Wednesday, June 19, 2024

ಸತ್ಯ | ನ್ಯಾಯ |ಧರ್ಮ

ಚಂದನ್ ಶೆಟ್ಟಿ ನಟನೆಯ ಹೊಸಾ ಚಿತ್ರದ ಟೈಟಲ್ ಅನಾವರಣ!

ವರಮಹಾಲಕ್ಷ್ಮಿ ಹಬ್ಬದಂದು ಪ್ರೇಕ್ಷಕರಿಗೆ ಕಾದಿದೆ ಸರ್‍ಪ್ರೈಸ್!
ರ್ಯಾಪರ್ ಆಗಿ ಪ್ರವರ್ಧಮಾನಕ್ಕೆ ಬಂದು, ಆ ವಲಯದಲ್ಲಿಯೇ ಒಂದಷ್ಟು ಖ್ಯಾತಿ ಪಡೆದಿರುವವರು ಚಂದನ್ ಶೆಟ್ಟಿ. ತಮ್ಮ ವೃತ್ತಿಯಲ್ಲಿ ಬಹು ಬೇಡಿಕೆ ಚಾಲ್ತಿಯಲ್ಲಿರುವಾಗಲೇ ಚಂದನ್ ನಟನೆಯತ್ತ ಮುಖ ಮಾಡಿದ್ದಾರೆ. ಅವರು ನಾಯಕ ನಟನಾಗಿ ನಟಿಸಿರುವ ಒಂದೆರಡು ಸಿನಿಮಾಗಳು ಅಚಿತಿಮ ಘಟ್ಟದಲ್ಲಿರುವಾಗಲೇ ಚಂದನ್ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಯುವ ನಿರ್ದೇಶಕ ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರದ ಟೈಟಲ್ ಇದೇ 25ರಂದು ಅಂದರೆ, ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಅನಾವರಣಗೊಳ್ಳಲಿದೆ.
ಇದೇ ಹದಿನೆಂಟನೇ ತಾರೀಕಿನಂದು ಚಿತ್ರತಂಡ ಟೈಟಲ್ ಪ್ರೋಮೋ ಒಂದನ್ನು ಬಿಡುಗಡೆಗೊಳಿಸಿದೆ. ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗಳೂ ಸಿಕ್ಕಿವೆ. ಈ ಮೂಲಕವೇ ಸದರಿ ಚಿತ್ರದ ಶೀರ್ಷಿಕೆ ಏನಿರಬಹುದೆಂಬ ಕುತೂಹಲವೂ ಮೂಡಿಕೊಂಡಿದೆ. ಒಂದು ಪ್ರತಿಭಾನ್ವಿತ ಯುವ ತಂಡ, ಒಂದೊಳ್ಳೆ ಕಥೆಯ ಮೂಲಕ ಈ ಸಿನಿಮಾದೊಂದಿಗೆ ಚಂದನ್ ಪ್ರೇಕ್ಷಕರ ಮುಂದೆ ಬರುವ ಲಕ್ಷಣಗಳೂ ದಟ್ಟವಾಗಿವೆ. ಒಟ್ಟಾರೆ ಸಿನಿಮಾ ಹೇಗಿರಬಹುದೆಂಬ ಸಣ್ಣ ಸೂಚನೆ ಈ ಟೈಟಲ್ ಜೊತೆಗೇ ಅನಾವರಣಗೊಳ್ಳುವ ನಿರೀಕ್ಷೆಗಳಿವೆ.
ಈ ಹಿಂದೆ ಶ್ರೀ ಮುರುಳಿ ನಾಯಕನಾಗಿ ನಟಿಸಿದ್ದ `ಲೂಸ್ ಗಳು’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಅರುಣ್ ಅಮುಕ್ತ. ಮೂಲತಃ ಆಡ್ ಫಿಲಂ ಮೇಕರ್ ಆಗಿರುವ ಅರುಣ್, ಚಿತ್ರರಂಗದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೆಲ್ಲ ಅನುಭವಗಳನ್ನು ಒಗ್ಗೂಡಿಸಿಕೊಂಡು ಒಂದೊಳ್ಳೆ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರಂತೆ. ಸದ್ಯದ ಮಟ್ಟಿಗೆ ಇದೊಂದು ಟೀನೇಜ್ ಡ್ರಾಮಾ ಆಗಿರಲಿದೆ ಎಂಬ ಏಕಮಾತ್ರ ಸುಳಿವು ಚಿತ್ರತಂಡದ ಕಡೆಯಿಂದ ಸಿಕ್ಕಿದೆಯಷ್ಟೇ.
ಈ ಚಿತ್ರದ ತಾರಾಗಣದಲ್ಲಿ ಚಂದನ್ ಶೆಟ್ಟಿ ಜೊತೆಗೆ ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ತಾಂತ್ರಿಕ ವರ್ಗವೂ ಸೇರಿದಂತೆ, ಬಹುಮುಖ್ಯವಾದ ಇನ್ನೊಂದಷ್ಟು ವಿಚಾರಗಳನ್ನು ಹಂತ ಹಂತವಾಗಿ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ತೀರ್ಮಾನಿಸಿದೆ.

Related Articles

ಇತ್ತೀಚಿನ ಸುದ್ದಿಗಳು