Saturday, June 21, 2025

ಸತ್ಯ | ನ್ಯಾಯ |ಧರ್ಮ

ಆ ಐವತ್ತು ಸಾವಿರ ಬಡಪಾಯಿಗಳು ಇನ್ನೇನು ಬೀದಿಗೆ ಬೀಳುವವರಿದ್ದರು !

ಆರೋಪಿಗಳನ್ನು ಅಪರಾಧಿಗಳು ಎಂದು ಪ್ರಭುತ್ವವೇ ತೀರ್ಮಾನಿಸಿ ಬುಲ್ಡೋಜರ್ ಬಳಸಿ ಮನೆಗಳನ್ನು ಒಡೆದುಹಾಕುವ ಕ್ರೂರ ಅನಾಗರಿಕ ಪದ್ಧತಿ ತಕ್ಷಣ ನಿಲ್ಲಬೇಕು. ದೇಶದ ನ್ಯಾಯಾಂಗ ಅಂತಹ ಸಂವಿಧಾನ ವಿರೋಧಿ ಮತ್ತು ಮಾನವಹಕ್ಕುಗಳ ವಿರೋಧಿ ಕ್ರಮಗಳಿಗೆ ಅವಕಾಶ ಕೊಡಕೂಡದು….ಇದು ಇಂದಿನ ಶ್ರೀನಿ ಕಾಲಂ. ತಪ್ಪದೆ ಓದಿ.

ಆ ದೃಶ್ಯ ನಿಜಕ್ಕೂ ಮನ ಕಲಕುವಂತಿತ್ತು; ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಹೆಂಗಸರು, ಮಕ್ಕಳು, ಇಳಿವಯಸಿನವರು ತೆರೆದ ಜಾಗದಲ್ಲಿ ಮೌನವಾಗಿ ರೋಧಿಸುತ್ತಾ ಪ್ರತಿಭಟನೆ ನಡೆಸುತ್ತಿದ್ದರು. ಒಮ್ಮೊಮ್ಮೆ ಕ್ಯಾಂಡಲ್ ಹಿಡಿದು ನಡೆಯುತ್ತಿದ್ದರು. ತೆರೆದ ಕರಗಳನ್ನು ಎದೆಗಾನಿಸಿ ದೇವರನ್ನು ಸಾಮೂಹಿಕವಾಗಿ ಪ್ರಾರ್ಥಿಸುತ್ತಿದ್ದರು. ಅವರ ಮುಖ ಬಾಡಿತ್ತು. ಕಣ್ಣುಗಳಲ್ಲಿ ಯಾತನೆಯಿತ್ತು. ಆರ್ತ ಭಾವನೆ ಮಡುಗಟ್ಟಿತ್ತು. ಯಾರಾದರೂ ಸಹಾಯ ಮಾಡಿ ಎಂಬ ಯಾಚನೆಯ ಭಾವವಿತ್ತು.

 ಎಂದಿನಂತೆ ತಮ್ಮ ನಿಷ್ಠೆಯನ್ನು ಆಳುವವರ ಪದತಲದಲ್ಲಿ ಇರಿಸಿರುವ, ಒಟ್ಟಾರೆಯಾಗಿ ಮನುಷ್ಯ ಸಂವೇದನೆಯನ್ನೇ ಕಳೆದುಕೊಂಡಿರುವ, ತಮ್ಮ ವೃತ್ತಿಯ ಕರ್ತವ್ಯವನ್ನೇ ಮರೆತಿರುವ ಮುಖ್ಯವಾಹಿನಿ ಮಾಧ್ಯಮಗಳು ಈ ಹೃದಯವಿದ್ರಾವಕ ಬೆಳವಣಿಗೆಗಳಿಗೆ ಬೆನ್ನು ಹಾಕಿದ್ದವು; ತಪ್ಪಿಯೂ ಆ ಬಗ್ಗೆ ಸುದ್ದಿ ಮಾಡುತ್ತಿರಲಿಲ್ಲ. ಆದರೆ, ಸಾಮಾಜಿಕ ಮಾಧ್ಯಮಗಳ ಮೂಲಕ ಅವು ಹೊರ ಜಗತ್ತಿನ ಜನರನ್ನು ತಲಪಲಾರಂಭಿಸಿದ್ದವು. ಮತೀಯ ನೆಲೆಯಲ್ಲಿ ಅಂಧರಾಗದೆ ಇನ್ನೂ ಒಂದಿಷ್ಟು ಮನುಷ್ಯತ್ವ ಉಳಿಸಿಕೊಂಡಿರುವವರು ಕಳವಳಗೊಂಡು ಪ್ರತಿಕ್ರಿಯಿಸಲಾರಂಭಿಸಿದ್ದರು.

ರೈಲ್ವೇ ಜಮೀನು ಅತಿಕ್ರಮಣ ವಿವಾದ

ವಿಷಯ ಏನು ಗೊತ್ತೇ? ಉತ್ತರಾಖಂಡದ ಬಂಬುಲ್ ಪುರ, ಮೊಹಲ್ಲಾ ನಾಯ್ ಬಸ್ತಿಯಲ್ಲಿ ಎಪ್ಪತ್ತು ವರ್ಷಗಳಿಗೂ ಅಧಿಕ ಕಾಲದಿಂದ 4,365 ಕುಟುಂಬಗಳ ಸುಮಾರು ಐವತ್ತು ಸಾವಿರ ಮಂದಿ ವಾಸಿಸುತ್ತಿದ್ದರು. ಪಾರಾ ಮಿಲಿಟರಿ ಬಳಸಿ ಇವರ ಮನೆಗಳನ್ನು ಬುಲ್ ಡೋಜರ್ ಗಳಿಂದ ನೆಲ ಸಮ ಮಾಡಲು ಅಲ್ಲಿನ ಸರಕಾರ ಮುಂದಾಗಿತ್ತು. ‘ಈ 29 ಎಕರೆಯು ರೈಲ್ವೇಗೆ ಸಂಬಂಧಿಸಿದ ಭೂಮಿ, ಇದನ್ನು ನೀವು ಅತಿಕ್ರಮ ಮಾಡಿಕೊಂಡಿದ್ದೀರಿ, ಹಾಗಾಗಿ ನೀವು ಇದನ್ನು ಖಾಲಿ ಮಾಡಬೇಕು’ ಎನ್ನುವುದು ಸರಕಾರದ ಆದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಹೈಕೋರ್ಟ್ ಕೂಡಾ ‘ಇನ್ನು ಒಂದು ವಾರದೊಳಗೆ ಅಲ್ಲಿನ ಮನೆಗಳನ್ನು ಖಾಲಿ ಮಾಡಿಸಬೇಕು’ ಎಂದು ಆದೇಶ ನೀಡಿತ್ತು. 

ಇದು ನಡೆದುದು ಡಿಸೆಂಬರ್ 20, 2022 ರಂದು. ಸುಮಾರು ಐವತ್ತು ಸಾವಿರ ಜನರು ಮನೆ ಮಾರು ಕಳೆದುಕೊಂಡು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೈಕೋರ್ಟ್ ಹೇಳಿದ ಮೇಲೆ, ಅದೂ ಒಂದು ಮತೀಯರ ಮೇಲೆ ದ್ವೇಷ ಸಾಧಿಸುವ ಪಕ್ಷವೇ ಆಡಳಿತದಲ್ಲಿ ಇರುವಾಗ ಪರಿಸ್ಥಿತಿ ಏನಾಗಬಹುದು? ಜನ ಚಿಂತಾಕ್ರಾಂತರಾಗಿದ್ದರು. ಹೈಕೋರ್ಟೇ ಹೇಳಿದೆ ಮನೆ ಒಡೆಯಲು. ಬಹುತೇಕ ಮಾಧ್ಯಮಗಳು ಒಂದು ಪಕ್ಷಕ್ಕೆ ಒಂದು ಮತಧರ್ಮಕ್ಕೆ ನಿಷ್ಠರಾಗಿರುವವು. ಅವು ಸಹಾಯಕ್ಕೆ ಬರಲಾರವು. ಇನ್ನುಳಿದುದು ಸುಪ್ರೀಂ ಕೋರ್ಟ್ ಒಂದೇ. ಅದು ಸಹಾಯಕ್ಕೆ ಬರುವುದು ಎಂಬ ಖಾತ್ರಿಯೇನು? ಜನರಿಗೆ ಮೌನವಾಗಿ ತಮ್ಮ ನೋವು ತೋಡಿಕೊಳ್ಳುವುದು ಮತ್ತು ದೇವರನ್ನು ಪ್ರಾರ್ಥಿಸುವುದು ಬಿಟ್ಟರೆ ಬೇರೆ ದಾರಿಯಿರಲಿಲ್ಲ.

2022 ಕಳೆಯಿತು. 2023 ಬಂತು. ಜನವರಿ 4 ರಂದು ಹಿರಿಯ ವಕೀಲ ಪ್ರಶಾಂತ ಭೂಷಣ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡರ ಬಳಿ ಪರಿಸ್ಥಿತಿಯ ಗಂಭೀರತೆ ವಿವರಿಸಿದರು. ತಕ್ಷಣ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಪ್ರಾರ್ಥಿಸಿದರು. ಮಾರನೆಯ ದಿನ ಕೈಗೆತ್ತಿಕೊಳ್ಳುವುದಾಗಿ ಸಿಜೆಐ ತಿಳಿಸಿದರು.

ಸುಪ್ರೀಂ ಕೋರ್ಟ್ ಮಧ್ಯಪ್ರವೇಶ

ಜನವರಿ 5, 2023. ಹಲದ್ವಾನಿಯ ಜನರು ಮಾತ್ರವಲ್ಲ ಇಡೀ ದೇಶವೇ ಕಾತರದಿಂದ ಸುಪ್ರೀಂ ಕೋರ್ಟ್ ನ ನಿರ್ಧಾರವನ್ನು ಎದುರು ನೋಡುತ್ತಿತ್ತು. ಸಂತ್ರಸ್ತರ ಪರವಾಗಿ ಪ್ರಸಿದ್ಧ ವಕೀಲರಾದ ಪ್ರಶಾಂತ ಭೂಷಣ್, ಕೊಲಿನ್ ಗೊನ್ಸಾಲ್ವೆಸ್, ಸಿದ್ಧಾರ್ಥ ಲೂತ್ರಾ, ಸಲ್ಮಾನ್ ಖುರ್ಷಿದ್ ವಾದ ಮಂಡಿಸಿ, ಈ ಬಡಪಾಯಿಗಳು ಎಪ್ಪತ್ತು ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ, ಅವರಲ್ಲಿ ಎಲ್ಲ ರೀತಿಯ ದಾಖಲೆಪತ್ರಗಳಿವೆ, ಎಲ್ಲ ರೀತಿಯ ತೆರಿಗೆ ಪಾವತಿಸುತ್ತಿದ್ದಾರೆ, ಸ್ಥಳೀಯ ನಿವಾಸಿಗಳ ಹೆಸರನ್ನು ಮನೆ ತೆರಿಗೆ ರಿಜಿಸ್ಟರ್ ನ ಪುರಸಭೆಯ ದಾಖಲೆಗಳಲ್ಲಿ ನಮೂದಿಸಲಾಗಿದೆ ಮತ್ತು ಅವರು ಹಲವು ವರ್ಷಗಳಿಂದ ನಿಯಮಿತವಾಗಿ ಮನೆ ತೆರಿಗೆ ಪಾವತಿಸುತ್ತಿದ್ದಾರೆ. ಅಲ್ಲಿ ಐದು ಸರಕಾರಿ ಶಾಲೆಗಳು, ಆಸ್ಪತ್ರೆ, ಎರಡು ಓವರ್ ಹೆಡ್ ನೀರಿನ ಟ್ಯಾಂಕ್ ಎಲ್ಲವೂ ಇವೆ. ಅವರಿಗೆ ತಮ್ಮ ವಾದ ಮಂಡಿಸಲು ಅವಕಾಶವೇ ಇಲ್ಲದೆ ಏಕಪಕ್ಷೀಯ ತೀರ್ಪಿನ ಮೂಲಕ ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ; ಇದಕ್ಕಾಗಿ ಪಾರಾಮಿಲಿಟರಿಯನ್ನು ಬಳಸಲಾಗುತ್ತಿದೆ, ಇದು ಸಂವಿಧಾನ ದತ್ತ ಬದುಕುವ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದರು. 

ಆದರೆ ಸರಕಾರ ತನ್ನ ಪಟ್ಟು ಸಡಿಲಿಸಲಿಲ್ಲ. ಅದು ರೈಲ್ವೇ ಭೂಮಿ, ಅಭಿವೃದ್ಧಿ ಕಾರ್ಯಗಳಿಗೆ ಆ ಜಾಗ ಬೇಕು, ಅವರು ಅತಿಕ್ರಮಿಸಿ ಅಲ್ಲಿ ಮನೆ ಕಟ್ಟಿಕೊಂಡಿದ್ದಾರೆ, ಅದನ್ನು ತೆರವು ಗೊಳಿಸಲೇಬೇಕು ಎಂದು ವಾದಿಸಿತು. ಆದರೆ ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಮತ್ತು ಜಸ್ಟಿಸ್ ಅಭಯ್ ಶ್ರೀನಿವಾಸ್ ಓಕಾ ಪೀಠವು ಸರಕಾರದ ವಾದವನ್ನು ಒಪ್ಪಲಿಲ್ಲ. ಇದರಲ್ಲಿ ಅನೇಕ ಗಂಭೀರ ವಿಷಯಗಳು ಒಳಗೊಂಡಿವೆ, ಸಾವಿರ ಸಾವಿರ ಜನರನ್ನು ರಾತ್ರೋ ರಾತ್ರೆ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ, ಇದನ್ನು ಮಾನವೀಯ ನೆಲೆಯಲ್ಲಿ ನೋಡಬೇಕು, ಅದೂ ಅಲ್ಲದೆ ಜನರ ವಿರುದ್ಧ ಪಾರಾಮಿಲಿಟರಿ ಬಳಸುವುದು ಸರಿಯಲ್ಲ ಎಂದಿತು ಮತ್ತು ಉತ್ತರಾಖಂಡ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು. ಸಂಬಂಧ ಪಟ್ಟವರಿಗೆ ನೋಟೀಸ್ ಜಾರಿ ಮಾಡಿತು. ಹಲದ್ವಾನಿಯ ಜನರು ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ರಾಜಕೀಯ ದ್ವೇಷ

ಹೀಗೆ ಹತ್ತಿರ ಹತ್ತಿರ ಅರ್ಧ ಲಕ್ಷದಷ್ಟು ಮಂದಿಯ ಮನೆಯನ್ನು ಪುಡಿಗೈದು ಅವರನ್ನು ಬೀದಿಗೆ ಹಾಕಲು ಉತ್ತರಾಖಂಡ ಸರಕಾರ ಮುಂದಾಗಲು ಮತ್ತು ಅದಕ್ಕೆ ಆ ಸರಕಾರದ ಹಿಂದಿನ ರಾಜಕೀಯ ಪಕ್ಷವು ಬೆಂಬಲ ನೀಡಲು ಇನ್ನೂ ಒಂದು ಮುಖ್ಯ ರಾಜಕೀಯ ಕಾರಣ ಇದೆ ಎನ್ನಲಾಗಿದೆ. ಅದೆಂದರೆ, ಅಲ್ಲಿನ ಜನಸಂಖ್ಯೆಯಲ್ಲಿ ಬಹುತೇಕ ಮಂದಿ ಮುಸ್ಲಿಂ ಸಮುದಾಯದವರು. ಕಳೆದ ಮೂರು ವಿಧಾನಸಭೆಯೂ ಸೇರಿದಂತೆ ಹೆಚ್ಚಿನ ಎಲ್ಲಾ ಕಾಲದಲ್ಲೂ ಅಲ್ಲಿನ ಮತದಾರರು ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದವರು; ಕಾಂಗ್ರೆಸ್ ಅನ್ನು ಬೆಂಬಲಿಸಿದವರು. ಈ ಸಿಟ್ಟು ಕೂಡಾ ಇದರ ಹಿಂದೆ ಕೆಲಸ ಮಾಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

2022 ನೇ ಇಸವಿಯಾಗುವಾಗ ದೇಶದ ಪ್ರತಿಯೊಂದು ಕುಟುಂಬವೂ ಸ್ವಂತ ಸೂರು ಹೊಂದಲಿದೆ ಎಂದು ಈಗಿನ ಪ್ರಧಾನಿಗಳು ಘೋಷಿಸಿ ವರ್ಷಗಳೇ ಕಳೆದು ಹೋದವು. ಇಂದಿಗೂ ವಸತಿ ಇಲ್ಲದ ಮಂದಿ ಈ ದೇಶದಲ್ಲಿ ಕೋಟ್ಯಂತರ. ಈ ನಡುವೆ ದೇಶದಲ್ಲಿ ‘ಬುಲ್ ಡೋಜರ್ ಸಂಸ್ಕೃತಿ’ಯೊಂದು ಆರಂಭವಾಗಿದೆ. ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಮಾನಿಸಬೇಕಿರುವುದು ಈ ದೇಶದ ಕೋರ್ಟುಗಳು. ಆದರೆ ಆರೋಪಿಗಳಿಗೆ ಶಿಕ್ಷೆ ನೀಡುವುದನ್ನು ಪ್ರಭುತ್ವಗಳೇ ಆರಂಭಿಸಿವೆ. ಅದೂ ಎಂತಹ ಶಿಕ್ಷೆ? ಹುಡುಗನೊಬ್ಬ ಅಪರಾಧ ಮಾಡಿದ ಎಂಬ ಆರೋಪದ ಮೇಲೆ ಆತನ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಸಹೋದರ ಸಹೋದರಿಯರು ವಾಸಿಸುವ ಮನೆಗಳನ್ನು ಕೆಡಹುವ ಮೂಲಕ ಆ ನಿರಪರಾಧಿಗಳಿಗೆಲ್ಲ ಸಾಮೂಹಿಕ ಶಿಕ್ಷೆ ನೀಡುವ ಕ್ರಮ! 

ಒಂದು ಮನೆ ಎಂಬುದು ಕುಟುಂಬಗಳ ಜೀವಮಾನದ ಕನಸು. ಅದನ್ನು ನನಸಾಗಿಸಲು ಅವರು ಪಡುವ ಶ್ರಮವೋ ಮಾತಿಗೆ ನಿಲುಕದ್ದು. ಅಂತಹ ಮನೆಯನ್ನು ಬುಲ್ ಡೋಜರ್ ಬಳಸಿ ಕ್ಷಣ ಮಾತ್ರಗಳಲ್ಲಿ ಉರುಳಿಸುವುದು. ಸಾಲದೆಂಬಂತೆ ಇದಕ್ಕೆ ಮತೀಯ ನೆಲೆಯಲ್ಲಿ ಸಾರ್ವಜನಿಕ ಸಮ್ಮತಿ! ನೋಡಿಯೂ ನೋಡದಂತೆ ವರ್ತಿಸುವ ನ್ಯಾಯಾಂಗ!

ದೇಶದ ಅನೇಕ ಕಡೆಗಳಲ್ಲಿ ಕಟ್ಟಡಗಳನ್ನು ಅಕ್ರಮ ಎಂಬ ನೆಲೆಯಲ್ಲಿ ಉರುಳಿಸುವುದನ್ನು ನೋಡುತ್ತಿದ್ದೇವೆ. ಕೇರಳದಲ್ಲಿ ಗಗನ ಚುಂಬಿಗಳನ್ನು ಕೆಡವಲಾಗಿತ್ತು. ಇತ್ತೀಚೆಗೆ ದಿಲ್ಲಿಯ ಬಳಿ ಬಹುಮಹಡಿ ವಸತಿ ಸಂಕೀರ್ಣವನ್ನು ಉರುಳಿಸಿದ್ದನ್ನು ಈ ದೇಶ ‘ಸಂಭ್ರಮಿಸಿದೆ’. ಬೆಂಗಳೂರಿನ ರಾಜಾ ಕಾಲುವೆ ಒತ್ತುವರಿಯಾಗಿದೆ, ಅಲ್ಲಿನ ನೀರು ಹರಿಯಲು ಜಾಗ ಇಲ್ಲದೆ ಕೃತಕ ನೆರೆಯಿಂದ ಮನೆ ಮಾರು ಮುಳುಗಡೆಯಾಗುತ್ತಿದೆ, ಅಲ್ಲಿನ ಕಟ್ಟಡಗಳನ್ನು ಒಡೆದುಹಾಕಲಾಗುವುದು ಎಂಬ ಸುದ್ದಿ ಓದುತ್ತಲೇ ಇದ್ದೇವೆ. ಈಗಾಗಲೇ ಉಲ್ಲೇಖಿಸಿದಂತೆ ಆರೋಪಿಗಳನ್ನು ತನಿಖೆಯೇ ಇಲ್ಲದೆ ಅಪರಾಧಿಗಳು ಎಂದು ಘೋಷಿಸಿ ಅವರ ಮನೆಗಳನ್ನು ಉರುಳಿಸಲಾಗುತ್ತಿದೆ. ಈಗ ರೈಲ್ವೇ ಭೂಮಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಐವತ್ತು ಸಾವಿರ ಮಂದಿಯ ಬದುಕು ಕಸಿದುಕೊಳ್ಳುವ ಯತ್ನ!

ಮುಖ್ಯ ಪ್ರಶ್ನೆಗಳು

ಇಲ್ಲಿ ಕೆಲವು ಮುಖ್ಯ ಪ್ರಶ್ನೆಗಳು ಮೂಡುತ್ತವೆ. ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ನೆಲೆಸಿದ್ದಾರಾದರೆ, ಅವರು ಅಲ್ಲಿ ಮನೆ ಕಟ್ಟುವಾಗ ಸಂಬಂಧ ಪಟ್ಟ ಇಲಾಖೆ, ಅಧಿಕಾರಿಗಳು ಏನು ಮಾಡುತ್ತಿದ್ದರು? ಅದನ್ನು ತಡೆಯಬೇಕಿತ್ತಲ್ಲವೇ? ಯಾವುದೇ ಒಂದು ಮನೆಯನ್ನು ಗಗನ ಚುಂಬಿ ಕಟ್ಟಡವನ್ನು ರಾತ್ರೋ ರಾತ್ರಿ ಕಟ್ಟುವುದಕ್ಕಾಗುತ್ತದೆಯೇ? ಅದಕ್ಕೆ ವರ್ಷಗಳೇ ಹಿಡಿಯುವುದಿಲ್ಲವೇ? ಇಂತಹ ಕಟ್ಟಡಗಳನ್ನು ಒಡೆದುಹಾಕುವುದು ಎಂದರೆ ಅದೊಂದು ನೇಶನಲ್ ವೇಸ್ಟ್ ಅಲ್ಲವೇ? ಅಲ್ಲದೆ ಇಂತಹ ಅಕ್ರಮ ಕಟ್ಟಡ ಕಟ್ಟಲು ನೆರವಾದ ಅಥವಾ ಅವಕಾಶ ಮಾಡಿಕೊಟ್ಟ ಅಧಿಕಾರಿಗಳಿಗೆ ಯಾವ ಶಿಕ್ಷೆ? ಈ ದೇಶದಲ್ಲಿ ಹಾಗೆ ಶಿಕ್ಷೆಯಾದ ಉದಾಹರಣೆಗಳಿವೆಯೇ? ಮರೆಯಲಾಗದ ಪಾಠದಂತಹ ಶಿಕ್ಷೆ ನೀಡಿದರೆ ಆಗ ಮುಂದೆ ಇಂತಹ ಅಧಿಕಾರ ದುರುಪಯೋಗದ ಘಟನೆಗಳು ಮರುಕಳಿಸುವುದಿಲ್ಲ ಅಲ್ಲವೇ?

ಎಲ್ಲಕ್ಕಿಂತಲೂ ಮುಖ್ಯವಾಗಿ ಕಾನೂನು ಯಾವತ್ತೂ ಮಾನವೀಯ ಮುಖವನ್ನು ಹೊಂದಿರಬೇಕು. ಕಾನೂನು ನಿಯಮಗಳನ್ನು ನಾವೇ ಮಾಡಿರುವುದು. ಅವುಗಳನ್ನು ಸೂಕ್ತ ರೀತಿಯಲ್ಲಿ ಸಂದರ್ಭಕ್ಕೆ ಸರಿಯಾಗಿ ಬದಲಾಯಿಸಬೇಕಾದವರೂ ನಾವೇ. ಅವುಗಳನ್ನು ಪಾಲಿಸಬೇಕು, ಜಾರಿಗೊಳಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವುಗಳನ್ನು ಜಾರಿಗೊಳಿಸುವಾಗ ಬಡವರು ಮತ್ತು ಧನಿಕರ ನಡುವೆ ಭೇದ ಮಾಡಬಾರದು. ವಿಶೇಷವಾಗಿ ಬಡವರ ಮನೆಗಳನ್ನು ಯಾವುದೇ ಕಾರಣಕ್ಕೂ ನೆಲಸಮ ಮಾಡುವಷ್ಟರ ಮಟ್ಟಿನ ಅಮಾನವೀಯತೆಯನ್ನು ತೋರಬಾರದು. ಇಲ್ಲ, ಆ ಮನೆಗಳನ್ನು ತೆರವುಗೊಳಿಸುವುದು ಅನಿವಾರ್ಯವೇ? ಸರಿ, ಅವರಿಗೆ ಬದಲಿ ವ್ಯವಸ್ಥೆಯನ್ನಾದರೂ ಮಾಡಿಕೊಡಬೇಕಲ್ಲವೇ?  ಎಷ್ಟಾದರೂ ಅವರೂ ನಮ್ಮ ದೇಶದ ಪ್ರಜೆಗಳೇ ಅಲ್ಲವೇ? 

ಹಲದ್ವಾನಿಯಂತಹ ಘಟನೆಗಳು ಇನ್ನಾದರೂ ಕಾನೂನನ್ನು ಹೆಚ್ಚು ಮಾನವೀಯಗೊಳಿಸುವ ಮತ್ತು ಅದರ ಜಾರಿಯಲ್ಲಿ ಸದಾ ಬಡವರ ಪರ ಸಹಾನುಭೂತಿ ಇರುವಂತೆ ನೋಡಿಕೊಳ್ಳುವ ಹೊಸ ಆಲೋಚನೆಗೆ ದಾರಿಯಾಗಲಿ. ಎಲ್ಲಕ್ಕಿಂತ ಮುಖ್ಯವಾಗಿ ಆರೋಪಿಗಳನ್ನು ಅಪರಾಧಿಗಳು ಎಂದು ಪ್ರಭುತ್ವವೇ ತೀರ್ಮಾನಿಸಿ ಬುಲ್ಡೋಜರ್ ಬಳಸಿ ಮನೆಗಳನ್ನು ಒಡೆದುಹಾಕುವ ಕ್ರೂರ ಅನಾಗರಿಕ ಪದ್ಧತಿ ತಕ್ಷಣ ನಿಲ್ಲಬೇಕು. ದೇಶದ ನ್ಯಾಯಾಂಗ ಅಂತಹ ಸಂವಿಧಾನ ವಿರೋಧಿ ಮತ್ತು ಮಾನವ ಹಕ್ಕುಗಳ ವಿರೋಧಿ ಕ್ರಮಗಳಿಗೆ ಅವಕಾಶ ಕೊಡಕೂಡದು.

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page