀರಿದ ಸಂಪತ್ತು) ಹುಟ್ಟಿಕೊಳ್ಳುತ್ತಾರೆ. ಹೀಗಿರುವಾಗ ಕಡು ಬಡವರು ಏನಾಗುತ್ತಾರೆ ಎಂಬುದು ನಮ್ಮ ಊಹೆಗೆ ಬಿಟ್ಟದ್ದು.
  • ಈ ಹೊತ್ತಿನಲ್ಲಿ 86 ಕೋಟಿ ಜನರು ಅಂತರರಾಷ್ಟ್ರೀಯ ಬಡತನ ರೇಖೆ (ದೇಶ ದೇಶಗಳಲ್ಲಿ ಈ ಮಾನದಂಡ ಬದಲಾಗುತ್ತದೆ)ಗಿಂತ ಕೆಳಗೆ ಅಂದರೆ, ದಿನಕ್ಕೆ 1.90 ಡಾಲರ್ (ಸುಮಾರು 145 ರೂ.)ಗಿಂತ ಕಡಿಮೆ ಹಣದಲ್ಲಿ ಬದುಕುತ್ತಾರೆ. ಇದರಲ್ಲಿಯೇ ಆಹಾರ, ವಸತಿ, ವಸ್ತ್ರ, ಶಿಕ್ಷಣ, ಆರೋಗ್ಯ ಸಹಿತ ಎಲ್ಲಾ ಖರ್ಚುಗಳು ಸರಿದೂಗಬೇಕು.
  • ಕೋವಿಡ್ ಅವಧಿಯನ್ನೇ ತೆಗೆದುಕೊಂಡರೆ, ತೈಲ ಕಂಪೆನಿಗಳು, ಔಷಧಿ ಕಂಪೆನಿಗಳು ದಾಖಲೆ ಲಾಭ ಮಾಡಿವೆ. ಆಹಾರ ಬೆಲೆ ಹೆಚ್ಚಿರುವುದರಿಂದ ಕೃಷಿ ಕೈಗಾರಿಕೆಯಲ್ಲಿ ಹೂಡಿಕೆ ಹೆಚ್ಚಾಗಿದೆ. ಈ ಕ್ಷೇತ್ರ ಹೆಚ್ಚು ಲಾಭದಾಯಕವಾಗಿದೆ. ಕಾರಣ ಆಹಾರ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಬೆಳೆಯುವ ರೈತರಿಗೇನೂ ಲಾಭವಾಗಿಲ್ಲ. ಕೃಷಿ ಕಾರ್ಮಿಕರಿಗೂ ಏನೂ ಲಾಭವಾಗಿಲ್ಲ.

(ಇಲ್ಲಿ, ಭಾರತದಲ್ಲಿ ರೈತರು, ಕಾರ್ಮಿಕರು, ಸಣ್ಣ- ಮಧ್ಯಮ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ, ಅದಾನಿ, ಅಂಬಾನಿಯಂತವರ ಸಂಪತ್ತು ಹಲವು ಪಟ್ಟು ಹೆಚ್ಚಿರುವುದನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಈ ಕುರಿತು ಚಿಂತಿಸಬೇಕು.)

ಬಡವರು, ಮಧ್ಯಮ ವರ್ಗದವರ ಪರಿಸ್ಥಿತಿ ಹೀಗಾಗಿದೆ ಎಂದರೆ, ಅತಿ ಶ್ರೀಮಂತರ ಬಗ್ಗೆ ಕೆಲವೇ ಅಂಕಿಅಂಶಗಳನ್ನು ಮುಂದೆ ನೋಡೋಣ:

  • ಕೋವಿಡ್ ಪಿಡುಗಿನ ಹೊತ್ತಿನಲ್ಲಿ ಪ್ರಪಂಚದ ಹತ್ತು ಅತೀ ಶ್ರೀಮಂತರ ಸಂಪತ್ತು ದ್ವಿಗುಣವಾಯಿತು. ಇದೇ ಹೊತ್ತಿನಲ್ಲಿ 2,744 ಬಿಲಿಯಾಧಿಪತಿಗಳ ಸಂಪತ್ತು ಕಳೆದ 14 ವರ್ಷಗಳಲ್ಲಿ ಕಾಣದಷ್ಟು ಏರಿಕೆ ಕಂಡಿತು. ಇದರಲ್ಲಿ ಕಾನೂನುಬಾಹಿರ ಮಾದಕವಸ್ತು, ಶಸ್ತ್ರಾಸ್ತ್ರ ಹಾಗೂ ಇನ್ನಿತರ ಕಾಳದಂಧೆ ಕದೀಮರ ಸಂಪತ್ತು ಸೇರಿಲ್ಲ. ಒಟ್ಟಿನಲ್ಲಿ ಬಡ ಮಧ್ಯಮ ವರ್ಗದ ಜನರಿಗೆ ಶಾಪವಾದ ಕೋವಿಡ್ ಒಂದು ಕೆನೆ ಪದರಕ್ಕೆ ಮಾತ್ರ ವರವಾಗಿ ಪರಿಣಮಿಸಿತು. ಏಕೆ?
  • ಬಡತನದ ಏರಿಕೆಯು ಪ್ರಪಂಚದಾದ್ಯಂತ ಒಂದೇ ರೀತಿ ಇಲ್ಲ. ಉದಾಹರಣೆಗೆ ಆಫ್ರಿಕಾ ದೇಶಗಳೂ ಸೇರಿದಂತೆ ಬಡ ದೇಶಗಳ ಜನರು ದುಡಿತದ 40 ಶೇಕಡಾ ಹಣವನ್ನು ಕೇವಲ ಬದುಕಿರಲು, ಅಂದರೆ ಆಹಾರಕ್ಕಾಗಿ ಬಳಸುತ್ತಾರೆ. ಮುಂದುವರಿದ ದೇಶಗಳಲ್ಲಿ ಇದು 50 ಶೇಕಡಾ ಇದೆ. ಇದರ ಅರ್ಥ ಏನು?
  • ಭಾರತವೂ ಸೇರಿದಂತೆ ಬಹಳಷ್ಟು ಬಡ ದೇಶಗಳು ಪಡೆದ ಸಾಲದ ಮರುಪಾವತಿ ಸಮಸ್ಯೆಗಳಿಗೆ ಒಳಗಾಗಿವೆ. ಹಿಂದೆಂದೂ ಕಾಣದ ಸಾಲದ ಸುಳಿಯಲ್ಲಿ ಸಿಲುಕಿವೆ. (ನೆರೆಯ ಶ್ರೀಲಂಕಾ, ಪಾಕಿಸ್ತಾನ ನೆನಪಿಸಿಕೊಳ್ಳಿ.)

ಬಡತನಕ್ಕೆ ಕಾರಣ ಏನು ಎಂದು ಬಲಪಂಥೀಯರನ್ನು ಕೇಳಿದಲ್ಲಿ ಜನರು ಮೈಮುರಿದು ದುಡಿಯುವುದಿಲ್ಲ, ಸೋಮಾರಿಗಳು ಎಂಬುದರಿಂದ ಹಿಡಿದು, ಕಷ್ಟಪಟ್ಟು ಪ್ರಾಮಾಣಿಕವಾಗಿ ದುಡಿದರೆ ಶ್ರೀಮಂತರಾಗಬಹುದು ಎಂಬ ತನಕ; ಇಂದು ಬಡವರಾಗಿದ್ದವರೂ ನಾಳೆ ಭಾರೀ ಶ್ರೀಮಂತರಾಗಬಹುದು ಎಂಬ ಕೋಟಿಗೊಂದು ಉದಾಹರಣೆಯನ್ನು ತೋರಿಸುವ “ಅಮೇರಿಕನ್ ಡ್ರೀಮ್”ನಿಂದ ಹಿಡಿದು, ಬಡತನ, ಶ್ರೀಮಂತಿಕೆ ಪಡೆದುಕೊಂಡು ಬಂದದ್ದು- ಪೂರ್ವಜನ್ಮದ ಫಲ ಎಂಬ ಕರ್ಮಸಿದ್ಧಾಂತದ ತನಕ ನೂರಾರು ಸಬೂಬುಗಳನ್ನು ನೀಡುತ್ತಾರೆ.

ಇದಕ್ಕಿಂತ ದೊಡ್ಡ ಸುಳ್ಳು ಬೇರೊಂದು ಇರಲಾರದು. ಮೊದಲೇ ಹೇಳಿದಂತೆ, ಸಂಪತ್ತು ಮತ್ತು ಅವಕಾಶಗಳ ಅಸಮಾನ ಹಂಚಿಕೆ ಮತ್ತು ಬಡವರನ್ನು ಇನ್ನಷ್ಟು ಬಡವರಾಗಿಸುವ ಮತ್ತು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರಾಗಿಸುವ ಅನ್ಯಾಯದ ಬಂಡವಾಳಶಾಹಿ ವ್ಯವಸ್ಥೆಯೇ ಬಡತನಕ್ಕೆ ಮೂಲ ಕಾರಣ ಎಂಬುದು ಎಲ್ಲರಿಗೂ ಗೊತ್ತು. ಆದರೂ ಎಲ್ಲರೂ ಸುಳ್ಳನ್ನೇ ನಂಬುತ್ತಾರೆ. ಆರಕ್ಕೇರದ, ಮೂರಕ್ಕಿಳಿಯದ ಮಧ್ಯಮ ವರ್ಗದವರೇ ಈ ವ್ಯವಸ್ಥೆಯ ಬಹುದೊಡ್ಡ ಸಮರ್ಥಕರು. ಸ್ವಾತಂತ್ರ್ಯ ಮತ್ತು ಮುಕ್ತ ಸಮಾಜದ ಹೆಸರಿನಲ್ಲಿ ಈ ಸಮರ್ಥನೆಯನ್ನು ಮಾಡಲಾಗುತ್ತದೆ. ಈ ಸ್ವಾತಂತ್ರ್ಯ ಮತ್ತು ಮುಕ್ತತೆ ಯಾರಿಗೆ?

ಬಡತನಕ್ಕೆ ಉತ್ಪಾದನೆ ಮತ್ತು ಸಂಪನ್ಮೂಲಗಳ ಕೊರತೆ ಕಾರಣ ಎಂಬುದೂ ಇನ್ನೊಂದು ಸುಳ್ಳು. ಅತ್ಯಂತ ಫಲವತ್ತಾದ ಭೂಮಿ ಮತ್ತು ಅಮೂಲ್ಯ ಖನಿಜ ಸಂಪತ್ತು ಇರುವ ದೇಶಗಳೂ ಬಡ ದೇಶಗಳ ಪಟ್ಟಿಯಲ್ಲಿ ಇವೆ. ಆ ಕಾರಣಗಳಿಗಾಗಿಯೇ ಅವು ಆಕ್ರಮಣಗಳಿಗೆ ಗುರಿಯಾಗಿವೆ. ಅಂತರ್ಯುದ್ಧಗಳಲ್ಲಿ ಸಿಕ್ಕಿಕೊಂಡಿವೆ. ತಮ್ಮ ಖನಿಜ ಸಂಪತ್ತನ್ನು ತೆಗೆದು ಉಪಯೋಗಿಸಲು ಬೇಕಾದ ಮೂಲ ಬಂಡವಾಳ ಅವುಗಳ ಬಳಿ ಇಲ್ಲ. ಹೀಗಿರುವಾಗ ಬಂಡವಾಳ ಹೂಡಿ ಈ ಸಂಪತ್ತನ್ನು ದೋಚುವವರು ಯಾರು? ವಜ್ರಗಳ ಭಂಡಾರವನ್ನೇ ಹೊಂದಿದ್ದರೂ, ವಿದೇಶಿ ಕಂಪೆನಿಗಳ ಖಾಸಗಿ ಸೇನೆಗಳ ಅಡಿಯಲ್ಲಿ ಮಹಿಳೆಯರು, ಮಕ್ಕಳು ಸಹಿತ ಕ್ರೂರ ದಬ್ಬಾಳಿಕೆ ಅನುಭವಿಸುತ್ತಿರುವ ಶ್ರೀಮಂತ “ಬಡರಾಷ್ಟ್ರ” ಸಿಯೆರಾ ಲಿಯೋನ್ ಕೇವಲ ಒಂದು ಉದಾಹರಣೆ ಮಾತ್ರ.

ಯುದ್ಧಗಳು ಮತ್ತು ಅಂತರ್ಯುದ್ಧಗಳು ಕೂಡಾ ಜನರನ್ನು ಬಡತನದಿಂದ, ನಿರ್ಗತಿಗ ಕಡುಬಡತನಕ್ಕೆ ತಳ್ಳುತ್ತವೆ. ಇವುಗಳನ್ನು ಪ್ರಚೋದಿಸಿ ಶಸ್ತ್ರಾಸ್ತ್ರ ಒದಗಿಸುವವರು ಯಾರು? ಬಹುಕೋಟಿ ಡಾಲರುಗಳ ಶಸ್ತ್ರಾಸ್ತ್ರ ಉದ್ದಿಮೆಗೆ ಹಣ ಎಲ್ಲಿಂದ ಬರುತ್ತದೆ? ಮುಖ್ಯವಾಗಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಿಂದ ಬರುತ್ತದೆ. ಈ ಮಾದಕವಸ್ತುಗಳನ್ನು ಬಳಸುವವರು ಯಾರು? ಇವುಗಳಲ್ಲಿ ದುಡಿಯುವವರು ಯಾರು? ಲಾಭ ಪಡೆಯುವವರು ಯಾರು? ಮಾದಕ ವಸ್ತುಗಳ ಜಾಲಗಳ ಜೊತೆಜೊತೆಗೆಯೇ ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಾಟ ಮತ್ತು ವೇಶ್ಯಾವಾಟಿಕೆಯ ದಂಧೆಯೂ ನಡೆಯುತ್ತದೆ. ಇದರ ಮುಖ್ಯ ಬಲಿಪಶುಗಳು ಯಾರು? ಮತ್ತೆ ಬಡವರು. ಉದಾಹರಣೆಗೆ ಕೊಲಂಬಿಯಾ, ಅಫ್ಘಾನಿಸ್ತಾನ, ಮ್ಯಾನ್ಮಾರ್ ಮುಂತಾದ ದೇಶಗಳನ್ನು ನೋಡಬಹುದು. ಈ ತನಕದ ಎಲ್ಲಾ ಆಧುನಿಕ ಯುದ್ಧಗಳು ಸಂಪತ್ತಿಗಾಗಿಯೇ ನಡೆದಿವೆ. ಇವುಗಳನ್ನು ನಡೆಸುವವರು ಯಾರು? ಕೇವಲ ಉದಾಹರಣೆಗಾಗಿ- ವಿಪರ್ಯಾಸ ಎಂಬಂತೆ- ಪ್ರಜಾಪ್ರಭುತ್ವ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳೆರಡರ ಅಧಿಕೃತ ವಕ್ತಾರ ಎಂಬಂತೆ ವರ್ತಿಸುವ ಯುಎಸ್ಎ ಈ ತನಕ ನೇರವಾಗಿ ಮತ್ತು ತೆರೆಮರೆಯಲ್ಲಿ ಭಾಗವಹಿಸಿದ ಯುದ್ಧಗಳು ಮತ್ತು ಸಂಘರ್ಷಗಳ ಸಂಖ್ಯೆಯನ್ನು ಲೆಕ್ಕ ಹಾಕಬಹುದು.

ಜಗತ್ತಿನ ಸಂಘಟಿತ ಅಪರಾಧಗಳಿಗೂ ಬಡತನಕ್ಕೂ ನೇರ ಸಂಬಂಧವಿದೆ. ಹಸಿವು, ಅಸಹಾಯಕತೆ ಜನರನ್ನು ಅಪರಾಧದತ್ತ ತಳ್ಳುತ್ತದೆ. ಆದರೆ, ಅಪರಾಧಗಳಿಗೆ ಬಡವರನ್ನು ಹೊಣೆ ಮಾಡುವಂತಿಲ್ಲ. ಅವರನ್ನು ದಳಪತಿಗಳಂತೆ, ಕಾಲಾಳುಗಳಂತೆ ಬಳಸಲಾಗುತ್ತದೆ ಅಷ್ಟೇ. ಸಾಯುವವರೂ ಅವರೇ. ಲಾಭ ಮಾಡುವವರು ಮಾತ್ರ ಬೇರೆಯವರು. ಕೋಮುಗಲಭೆಗಳು ಮತ್ತು ಜನಾಂಗೀಯ ಸಂಘರ್ಷಗಳ ವಿಷಯದಲ್ಲೂ ಇದು ನಿಜ.

ಒಂದು ದೇಶದ ಜಿಡಿಪಿ ಮತ್ತು ಸರಾಸರಿ ತಲಾದಾಯ ಲೆಕ್ಕಹಾಕಿ ಅಭಿವೃದ್ಧಿಯನ್ನು ಅಳೆಯುವುದು ಒಂದು ದೇಶದ ಜನರ ಸ್ಥಿತಿಗತಿಗಳನ್ನು ನಿರ್ಧರಿಸುವುದು ಕೇವಲ ರಾಜಕಾರಣಿಗಳ ವಂಚನೆಯಷ್ಟೇ. ಉದಾಹರಣೆಗೆ ಅದಾನಿ, ಅಂಬಾನಿಗಳ ಸಂಪತ್ತು ಹೆಚ್ಚಾದರೆ ದೇಶದ ಜಿಡಿಪಿ ಹೆಚ್ಚಾಗಬಹುದು. ಆದರೆ, ಭಾರತೀಯರ ಜೀವನ ಪರಿಸ್ಥಿತಿ ಸುಧಾರಿಸಬೇಕೆಂದಿಲ್ಲ. ಈ ನಿಟ್ಟಿನಲ್ಲಿ ಬಡತನದ ಹಂಚಿಕೆಯನ್ನೂ ನೋಡಬೇಕಾಗುತ್ತದೆ. ಬಡದೇಶಗಳಲ್ಲಿ ಮಾತ್ರ ಬಡವರಿರುವುದಲ್ಲ. ಯುಎಸ್ಎಯಂತಾ ಜಿಡಿಪಿ ಹೆಚ್ಚಿರುವ, ತಲಾದಾಯ ಹೆಚ್ಚಿರುವ ದೇಶಗಳಲ್ಲಿ ಬಡವರು, ಮನೆ ಇಲ್ಲದವರು, ಕೊಳಚೆ ನಿವಾಸಿಗಳು, ಹೊಟ್ಟೆಗಾಗಿ ದಾನಿಗಳ ಸೂಪ್ ಕ್ಯಾಂಪನ್ನು ಅವಲಂಬಿಸಿರುವವರ, ಬದುಕಲು ವೇಶ್ಯಾವಾಟಿಕೆಯಲ್ಲಿ ತೊಡಗಿರುವವರ ಸಂಖ್ಯೆ ಎಷ್ಟಿದೆ ಎಂದು ನೋಡಬೇಕು. ಬಿಳಿಯರಿಗಿಂತ ಕರಿಯರಲ್ಲಿ ಮತ್ತು ಮಿಶ್ರ ವರ್ಣೀಯರಲ್ಲಿ ಬಡತನ ಯಾಕೆ ಗಣನೀಯವಾಗಿ ಹೆಚ್ಚು ಎಂದು ನೋಡಬೇಕು. ಜಗತ್ತಿನ ಸಾವಿರಾರು ಆದಿವಾಸಿ ಬುಡಕಟ್ಟುಗಳ ಪರಿಸ್ಥಿತಿ ನೋಡಬೇಕು. ಭಾರತದಲ್ಲಿ ಮೇಲ್ಜಾತಿಗಳಲ್ಲಿ ಅಪರೂಪಕ್ಕೆ ಬಡವರು ಸಿಗುವ, ಅತ್ಯಂತ ಕೆಳಜಾತಿಯಲ್ಲಿ ಅಪರೂಪಕ್ಕೆ ಶ್ರೀಮಂತರು ಸಿಗುವ ಪರಿಸ್ಥಿತಿ ಏಕೆ ಇದೆ ನೋಡಬೇಕು. ಲಂಡನ್‌ನ ಅತೀ ಶ್ರೀಮಂತ ವೆಸ್ಟ್ ಎಂಡ್ ಹತ್ತಿರದಲ್ಲೇ ಅತೀ ಬಡವರ ಈಸ್ಟ್ ಎಂಡ್ ಏಕಿದೆ; ಅತೀ ಶ್ರೀಮಂತರ ಮುಂಬಯಿಯ ನಾರಿಮನ್ ಪಾಯಿಂಟ್, ಮಲಬಾರ್ ಹಿಲ್, ಬಾಂದ್ರಾ ವೆಸ್ಟ್, ಜುಹೂ ಪ್ರದೇಶಗಳ ಪಕ್ಕದಲ್ಲೇ ಕಾಮಾಟಿಪುರಂತಾ ನರಕಗಳೂ, ದಾರಾವಿಯಂತಾ ಏಷ್ಯಾದ ಅತೀದೊಡ್ಡ ಕೊಳೆಗೇರಿಗಳೂ ಏಕಿವೆ ಎಂಬುದನ್ನು ನೋಡಬೇಕು.

ಬಡತನದ ರಾಜಕೀಯವಾಗಲೀ, ರಾಜಕೀಯದ ಬಡತನವಾಗಲೀ ಒಂದು ಸಂಕೀರ್ಣ ಚಕ್ರವ್ಯೂಹದಂತಾ ವಿಷಯ. ಅದನ್ನು ಒಂದು ಲೇಖನದ ಮಿತಿಯಲ್ಲಿ ಬಣ್ಣಿಸುವುದು ಸಾಧ್ಯವಿಲ್ಲ. ಇಲ್ಲಿ ಉಲ್ಲೇಖಿಸಲಾಗಿರುವ ವಿಷಯಗಳನ್ನು ಒಂದೊಂದೊಂದಾಗಿ ಹೆಚ್ಚು ವಿವರ ಮತ್ತು ಉದಾಹರಣೆಗಳೊಂದಿಗೆ ಮುಂದೆ ನೋಡೋಣ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page