Friday, June 20, 2025

ಸತ್ಯ | ನ್ಯಾಯ |ಧರ್ಮ

ಆರ್ಸಿಬಿ ವಿಜಯೋತ್ಸವದ ಕಾಲ್ತುಳಿತ; ಸಿಎಂ, ಡಿಸಿಎಂ ಸೇರಿ 13 ಜನರ ವಿರುದ್ಧ ದೂರು ದಾಖಲಿಸಿದ ಟಿಜೆ ಅಬ್ರಾಹಂ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಜನರ ದುರ್ಮರಣ ಮತ್ತು 56 ಜನರು ಗಾಯಗೊಂಡ ಭೀಕರ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಆ ಸಂದರ್ಭದಲ್ಲಿ ನಗರದ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಸೇರಿದಂತೆ 13 ಜನರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ದೂರು ನೀಡಿದ್ದಾರೆ.

ಗುರುವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿ 13 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ, ಕೆಎಸ್‍ಸಿಎ, ಆರ್‌ಸಿಬಿ, ಅಮಾನತುಗೊಂಡ ಪೊಲೀಸ್ ಅಧಿಕಾರಿಗಳಾದ ವಿಕಾಸ್ ಕುಮಾರ್, ಶೇಖರ್ ತೆಕ್ಕಣನವರ್, ವಿಧಾನಸೌಧ ಡಿಸಿಪಿ ಕರಿಬಸನಗೌಡ ಮತ್ತಿತರರನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೆಎಸ್‍ಸಿಎ ಮತ್ತು ಆರ್‌ಸಿಬಿ ಆಡಳಿತಾಧಿಕಾರಿಗಳು ಯಾವುದೇ ಪೂರ್ವ ಯೋಜನೆಯಿಲ್ಲದೆ ಕಾರ್ಯಕ್ರಮ ನಡೆಸಿದ್ದಾರೆ. ಕಾರ್ಯಕ್ರಮವನ್ನು 2 ದಿನ ಮುಂದೂಡಬಹುದಿತ್ತು. ಈ ದುರಂತಕ್ಕೆ ಕಾರಣರಾದವರ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ದುರಂತಕ್ಕೆ ನೇರವಾಗಿ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಈ ಸಾವುಗಳಿಗೆ ಸರಕಾರ ಉತ್ತರವನ್ನು ಕೊಡಬೇಕು ಎಂದು ದೂರಿನಲ್ಲಿ ಅಬ್ರಹಾಂ ಆಗ್ರಹಿಸಿದ್ದಾರೆ.

ಇದೊಂದು ಖಾಸಗಿ ತಂಡದ ವಿಜಯೋತ್ಸವವಾಗಿದ್ದು, ಇದರಲ್ಲಿ ಸರ್ಕಾರದ ಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದು ಅಸಂಬದ್ಧ. ಕಾರ್ಯಕ್ರಮದಲ್ಲಿ ಅವರುಗಳು ಭಾಗಿ ಆಗುವ ಅಗತ್ಯವೇನಿತ್ತು ಎಂದು ಟಿಜೇ ಅಬ್ರಾಹಂ ಸುದ್ದಿಗಾರರೊಂದಿಗೆ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ ಐಪಿಎಲ್ ಪಂದ್ಯಾವಳಿಯೇ ಒಂದು ಫಿಕ್ಸಿಂಗ್ ಎಂಬ ಅನುಮಾನಗಳು ವ್ಯಕ್ತವಾಗಿದೆ ಎಂದು ಟಿಜೆ ಅಬ್ರಾಹಂ ಹೇಳಿದ್ದಾರೆ. ಯಾಕೆಂದರೆ ಐಪಿಎಲ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನವೇ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆಸಿದ್ದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಹಾಗಿದ್ದರೆ ಆರ್ಸಿಬಿ ಗೆಲ್ಲುವ ಬಗ್ಗೆ ಮುಂಚೆಯೇ ಮಾಹಿತಿ ಇತ್ತೇ, ಇದೊಂದು ಫಿಕ್ಸಿಂಗ್ ಇರಬಹುದೇ ಎಂದು ಟಿಜೆ ಅಬ್ರಾಹಂ ದೂರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page