Monday, June 30, 2025

ಸತ್ಯ | ನ್ಯಾಯ |ಧರ್ಮ

ಡಬ್ಬಿಂಗ್ ಮುಗಿಸಿದ ‘ದಿ ರೈಸ್ ಆಫ್ ಅಶೋಕ’..ಶೀಘ್ರದಲ್ಲೇ ತೆರೆಗೆ ಅಭಿನಯ ಚತುರ ಸತೀಶ್ ನೀನಾಸಂ

ಅಭಿನಯ ಚತುರ ಸತೀಶ್ ನೀನಾಸಂ ಹೊಸ ಅವತಾರವೆತ್ತಿರುವ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ. ಈಗಾಗಲೇ ಒಂದಷ್ಟು ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರವೀಗ ಡಬ್ಬಿಂಗ್ ಮುಗಿಸಿದೆ. ಬೆಂಗಳೂರಿನ ಆಕಾಶ್ ಸ್ಟುಡಿಯೋದಲ್ಲಿ ಚಿತ್ರದ ನಾಯಕ ಸತೀಶ್ ಹಾಗೂ ನಾಯಕಿ ಸಪ್ತಮಿ ಗೌಡ ತಮ್ಮ ಪಾತ್ರಗಳಿಗೆ ಮಾತು ಪೊಣಿಸಿದ್ದಾರೆ.

ಡಬ್ಬಿಂಗ್ ಪೂರ್ಣಗೊಂಡ ಬಳಿಕ ಮಾಧ್ಯಮದವರೊಂದಿಗೆ ನಟ ಸತೀಶ್ ನೀನಾಸಂ ಮಾತನಾಡಿ, ದಿ ರೈಸ್ ಆಫ್ ಅಶೋಕ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿತ್ತು. ಈಗ ಡಬ್ಬಿಂಗ್ ಕೂಡ ಕಂಪ್ಲೀಟ್ ಆಗಿದೆ. ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಮುಗಿಸಿದ್ದೇವೆ. ಆನಂದ್ ಇಂಜಿನಿಯರ್ ನನ್ನ ಸಾಕಷ್ಟು ಚಿತ್ರಗಳಿಗೆ ಅವರೇ ಡಬ್ ಮಾಡಿದ್ದಾರೆ. ಈ ಜಾಗದಲ್ಲಿ ಡಬ್ ಮಾಡಿರುವುದು ಪಾಸಿಟಿವ್ ಎನರ್ಜಿ ಇದೆ. ಈ ಜಾಗದಲ್ಲಿ ಅಣ್ಣಾವ್ರು, ವಿಷ್ಣು ಸರ್ ಸೇರಿದಂತೆ ಹಲವರು ಇಲ್ಲಿಯೇ ಡಬ್ ಮಾಡಿದ್ದಾರೆ. ಈ ಜಾಗದಲ್ಲಿ ನಮ್ಮ ಚಿತ್ರದ ಡಬ್ಬಿಂಗ್ ಮುಗಿದಿರುವುದು ಖುಷಿ ಇದೆ. ಕನ್ನಡ, ತೆಲುಗು ಹಾಗೂ ತಮಿಳ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದೇವೆ. ಕನ್ನಡ ಭಾಷೆ ಡಬ್ಬಿಂಗ್ ಮುಗಿದಿದ್ದು, ಮುಂದಿನ ದಿನಗಳಲ್ಲಿ ತೆಲುಗು ಹಾಗೂ ತಮಿಳು ಶುರು ಮಾಡುತ್ತೇವೆ ಎಂದರು.

ನಟಿ ಸಪ್ತಮಿ ಗೌಡ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಯಾವುದೇ ಸಿನಿಮಾ ಶುರು ಮಾಡಿ ಅದರಲ್ಲಿಯೂ ಡಬ್ಬಿಂಗ್ ‌ಮುಗಿಸಿದಾಗ ನಟಿಯಾಗಿ ಪರಿಪೂರ್ಣ ಜವಾಬ್ದಾರಿ ಅನಿಸುತ್ತದೆ. ಅಂಬಿಕಾ ಎಂಬ ಪಾತ್ರ ಎಮೋಷನ್. ತುಂಬಾ ಇಸಿಯಾಗಿಯಾದ ಪಾತ್ರ. ನನ್ನನ್ನು ಚಿತ್ರ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಡಿಫರೆಂಟ್ ಅವತಾರದಲ್ಲಿ ಅಂಬಿಕಾ ಆಗಿ ನೀವು ನನ್ನನ್ನು ನೋಡುತ್ತೀರ. ದಿ ರೈಸ್ ಆಫ್ ಅಶೋಕ ಚಿತ್ರದ ಭಾಗವಾಗಿರುವುದು ಖುಷಿಯಾಗಿದೆ ಎಂದು ಹೇಳಿದರು.

ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು

ದಿ ರೈಸ್ ಆಫ್ ಅಶೋಕ 70ರ ದಶಕದಲ್ಲಿ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ. ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆಯೇ ದಿ ರೈಸ್ ಆಫ್ ಅಶೋಕ.

ಸತೀಶ್ಗೆ ಜೋಡಿಯಾಗಿ ಸಪ್ತಮಿ ಗೌಡ

ಚಿತ್ರದಲ್ಲಿ ಸತೀಶ್ಗೆ ಜೋಡಿಯಾಗಿ ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಬಿ.ಸುರೇಶ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ ತಾರಾಬಳಗದಲ್ಲಿದ್ದಾರೆ.

ಸತೀಶ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರ

ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ನಂತರ ‘ಅಶೋಕ ಬ್ಲೇಡ್’ ಸಿನಿಮಾವನ್ನು ಸತೀಶ್ ನೀನಾಸಂ ‘ದಿ ರೈಸ್ ಆಫ್ ಅಶೋಕ’ ಹೆಸರಿನಲ್ಲಿ ಪ್ರಾಜೆಕ್ಟ್ ಅನ್ನು ಮತ್ತೆ ಕೈಗೆತ್ತಿಕೊಂಡು ಕೆಲಸ ಪ್ರಾರಂಭಿಸಿದರು. ಈಗ ಆ ಕೆಲಸ ಮುಕ್ತಾಯಗೊಂಡಿದ್ದು, ಚಿತ್ರ ಬಿಡುಗಡೆ ಹಂತ ತಲುಪಿದೆ. ಇದು ಸತೀಶ್ ಅವರ ವೃತ್ತಿಜೀವನದಲ್ಲೇ ಬಿಗ್ ಬಜೆಟ್ ಚಿತ್ರವಾಗಿದ್ದು, ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆ ಕೂಡ ಇದೆ.

ಬಹುಭಾಷೆಯಲ್ಲಿ ಚಿತ್ರ

ಸಿನಿಮಾ ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ನೀನಾಸಂ ಸತೀಶ್ ಕೂಡಾ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ದಿ ರೈಸ್ ಆಫ್ ಆಫ್ ಅಶೋಕನಿಗೆ ದಯಾನಂದ್ ಟಿ.ಕೆ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಲವಿತ್ ಕ್ಯಾಮರಾ ಹಿಡಿದಿದ್ದು, ಮನು ಶೇಡ್ಗಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ರವಿವರ್ಮಾ ಹಾಗೂ ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ನಿರ್ವಹಿಸಿದ್ದರೆ, ಸಂತೋಷ್ ಶೇಖರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸಿನಿಮಾ ಬಿಡುಗಡೆ ದಿನಾಂಕ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page