Friday, June 20, 2025

ಸತ್ಯ | ನ್ಯಾಯ |ಧರ್ಮ

ಸಿನೆಮಾ ಲೋಕಕ್ಕೊಂದು ಹೊಸ ಸೂತ್ರ ಹೆಣೆದ ʼಟೋಬಿʼ

ನಮ್ಮ ಜೀವನದ ಪ್ರತಿ ಕ್ಷಣವನ್ನು ಪ್ರೀತಿಸುವುದೇ ನಿಜವಾದ ಪ್ರೀತಿ.

“ಹರಕೆ ಕುರಿ ತಪ್ಪಿಸ್ಕೊಂಡಿದೆ. ಯಾವ್ದೆ ಕಾರಣಕ್ಕೂ ಕುರಿ ಊರಿಗೆ ಕಾಲಿಡ್ಬಾರ್ದು. ಕುರಿ ಊರಿಗೆ ಬಂದ್ರೆ ಬರಿ ಕುರಿ ಆಗಿರಲ್ಲ, ಮಾರಿ ಆಗಿರತ್ತೆ” ಸಿನಿಮಾದ ಬಹಳ ಮುಖ್ಯ ಡೈಲಾಗ್ ಇದು.

ನಮ್ಮ‌ ನಡುವೆ ಇರುವ, ನಮ್ಮ ನಡುವೆ ಇದ್ದೂ ನಾವು ಗುರುತಿಸಲು ಪ್ರಯತ್ನವೇ ಪಡದ ವ್ಯಕ್ತಿ ಟೋಬಿ. ಸಮಾಜದಿಂದ ದೂರ ಇಡಲ್ಪಟ್ಟ ವ್ಯಕ್ತಿ ನಮ್ಮ ನಡುವಿ‌ನ ಹೀರೋ ಆಗ್ತಾನೆ ಅಂದ್ರೆ ಅದು ನಮ್ಮ ಟಿ ಕೆ ದಯಾನಂದ್ (ದಯಣ್ಣ) ಅವರ ಕಥೆಗೆ ಇರುವ ತಾಕತ್ತು. ನಮ್ಮ ದಯಣ್ಣ ಸಮಾಜವನ್ನು ನೋಡುವ ದೃಷ್ಟಿ ಕೋನವೇ ವಿಭಿನ್ನ. ಎಲ್ಲರಂತೆ ಇವರು ನೋಡಿದ್ದರೆ ‘ರಸ್ತೆ ನಕ್ಷತ್ರ’ದಂತಹ ಪುಸ್ತಕ ಹೊರಬರುತ್ತಿರಲಿಲ್ಲ ಮತ್ತು ಟೋಬಿ ಅಂತವನು ಹೀರೋ ಆಗುತ್ತಿರಲಿಲ್ಲ. ಟೋಬಿಯೂ ಸಹ ನಮ್ಮ ನಡುವಿನ ರಸ್ತೆ ನಕ್ಷತ್ರವಾಗಿ ಕಾಣಿಸುತ್ತಾನೆ.

“ಟೋಬಿ” ಇಲ್ಲಿಯವರೆಗಿನ ಕನ್ನಡ ಚಿತ್ರಗಳಲ್ಲಿ ವಿಶೇಷ ಪ್ರಯತ್ನ. ಹಿಂದೆಂದೂ ಯಾರೂ ಮಾಡಿರದ ಕಥೆ ಮತ್ತು ಪಾತ್ರವೇ ಟೋಬಿ. ನಮ್ಮ ನಡುವೆ ಅನಾಥರಾಗಿ ಬದುಕುವ ಎಷ್ಟೋ ಜೀವಗಳು ಇವೆ. ಆ ಜೀವಗಳು ಅನಾಥರಾಗಿದ್ದಾರೆ ಎಂದ ಮಾತ್ರಕ್ಕೆ ಅವರಿಗೆ ಮನುಷ್ಯತ್ವ ಇಲ್ಲ ಅಂತಲ್ಲ. ಅವರಿಗೆ ನಮ್ಮಲ್ಲೆರಿಗಿಂತ ಜಾಸ್ತಿ ಮಾನವೀಯತೆಯ ಜೊತೆಗೆ ಸಮಾಜವನ್ನು ಪ್ರೀತಿಸುವ ಮನಸ್ಸು ಇರುತ್ತದೆ. ಅದೇ ರೀತಿಯ ವ್ಯಕ್ತಿ ಟೋಬಿ. ಇದು ಕೇವಲ ಟೋಬಿ ಒಬ್ಬನ ಕಥೆ ಮಾತ್ರವಲ್ಲ. ನಮ್ಮೂರಿನಲ್ಲಿ / ನಿಮ್ಮೂರಿನಲ್ಲಿ ಎಷ್ಟೋ ವರ್ಷಗಳಿಂದ ತುಳಿತಕ್ಕೆ ಒಳಗಾಗಿರುವ ಸಮುದಾಯ, ನಿರ್ಲಕ್ಷ್ಯಕ್ಕೊಳಪಟ್ಟ ವ್ಯಕ್ತಿಗಳು, ಸಮಾಜದಿಂದ ದೂರವಿರಿಸಿದ ಕುಟುಂಬಗಳ ಕಥೆ.

ರಾಜ್ ಬಿ ಶೆಟ್ಟಿ ಅವರ ಹಿಂದಿನ ಸಿನಿಮಾ ಗುರಡ ಗಮನ ವೃಷಭ ವಾಹನ ರೀತಿಯಲ್ಲಿ ಹೊಡಿ-ಬಡಿ, ಕೊಲೆಯ ಮೂಲಕ ಕರ್ಮಷಿಯಲ್ ಟಚ್ ಕೊಟ್ಟಿದ್ದಾರೆ ಎಂದು ನೋಡಿದರೆ ಅದು ನಮ್ಮ ಮೂರ್ಖತನ. ಟೋಬಿ ಸಿನಿಮಾ ಕೊಡುವ ಆಯಾಮವೇ ಬೇರೆ. ಸಮಾಜದಲ್ಲಿ ಯಾರೂ ಹತ್ತಿರ ಸೇರಿಸದ ವ್ಯಕ್ತಿಯ ಹೃದಯದಲ್ಲೂ ಪ್ರೀತಿ ಮೊಳೆಯುತ್ತದೆ. ಆತನು ವ್ಯಕ್ತಪಡಿಸುವ ಪ್ರೀತಿಯೂ ನಮ್ಮ ಸಂವೇದನಾ ಶೀಲತೆಯನ್ನು ಬಡಿದೆಚ್ಚರಿಸುತ್ತದೆ. ಆದರೆ ಟೋಬಿಯ ಮುಗ್ಧತೆಯನ್ನು ಕ್ರಿಮಿನಲ್ ಕೆಲಸಗಳಿಗೆ ಬಳಸಲಾಗುತ್ತದೆ. ಇಲ್ಲಿ ನಮ್ಮೆಲ್ಲರ ಮನುಷ್ಯತ್ವವನ್ನೇ ಪ್ರಶ್ನಿಸಲಾಗುತ್ತದೆ. 

ತಾನು ಯಾವ ಮತ, ಕುಲ, ಎಲ್ಲಿಯವನು ಎಂದು ಏನೂ ಗೊತ್ತಿಲ್ಲದೆ ಇದ್ದ ಹುಡುಗನಿಗೆ ಟೋಬಿ ಎಂದು ಹೆಸರಿಟ್ಟಿದ್ದು ಒರ್ವ ಪಾದ್ರಿ ಇಗ್ನೇಷಿಯಸ್. ಟೋಬಿ ಅನ್ನುವ ಪದ ಹೀಬ್ರೂ ಭಾಷೆಯದ್ದು. ಮೊದಲೆಲ್ಲ ಹುಡುಗ ಟೋಬಿ ಇಷ್ಟಪಡುವ ವ್ಯಕ್ತಿಯನ್ನು, ಕೆಲಸವನ್ನು ಯಾರಾದರೂ ಪ್ರಶ್ನೆ ಮಾಡಿದರೆ ಅವರಿಗೆ ಹೊಡೆದು ಬಿಡುತ್ತಿದ್ದ. ಅವನ ಮುಗ್ಧತೆಯ ಜೊತೆಗೆ ಆತನ ಕೋಪವನ್ನು ಬಳಸಿಕೊಂಡವರು ಹಲವರು.

ತಾನು ಅನಾಥ ಎಂದು ಎಂದಿಗೂ ತೋರ್ಪಡಿಸಿಕೊಳ್ಳದ ಟೋಬಿಗೆ ಅನಾಥ ಹೆಣ್ಣು ಮಗುವೊಂದು ಸಿಗುತ್ತದೆ. ಆ ಮಗುವನ್ನು ತನ್ನದೇ ಸ್ವಂತ ಮಗಳ ರೀತಿಯಲ್ಲಿ ಬೆಳೆಸುತ್ತಾನೆ. ಇಲ್ಲಿ ಟೋಬಿ ಸ್ರೀವಾದಿಯಾಗಿಯೂ ಕಾಣಿಸುತ್ತಾನೆ. ಪುಟ್ಟ ಮಗಳು ಜೆನ್ನಿಯ ಸ್ವಾತಂತ್ರ್ಯಕ್ಕೆ ಎಂದಿಗೂ ಅಡ್ಡಿ ಪಡಿಸುವುದಿಲ್ಲ. ವಿಶೇಷವೆಂದರೆ, ಜೆನ್ನಿ ಟೋಬಿಯನ್ನು ಹೆಸರಿಡಿದೆ ಕರೆಯುತ್ತಾಳೆ. ಇನ್ನು ಟೋಬಿ, ತಾನು ಇಷ್ಟ ಪಟ್ಟವಳು ಸೆಕ್ಸ್ ವರ್ಕರ್ ಎಂದು ಗೊತ್ತಿದ್ದರೂ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನನ್ನನ್ನು ಮದುವೆ ಆಗು ಎಂದು ಕೇಳುತ್ತಾನೆ. ಅದಕ್ಕೆ ಅವಳು ‘ನಾನು ಮೈ ಮಾರ್ಕೊಂಡು ಬದ್ಕೋಳು’ ಅಂತಾಳೆ. ‘ನೀನು ಏನಾದರೂ ಮಾರ್ಕೊಂಡು ಇರು, ನಮ್ಮ ಟೋಬಿನ ಮದುವೆ ಆಗು’ ಎಂದು ಜೆನ್ನಿ ಪ್ರತ್ಯುತ್ತರ ನೀಡುತ್ತಾಳೆ. ಇಲ್ಲಿ ಹೆಣ್ಣಿನ ಸ್ವಾತಂತ್ರ್ಯವನ್ನು ಗೌರವಿಸುವ ಜೊತೆಗೆ ಆಕೆಯನ್ನು ಮನುಷ್ಯಳಂತೆ ಕಾಣುವುದನ್ನು ಟೋಬಿ ತೋರಿಸುತ್ತಾನೆ.

ಸತ್ತ ನಂತರ ಹೆಣ ಕೊಯ್ಯುವ (Mortuary) ಶವಾಗಾರವನ್ನೇ ಟೋಬಿ ತನ್ನ ಮನೆ ಮಾಡಿಕೊಂಡಿರುತ್ತಾನೆ. ಮಾತು ಬಾರದ ಟೋಬಿಗೆ ಸತ್ತ ವ್ಯಕ್ತಿಯು ಯಾವ ಜಾತಿ, ಯಾವ ಕುಲ, ಯಾವ ಧರ್ಮ ಎಂಬುದನ್ನು ಲೆಕ್ಕಿಸದೆ ಮಾನವೀಯತೆ ಒಂದೇ ಮುಖ್ಯ ಎಂದು ತೋರುತ್ತಾನೆ. 

ರಾಜ್ ಬಿ ಶೆಟ್ಟಿ ಅಭಿನಯದಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ ಅಂತ ಹೇಳಬಹುದು. ಮಾತಿಲ್ಲದೆ ಕೇವಲ ಆಂಗಿಕ ಚಲನೆಗಳ ಮೂಲಕ ಅಭಿನಯಿಸುವುದು ಕಷ್ಟವೇ. ಆದರೂ ರಾಜ್ ಕಷ್ಟವನ್ನು ಸುಲಭವಾಗಿಸಿದ್ದಾರೆ. ಟೋಬಿ ಅನ್ನುವ ನಮ್ಮ ನಡುವೆ ಇದ್ದು ನಾವು ಗುರುತಿಸಲು ಪ್ರಯತ್ನವೇ ಪಡದ ಪಾತ್ರವನ್ನು ರಾಜ್ ಅಭಿನಯದಲ್ಲಿ ಹಿಡಿದಿಟ್ಟಿರುವುದು ಅದ್ಭುತ. ನನ್ನ ಪ್ರಕಾರ ಇದೊಂದು ಪ್ರಯೋಗ. ರಾಜ್ ಅವರ ಹಿಂದಿನ ಸಿನಿಮಾ GGVV (ಗರುಡ ಗಮನ ವೃಷಭ ವಾಹನ) ಯಲ್ಲಿ ಅವರು ಶಿವನಾಗಿ ಅಭಿನಯಿಸಿದ್ದಾರೆ. ಆದೇ ಟೋಬಿಯಲ್ಲಿ ತನ್ನನ್ನೇ ತಾನು ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ.

ರಾಜ್ ಅವರ ಪಾತ್ರಕ್ಕೆ ಬೆಂಬಲವಾಗಿ ಚೈತ್ರ ಜೆ ಆಚಾರ್ ಕಾಣಿಸಿಕೊಂಡಿದ್ದಾರೆ. ಚೈತ್ರ ಅವರನ್ನು ಎರಡು ಶೇಡ್‌ನಲ್ಲಿ ನೋಡಬಹುದು. ಮೊದಲು ಕಾಲೇಜು ಹುಡುಗಿಯಾಗಿ ನಂತರ ಮನೆ ನಡೆಸುವಂತಹ ಜವಾಬ್ದಾರಿಯುತ ಮಹಿಳೆಯಾಗಿ. ಚೈತ್ರ ಟೋಬಿಯ ಮಗಳಾಗಿ ಬಹಳ ಕಾಡುತ್ತಾರೆ. ಯಾರು ಇಲ್ಲದ ತನಗೆ ಟೋಬಿಯೇ ತಂದೆ- ತಾಯಿ ಎಂದು ತಿಳಿದಿದ್ದ ಮಗಳು ಜೆನ್ನಿ, ಕೇವಲ ಮಗಳಾಗಿ ಉಳಿಯುವುದಿಲ್ಲ. ಮಾತು ಬಾರದ, ಯಾರು ಏನೇ ಹೇಳಿದರು ಕುರಿಯಂತೆ ತಲೆ ಆಡಿಸುವ ಟೋಬಿಗೆ ಆಸರೆಯಾಗಿ‌ ನಿಲ್ಲುತ್ತಾಳೆ. ಜೆನ್ನಿಯ ಪಾತ್ರ ಬದುಕಿನ ಭರವಸೆಯ ಬಗ್ಗೆ ಮಾತಾಡುತ್ತದೆ.

ಸಮಾಜದಲ್ಲಿ ನಿಕೃಷ್ಟ ಎಂದು ಹೇಳುವ ವ್ಯಕ್ತಿಗೂ  ಇಲ್ಲಿ ಪ್ರೀತಿ ಹುಟ್ಟಿ ಇಲ್ಲಿನ ಪ್ರೀತಿ‌ ಮನುಷ್ಯತ್ವವನ್ನು ಮಾತನಾಡುತ್ತದೆ. ಮೇಲೆ ಹೇಳಿದ ಹಾಗೇ ಸ್ತ್ರೀ ದೃಷ್ಟಿಕೋನದಿಂದ ನೋಡಿದರೆ ಹೆಣ್ಣಿನ ಸ್ವಾತಂತ್ಯವನ್ನು ಸಿನೆಮಾ ಅತೀ ಹೆಚ್ಚಾಗಿ ಪ್ರತಿಧ್ವನಿಸುತ್ತದೆ. ಇಲ್ಲಿ ಸಂಯುಕ್ತ ಹೊರನಾಡ್ ಅವರ ಬದುಕು ಎಲ್ಲರಂತೆ ಕಾಣುವುದಿಲ್ಲ. ಬದುಕಿನ ಉಳಿವಿಗಾಗಿ ವೇಶ್ಯಾವೃತ್ತಿ ಮಾಡಿ ಬದುಕುವ ಸಾವಿತ್ರಿ ಪಾತ್ರದಲ್ಲಿ ಕಾಣಿಸುವ ಸಂಯುಕ್ತ ಹೊರನಾಡ್ ಅವರ ಮೇಲೆ ಟೋಬಿಗೆ ಪ್ರೀತಿ ಹುಟ್ಟುತ್ತದೆ.‌ ಟೋಬಿಯ ಪ್ರೀತಿ ಎಷ್ಟು ಮಹತ್ವದ್ದು ಎಂದು ತೋರಿಸಲು ಸಂಯುಕ್ತ ಅವರು ಹೇಳುವ ಮಾತಿಗೆ ತಾನು ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾನೆ ಟೋಬಿ. ಟೋಬಿಯ ಪಾತ್ರಕ್ಕೆ ಸರಿಸಮಾನಾಗಿ ಸಂಯುಕ್ತ ಅವರ ಪಾತ್ರ ಹೆಚ್ಚು ಕಾಡುತ್ತದೆ.

ಬಹಳ ಮುಖ್ಯ ಮತ್ತು ಇವರು ಇಲ್ಲದಿದ್ದರೆ ಟೋಬಿಯ ಅಸ್ತಿತ್ವಕ್ಕೆ ಬೆಲೆ ಸಿಗುವುದು ಕಡಿಮೆ ಅನಿಸುವಷ್ಟು ಪಾದ್ರಿ ಪಾತ್ರದಲ್ಲಿ ಕಾಣಿಸಿದ ಯೋಗಿ ಬಂಕೇಶ್ವರ್, ಇಗ್ನೀಷಿಯಸ್ ಎಂಬ ಪಾತ್ರದಲ್ಲಿ ಟೋಬಿಯ ಅಳಿವು-ಉಳಿವಿನ ಪ್ರಶ್ನೆಯಾಗುತ್ತಾರೆ. ಟೋಬಿಯ ಸ್ನೇಹಿತನ ಪಾತ್ರವಾಗಿ ಜೀವಿಸಿದ ಗೋಪಾಲಕೃಷ್ಣ ದೇಶಪಾಂಡೆ ಚಿತ್ರದಲ್ಲಿ ಬಹಳ ಮುಖ್ಯವಾಗುತ್ತಾರೆ.. ದಾಮೋದರ ಪಾತ್ರಕ್ಕೆ ಇವರೇ ಸೂಕ್ತ ಅನ್ನುವಷ್ಟರ ಮಟ್ಟಿಗೆ ಗೋಪಾಲಕೃಷ್ಣ ನಟಿಸಿದ್ದಾರೆ.

ಸಿನಿಮಾದಲ್ಲಿ ಹೀರೋನ ಅಸ್ತಿತ್ವ ಇರಬೇಕಾದರೆ ವಿಲನ್ ಎಂಬ ಪಾತ್ರ ಇರಬೇಕು. ಟೋಬಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದು ದೀಪಕ್ ಶೆಟ್ಟಿ. ದೀಪಕ್‌‌ ವಿಲನ್ ಪಾತ್ರಕ್ಕೆ ಅಷ್ಟಾಗಿ ಜೀವತುಂಬಿದ್ದಾರೆ ಅನಿಸುವುದಿಲ್ಲ. ಒಂದು ಒಳ್ಳೆಯ ಚಿತ್ರದಲ್ಲೂ ಕೆಲವೊಂದು ಕೊರತೆಗಳು ಇರುತ್ತವೆ. ಆ ಕೊರತೆ ಸ್ಕ್ರೀನ್ ಪ್ಲೇ ನಲ್ಲಿ ಕಾಣುತ್ತದೆ‌. ಮೊದಲಾರ್ಧದಲ್ಲಿ ಇದ್ದಂತಹ ಕುತೂಹಲ ದ್ವಿತೀಯಾರ್ಧದಲ್ಲಿ ಕಡಿಮೆಯಾಗುತ್ತದೆ. 

ಇನ್ನು ಚಿತ್ರದಲ್ಲಿ ಸಂಭಾಷಣೆ ಕಡಿ‌ಮೆ ಇದ್ದರೂ ಸಿನೆಮಾ ಸಾಕಷ್ಟು ಹಿಡಿದಿಡುತ್ತದೆ. ಜೆನ್ನಿ ಪಾತ್ರಕ್ಕೆ ಬರೆದಿರುವ ಸಂಭಾಷಣೆಯಂತು ಪದೆಪದೆ ಗೊಣಗುವಂತೆ ಮಾಡುತ್ತದೆ. ಕ್ಯಾಮರಾ ಕೈಚಳಕದ ಮೂಲಕ ದೃಶ್ಯಗಳನ್ನು ಸೆರೆಹಿಡಿದು ಅಚ್ಚುಕಟ್ಟಾಗಿ ಸಂಕಲನ‌‌ ರೂಪಿಸುವಲ್ಲಿ ಪ್ರವೀಣ್ ಶಿಯಾನ್ ಮತ್ತು ನಿತಿನ್ ಶೆಟ್ಟಿ‌ ಯಶಸ್ವಿಯಾಗಿದ್ದಾರೆ. ಪದೆ ಪದೆ ಟೋಬಿ ಎಂದರೆ ಕಾಡುವುದು ಮಿದುನ್ ಮುಕುಂದನ್ ಅವರ ಸಂಗೀತ. ಸಿನಿಮಾ ರಿಲೀಸ್ ಗೆ ಮೊದಲು ಬಿಟ್ಟ “ಮಾರಿ ಮಾರಿ ಮಾರಿಗೆ ದಾರಿ” ಸಂಗೀತದ ತುಣುಕಂತೂ ಸಾಕಷ್ಟು ವೈರಲ್ ಆಗಿತ್ತು. ಮಿಧುನ್ ಸಂಗೀತ ನಿರ್ದೇಶನದಲ್ಲಿ ಹತ್ತಕ್ಕೆ ಹತ್ತು ಅಂಕ ಪಡೆಯುತ್ತಾರೆ.

ಒಂದು ಸಿನಿಮಾ ಆಗಬೇಕು ಅಂದರೆ ಅದಕ್ಕೆ ಕಥೆ ಇರಬೇಕು. ಆ ಕಥೆಯನ್ನು ದೃಶ್ಯಗಳಲ್ಲಿ ಕಟ್ಟಿಕೊಡುವ ಚಾಣಾಕ್ಷ ನಿರ್ದೇಶಕರಿರಬೇಕು. ಚಿತ್ರದ ನಿರ್ದೇಶನದ ಕೆಲಸವನ್ನು ಬಾಸಿಲ್ ನಿರ್ವಹಿಸಿದ್ದಾರೆ. ಟೋಬಿಯನ್ನು ತಮ್ಮ ಎದೆಗೆ ಅಪ್ಪಿಕೊಂಡು ಮಾರಿಯಾಗಿ ಹೊರಬರುವವರೆಗೂ ತಮ್ಮ ಕೆಲಸದಲ್ಲಿ ಅವರು ಸೈ ಎನಿಸಿಕೊಂಡಿದ್ದಾರೆ.

ಮನೋಜ್‌ ಆರ್‌ ಕಂಬಳಿ

ಪತ್ರಕರ್ತ

ಇದನ್ನೂ ಓದಿ-ಟೋಬಿ ಸಿನೆಮಾದಲ್ಲಿ ಕಾಡುವ ಕಣ್ಣಿಗೆ ಕಾಣದ ಕ್ರೌರ್ಯ

Related Articles

ಇತ್ತೀಚಿನ ಸುದ್ದಿಗಳು

You cannot copy content of this page