Saturday, March 29, 2025

ಸತ್ಯ | ನ್ಯಾಯ |ಧರ್ಮ

ಭಾರತವನ್ನು ತೊರೆಯಲಿದ್ದಾರೆ ಸಾವಿರಾರು ಕೋಟ್ಯಾಧಿಪತಿಗಳು ; ಸಮೀಕ್ಷೆಯಿಂದ ಹೊರಬಿತ್ತು ಆತಂಕಕಾರಿ ಮಾಹಿತಿ

ಭಾರತದ ಪ್ರಮುಖ ಬ್ಯಾಂಕಿಂಗ್ ಸಂಸ್ಥೆ ಕೋಟಕ್ ಮಹೀಂದ್ರಾ ಬ್ಯಾಂಕ್‌ ಮತ್ತು ಆರ್ಥಿಕ ಸಲಹಾ ಸಂಸ್ಥೆ EY ಸಂಸ್ಥೆಯ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅತ್ಯಧಿಕ ಸಂಖ್ಯೆಯ ಭಾರತದ ಕೋಟ್ಯಾಧಿಪತಿಗಳು ದೇಶ ತೊರೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಈಗಾಗಲೇ ನೂರಾರು ಸಂಖ್ಯೆಯಲ್ಲಿ ಭಾರತದ ಶ್ರೀಮಂತರು ದೇಶ ತೊರೆದು ತಮ್ಮ ಬದುಕಿಗೆ ಸೂಕ್ತ ಅನ್ನಿಸೋ ದೇಶಕ್ಕೆ ವಲಸೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತದ ಜೀವನ ಪರಿಸ್ಥಿತಿಗಳು, ಇಲ್ಲಿನ ವಿಪರೀತ ತೆರಿಗೆ ವ್ಯವಸ್ಥೆ, ಭಾರತದ ಅನಾನುಕೂಲತೆಗಳು, ವಿದೇಶದಲ್ಲಿನ ಉತ್ತಮ ಜೀವನಮಟ್ಟ, ಅನುಕೂಲಕರ ವ್ಯಾಪಾರ ವಾತಾವರಣ, ಉತ್ತಮ ಆರೋಗ್ಯ ಸೇವೆ ಮತ್ತು ಗುಣಮಟ್ಟದ ಶಿಕ್ಷಣ ವ್ಯವಸ್ಥೆಗಳೇ ಈ ವಲಸೆಗೆ ಪ್ರಮುಖ ಕಾರಣಗಳಾಗಿವೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ವಿದೇಶಾಂಗ ಸಚಿವಾಲಯದ ಪ್ರಕಾರ, ಪ್ರತಿ ವರ್ಷ 2.5 ಮಿಲಿಯನ್ ಭಾರತೀಯರು ಇತರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. “ಸಮೀಕ್ಷೆಗೆ ಒಳಗಾದ ಪ್ರತಿ ಐದು ಅತಿ ಶ್ರೀಮಂತರಲ್ಲಿ ಒಬ್ಬರು ಪ್ರಸ್ತುತ ವಲಸೆ ಪ್ರಕ್ರಿಯೆಯಲ್ಲಿದ್ದಾರೆ ಅಥವಾ ವಲಸೆ ಹೋಗಲು ಈಗಾಗಲೇ ತೀರ್ಮಾನಿಸಿದ್ದಾರೆ” ಎಂದು ಸಮೀಕ್ಷೆಯ ಸಂಶೋಧನೆಗಳು ತಿಳಿಸಿವೆ. ಅವರಲ್ಲಿ ಕೆಲವರು ತಮ್ಮ ಭಾರತೀಯ ಪೌರತ್ವವನ್ನು ಉಳಿಸಿಕೊಂಡು ತಮ್ಮ ಆಯ್ಕೆಯ ಆತಿಥೇಯ ದೇಶದಲ್ಲಿ ಶಾಶ್ವತವಾಗಿ ವಾಸಿಸಲು ಬಯಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಯುಎಇಯ ಗೋಲ್ಡನ್ ವೀಸಾ ಯೋಜನೆ ಶ್ರೀಮಂತರನ್ನು ಆಕರ್ಷಿಸುತ್ತಿದೆ. ವಲಸೆ ಹೋಗುವ ಶ್ರೀಮಂತರು ತಮ್ಮ ಭಾರತೀಯ ಪೌರತ್ವವನ್ನು ಉಳಿಸಿಕೊಳ್ಳಲು ಬಯಸುತ್ತಾರೆ. 36 ರಿಂದ 40 ಮತ್ತು 61 ವರ್ಷಕ್ಕಿಂತ ಮೇಲ್ಪಟ್ಟವರು ವಲಸೆ ಹೋಗುವ ಸಾಧ್ಯತೆ ಹೆಚ್ಚಿದೆ. 2023 ರಲ್ಲಿ ಭಾರತದಲ್ಲಿ 2.83 ಲಕ್ಷ ಉನ್ನತ ಶ್ರೀಮಂತ ವ್ಯಕ್ತಿಗಳಿದ್ದು, ಇವರ ಒಟ್ಟು ಸಂಪತ್ತು 2.83 ಟ್ರಿಲಿಯನ್ ರೂ. ಆಗಿದೆ. 2028 ರ ವೇಳೆಗೆ ಈ ಸಂಖ್ಯೆ 4.3 ಲಕ್ಷಕ್ಕೆ ಏರುವ ಸಾಧ್ಯತೆಯಿದೆ.

ಭಾರತದಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ವಾರ್ಷಿಕವಾಗಿ 250,000 ಡಾಲರ್ ಮಾತ್ರ ಹೊರತೆಗೆಯಬಹುದು, ಆದರೆ ಅನಿವಾಸಿ ಭಾರತೀಯರಿಗೆ 1 ಮಿಲಿಯನ್ ಡಾಲರ್ ವರೆಗೆ ಹೊರತೆಗೆಯಲು ಅವಕಾಶವಿದೆ.

ಈ ವಲಸೆಯಿಂದ ಭಾರತದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ವಲಸೆಯ ಪ್ರಮಾಣವು ನಿಧಾನವಾಗುತ್ತಿದೆ ಎಂದು ವರದಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page