Saturday, June 21, 2025

ಸತ್ಯ | ನ್ಯಾಯ |ಧರ್ಮ

ಮಳೆಗಾಲದ ಹಬ್ಬ ʼಕಾರಬ್ಬʼ

ಮುಂಗಾರಿನಲ್ಲಿ ಯಾವ ಬೆಳೆ ತಮ್ಮ ಕೈ ಹಿಡಿಯುತ್ತದೆ ಎಂಬುದನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಅರಿತು ಬಿತ್ತನೆ ಕಾರ್ಯ ಮುಂದಾಗುವ ವಿಶೇಷ ಹಾಗೂ ವಿಭಿನ್ನ ಆಚರಣೆಯೇ ಈ ಕಾರಬ್ಬ. ತನ್ನ ತವರಿನಲ್ಲಿ ಕಂಡ ಕಾರಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ ಉಮಾದೇವಿ ಕೆ ಎಸ್‌, ತುಮಕೂರು

ಬಸವಜಯಂತಿಯ ನಂತರ ಮುಂಗಾರು ಆರಂಭದ ಮೊದಲ ಹಬ್ಬ ಕಾರಬ್ಬ. ಕೃಷಿಗೆ ಸಂಬಂಧಿಸಿದ ಎತ್ತು, ನೇಗಿಲು, ನೊಗಗಳನ್ನು ಪೂಜಿಸುವ ಹಬ್ಬ ಇದು. ಉತ್ತರಕರ್ನಾಟಕದ ಕಡೆ ವಿಶೇಷವಾಗಿ ಆಚರಿಸುವ ಇದನ್ನು ‘ಕಾರಹುಣ್ಣಿಮೆ’ಯ ನಂತರ ಅಮಾವಾಸ್ಯೆಯ ಒಳಗೆ ಭಾನುವಾರ ಅಥವಾ ಬುಧವಾರಗಳಲ್ಲಿ  ‘ಕಾರಬ್ಬ’ ಎನ್ನುವ ಹೆಸರಿನಲ್ಲಿ ನಮ್ಮ ಕಡೆ  ಆಚರಿಸುತ್ತಾರೆ.

ತವರಿನಲ್ಲಿ ನಾ ಕಂಡ ಕಾರಬ್ಬ

ಹಬ್ಬದ ದಿನ ಬೆಳಿಗ್ಗೆ ದನಕರುಗಳ ಮೈತೊಳೆದು ಕೊಂಬಿಗೆ ಬಣ್ಣ ಹಚ್ಚುತ್ತಿದ್ದರು. ಇನ್ನು ಕೆಲವರು ತಮಗೆ ಇಷ್ಟವಾಗುವ ರೀತಿಯಲ್ಲಿ ಅವುಗಳನ್ನು ಅಲಂಕರಿಸುತ್ತಿದ್ದರು. ಅಂದು ರಾತ್ರಿ ಕರುಗಲ್ ಗೌಡರ ಮನೆಯಲ್ಲಿ ಒಬ್ಬರು ಕಂಬಳಿ ಹೊದ್ದು, ಕೈಯಲ್ಲಿ ಕೋಲು ಮತ್ತು  ಮುಂಗಾರು, ಹಿಂಗಾರು ಬೆಳೆಗಳ ಕಾಳುಗಳನ್ನು ಹಾಕಿದ ಹೊಸ ಮೊಗೆಯನ್ನು ತೆಗೆದುಕೊಂಡು ಹೋಗಿ ಅದಕ್ಕೆ ನೀರು  ಹಾಕಿ ಕರುಗಲ್ಲಿನ ಮೇಲಿಟ್ಟು ಪೂಜೆ ಮಾಡಬೇಕು. ಅಷ್ಟೊತ್ತಿಗೆ ಊರಿನವರು ಕರುಗಲ್ಲಿಗೆ ಸುಣ್ಣ, ಕೆಮ್ಮಣ್ಣು ಬಳಿದು  ‘ಕರೇಸೊಪ್ಪು’ ಕಟ್ಟಿ ಸಿಂಗರಿಸಿರುತ್ತಾರೆ. ಹಂಬಳ್ಳಿ, ಮಾವು, ಬೇವಿನ ಸೊಪ್ಪಿನ ತೋರಣಕ್ಕೆ ‘ಕರೇ ಸೊಪ್ಪು’ ಎಂದು ಹೆಸರು.

ಪೂಜೆ, ಖಿಚಡಿಯ (ಹುಗ್ಗಿ) ನೈವೇದ್ಯದ ನಂತರ ಕೋಲಿನಿಂದ ಮೊಗೆಯ ತಳಕ್ಕೆ ಕುಕ್ಕಬೇಕು. ಆಗ ಕುಡಿಕೆಯ ತೂತಿನಿಂದ ನೀರಿನೊಂದಿಗೆ ಹರಿದು ಬರುವ ಕಾಳುಗಳಲ್ಲಿ ಯಾವುದು ಮುಂದೆ ಇರುತ್ತೋ ಆ ಬೆಳೆ ಆ ವರ್ಷ ಚೆನ್ನಾಗಿ ಆಗುತ್ತೆ ಎಂಬ ನಂಬಿಕೆ.

ಕರಗ ಕುಕ್ಕಿದ ಮೇಲೆ ಜನರೆಲ್ಲಾ ಸೇರಿ ಕರೆ ಹರಿಯುತ್ತಾರೆ. ಕರೆಸೊಪ್ಪನ್ನು  ಕುಡುಗೋಲು ಮುಂತಾದವುಗಳಿಂದ ಕಟ್ ಮಾಡುವಂತಿಲ್ಲ. ಪರಸ್ಪರ ಎಳೆದಾಡುತ್ತಲೇ ಹರಿದು ಕೀಳಬೇಕು. ಕಿತ್ತುಕೊಂಡ ಕರೆಸೊಪ್ಪನ್ನು ತಮ್ಮ ತಮ್ಮ ಮನೆಯ ಕೊಟ್ಟಿಗೆ ಮತ್ತು ಕಡೆಯುವ ಕಂಬಕ್ಕೆ ಕಟ್ಟಿ “ಕರೇವು ಚೆನ್ನಾಗಿ ಆಗಲಿ” ಪ್ರಾರ್ಥಿಸುತ್ತಾರೆ.

ಕುವೆಂಪು ರವರ ‘ವರ್ಷಭೈರವ’ ಪದ್ಯ ಓದುವವರೆಗೂ ನನಗೆ ಕಾರು, ಕಾರಬ್ಬ ಅಂದರೇನು ಎಂದು ಗೊತ್ತೇ ಇರಲಿಲ್ಲ. ಮನೆಯಲ್ಲಿ ಕೂಡಾ ಯಾರನ್ನೂ ಕೇಳದೆ..ಏನಿರಬಹುದು…ಅಂತ ಒಬ್ಬಳೇ ಯೋಚಿಸುತ್ತಿದ್ದೆ. 

ಮಾರ್ನಾಮಿ ಹಬ್ಬದ  ಆಯುಧ ಪೂಜೆಯಲ್ಲಿ ಬಸ್ಸು, ಲಾರಿ  ಪೂಜೆ ಮಾಡುವಂತೆ ಈ ಹಬ್ಬದಲ್ಲಿ ಕಾರುಗಳಿಗೆ ಪೂಜೆ ಮಾಡುತ್ತಾರಾ? ಎಂದು ಯೋಚಿಸಿದ್ದೂ ಉಂಟು. ಕಾರ್ಗಾಲ ಎನ್ನುವ ಪದ ಕೇಳಿದ ಮೇಲೆಯೇ ಗೊತ್ತಾದದ್ದು “ಕಾರಬ್ಬ ಅಂದರೆ ಮಳೆಗಾಲದ ಹಬ್ಬ ” ಎಂದು. 

ಬಹಳ ಸಲ ಹಬ್ಬದ ದಿನ ಸೋನೆ ಮಳೆ ಕೂಡಾ ಸುರಿಯುತ್ತಲೇ ಇರುತ್ತಿತ್ತು. ಅಪ್ಪ ಇರುವವರೆಗೂ ಪ್ರತೀ ವರ್ಷವೂ ಅವರೇ ಕರಗ ಕುಕ್ಕುತ್ತಿದ್ದರು. ಈಗ ಅಪ್ಪನೂ ಇಲ್ಲ. ಇಂತಹಾ ಅನಿಶ್ಚಿತ ಮಳೆಗಾಲದಲ್ಲಿ “ಯಾವ ಧಾನ್ಯ ಮುಂದೆ ಬರುತ್ತೆ?” ಎಂದು ನೋಡುವ ಕುತೂಹಲವೂ ಇಲ್ಲ.

ಉಮಾದೇವಿ ಕೆ ಎಸ್‌

ತುಮಕೂರು

ಇದನ್ನೂ ಓದಿ-ಅಪ್ಪನ ಅದ್ರೆ ಮಳೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page