Wednesday, June 25, 2025

ಸತ್ಯ | ನ್ಯಾಯ |ಧರ್ಮ

ಅನುಮಾನಕೆ ಬಲಿಪಶು ಈ ಹೆಣ್ಣು – ಕಳ್ಳುಬಳ್ಳಿ ೮

ಶತಶತಮಾನದಿಂದಲೂ ಹೆಣ್ಣಿನ ಶೀಲದ ಕುರಿತು ಶಂಕೆ ಪಟ್ಟವರಿದ್ದಾರೆ.  ಅವರು ದಾರಿಹೋಕರಲ್ಲದೆ ಕೂಡಿದ ಗಂಡ, ಹತ್ತಿರದ ಸಂಬಂಧಿ ಇವರೇ ಆಗಿರುತ್ತಾರೆ.

ಎಲ್ಲಮ್ಮ ದೇವಿಯ ಚಂಚಲತೆ ಪರೀಕ್ಷಿಸಲು ಪತಿ ಜಮದಗ್ನಿ ಋಷಿಗಳು ಮಾಡಿದ ತಂತ್ರ ಎಂಥಹುದು? ಅಗ್ನಿಯಂತೆ ಉರಿಯುವ ಅವನ ಕೋಪ ತಾಪವನ್ನು ಮಗ ಪರಶುರಾಮನು ಮಾತ್ರ ಎದುರಿಸಲು ಸಾಧ್ಯವಾಯಿತಷ್ಟೇ. 

ಸೀತೆಯ ಶೀಲವನ್ನು ಶಂಕಿಸಿದ ಅಗಸನ ಮಾತಿಗೆ ಮರ್ಯಾದೆ ಕೊಡುವ ರಾಮ ಬಸುರಿ ಸೀತೆಯನ್ನು ಮರಳಿ ವನವಾಸಕ್ಕೆ ಬಿಟ್ಟುಬರಲು ಸೋದರ ಲಕ್ಷ್ಮಣನಿಗೆ ರಾಜಾಜ್ಞೆ ನೀಡುತ್ತಾನೆ.  ಮುಂದೆ ಮಕ್ಕಳು ಹೆತ್ತು, ಅವರಿಗೆ ಗುರುವಾಗಿ ಬಿಲ್ವಿದ್ಯೆ ಮೊದಲಾದ ವಿದ್ಯೆಗಳನ್ನು ಕಲಿಸಿ, ಯೋಗ್ಯರನ್ನಾಗಿ ಮಾಡಿದ ಮೇಲೂ ರಾಮನ ಶಂಕೆಯಿಂದಾಗಿ ನಮ್ಮ ಸೀತಮ್ಮ ಅಗ್ನಿ ಪ್ರವೇಶ ಮಾಡಬೇಕಾಗಿ ಬಂತು.  ಸೀತಮ್ಮನ ಪಾತಿವ್ರತಾ ಧರ್ಮದಿಂದ ಅಗ್ನಿ ದಹಿಸದೆ ಹಿಮ್ಮೆಟ್ಟಿದಾಗಲೂ ಆಕೆ ತನ್ನ ತವರಿನ ಆಸರೆ ಪಡೆಯಬೇಕಾಗುತ್ತದೆ.

ಗಂಡಿಗೆ ಹುಟ್ಟುವ ಶಂಕೆಯೆಂಬ ಒಂದು ಹನಿ ಹುಳಿ, ಹಾಲಿನಂಥ ಅದೆಷ್ಟೋ ಸಂಸಾರಗಳನ್ನು ಹೊಡೆದು ಹಾಕಿದ್ದಿದೆ.  ಆದರೆ ಆ‌ ಶಂಕೆ ಹುಟ್ಟಲು ಕಾರಣವಾದ ಗಂಡು ಮಾತ್ರ ತನ್ನ ಪಾಡಿಗೆ ತನ್ನದೇ ಲೋಕದಲ್ಲಿ ಇರುತ್ತಾನೆ.

 ಕೆಲವು ಬುಡಕಟ್ಟು ಜನರಲ್ಲಿ ಈ ಶಂಕೆಯ ಅಮಲು ಇನ್ನಷ್ಟು ಹೆಚ್ಚು.  ಹೊರ ಜಗತ್ತಿನಿಂದ ದೂರ ಉಳಿದಿರುವ ಇಂತಹ ಬುಡಕಟ್ಟು ಜನಾಂಗದವರು ತಮ್ಮದೇ ಆದ ಟ್ಯಾಬೂ /ನಿಷೇಧಗಳನ್ನು ಹೇರಿಕೊಂಡು ಬದುಕುತ್ತಾರೆ. 

ನೀವು ಫೋಟೋದಲ್ಲಿ ಗಮನಿಸಬಹುದಾದ ಈ ಹೆಣ್ಣಿನ ಫೋಟೋವನ್ನು ಹೀಗೆ ಅನಾಮತ್ತು ಓರ್ವ ವಿದೇಶಿ ಫೋಟೋಗ್ರಾಫರ್ ಕ್ಲಿಕ್ಕಿಸಿದ್ದ.  ಆತನ ಹೆಸರು ಸ್ಡಿಫನ್ ಫ್ಯಾಸೆಟ್, ಈತ ಪ್ರೆಂಚ್ ದೇಶದ ಛಾಯಾಚಿತ್ರಗಾರನಾಗಿದ್ದ.  ಆತನನ್ನು ಅಲ್ಬರ್ಟ್ ಖಾನ್ ಎಂಬುವವರು ಮರುಭೂಮಿಯ ಸುತ್ತಲಿನ ಫೋಟೋ ತೆಗೆಯಲು ನಿಯೋಜಿಸಿಕೊಂಡಿದ್ದನು.  ಆತ ವರ್ಣಮಯ ಛಾಯಾಚಿತ್ರಗಳ ಪ್ರವರ್ತಕನಾಗಿದ್ದ.

ಇವರ ಹವ್ಯಾಸ ವಿಲಕ್ಷಣ, ವಿಚಿತ್ರವಾದ ದೇಶಗಳಿಗೆ ಬೇಟಿನೀಡುವುದಾಗಿತ್ತು.  ಇಂತಹ ದೇಶಗಳ ಸಾಲಿನಲ್ಲಿ ಮಂಗೋಲಿಯಾ ದೇಶ ಪರ್ಯಟನೆ ಮಾಡಿದ್ದರು. 

ಆ ಸಂದರ್ಭದಲ್ಲಿ ಓರ್ವ ಮಹಿಳೆಯನ್ನು ಸಲಾಕೆಗಳಲ್ಲಿ ಬಂಧಿಸಿ ಒಂದು ಮರದ ಪೆಟ್ಟಿಗೆಯಲ್ಲಿರಿಸಿ ಮರುಭೂಮಿಯಲ್ಲಿ ಇರಿಸಲಾಗಿತ್ತು.  ಅಂದರೆ ಆಕೆಗೆ

ನಿಧಾನವಾಗಿ ಸಾಯುವ, ಬರ್ಬರವಾದ ಶಿಕ್ಷೆಯನ್ನು ವಿಧಿಸಲಾಗಿದ್ದ ಕಾರಣ ಆಕೆ ಹೀಗೆ ಸುಟ್ಟು ಹಾಕುವಂತಹ ಬಿಸಿಲಿನಲ್ಲಿ ಬೇಯುತ್ತಾ ಬಿದ್ದುಕೊಳ್ಳಬೇಕಾಗಿತ್ತು.

ಅಲ್ಲಿ ಪ್ರಖರ ಸೂರ್ಯಕಿರಣಗಳನ್ನು ಆಕೆ ತಡೆದುಕೊಳ್ಳಬೇಕಿತ್ತು.  ತಿನ್ನಲು ಸಹ ಏನಾದರೂ ಸಿಗುವಂತಹ ಪರಿಸ್ಥಿತಿ ಇರಲೇ ಇಲ್ಲ.

ಈ ಫೋಟೋಗ್ರಾಫರ್ ಆಕೆಯ ಪರಿಸ್ಥಿತಿಗೆ ಯಾವ ಉಪಕಾರವನ್ನೂ ಮಾಡಲಿಲ್ಲ.  ಅಲ್ಲಿಂದ ತೆಪ್ಪಗೆ ಫೋಟೋ ತೆಗೆದುಕೊಂಡು ಹೊರಟೇ ಹೋಗಿದ್ದ.  ಬಹುಶಃ ಬೇರಾರೂ ಆಗಿದ್ದರೆ ಖಂಡಿತವಾಗಿ ಸಹಾಯ ಮಾಡಿ ಆಕೆಯನ್ನು ಬಂಧಮುಕ್ತಗೊಳಿಸುತ್ತಿದ್ದರೇನೋ?  ಆದರೆ ಹಾಗೆ ಮಾಡಿದ್ದರೆ ಅಲ್ಲಿನ ಮ‌ೂಲ ನಿವಾಸಿಗಳ ಕೋಪಕ್ಕೆ ಗುರಿಯಾಗಬೇಕಾಗಿತ್ತು.  ಆಕೆಯನ್ನು ಬಂಧ ಮುಕ್ತಗೊಳಿಸುವ ಕ್ರಮ ನಿಷಿದ್ಧ ವಾಗಿತ್ತು. 

ಮಾನವಶಾಸ್ತ್ರಜ್ಞರು ಒಂದು ಸಂಗತಿಯನ್ನವರಿಗೆ ಹೇಳಿದ್ದರು.  ಸಾರ್ವಜನಿಕ ನಿಯಮಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭಿನ್ನವಾಗಿರುತ್ತವೆ ಅಂತ.  ಹೀಗಾಗಿ ಅನೇಕ ದೇಶಗಳ ಭಿನ್ನ ಸಂಸ್ಕೃತಿಗಳ ಅರಿವಿದ್ದ ಅವರು ಸುಮ್ಮನೆ ಹಿಂತಿರುಗಿದ್ದು ಸರಿ.  ಇಲ್ಲದಿದ್ದರೆ ಇವರೂ ಸಹ ಇನ್ಯಾವುದೇ ಶಿಕ್ಷೆಗೆ ಒಳಗಾಗುವ ಸಾಧ್ಯತೆಗಳು ಇದ್ದುವು.

ಆದರೆ ಈ ಭಾವಚಿತ್ರ ಒಂದು ಹೆಣ್ಣಿನ ಜೀವಮಾನ ಬಿಸಿಲಿನಲ್ಲಿ ಬೆಂದು ಹೋದದ್ದಕ್ಕೆ ಸಾಕ್ಷಿಭೂತವಾಗಿ ಇಂದಿಗೂ ಇದೆ.  ಆಕೆ ವ್ಯಭಿಚಾರ ನಡೆಸಿದ್ದಳೆಂಬ ಕಾರಣ ಆಕೆಯ ಶಿಕ್ಷೆಯ ಹಿಂದೆ ಇತ್ತು.  ಈ ಘಟನೆಯ ಸುತ್ತಾ ಆ ಕಾಲದಲ್ಲಿ ಅನೇಕ ಕಥೆಗಳು ಹರಡಿಕೊಂಡಿದ್ದುವು.  ಆ ವ್ಯಭಿಚಾರ ಆಕೆಯೇ ನಡೆಸಿದ್ದಳೇ? ಎಂಬುದು ಪ್ರಶ್ನಾತೀತ.  ಈ ಚಿತ್ರಕ್ಕೆ ಇಟ್ಟ ಪ್ರಸಿದ್ಧವಾದ ಹೆಸರು – ಬಾಕ್ಸ್ ನಲ್ಲಿ ಮಂಗೋಲಿಯಾದ ಖೈದಿ ಎಂದಾಗಿತ್ತು. 

೧೯೨೨ರಲ್ಲಿ ನ್ಯಾಷನಲ್ ಜಿಯಾಗ್ರಫೀ ಮ್ಯಾಗಜೀನ್ ನಲ್ಲಿ ಈ ಛಾಯಾಚಿತ್ರ ಬಣ್ಣದೊಂದಿಗೆ ಪ್ರಕಟವಾಗಿತ್ತು.  ಆ ಛಾಯಾಚಿತ್ರದ ಕತೆಯನ್ನು ಸಹ ಹಿನ್ನೆಲೆಯಲ್ಲಿ ವಿವರಿಸಲಾಗಿತ್ತು.  ೨೦ನೇ ಶತಮಾನದಲ್ಲಿ ಈ ಬಗೆಯ ಶಿಕ್ಷೆಗಳು ಮಂಗೋಲಿಯನ್ನರಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬಂದುವು. 

ಇಂದಿಗೂ ಇಂತಹ ಬರ್ಬರ ಶಿಕ್ಷೆಯ ಕ್ರಮಗಳು ಜಾರಿಯಲ್ಲಿದ್ದರೆ ಅಚ್ಚರಿ ಇಲ್ಲ.  ಓರ್ವ ವ್ಯಕ್ತಿಯನ್ನು ಎಲ್ಲಾದರೂ ಬಂಧಿಸಿಡುವುದು, ಅನ್ನ ನೀರು ನೀಡದಂತೆ ಸಾಯಲು ಬಿಟ್ಟ ಹೆಣ್ಣು  ಅದೂ ವ್ಯಭಿಚಾರದ ಹೆಸರಿನಲ್ಲಿ. 

ಆ ಹೆಣ್ಣುಮಗಳನ್ನು ವ್ಯಭಿಚಾರಕ್ಕೆ ಪುಸಲಾಯಿಸುವ ವ್ಯಕ್ತಿ ಮಾತ್ರ ಶಿಕ್ಷೆಗೊಳಗಾಗುವ ರೀತಿ ಎಲ್ಲಿಯೂ ಕಾಣಸಿಗುವುದಿಲ್ಲ.  ಅಥವಾ ಅವನ ನಡೆಯನ್ನು ಸಮಾಜ ಪುರಸ್ಕರಿಸಿಬಿಟ್ಟಿರುತ್ತದೆ.  ಗೊತ್ತಿದ್ದರೂ ಗೊತ್ತಿಲ್ಲ ಎನ್ನುವ ರೀತಿ ಸುಮ್ಮನಿದ್ದು ಬಿಡುತ್ತದೆ.  ಆ ಹೆಣ್ಣು ಕೆಟ್ಟಿದ್ದರೆ ಅದಕ್ಕೆ ಓರ್ವ ಗಂಡೂ ಕಾರಣಕರ್ತನಲ್ಲವೇ?  ಅದನ್ನೇಕೆ ಸಮಾಜ ಎತ್ತಿ ತೋರುವುದಿಲ್ಲ. 

ಇಂದ್ರನ ಇಂದ್ರಜಾಲದಲ್ಲಿ ಕೊಳೆಯಾದ ಋಷಿ ಪತ್ನಿಯರು ಕಳೆದುಕೊಂಡ ಸಮಾಜಿಕ ಸ್ಥಾನಮಾನಗಳು ಅಪಾರ.  ಆದರೆ ಇಂದ್ರ ದೇವೇಂದ್ರನಾಗೇ ಮೆರೆದಿದ್ದಾನೆ ಎಂದು ಕತೆ ಪುರಾಣಗಳಲ್ಲಿ ಹೇಳಲಾಗಿದೆ. 

ಇದು ಇಂದಿನ ಕತೆಯಲ್ಲ.  ಹೆಣ್ಣಿನ ವ್ಯಥೆ.  ಸಮಾಜಿಕ ನಿಷೇಧಗಳು ಆ ಭಾವಚಿತ್ರದ ಹೆಣ್ಣನ್ನು ಕೊಂದ ಬಗೆಗೆ ಧಿಕ್ಕಾರವಿರಲಿ.  ೧೦೨ ವರ್ಷಗಳು ಕಳೆದರೂ, ಈ ಕೆಲವು ಸಂವೇದನಾಶೀಲ ವಿಚಾರಗಳಲ್ಲಿ ಹೆಣ್ಣಿನ ಸ್ಥಿತಿಗತಿ ಬದಲಾಗಿದೆಯೇ ಎಂಬುದು ಸಹ ಇಂದಿಗೂ ಯಕ್ಷಪ್ರಶ್ನೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page