Friday, June 20, 2025

ಸತ್ಯ | ನ್ಯಾಯ |ಧರ್ಮ

ಸಮಾನ ನಾಗರಿಕ  ಸಂಹಿತೆ: ಗುರಿ ಮುಸ್ಲಿಮರು, ಗಾಯ ಹಿಂದೂಗಳಿಗೆ?!

ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಸರಕಾರ ವ್ಯಾಪಕವಾಗಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಹಾಗಾಗಿ ಜನರನ್ನು ಮರುಳು ಮಾಡಲು ಒಂದು ಅಸ್ತ್ರ ಬೇಕಾಗಿತ್ತು. ಎಂದೇ ಯುಸಿಸಿಯ ಚರ್ಚೆಯನ್ನು ತೇಲಿಬಿಡಲಾಗಿದೆ, ಹೊರತು ಬೇರೇನಲ್ಲ. ಇದು ಇನ್ನೊಂದು ಜುಮ್ಲಾ ಅಷ್ಟೇ –ಶ್ರೀನಿವಾಸ ಕಾರ್ಕಳ (ಶ್ರೀನಿ ಕಾಲಂ)

ಇತ್ತೀಚಿನ ವಿಶ್ವಬ್ಯಾಂಕ್ ದತ್ತಾಂಶಗಳ ಪ್ರಕಾರ ಭಾರತದ ಯುವಜನರಲ್ಲಿ ನಿರುದ್ಯೋಗ ದರ ಗರಿಷ್ಠ ಪ್ರಮಾಣದಲ್ಲಿದೆ. ಯೆಮನ್ (26.6%), ಇರಾನ್ (26%), ಲೆಬನಾನ್ (25.5%) ಆನಂತರದ ಸ್ಥಾನ ಭಾರತದ್ದು (23.2%). ನೆರೆಯ ಬಾಂಗ್ಲಾದೇಶದ ಪರಿಸ್ಥಿತಿ ನಮಗಿಂತ ಅತ್ಯುತ್ತಮವಿದೆ (12.9%)!

ಹಣದುಬ್ಬರದಿಂದ ಭಾರತ ತತ್ತರಿಸಿದೆ. ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ಹೈರಾಣಾಗಿದೆ. ಉದ್ಯೋಗವಿಲ್ಲ, ಕೈಯಲ್ಲಿ ಹಣವಿಲ್ಲ, ಬಡವರಂತೂ ಬದುಕಿ ಉಳಿಯುವುದೇ ಅಸಾಧ‍್ಯವೆನ್ನುವಂತಾಗಿದೆ.

ಈಶಾನ್ಯ ರಾಜ್ಯಗಳಲ್ಲೊಂದಾದ ಮಣಿಪುರದಲ್ಲಿ, ಕಳೆದ ಎರಡು ತಿಂಗಳಿಂದ ನರಮೇಧವೇ ನಡೆಯುತ್ತಿದೆ. ಮೈತೆಯಿ ಮತ್ತು ಕುಕಿ ಸಮುದಾಯಗಳ ನಡುವಣ ಕುಲಸಂಬಂಧಿ ಸಂಘರ್ಷದಲ್ಲಿ 140 ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ, 50 ಸಾವಿರ ಮಂದಿ ನಿರ್ವಸಿತರಾಗಿದ್ದಾರೆ. ಸಂಘರ್ಷ ಕೊನೆಗೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ.

ಇಂತಹ ಸಂಕಟದ ಹೊತ್ತು ದೇಶದಲ್ಲಿ ಯಾವುದರ ಬಗ್ಗೆ ಚರ್ಚೆಯಾಗಬೇಕಿತ್ತು? ಸಹಜವಾಗಿಯೇ ನಿರುದ್ಯೋಗಿ ಯುವಕರಿಗೆ ಉದ್ಯೋಗ ಖಾತರಿಗೊಳಿಸುವ, ದಿನಬಳಕೆಯ ವಸ್ತುಗಳ ಬೆಲೆ ತಗ್ಗಿಸುವ, ಮಣಿಪುರದ ಬೆಂಕಿ ಆರಿಸುವ ಕೆಲಸದ ಚರ್ಚೆ ಆಗಬೇಕಿತ್ತು, ಅಲ್ಲವೇ? ಆದರೆ ಚರ್ಚೆಯಾಗುತ್ತಿರುವುದು ಜನಸಾಮಾನ್ಯರ ಬದುಕಿಗೆ ಏನೇನೂ ಸಂಬಂಧವಿಲ್ಲದ ‘ಸಮಾನ ನಾಗರಿಕ ಸಂಹಿತೆ’ ಎಂಬ ಕುಟಿಲ ರಾಜಕೀಯ ಅಜೆಂಡಾದ ಬಗ್ಗೆ. ಇದು ದುರಂತ!

ಸಂಘ ಪರಿವಾರದ ಅಜೆಂಡಾ

ಆರ್ ಎಸ್ ಎಸ್ ಮತ್ತು ಅದರ ರಾಜಕೀಯ ಮುಖ ಬಿಜೆಪಿಯ ಇತಿಹಾಸವನ್ನು ಗಮನಿಸಿದರೆ, ಅವರು ಯಾವತ್ತೂ ಈ ದೇಶದ ಜನಸಾಮಾನ್ಯರ ಬದುಕಿನ ನಿಜ ಕಷ್ಟಗಳ ಬಗ್ಗೆ ಚಿಂತಿಸಿದ್ದು ಕಡಿಮೆ. ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರಕ್ಕಿಂತಲೂ ಅವರಿಗೆ ಮಂದಿರ, ಪ್ರತಿಮೆ ಮುಖ್ಯ. ದೇಶಭಕ್ತಿ, ರಾಷ್ಟ್ರೀಯವಾದ, ಧರ್ಮ ಮೊದಲಾದ ಭಾವನಾತ್ಮಕ ರಾಜಕೀಯ ಅಜೆಂಡಾಗಳು ಅವರ ಆದ್ಯತೆ. ಎಂದೇ, ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕುವುದು (ಪರಿಚ್ಚೇದ 370), ರಾಮ ಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ (Uniform Civil Code – ಯುಸಿಸಿ) ಯಂತಹ ವಿಷಯಗಳನ್ನು ಪ್ರಸ್ತಾವಿಸುತ್ತಲೇ ಬಂದಿದೆ.  

ಎರಡು ಕೆಲಸ ಮುಗಿದಿದೆ. 2024 ರ ಲೋಕಸಭಾ ಚುನಾವಣೆಯ ಮುನ್ನ ಬಾಕಿ ಉಳಿದಿರುವ ಅದರ ಅಜೆಂಡಾ ಎಂದರೆ, ‘ಸಮಾನ ನಾಗರಿಕ ಸಂಹಿತೆ’. ದೇಶದ ಪ್ರಧಾನ ಮಂತ್ರಿಗಳೇ ಇತ್ತೀಚಿನ ಒಂದು ಸಾರ್ವಜನಿಕ ಸಭೆಯಲ್ಲಿ ಇದನ್ನು ಪ್ರಸ್ತಾವಿಸಿದ್ದಾರೆ. ಒಂದು ಮನೆಯಲ್ಲಿ ಬೇರೆ ಬೇರೆ ನಿಯಮಗಳಿರಬಹುದೇ ಎಂದು ಅವರು ಪ್ರಶ್ನಿಸಿದ್ದಾರೆ. ಈ ಧಾವಂತದಲ್ಲಿ ಭಾರತವು ಒಂದು ಸಣ್ಣ ಮನೆಯಲ್ಲ ಎಂಬ ಸರಳ ಸಂಗತಿಯನ್ನು ಮರೆತಿದ್ದಾರೆ! ಯುಸಿಸಿಯ ಚರ್ಚೆಯು ದೇಶದ ಗಮನವನ್ನು  ಗಂಭೀರ ವಿಷಯಗಳಿಂದ ಬೇರೆಡೆ ಸೆಳೆಯುವ ಯತ್ನವೂ ಹೌದು ಎಂಬುದನ್ನು ಅರ್ಥಮಾಡಿಕೊಳ್ಳಲು ವಿಶೇಷ ಬುದ್ಧಿಮತ್ತೆಯ ಅಗತ್ಯ ಇಲ್ಲ.

ಸಮಾನಗೊಳಿಸುವುದು ಸಾಧ್ಯವೇ?

ನಮ್ಮದು ಉಪಖಂಡದಂತಹ ಒಂದು ವಿಶಾಲ ದೇಶ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಗುಜರಾತ್ ನಿಂದ ಪೂರ್ವಾಂಚಲದ ವರೆಗೆ ಎಷ್ಟೊಂದು ವೈವಿಧ‍್ಯಮಯವಾದ ಜನಸಂಸ್ಕೃತಿ ನಮ್ಮದು. ಬಹುತ್ವವೇ ಸ್ವರೂಪವಾಗಿರುವ ಬಹುತ್ವವೇ ಬುನಾದಿಯಾಗಿರುವ ಇಂತಹ ಒಂದು ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ತರುವುದು ಬಿಡಿ, ಇಲ್ಲಿ ಯಾವುದನ್ನಾದರೂ ಸಮಾನಗೊಳಿಸುವುದು ಸಾಧ್ಯವೇ?

ಈಸ್ಟ್ ಇಂಡಿಯಾ ಕಂಪೆನಿ ಭಾರತದ ಮೇಲೆ ರಾಜಕೀಯ ನಿಯಂತ್ರಣ ಸಾಧಿಸುತ್ತಿದ್ದಂತೆಯೇ ಅದು ಇಲ್ಲಿ ಅನೇಕ ಕಾನೂನುಗಳನ್ನು ತಂದಿತು. 1859 ರ ಸಿಪಿಸಿ, 1860 ಐಪಿಸಿ, 1861 ರ ಸಿಆರ್ ಪಿಸಿ, 1872 ರ ಇಂಡಿಯನ್ ಕಾಂಟ್ರಾಕ್ಟ್ ಆಕ್ಟ್, 1873 ರ ಇಂಡಿಯನ್ ಓಥ್ ಆಕ್ಟ್, 1873 ರ ವಿಶೇಷ ವಿವಾಹ ಕಾಯಿದೆ ಇತ್ಯಾದಿ. ರಾಜಾರಾಮ್ ಮೋಹನ್ ರಾಯ್ ರ ಒತ್ತಾಯದ ಮೇರೆಗೆ ಸತಿಪದ್ಧತಿ ನಿಷೇಧ (1829) ಹಿಂದೂ ಮಹಿಳೆಯ ಮರುವಿವಾಹ ಕಾಯಿದೆ (1856) ತಂದಿತಾದರೂ ಅವರು ಧರ್ಮಗಳ ಒಳಗಿನ ಕಟ್ಟುಪಾಡುಗಳಿಗೆ ಕೈ ಹಾಕಲು ಹೋಗಲಿಲ್ಲ. ಯಾಕೆಂದರೆ ಅದು ಅಷ್ಟೊಂದು ಸಂಕೀರ್ಣ ಎಂಬುದು ಅವರಿಗೆ ಗೊತ್ತಿತ್ತು.  ಹಾಗಾಗಿಯೇ ವಿವಾಹ, ಉತ್ತರಾಧಿಕಾರಗಳಿಗೆ ಸಂಬಂಧಿಸಿದ ಕುಟುಂಬ ಕಾನೂನುಗಳು ಆಯಾ ಧರ್ಮಗಳಲ್ಲಿ ಹಾಗೆಯೇ ಮುಂದುವರಿದುಕೊಂಡು ಬಂದವು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ತರುಣದಲ್ಲಿ ಸಮಾನ ನಾಗರಿಕ ಸಂಹಿತೆ (ಯುಸಿಸಿ)ಯ ಬಗ್ಗೆ ಆಲೋಚನೆ ಇತ್ತಾದರೂ ಅದರ ಸಂಕೀರ್ಣತೆಯ ಬಗ್ಗೆಯೂ ನೆಹರೂ ಮತ್ತು ಅಂಬೇಡ್ಕರ್ ಅವರಿಗೆ ಗೊತ್ತಿತ್ತು. ಆದ್ದರಿಂದಲೇ, ಅಂಬೇಡ್ಕರ್ ‘ಅದು ಐಚ್ಛಿಕವಾಗಿರಲಿ’ ಎಂದರಲ್ಲದೆ, ಅದನ್ನು ರಾಜ್ಯ ನೀತಿಯ ನಿರ್ದೇಶಕ ತತ್ತ್ವದಡಿ ಸೇರಿಸಿದರು.

ಆದರೆ, ಮೊದಲು ಹಿಂದೂ ಧರ್ಮದಡಿಯಲ್ಲಿ ಸುಧಾರಣೆ ಸಾಧಿಸಬೇಕು. ಇದನ್ನು ನೋಡಿಕೊಂಡು ಇತರ ಧರ್ಮಗಳು ಆಧುನಿಕಗೊಳಿಸಿಕೊಳ್ಳಲಿ ಎಂಬ ಇರಾದೆ ನೆಹರೂ ಅವರದ್ದಾಗಿತ್ತು. ಎಂದೇ ಅವರು 1952 ರಲ್ಲಿ ಪೂರ್ಣ ಬಹುಮತ ಪಡೆದ ಬಳಿಕ ಹಿಂದೂ ಧರ್ಮದೊಳಗಿನ ಸುಧಾರಣೆಗಾಗಿ ಹಿಂದೂ ವಿವಾಹ ಕಾಯಿದೆ (1955), ಹಿಂದೂ ಉತ್ತರಾಧಿಕಾರ ಕಾಯಿದೆ (1956), ಹಿಂದೂ ಮೈನಾರಿಟಿ ಅಂಡ್ ಗಾರ್ಡಿಯನ್ ಶಿಪ್ ಕಾಯಿದೆ (1956), ಹಿಂದೂ ಅಡಾಪ್ಶನ್ ಅಂಡ್ ಮೆಂಟೆನೆನ್ಸ್ ಕಾಯಿದೆ (1956) ಮೊದಲಾದವನ್ನು ಜಾರಿಗೆ ತಂದರು.

ಸಮಾನ ನಾಗರಿಕ ಸಂಹಿತೆ ಬೇಕು ನಿಜ, ಆದರೆ..

ಒಂದು ಆದರ್ಶ ಸ್ಥಿತಿಯಲ್ಲಿ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಇರುವುದು ತಪ್ಪಲ್ಲ. ಆದರೆ ಅಂತಹ ಆದರ್ಶ ಸ್ಥಿತಿ ಈಗ ದೇಶದಲ್ಲಿ ಇದೆಯೇ? ಅದರಲ್ಲೂ ಹಿಂದುತ್ವವನ್ನೇ ಉಸಿರಾಡುವ ಬಿಜೆಪಿ ನೇತೃತ್ವದ ಸರಕಾರವೊಂದು ಸಮಾನ ನಾಗರಿಕ ಸಂಹಿತೆಯನ್ನು ತರುತ್ತದೆ ಎಂದಾದರೆ ಅದರ ಉದ್ದೇಶವನ್ನು ಊಹಿಸುವುದು ಅಷ್ಟು ಕಷ್ಟವೇ?

ಸಮಾನ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುವ ಬಲಪಂಥೀಯರ ಗುರಿಯೆಲ್ಲವೂ ಮುಸ್ಲಿಮರು. ಅಲ್ಲಿ ಬಹುಪತ್ನಿತ್ವವಿದೆ ಎಂಬುದರಿಂದ ಹಿಡಿದು ಅನೇಕ ಸುಳ್ಳುಗಳನ್ನು ಹರಡಲಾಗುತ್ತಿದೆ. ಬಹುಪತ್ನಿತ್ವವು ಮುಸ್ಲಿಮರಲ್ಲಿ ಇರುವಂತೆಯೇ ಹಿಂದೂಗಳಲ್ಲಿಯೂ ಇದೆ. 1961 ರ ವರೆಗಿನ ಜನಗಣತಿ ಅಂಕಿ ಅಂಶಗಳ ಪ್ರಕಾರ ಮುಸ್ಲಿಮರಲ್ಲಿ ಬಹುಪತ್ನಿತ್ವವು 5.7% ರಷ್ಟಿದ್ದರೆ ಹಿಂದೂಗಳಲ್ಲಿ 5.8% ದಷ್ಟಿತ್ತು. ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸೈನ್ಸ್’ ಪ್ರಕಾರ ಬಹುಪತ್ನಿತ್ವ ಗರಿಷ್ಠ ಇರುವುದು ಆದಿವಾಸಿ ಸಮುದಾಯಗಳಲ್ಲಿ. ಆದಾಯ ಹೆಚ್ಚುತ್ತ ಹೋದಂತೆ ಬಹುಪತ್ನಿತ್ವವೂ ಕಡಿಮೆಯಾಗುತ್ತಿರುವುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಅಲ್ಲದೆ ಹಿಂದೂ ಕಾನೂನುಗಳು ಮತ್ತು ಮುಸ್ಲಿಂ ಕಾನೂನುಗಳಲ್ಲಿ ಈಗ ಅನೇಕ ಬದಲಾವಣೆಗಳಾಗಿವೆ. ಸ್ಥಿತಿ ಹಿಂದಿನಂತಿಲ್ಲ.

ಆದರೆ ಕುಟುಂಬ ಕಾನೂನುಗಳಲ್ಲಿ ಈಗಲೂ ಅನೇಕ ಲೋಪಗಳು ಉಳಿದುಕೊಂಡಿವೆ. ವಿಶೇಷವಾಗಿ ಲಿಂಗತ್ವ ನ್ಯಾಯದ ಕೊರತೆಯಿದೆ. ಹಿಂದೂ ಉತ್ತರಾಧಿಕಾರ ಕಾಯಿದೆಯ ಕೆಲ ಅಂಶದ ಪ್ರಕಾರ ಹಿಂದೂ ಹೆಣ್ಣೊಬ್ಬಳು ಸ್ವಂತ ಹಣದಿಂದ ಖರೀದಿಸಿದ ಆಸ್ತಿ ಆಕೆ ಮತ್ತು ಆಕೆಯ ಗಂಡ ಸತ್ತರೆ ಆಕೆಯ ಗಂಡನ ಮನೆಯವರಿಗೆ ಹೋಗುತ್ತದೆಯೇ ಹೊರತು, ಆಕೆಯ ತಾಯಿತಂದೆಗೆ ಹೋಗುವುದಿಲ್ಲ. ಹಿಂದೂಗಳಲ್ಲಿ ವಿಲ್ ಇಲ್ಲದಿದ್ದರೆ ಮಗ ಮಗಳಿಗೆ ಸಮಾನವಾಗಿ ಆಸ್ತಿ ಸಿಗುತ್ತದೆ. ಅದರೆ ಸೆಕ್ಷನ್ 30 ರ ಪ್ರಕಾರ ಆಸ್ತಿಯನ್ನು ತಾವು ಇಷ್ಟ ಪಟ್ಟವರಿಗೆ ಕೊಡಬಹುದು. ಮುಸ್ಲಿಂ ಉತ್ತರಾಧಿಕಾರ ನಿಯಮ ಪ್ರಕಾರ ಮಗ ಮತ್ತು ಮಗಳ ಉತ್ತರಾಧಿಕಾರದಲ್ಲಿ ಸಮಾನತೆ ಇಲ್ಲ ನಿಜ. ಆದರೆ ಅಲ್ಲಿ ಮೂರನೆ ಒಂದರಷ್ಟು ಬೇರೆಯವರಿಗೆ ಕೊಡಬಹುದು. ಅದರೆ ಮೂರನೇ ಎರಡು ಭಾಗ ಕಾನೂನು ಬದ್ಧ ಉತ್ತರಾಧಿಕಾರಿಗಳಿಗೆ ಸಿಕ್ಕೇ ಸಿಗುತ್ತದೆ. ಹೀಗೆ ಹಿಂದೂ ಕಾನೂನಿನಲ್ಲಿ ಇಲ್ಲದ ಕೆಲ ಒಳ್ಳೆಯ ಅಂಶಗಳು ಮುಸ್ಲಿಂ ಕಾನೂನುಗಳಲ್ಲಿವೆ. ಇದನ್ನು ಯುಸಿಸಿಯಲ್ಲಿ ಪರಿಗಣಿಸಲಾಗುವುದೇ?

ಕಾನೂನುಗಳನ್ನು ಎಷ್ಟೇ ಮಾಡಬಹುದು, ಆದರೆ ಸಾಮಾಜಿಕ ರೂಢಿಗಳನ್ನು ಬದಲಾಯಿಸುವುದು ಕಷ್ಟ. ಉದಾಹರಣೆಗೆ ಬಹುಪತ್ನಿತ್ವ ತಪ್ಪು ಎಂಬುದು ಗೊತ್ತಿದೆ. ಆದರೆ ಅದು ಸಮಾಜದಲ್ಲಿ ಈಗಲೂ ಇಲ್ಲವೇ? ಬಾಲ್ಯವಿವಾಹ ಒಂದು ಅಪರಾಧ. ಆದರೆ ಅದು ಈಗಲೂ ಚಾಲ್ತಿಯಲ್ಲಿಲ್ಲವೇ? ರಾಜಸ್ತಾನದಲ್ಲಿ ಬಾಲ್ಯವಿವಾಹ ಹಿಂದೆ 65% ಇತ್ತು. ಈಗಲೂ 25 % ಇದೆ. ಕೋವಿಡ್ ಕಾಲದಲ್ಲಿ ಗರಿಷ್ಟ ಪ್ರಮಾಣದಲ್ಲಿ ಬಾಲ್ಯವಿವಾಹ ನಡೆಯಿತು ಎನ್ನಲಾಗಿದೆ. ಆದರೆ ಪರಿಸ್ಥಿತಿಯಲ್ಲಿ ಕ್ರಮೇಣ ಬದಲಾವಣೆ ಆಗುತ್ತಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಪಾರ್ಸಿಯವರಲ್ಲಿ ಪಾರ್ಸಿಯೇತರರನ್ನು ಮದುವೆಯಾದರೆ ಪಾರ್ಸಿ ಸ್ಥಾನಮಾನವೇ ಹೋಗಿಬಿಡುತ್ತದೆ. ಅವರ ಮಕ್ಕಳಿಗೆ ಮೆಟರ್ನಲ್ ಹಿರಿಯರ ಆಸ್ತಿ ಪಾಲು ಸಿಗುವುದಿಲ್ಲ. ಯುಸಿಸಿಯ ಮೂಲಕ ಇದನ್ನು ಏನು ಮಾಡಲಾಗುತ್ತದೆ?

ಈ ಎಲ್ಲ ಅಂಶಗಳನ್ನು ಮನಗಂಡು ‘ಈ ಹೊತ್ತಿನಲ್ಲಿ ಸಮಾನ ನಾಗರಿಕ ಸಂಹಿತೆ ಅಗತ್ಯವಿಲ್ಲ’ ಎಂದ 21 ನೇ ಕಾನೂನು ಆಯೋಗವು ಈ ಕೆಳಗಿನ ಶಿಫಾರಸುಗಳನ್ನು ಮಾಡಿತ್ತು.

1. ವಿವಾಹ ನೋಂದಣಿ ಕಡ್ಡಾಯ ಮಾಡಿ

2. ಸಮ್ಮತಿಗೆ ಸಮಾನ ವಯಸ್ಸು ಕಾನೂನು ತನ್ನಿ

3. ವಿವಾಹ ವಿಚ್ಛೇದನ ಕಾನೂನು ಸರಳೀಕರಿಸಿ

4. ವಿಶೇಷ ವಿವಾಹ ಕಾಯಿದೆಯ ನೋಟೀಸ್ ಪೀರಿಯಡ್  ರದ್ದುಗೊಳಿಸಿ

ಹಿಂದೂಗಳಿಗೆ ತಿರುಗುಬಾಣವಾಗದೇ?

ಕೇವಲ ಅನ್ಯಮತ ದ್ವೇಷದ ಅಜೆಂಡಾ ಇರಿಸಿಕೊಂಡು ತರುವ ಕಾನೂನುಗಳು ಕೆಲವೊಮ್ಮೆ ಅದನ್ನು ತಂದ ಸಮುದಾಯದವರಿಗೇ ತಿರುಗುಬಾಣವಾಗುವುದಿದೆ. ಗೋಹತ್ಯೆ ನಿಷೇಧ ಕಾನೂನು ತಂದುದು ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು. ಆದರೆ ಅದರಿಂದ ಕಷ್ಟ ನಷ್ಟ ಅನುಭವಿಸಿದ್ದು ಹಿಂದೂ ಸೇರಿದಂತೆ ಎಲ್ಲ ಧರ್ಮದ ರೈತರು.

ಹಿಂದೂ ವಿವಾಹ ಕಾಯಿದೆ 1955 ರ  ಸೆಕ್ಷನ್ 5 ರ ಪ್ರಕಾರ ಸಗೋತ್ರ ಮದುವೆ ನಿಷಿದ್ಧ. ಮದುಮಗಳ ಐದು ತಲೆಮಾರು ಮತ್ತು ಮದುಮಗನ ಮೂರು ತಲೆಮಾರು ಸಮಾನ ಹಿರೀಕರನ್ನು ಹೊಂದಿರಬಾರದು. ಆದರೆ ದಕ್ಷಿಣ ಭಾರತದಲ್ಲಿ ಸೋದರ ಮಾವನು ಸೊಸೆಯನ್ನು ಮದುವೆಯಾಗುವುದು ಸಾಮಾನ್ಯ. ಹರ್ಯಾಣದ ಖಾಪ್ ಪ್ರಕಾರ ಘೋರ ಅಪರಾಧ ಎನಿಸಿಕೊಂಡುದು ಆಂಧ್ರದಲ್ಲಿ ಒಂದು ಸಂಭ್ರಮದ ಕಾರ್ಯಕ್ರಮವಾಗಿದೆ. ವಿಶೇಷ ವಿವಾಹ ಕಾಯ್ದೆಯಲ್ಲಿ ಅದಕ್ಕೆ ಅವಕಾಶ ಇದೆ ಕೂಡಾ. Unless custom or usage governing each of them permits of a marriage between the two ಎನ್ನುತ್ತದೆ ಅದು. ಯುಸಿಸಿಯ ಮೂಲಕ ಇದರಲ್ಲಿ ಯಾವುದನ್ನು ರದ್ದುಗೊಳಿಸಲಾಗುವುದು ಅಥವಾ ಯಾವುದಕ್ಕೆ ಸಮ್ಮತಿ ಸೂಚಿಸಲಾಗುವುದು?

ಸಗೋತ್ರ ವಿವಾಹವನ್ನು ಕಾನೂನುಬದ್ಧಗೊಳಿಸಲಾಗುವುದೇ? ಹಿಂದೂ ಅವಿಭಕ್ತ ಕುಟುಂಬಗಳ (HUF) ಕಾನೂನು ರದ್ದುಗೊಳಿಸಲಾಗುವುದೇ? ಇದು ಈ ಹಿಂದೂ ಕುಟುಂಬಗಳಿಗೆ ಸಾವಿರಾರು ಕೋಟಿ ತೆರಿಗೆ ವಿನಾಯಿತಿ ಪಡೆಯಲು ಅನುಕೂಲ ಮಾಡಿಕೊಟ್ಟಿದೆ. ಯುಸಿಸಿಯನ್ನು ಆದಿವಾಸಿ ಸಮುದಾಯಗಳಿಗೆ ಅನ್ವಯಿಸಲಾಗುವುದೇ? ಮಾತೃಪ್ರಧಾನ  ವ್ಯವಸ್ಥೆ ಇರುವಲ್ಲಿ ಆಸ್ತಿಯು ತಾಯಿಯಿಂದ ಮಗಳಿಗೆ ಹೋಗುತ್ತದೆ. ಶೆಡ್ಯೂಲ್ 6 ಅಡಿಯಲ್ಲಿ ಈಶಾನ್ಯ ರಾಜ್ಯಗಳ ಆದಿವಾಸಿಗಳಿಗೆ ಸಿಗುವ ರಿಯಾಯಿತಿ ಜಾರ್ಖಂಡ್ ನ ಆದಿವಾಸಿಗಳಿಗೂ ಸಿಗುವುದೇ? ಆದಿವಾಸಿಗಳು ಮೂಲತಃ ಹಿಂದೂಗಳಲ್ಲ. ಆದರೆ ಸಂಘಪರಿವಾರ ಅವರನ್ನು ಹಿಂದೂ ಎಂದೇ ಹೇಳುತ್ತದೆ. ಈಗ ಆದಿವಾಸಿಗಳ ಸಂಪ್ರದಾಯಗಳನ್ನು ಯುಸಿಸಿ ಅಡಿಯಲ್ಲಿ ತರಲಾಗುವುದೇ? ತಂದರೆ ಅವರು ಸುಮ್ಮನೆ ಇರುವರೇ?

ಗೋವಾದ ಯುಸಿಸಿಯನ್ನು ಬಲಪಂಥೀಯರು ಆಗಾಗ ಬೆಟ್ಟುಮಾಡುತ್ತಾ ಯುಸಿಸಿಯನ್ನು ಬೆಂಬಲಿಸುತ್ತಿರುತ್ತಾರೆ. ಗೋವಾದ ಕಾನೂನು ಪ್ರಕಾರ ಹೆಂಡತಿ 30 ವರ್ಷ ಹರೆಯದೊಳಗೆ ಗಂಡು ಮಗುವನ್ನು ಹೆರದಿದ್ದರೆ ಗಂಡ ಬೇರೆ ಮದುವೆಯಾಗಬಹುದು ಎನ್ನುತ್ತದೆ. ಈ ಅವಕಾಶ ಇತರರಿಗೂ ಒದಗಿಸಲಾಗುವುದೇ? ಯಾವ ಪದ್ಧತಿಯನ್ನು ಇಲ್ಲಿ ಸಮಾನಗೊಳಿಸಲಾಗುವುದು?

ಹಿಂದೂಗಳಲ್ಲಿ ಸಾವಿರಾರು ಜಾತಿಗಳಿದ್ದು ಆ ಒಂದೊಂದು ಜಾತಿಗಳಲ್ಲಿಯೂ ವಿವಾಹ, ವಿಚ್ಛೇದನ, ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಅವುಗಳದೇ ಆದ ನಿಯಮಗಳಿವೆ. ಅವುಗಳ ಕತೆ ಏನು?

ಆದ್ದರಿಂದಲೇ-

1. ಎಲ್ಲ ಸಮುದಾಯಗಳ ಕಟ್ಟುಪಾಡುಗಳ ಕಾನೂನುಗಳನ್ನು ಕೋಡಿಫೈ ಮಾಡಿ

2. ಎಲ್ಲ ಸಮುದಾಯಗಳ ಕುಟುಂಬ ಕಾನೂನುಗಳನ್ನು ಪುನರ್ ರೂಪಿಸಿ ಅದು ಲಿಂಗತ್ವ ನ್ಯಾಯ ಹೊಂದುವಂತೆ ಮಾಡಿ

3. ಧಾರ್ಮಿಕವಲ್ಲದ ಎಲ್ಲ ಸಿವಿಲ್ ಕಾನೂನುಗಳಲ್ಲಿನ ಕೊರತೆಗಳನ್ನು ನಿವಾರಿಸಿ

4. ಆದಿವಾಸಿ ಸಮುದಾಯಗಳನ್ನು ಯುಸಿಸಿಯಿಂದ ಹೊರಗಿಡಿ

ಎಂದಿದೆ 21 ನೇ ಕಾನೂನು ಆಯೋಗ.

ಇನ್ನೊಂದು ಜುಮ್ಲಾ

ಸಮಾನ ನಾಗರಿಕ ಸಂಹಿತೆಯಲ್ಲಿ (ಯುಸಿಸಿ) ನಮ್ಮನ್ನು ಒಳಗೊಳಿಸಿದರೆ ಇಲ್ಲಿನ ಎಲ್ಲ 60 ಶಾಸಕರ ಮನೆಗಳನ್ನು ಸುಟ್ಟು ಹಾಕುವುದಾಗಿ ನಾಗಾಲ್ಯಾಂಡ್ ನ ಜನರು ಎಚ್ಚರಿಕೆ ನೀಡಿದ್ದಾರೆ. ತಮ್ಮನ್ನು ಯುಸಿಸಿಯಿಂದ ಹೊರಗಿಡಬೇಕು ಎಂದು ಜಾರ್ಖಂಡದ ಆದಿವಾಸಿಗಳು ಆಗ್ರಹಿಸಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ಯುಸಿಸಿಯ ಒಳಗೆ ತರಬಾರದು ಎಂದು ಮುಸ್ಲಿಮರು ಒತ್ತಾಯಿಸಿದ್ದಾರೆ. ನಾಗಾಲ್ಯಾಂಡ್ ನ ಕ್ರೈಸ್ತರ ಸಹಿತ ಆದಿವಾಸಿಗಳನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿಡುವುದಾಗಿ ಸರಕಾರ ಆಶ್ವಾಸನೆ ಕೂಡಾ ನೀಡಿದೆ.

ಹೀಗೆ ಕೆಲವರನ್ನು ಕೈಬಿಟ್ಟ ಮೇಲೆ ಅದು ‘ಯುನಿಫಾರ್ಮ್ ಕೋಡ್’ ಆಗುವುದು ಹೇಗೆ? ಅಂದರೆ, ದೇಶದಲ್ಲಿ ಯುಸಿಸಿ ಅಗತ್ಯವೇ? ಅಲ್ಲವೇ? ಎನ್ನುವುದಕ್ಕಿಂತಲೂ, ಅದನ್ನು ಜಾರಿಗೊಳಿಸುವುದು ಇಲ್ಲಿ ಕಷ್ಟ ಮಾತ್ರವಲ್ಲ, ಅಸಾಧ‍್ಯ ಎಂಬುದು ವಾಸ್ತವ ಸತ್ಯ. ಇದು ಸರಕಾರಕ್ಕೂ ಗೊತ್ತು. ಆದ್ದರಿಂದಲೇ ಅಧಿಕಾರದ ಒಂಬತ್ತು ವರ್ಷಗಳಲ್ಲಿ ಅದನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಸರಕಾರ ವ್ಯಾಪಕವಾಗಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಹಾಗಾಗಿ ಜನರನ್ನು ಮರುಳು ಮಾಡಲು ಒಂದು ಅಸ್ತ್ರ ಬೇಕಾಗಿತ್ತು. ಎಂದೇ ಯುಸಿಸಿಯ ಚರ್ಚೆಯನ್ನು ತೇಲಿಬಿಡಲಾಗಿದೆ, ಹೊರತು ಬೇರೇನಲ್ಲ. ಇದು ಇನ್ನೊಂದು ಜುಮ್ಲಾ ಅಷ್ಟೇ.

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.

ಇದನ್ನೂಓದಿ-ಮಣಿಪುರ ಯಾಕೆ ಹೊತ್ತಿ ಉರಿಯುತ್ತಿದೆ?

Related Articles

ಇತ್ತೀಚಿನ ಸುದ್ದಿಗಳು

You cannot copy content of this page