Wednesday, June 19, 2024

ಸತ್ಯ | ನ್ಯಾಯ |ಧರ್ಮ

ಮುಸ್ಲಿಂ ಹೆಸರುಗಳ ದುರ್ಬಳಕೆ ; ಒಂದೇ ನಾಣ್ಯದ ಎರಡು ಮುಖಗಳಾದ ಬಿಜೆಪಿ, ಕಾಂಗ್ರೆಸ್

ಎರಡು ಪ್ರಮುಖ ರಾಜಕೀಯ ಪಕ್ಷಗಳ ಕೆಸರೆರಚಾಟದಲ್ಲಿ ರಾಜ್ಯದಲ್ಲಿ ತೀರಾ ಕೆಟ್ಟ ಪ್ರವೃತ್ತಿಯ ಬೆಳವಣಿಗೆಯೊಂದು ತಲೆ ಎತ್ತಿದೆ. ಅವರ ಮೇಲೆ ಇವರು, ಇವರ ಮೇಲೆ ಅವರು ಎಂಬಂತೆ ಬರುತ್ತಿರುವ ಹೇಳಿಕೆ, ಜಾಲತಾಣಗಳ ಟ್ರೋಲ್ ಮಾದರಿಯ ಪೋಸ್ಟ್ ಗಳು ಯಾವ ತಪ್ಪಿಗೂ ಒಳಪಡದ ಇಡೀ ಮುಸ್ಲಿಂ ಸಮುದಾಯವನ್ನು ತೀವ್ರ ಮುಜುಗರಕ್ಕೆ ಸಿಕ್ಕಿಸಿದೆ.

ಕೆಲವೇ ದಿನಗಳ ಈಚೆಗೆ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ.ರವಿ ರಾಜಕೀಯದ ಆರೋಪ ಪ್ರತ್ಯಾರೋಪಗಳ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ‘ಸಿದ್ರಾಮುಲ್ಲಾ ಖಾನ್’ ಎಂಬ ಪದ ಬಳಸಿ ಹೀಯಾಳಿಸಲು ಶುರುವಿಟ್ಟುಕೊಂಡರು. ಇಂತಹ ಒಂದು ಹೇಳಿಕೆಯ ಖಂಡಿಸುವುದು ಬಿಟ್ಟು ಇನ್ನಷ್ಟು ಬಿಜೆಪಿ ನಾಯಕರೇ ಸಿ.ಟಿ.ರವಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಶುರುವಿಟ್ಟುಕೊಂಡಿದ್ದಾರೆ.

ಈ ಹಿಂದೆ ಈ ರೀತಿಯ ಅಸಭ್ಯ ಮಾದರಿಯ ಟ್ರೋಲ್ ಗಳು ಬಿಜೆಪಿ ಪಕ್ಷದ ಹಿನ್ನೆಲೆಯ ಜಾಲತಾಣಗಳ ಕಾರ್ಯಕರ್ತರ ಕಡೆಯಿಂದ ಬರುತ್ತಿದ್ದವು. ಈಗ ಬಿಜೆಪಿ ನಾಯಕರ ಮಟ್ಟದಲ್ಲಿ ಇದು ಬೆಳೆದಿದೆ ಎಂದರೆ ಇದೊಂದು ಕೆಟ್ಟ ರಾಜಕೀಯ ಮಾದರಿ ಎಂದೇ ನಿರ್ಧರಿಸಬಹುದು. ಸಿ.ಟಿ.ರವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಕಾಂಗ್ರೆಸ್ ನವರಿಗೆ ಇಷ್ಟೊಂದು ಉರಿ ಹತ್ತಿಕೊಳ್ಳುತ್ತದೆ ಎಂದು ಗೊತ್ತಿದ್ದರೆ 10 ವರ್ಷ ಹಿಂದೆಯೇ ಈ ಹೇಳಿಕೆ ಕೊಡುತ್ತಿದ್ದೆ’ ಎಂದು ಹೇಳಿ ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.

‘ಮುಸಲ್ಮಾನರ ತುಷ್ಟೀಕರಣಕ್ಕೆ ಇಳಿದ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎನ್ನದೇ ಕೇಶವ ಎನ್ನಲು ಸಾಧ್ಯವೇ?’ ಎಂದು ಇನ್ನೊಬ್ಬ ಬಿಜೆಪಿ ನಾಯಕ ಹೇಳಿಕೆ ಕೊಡುತ್ತಾರೆ ಎಂದರೆ ಇದು ರಿಪೇರಿ ಮಾಡೋಕೆ ಆಗದ ಖಾಯಿಲೆ ಎಂದೇ ಹೇಳಬೇಕು.

ಇದಕ್ಕೂ ದೊಡ್ಡ ದುರಂತ ಎಂದರೆ ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ಕೂಡಾ ಬಿಜೆಪಿ ಹಾಕಿಕೊಟ್ಟ ಹಾದಿಯನ್ನೇ ತುಳಿದಿದೆ. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಸ್ಲಿಂ ಟೊಪ್ಪಿ ಹಾಕಿದ ಫೋಟೋವನ್ನು ಇಟ್ಟು ‘ಸಿದ್ದರಾಮಯ್ಯ ಸಿದ್ರಾಮುಲ್ಲಾ ಖಾನ್ ಆದರೆ ಬೊಮ್ಮಾಯಿ ಬೊಮ್ಮಾಯುಲ್ಲಾ ಖಾನ್ ಅಲ್ಲವೇ’ ಎಂಬಂತೆ ನಾಲಿಗೆ ಹರಿಬಿಟ್ಟಿದೆ.

ಇದರ ಜೊತೆಗೆ ಜಗದೀಶ್ ಶೆಟ್ಟರ್, ಆರ್.ಅಶೋಕ್ ಫೋಟೋಗಳನ್ನು ಇಟ್ಟು ಜಬ್ಬಾರ್ ಖಾನ್, ಅಶ್ವಾಖ್ ಇನಾಯತ್ ಖಾನ್ ಎಂಬ ಹೆಸರುಗಳಿಂದ, ನಿತಿನ್ ಗಡ್ಕರಿ ಫೋಟೋವನ್ನು ಬಳಸಿ ಮೊಹಮ್ಮದ್ ಗಡ್ಕರಿ ಶೇಕ್ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ರೋಲ್ ಮಟ್ಟದ ಕೆಟ್ಟ ಪ್ರವೃತ್ತಿಯತ್ತ ಹೆಜ್ಜೆ ಹಾಕಿದೆ.

ಇಷ್ಟೂ ಸಾಲದೆಂಬಂತೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಕೂಡ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಯಡಿಯೂರಪ್ಪರನ್ನು ಯೂಸುಫ್ ಖಾನ್, ಜಗದೀಶ್ ಶೆಟ್ಟರ್ ಯಾವ ಖಾನ್ ಎಂಬಂತೆ ಹೇಳಿಕೆ ನೀಡಿದ್ದಾರೆ. ಬಿಜೆಪಿ ಆ ಮಟ್ಟಕ್ಕೆ ಇಳಿದಿದೆ ಎಂದು ಕಾಂಗ್ರೆಸ್ ಕೂಡಾ ಅದೇ ಹಾದಿ ತುಳಿದರೆ ಎರಡೂ ಪಕ್ಷಗಳಿಗೆ ಇರುವ ವ್ಯತ್ಯಾಸವೇನು?

ಇದರಿಂದ ಒಂದಂತೂ ಸ್ಪಷ್ಟ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ರಾಜಕೀಯ ಕೆಸರೆರಚಾಟಕ್ಕೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಅವಮಾನಕ್ಕೆ ಗುರಿ ಮಾಡಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷವಾದರೂ ಸ್ವಲ್ಪ ಮಟ್ಟಿಗೆ ವಿವೇಚನೆ ಇಟ್ಟು ವರ್ತಿಸಿದ್ದರೆ ತನ್ನ ಘನತೆಯನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಬಿಜೆಪಿ ಹಳಿಯುವ ಒಂದೇ ಉದ್ದೇಶದಿಂದ ಬಿಜೆಪಿ ಪಕ್ಷದ ಮಟ್ಟಕ್ಕೆ ಇಳಿದು ಮಾತನಾಡಿರುವುದು ಇಬ್ಬರಿಗೂ ಯಾವ ವ್ಯತ್ಯಾಸವೂ ಇಲ್ಲ ಎಂಬಂತಾಗಿದೆ.

https://fb.watch/hf6wU_ENJ7/?mibextid=RUbZ1f

ಬಿಜೆಪಿ ಪಕ್ಷಕ್ಕೆ ಮೊದಲೇ ಮುಸ್ಲಿಂ ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯ ಎಂದರೆ ಅಷ್ಟಕ್ಕಷ್ಟೆ. ಮುಸಲ್ಮಾನರನ್ನು ಈ ದೇಶದವರೇ ಅಲ್ಲ ಎಂಬಂತೆ ಬಿಂಬಿಸುವ ಒಂದು ಹಿಡನ್ ಅಜೆಂಡಾ ಈ ಪಕ್ಷದ ಒಳಗೇ ಇದ್ದಂತಿದೆ. ಹಾಗಾಗೇ ಮುಸ್ಲಿಮರಿಗೆ ಸಂಬಂಧಿಸಿದ, ಇಸ್ಲಾಂಗೆ ಸಂಬಂಧಿಸಿದ ಪ್ರತೀ ಆಚರಣೆ, ಆಹಾರ ಪದ್ಧತಿ, ವಸ್ತ್ರದ ಮಾದರಿಗಳನ್ನು ದಿನಂಪ್ರತಿ ಗೇಲಿ, ಅಪಹಾಸ್ಯ ಮಾಡಿಕೊಂಡೇ ಬಂದಿದ್ದಾರೆ. ಇಂತಹ ದಂಡಿ ದಂಡಿ ಉದಾಹರಣೆಗಳು ಬಿಜೆಪಿ ಪಾಳಯದಲ್ಲೇ ಇವೆ. ಆದರೆ ಮುಸ್ಲಿಂ ಸಮುದಾಯದ ಪರ ಎಂದೇ ಬಿಜೆಪಿ ಕಡೆಯಿಂದ ಬಿಂಬಿಸಿಕೊಂಡು ಬಂದ ಕಾಂಗ್ರೆಸ್ ಗೆ ಏನಾಗಿತ್ತು?

ನಿಜವಾಗಿಯೂ ಬಿಜೆಪಿ ಪಕ್ಷ ತನ್ನ ಘನತೆ ಉಳಿಸಿಕೊಳ್ಳಬೇಕಾದರೆ ತನ್ನ ಪಕ್ಷದ ಮುಖಂಡರ ಈ ಹೇಳಿಕೆಗಳಿಗೆ ಬ್ರೇಕ್ ಹಾಕಬೇಕಿತ್ತು. ಆದರೆ ಬಿಜೆಪಿಯ ಒಬ್ಬೊಬೇ ಮುಖಂಡರು ಸಿ.ಟಿ.ರವಿ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟೆ ಅಲ್ಲದೇ ಸಿ.ಟಿ.ರವಿಗಿಂತ ಕೆಳ ಮಟ್ಟಕ್ಕೂ ಇಳಿದು ಮಾತನಾಡುವ ಮಂದಿಯೂ ಬಿಜೆಪಿಯಲ್ಲಿ ಇದ್ದಾರೆ. ಕಾಂಗ್ರೆಸ್ ಕೂಡಾ ಇದೇ ಹಾದಿ ತುಳಿದಿರುವುದು ಕಾಂಗ್ರೆಸ್ ಗೆ ನಿಜವಾಗಿಯೂ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದೆಯೇ ಎಂಬ ಅನುಮಾನ ಹುಟ್ಟುವಂತಾಗಿದೆ.

ಇದರ ನಡುವೆ ಹುಟ್ಟುವ ಮತ್ತೊಂದು ಪ್ರಶ್ನೆ ಎಂದರೆ, ಒಂದು ಸಮುದಾಯಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ಟ್ರೋಲ್ ಮಾದರಿಯ ಹೇಳಿಕೆಗಳು, ಆರೋಪ ಪ್ರತ್ಯಾರೋಪಗಳು ರಾಜ್ಯದ ಇತರೆ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗ, ಕುರುಬ ಅಥವಾ ಇನ್ನಾವುದೇ ಸಮುದಾಯದ ಅಡಿಯಲ್ಲಿ ಬಂದಿದ್ದರೆ ನಿಜವಾಗಿಯೂ ಆ ಸಮುದಾಯಗಳು ಸುಮ್ಮನೆ ಇರುತ್ತಿದ್ದವ? ಖಂಡಿತ ಇಲ್ಲ. ಇಷ್ಟು ಹೊತ್ತಿಗಾಗಲೇ ಇಡೀ ಪಕ್ಷಗಳೇ ಆ ಸಮುದಾಯದ ಕೆಳಗೆ ಮಂಡಿಯೂರುವಷ್ಟು ಪ್ರತಿಭಟನೆ ನಡೆಯುತ್ತಿದ್ದವು. ರಾಜ್ಯಾದ್ಯಂತ ಧರಣಿ, ಸತ್ಯಾಗ್ರಹ ಕಲ್ಲು ತೂರಾಟಕ್ಕೂ ಕಡಿಮೆ ಇಲ್ಲದಂತಾ ಪ್ರತಿಭಟನೆ ನಡೆಯುತ್ತಿತ್ತು.

ಅಷ್ಟಕ್ಕೂ ಅಲ್ಪಸಂಖ್ಯಾತ ಮತ್ತು ತಳ ಸಮುದಾಯಗಳು ಇಂತವುಗಳನ್ನ ಕೇಳಿಯೂ ಪ್ರತಿಭಟಿಸುವುದಿಲ್ಲ ಅಥವಾ ಪ್ರತಿಭಟಿಸಿಯೂ ಅವುಗಳ ಕೈಯಲ್ಲಿ ಏನು ಮಾಡಲು ಸಾಧ್ಯ ಎಂಬ ಉಡಾಫೆ ಎರಡೂ ಪಕ್ಷಗಳಿಗೆ ಇದ್ದಂತಿದೆ. ಎರಡೂ ಪಕ್ಷಗಳ ವರ್ತನೆ ನೋಡಿದರೆ ಇಡೀ ಮುಸ್ಲಿಂ ಸಮುದಾಯವನ್ನೇ ಒಂದು ರೀತಿಯ ಅಸ್ಪೃಶ್ಯರಂತೆ ಮಾಡುವ ಒಂದು ಒಳಹುನ್ನಾರ ಕೂಡಾ ನಡೆದಿರುವ ಸಾಧ್ಯತೆಗಳೂ ಹೆಚ್ಚಿದೆ.

ಸಧ್ಯ ಈ ಬಗ್ಗೆ ಸಾಮಾಜಿಕವಾಗಿ ಹಾಗೂ ಜಾಲತಾಣಗಳಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ. ಸ್ವಲ್ಪ ಮಟ್ಟಿಗೆ ಕಾಂಗ್ರೆಸ್ ಪರವಾಗಿಯೇ ಇದ್ದ ವಿಚಾರವಾದಿಗಳೂ ಸಹ ಕಾಂಗ್ರೆಸ್ ಪಕ್ಷದ ಈ ನಿಲುವನ್ನು ಸಾರಾಸಗಟಾಗಿ ವಿರೋಧಿಸಿದ್ದಾರೆ. ಬಿಜೆಪಿಯಂತೂ ತಾನು ಅಲ್ಪಸಂಖ್ಯಾತ ವಿರೋಧಿ ಎಂದು ಬ್ರಾಂಡ್ ಮಾಡಿಕೊಂಡಿದೆ. ತಾನೊಂದು ಜಾತ್ಯತೀತ, ಧರ್ಮಾತೀತ, ಸಂವಿಧಾನ ಪರವಾದ ಪಕ್ಷ ಎಂದೇ ಬಿಂಬಿಸಿಕೊಂಡು ಬಂದ ಕಾಂಗ್ರೆಸ್ ಗೆ ಏನಾಗಿದೆ? ಎಂದು ಹಲವರು ಆರೋಪಿಸಿದ್ದಾರೆ. ಇದರಿಂದ ಮುಸ್ಲಿಂ ಸಮುದಾಯಕ್ಕೆ ಆಗುತ್ತಿರುವ ನೋವಿನ ಬಗ್ಗೆ ಯಾರೂ ಸಹ ಯೋಚಿಸುತ್ತಿಲ್ಲ ಎಂದೂ ಸಹ ಹಲವು ವಿಚಾರವಾದಿಗಳು ದನಿಗೂಡಿಸಿದ್ದಾರೆ.

ಇಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪರಂತಹ ಹಿರಿಯ ರಾಜಕಾರಣಿಗಳು ಮಧ್ಯ ಪ್ರವೇಶಿಸಿ ಎರಡೂ ಪಕ್ಷಗಳ ಇಂತಹ ಕೀಳು ಮಟ್ಟದ ಕೆಸರೆರಚಾಟಕ್ಕೆ ತಡೆ ತರಬೇಕು. ರಾಜಕೀಯ ಏನೇ ಇದ್ದರೂ ಸಮುದಾಯಕ್ಕೆ ಅಪಚಾರ ಆಗುವಂತಹ ಹೇಳಿಕೆಗಳನ್ನು ಹರಿಬಿಡುವವರ ವಿರುದ್ಧ ಅವರೇ ದನಿಗೂಡಿಸಬೇಕು. ಇಲ್ಲವಾದರೆ ಒಂದಿಡೀ ಸಮುದಾಯವನ್ನು ಇಡೀ ಸಮಾಜವೇ Untouchability ಮಾದರಿಯಲ್ಲಿ ಹೊರಗಿಡುವಂತಹ ವ್ಯವಸ್ಥೆ ಸೃಷ್ಟಿ ಆಗುವುದರಲ್ಲಿ ಎರಡು ಮಾತಿಲ್ಲ.

Related Articles

ಇತ್ತೀಚಿನ ಸುದ್ದಿಗಳು