ಉಡುಪಿ: ಬೈಂದೂರು ತಾಲೂಕಿನ ಎಲ್ಲೂರಿನಲ್ಲಿ ನೂತನ ವಿದ್ಯುತ್ ವಿತರಣಾ ಕೇಂದ್ರವನ್ನು ಇಂದು ಇಂಧನ ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿದರು.
ಬಳಿಕ ಸುನೀಲ್ ಕುಮಾರ್ ಮಾತನಾಡಿ, ಇಂಧನ ಇಲಾಖೆಯನ್ನು ಜನಸ್ನೇಹಿಯಾಗಿ ಮಾಡುವ ಉದ್ದೇಶದಿಂದ ಬೆಳಕು ಯೋಜನೆಯ ನಿಯಮವನ್ನು ಸರಳೀಕರಣ ಮಾಡಲಾಗಿದ್ದು, 1 ವರ್ಷದಲ್ಲಿ ಸುಮಾರು 2.5 ಲಕ್ಷ ಮನೆಗಳಿಗೆ ಬೆಳಕನ್ನು ನೀಡಲಾಗಿದೆ. ಗುಣಮಟ್ಟದ ವಿದ್ಯುತ್ ನೀಡುವ ದೃಷ್ಠಿಯಿಂದ ಜಿಲ್ಲೆ, ತಾಲೂಕುಗಳಲ್ಲಿ ಟಿ.ಸಿ. ಬ್ಯಾಂಕ್ ಆರಂಭ ಮಾಡಲಾಗಿದೆ. ತಿಂಗಳಿಗೊಮ್ಮೆ ವಿದ್ಯುತ್ ಅದಾಲತ್ ನಡೆಸಲಿದ್ದು, ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ವಿದ್ಯುತ್ ಸಮಸ್ಯೆ ಆಲಿಸಿ, ಬಗೆಹರಿಸಲಿದ್ದಾರೆ ಎಂದರು.
1.5 ಮೆಗಾವ್ಯಾಟ್ ಸಾಮರ್ಥ್ಯದ 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಇದಾಗಿದ್ದು, ಕೊಲ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ತಲೆದೋರಿದ್ದ ವಿದ್ಯುತ್ ಸರಬರಾಜು ಹಾಗೂ ವೋಲ್ಟೇಜ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಸುಕುಮಾರ್ ಶೆಟ್ಟಿ, ಸ್ಥಳದಾನಿ ಅಪ್ಪಣ್ಣ ಹೆಗ್ಡೆ, ಮೆಸ್ಕಾಂ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.