Thursday, June 26, 2025

ಸತ್ಯ | ನ್ಯಾಯ |ಧರ್ಮ

ರಾಜಕೀಯ ಸ್ವಾರ್ಥಕ್ಕಾಗಿ ಧಾರ್ಮಿಕ ಕೇಂದ್ರ ಬಳಸಿಕೊಳ್ಳುವವರು ದೇಶದ್ರೋಹಿಗಳು: ಬಿಜೆಪಿಯನ್ನು ಪರೋಕ್ಷವಾಗಿ ಕುಟುಕಿದ ಸದಾನಂದ ಗೌಡ

ಬೆಂಗಳೂರು,ಏ.14- ತಮ್ಮ ರಾಜಕಾರಣದ ಸ್ವಾರ್ಥಕ್ಕಾಗಿ ಧಾರ್ಮಿಕ ಕೇಂದ್ರಗಳನ್ನು ಬಳಸಿಕೊಳ್ಳುವವರು ದೇಶದ್ರೋಹಿಗಳು ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರ ಮಠವೇ ಇರಲಿ ಅಥವಾ ಬೇರೆ ಯಾವುದೇ ಧಾರ್ಮಿಕ ಕೇಂದ್ರವಾಗಲೀ ಅವುಗಳ ಸಮಾಜಸೇವೆ ಮಾಡುವ ಕೇಂದ್ರಗಳು. ಅವುಗಳ ಕುರಿತು ರಾಜಕಾರಣಕ್ಕಾಗಿ ಮಾತನಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಯಾರೂ ಕೂಡ ಯಾವುದೇ ಮಠದ ಮೇಲೆ ಅನಗತ್ಯವಾಗಿ ಟೀಕೆ ಮಾಡುವುದು, ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ. ಒಕ್ಕಲಿಗರ ಮಠಕ್ಕೆ ತನ್ನದೇ ಆದ ಇತಿಹಾಸ ಮತ್ತು ಪರಂಪರೆ ಇದೆ. ಆ ಮಠವನ್ನು ಯಾರೂ ಕೂಡ ಅನಗತ್ಯವಾಗಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದರು. ಹಿಂದಿನ ಸ್ವಾಮೀಜಿಗಳಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಕೇವಲ ಒಕ್ಕಲಿಗರಿಗೆ ಮಾತ್ರ ಸೀಮಿತವಾಗಿರಲಿಲ್ಲ ಎಲ್ಲಾ ಸಮುದಾಯವನ್ನು ಮುನ್ನಡೆಸಿದ್ದರು. ಈಗಿನ ಶ್ರೀಗಳು ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿದರು.

ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದಾಗ ನನಗೆ ಕೊನೆ ಕ್ಷಣದಲ್ಲಿ ಬರುವಂತೆ ಸೂಚನೆ ಬಂದಿತ್ತು. ನಾನು ಅನಗತ್ಯವಾಗಿ ಮಾತನಾಡಬಾರದೆಂದು ಸುಮ್ಮನಿದ್ದೇನೆ. ಮಠಗಳು, ಮಠಾೀಶರ ಬಗ್ಗೆ ಸಮಾಜ ತನ್ನದೇ ಆದ ಗೌರವ ಇಟ್ಟುಕೊಂಡಿರುತ್ತದೆ. ಅದನ್ನು ಉಳಿಸುವುದು ಅಗತ್ಯ ಎಂದರು.

ಶ್ರೀಗಳು ಆದಿಚುಂಚನಗಿರಿ ಮಠ ವಿದ್ಯಾಸಂಸ್ಥೆಗಳು, ಆರೋಗ್ಯ ಸೇವೆಯಲ್ಲಿ ತಮ್ಮ ಕಾರ್ಯಗಳನ್ನು ತೊಡಗಿಸಿಕೊಂಡಿದ್ದಾರೆ. ನಾನು ಸಮುದಾಯದ ವ್ಯಕ್ತಿಯಾಗಿ ನಾನು ಒಪ್ಪುವುದಿಲ್ಲ. ದಕ್ಷಿಣ ಕರ್ನಾಟಕದ ಸುಮಾರು 10 ಜಿಲ್ಲೆಯಲ್ಲಿ ತನ್ನದೇ ಆದ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಈ ಸಮುದಾಯದವರು ಪ್ರಧಾನಮಂತ್ರಿ ಆಗಿದ್ದಾರೆ, ಮಂತ್ರಿಗಳಾಗಿದ್ದಾರೆ. ಅಲ್ಲದೆ ಯಾವುದೇ ರಾಜಕಾರಣಿ ಕೆಂಪೇಗೌಡರ ಹೆಸರು ಹೇಳದೇ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.

ಕಳೆದ 4 ದಿನಗಳಿಂದ ಬಹಳ ದೊಡ್ಡ ಚರ್ಚೆ ಒಕ್ಕಲಿಗರ ಬಗ್ಗೆ, ಒಕ್ಕಲಿಗರ ಮಠದ ಬಗ್ಗೆ ಚರ್ಚೆ ಆಗುತ್ತಿರುವುದು ಬೇಸರದ ಸಂಗತಿ. ಯಾವುದೇ ರಾಜಕೀಯದಲ್ಲಿ ತೊಡಗಿಸಿಕೊಳ್ಳದ ಅದ್ಬುತ ಮಠದ ಶ್ರೀಗಳು ಚುನಾವಣೆ ಸಂದರ್ಭದಲ್ಲಿ ಚರ್ಚೆಗೆ ಬಂದಿದ್ದು ನೋವಿನ ವಿಷಯ. ಚುನಾವಣೆ ವೇಳೆ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಬರೀ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಒಕ್ಕಲಿಗರ ಸಮುದಾಯದ ಬಗ್ಗೆ ಯಾರೇ ಮಾತನಾಡಿದ್ದು ತಪ್ಪು. ನಾನು ಇದನ್ನು ಸುತಾರಂ ಒಪ್ಪುವುದಿಲ್ಲ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page