Home ರಾಜ್ಯ ತುಮಕೂರು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ, ಇನ್ನು ಪಾದಯಾತ್ರೆ ಅವಶ್ಯಕತೆಯಿಲ್ಲ: ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿಕೆ

ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ, ಇನ್ನು ಪಾದಯಾತ್ರೆ ಅವಶ್ಯಕತೆಯಿಲ್ಲ: ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿಕೆ

0

ತುಮಕೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸ್ವಾಗತಿಸಿದ್ದಾರೆ. ನಾಗೇಂದ್ರ ಅವರು ತೆಗೆದುಕೊಂಡಿರುವ ನಿರ್ಧಾರ ಅತ್ಯಂತ ಸೂಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಸೋಮಣ್ಣ, “ರಾಜ್ಯ ಸರ್ಕಾರಕ್ಕೆ ತನ್ನದೇ ಆದ ವಿಶ್ವಾಸಾರ್ಹತೆ ಇರುತ್ತದೆ. ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ವ್ಯಕ್ತಪಡಿಸಿದ ಭಾವನೆಗಳಿಗೆ ಸ್ಪಂದಿಸಿ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ನಾಗೇಂದ್ರ ಅವರು ಒಬ್ಬ ಬುದ್ಧಿವಂತ ನಾಯಕರಾಗಿದ್ದು, ಒಳ್ಳೆಯ ತೀರ್ಮಾನವನ್ನೇ ತೆಗೆದುಕೊಂಡಿದ್ದಾರೆ. ಅವರ ಈ ನಡೆ ಅವರಿಗೆ ಹಾಗೂ ಸರ್ಕಾರಕ್ಕೆ ಒಳ್ಳೆಯದನ್ನೇ ಮಾಡಲಿದೆ,” ಎಂದು ಹೇಳಿದರು.

ಇದೇ ವೇಳೆ ದಲಿತ ನಾಯಕನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, “ದಲಿತರು, ಸವರ್ಣೀಯರು ಎಂಬ ಭೇದಭಾವವನ್ನು ಮೊದಲು ತಲೆಯಿಂದ ತೆಗೆದುಹಾಕಬೇಕು. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ಇಲ್ಲಿ ಜಾತಿಯ ಪ್ರಶ್ನೆಗಿಂತ ರಾಜ್ಯ ಮತ್ತು ಜನರ ಹಿತ ಮುಖ್ಯವಾಗುತ್ತದೆ. ಆರೋಪ ಮುಕ್ತರಾಗುವವರೆಗೂ ದೂರ ಉಳಿಯುವ ಅವರ ನಿರ್ಧಾರ ಸರಿಯಾಗಿದೆ,” ಎಂದರು. ಬಳ್ಳಾರಿ ಪಾದಯಾತ್ರೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾಗೇಂದ್ರ ಅವರ ರಾಜೀನಾಮೆಯ ನಂತರ ಪಾದಯಾತ್ರೆಯ ಅಗತ್ಯತೆ ಇರುವುದಿಲ್ಲ ಎನಿಸುತ್ತದೆ, ಆದರೆ ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

You cannot copy content of this page

Exit mobile version