ಬೆಂಗಳೂರು: ಬೆಂಗಳೂರಿನಲ್ಲಿ ಭಾಷಾ ಚಳವಳಿ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದಲ್ಲಿ ಅಂಗಡಿ ಫಲಕಗಳು ಮುಖ್ಯವಾಗಿ ಸ್ಥಳೀಯ ಭಾಷೆಯಲ್ಲೇ ಇರಬೇಕು ಎಂಬ ಬೇಡಿಕೆಗೆ ತಮ್ಮ ಸಹಮತವಿದೆ ಎಂದು ಅವರು ತಿಳಿಸಿದರು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಕನ್ನಡ ಪರ ಸಂಘಟನೆಗಳು ಈ ಕುರಿತು ಚಳವಳಿ ನಡೆಸಿದ ನಂತರ ಅವರ ಪ್ರತಿಕ್ರಿಯೆ ಬಂದಿದೆ.
“ಅಂಗಡಿ ಮುಂಗಟ್ಟುಗಳ ಬೋರ್ಡ್ ಎಲ್ಲರೂ ಓದುವಂತೆ ಇರಬೇಕು. ಕೇವಲ ಇಂಗ್ಲಿಷ್ ಭಾಷೆಯಲ್ಲಿ ಬರೆಯಲು ಇದು ಇಂಗ್ಲೆಂಡ್ ಅಲ್ಲ ಎನ್ನುವುದನ್ನು ಅಂಗಡಿಗಳ ಮಾಲಿಕರು ಅರ್ಥ ಮಾಡಿಕೊಳ್ಳಬೇಕು. ಮೊದಲಿಗೆ ಕನ್ನಡದಲ್ಲಿ ಬರೆದು ನಂತರ ಇಂಗ್ಲಿಷ್ ಅಥವಾ ಇನ್ಯಾವುದಾದರೂ ಭಾಷೆಯಲ್ಲಿ ಬರೆಯಿಸುವುದರಿಂದ ಅಂಗಡಿಗಳವರು ಕಳೆದುಕೊಳ್ಳುವುದಾದರೂ ಏನು?” ಎಂದು ಅವರು ಪ್ರಶ್ನಿಸಿದರು.
ಬುಧವಾರ ಮತ್ತೊಮ್ಮೆ ಕನ್ನಡ ಪ್ರಸ್ತಾವಿತ ಭಾಷಾ ಆಂದೋಲನಗಳು ನಡೆದವು. ಕೆಂಪೇಗೌಡ ವಿಮಾನ ನಿಲ್ದಾಣದ ಎದುರು ಕನ್ನಡ ಸಂಘಟನೆಗಳು ಪ್ರತಿಭಟನೆ ಆರಂಭಿಸಿದ್ದು, ಬೇರೆ ಭಾಷೆಗಳಲ್ಲಿ ನಾಮಫಲಕ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವು ಹೋಟೆಲ್ಗಳ ಮೇಲೆ ದಾಳಿ ನಡೆಸಲಾಗಿದೆ. ಇದರಿಂದ ಬೆಂಗಳೂರಿನಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ವಿಮಾನ ನಿಲ್ದಾಣದ ಹೊರಗೆ ಕನ್ನಡದ ಬದಲು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಾಮಫಲಕ ಹಾಕಿರುವುದನ್ನು ಕನ್ನಡ ರಕ್ಷಣಾ ವೇದಿಕೆ ಆಕ್ಷೇಪಿಸುತ್ತಿದೆ. ಕೆಂಪೇಗೌಡ ವಿಮಾನ ನಿಲ್ದಾಣದ ಹೊರಗೆ ಬೇರೆ ಭಾಷೆಯ ನಾಮಫಲಕಗಳನ್ನು ಧ್ವಂಸಗೊಳಿಸಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಹೋರಾಟಗಾರರನ್ನು ತಡೆಯಲು ಪ್ರಯತ್ನಿಸಿದರು.