Thursday, June 19, 2025

ಸತ್ಯ | ನ್ಯಾಯ |ಧರ್ಮ

ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲೇ ಅಸ್ಪೃಶ್ಯತೆ ಆಚರಣೆ

ಕರ್ನಾಟಕ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ದೇವಸ್ಥಾನಗಳ ವಿವಿಧ ವಿಭಾಗಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಟೆಂಡರ್ ಕಂ ಹರಾಜು ಪ್ರಕಟಣೆ ಹೊರಡಿಸಿದೆ. ಇದರಲ್ಲಿ ಬೆಂಗಳೂರಿನ ಬಸವನಗುಡಿಯ ‘ಶ್ರೀ ದೊಡ್ಡ ಗಣಪತಿ ಮತ್ತು ಸಮೂಹ ದೇವಸ್ಥಾನಗಳು’ ಹೊರಡಿಸಿದ ಹರಾಜು ಪ್ರಕಟಣೆ ಈಗ ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದ ಯಾವುದೇ ಇಲಾಖೆಗಳ ಅಡಿಯಲ್ಲಿ ಟೆಂಡರ್ ಕರೆದರೂ ಅಲ್ಲಿ ಮೀಸಲಾತಿ ಪ್ರಕಟಿಸುವುದು ಕಾನೂನು ನಿಯಮಗಳ ಅಡಿಯಲ್ಲಿ ಬಂದಿದೆ. ಅದರಂತೆ ನವೆಂಬರ್ 16 ಕ್ಕೆ ಕರೆಯಲಾದ ಶ್ರೀ ದೊಡ್ಡ ಗಣಪತಿ ಮತ್ತು ಸಮೂಹ ದೇವಸ್ಥಾನಗಳ ವಿವಿಧ ವಿಭಾಗಗಳ ಹರಾಜು ಪ್ರಕ್ರಿಯೆಯ ಪ್ರಕಟಣೆ ಈಗ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಅದರಂತೆ ಪ್ರಕಟಣೆಯನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸರ್ಕಾರವೇ ಆಚರಿಸುತ್ತಿರುವ ‘ಅಸ್ಪೃಶ್ಯತೆ’ ಬಗ್ಗೆ ಸರ್ಕಾರದ ಮೇಲೆ ಕಿಡಿ ಕಾರುತ್ತಿದ್ದಾರೆ.

ಹರಾಜು ಪ್ರಕಟಣೆಯಲ್ಲಿ ಸಮೂಹ ದೇವಸ್ಥಾನಗಳ ವಿವಿಧ ವಿಭಾಗಗಳ ಟೆಂಡರ್ ಹರಾಜಿನಲ್ಲಿ ಪೂಜಾ ಸಾಮಗ್ರಿಗಳ ಮಾರಾಟ, ಎಳನೀರು ಮಾರಾಟ, ಈಡುಗಾಯಿ ಆಯ್ದುಕೊಳ್ಳುವ ಹಕ್ಕಿನ ಟೆಂಡರ್, ಪಾದರಕ್ಷೆ ಕಾಯ್ದುಕೊಳ್ಳುವ ಹಕ್ಕಿನ ಟೆಂಡರ್ ಮತ್ತು ವಾಹನ ನಿಲುಗಡೆಯ ಸುಂಕ ವಸೂಲಾತಿಗೆ ಸಂಬಂಧಿಸಿದಂತೆ ಟೆಂಡರ್ ಗೆ ಆಹ್ವಾನ ಕರೆಯಲಾಗಿದೆ. ಉಳಿದೆಲ್ಲಾ ವಿಭಾಗಗಳಿಗೆ ‘ಸಾಮಾನ್ಯ’ ವರ್ಗಗಳ ಟೆಂಡರ್ ಕರೆದು, ಚಪ್ಪಲಿ ಕಾಯುವ ಹಕ್ಕಿನ ಟೆಂಡರ್ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ’ಕ್ಕೆ ನೀಡಿದ್ದು ಸಾರ್ವಜನಿಕ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

ಅನಾದಿಕಾಲದಿಂದಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗಗಳು ಇಂತಹದ್ದೇ ತಳಮಟ್ಟದ ಕೆಲಸ ನಿರ್ವಹಿಸುತ್ತಿದ್ದು, ಮೀಸಲಾತಿ ಅಡಿಯಲ್ಲಿ ಈ ಸಮುದಾಯಗಳನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಮೇಲೆತ್ತಲು ಸಂವಿಧಾನ ರಚನೆ ಮಾಡಲಾಗಿದೆ. ಆದರೆ ಸರ್ಕಾರ ಈ ಸಮುದಾಯಗಳಿಗೇ ಚಪ್ಪಲಿ ಕಾಯುವ ಕೆಲಸಕ್ಕೇ ಮೀಸಲಾತಿ ಜಾರಿ ಮಾಡಿದ್ದು, ಸರ್ಕಾರವೇ ಅಸ್ಪೃಶ್ಯತೆಯನ್ನು ಪೋಷಿಸುವ ಕೆಲಸ ಮಾಡಿದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಇನ್ನು ಜಾಲತಾಣಗಳಲ್ಲಿ ಈ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಯೋಗದ ಸದಸ್ಯರು ‘ಹಿಂದೆ ನಮ್ಮ ಸಮುದಾಯದ ಕೆಲ ಸಂಘಟನೆಯ ಮುಖಂಡರು ನಮ್ಮ ಸಮುದಾಯದ ಹಿತದೃಷ್ಟಿಯಿಂದ ಕೆಲ ಮಳಿಗೆಗಳನ್ನು ಚಪ್ಪಲಿ ಕಾವಲಿಗೆ ಮಿಸಲೀಡಲು ಮಾಡಿದ ಮನವೀಯ ಮೇರೆಗೆ ಸರಕಾರದ ಅದೇಶ ಪ್ರಕಟವಾಗಿದೆ, ಆದರೂ ಇದು ಸರಿಯಾದ ನಿರ್ಧಾರ ಅಲ್ಲ ಎಂದು SC/ST ಆಯೋಗದಿಂದ ವರದಿ ಕೇಳಿದ್ದೇನೆ.’ಎಂಬುದಾಗಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page