Breaking news : ವಡೋದರ ದೋಣಿ ದುರಂತ : 12 ಮಕ್ಕಳ ದುರ್ಮರಣ

ಗುಜರಾತಿನ ವಡೋದರಾ ಜಿಲ್ಲೆಯಲ್ಲಿ ದೋಣಿಯೊಂದು ಮುಳುಗಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಗುರುವಾರ ಮಧ್ಯಾಹ್ನ ಹರ್ನಿ ಕೆರೆಯಲ್ಲಿ ಈ ಅವಘಡ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಅಪಘಾತ ಸಂಭವಿಸಿದಾಗ ದೋಣಿಯಲ್ಲಿ ಇರುವ ಯಾರೂ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಮೃತರಲ್ಲಿ ಕನಿಷ್ಠ ಹತ್ತು ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸೇರಿದ್ದಾರೆ. ದೋಣಿಯಲ್ಲಿದ್ದ ಇತರ 15 ಜನರನ್ನ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ದೋಣಿಯಲ್ಲಿ ಶಾಲಾ ಮಕ್ಕಳ ತಂಡವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲಿ 23 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಇದ್ದರು. ಸಮತೋಲನ ತಪ್ಪಿ ಬೋಟ್ ಪಲ್ಟಿಯಾಗಿದೆ. ಯಾವ ಮಕ್ಕಳೂ ಲೈಫ್ ಜಾಕೆಟ್ ಧರಿಸಿರಲಿಲ್ಲ. ಮಕ್ಕಳಿಗೆ ಈಜು ಬಾರದೇ ಇದ್ದುದರಿಂದ ನೀರಿನಲ್ಲಿ ಮುಳುಗತೊಡಗಿದರು. ಸ್ಥಳದಲ್ಲಿದ್ದವರು ಮಕ್ಕಳನ್ನ ರಕ್ಷಿಸಲು ಹರಸಾಹಸ ಪಟ್ಟರು. ಅಷ್ಟರಲ್ಲಿ ಆಡಳಿತ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಳಿಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಮಕ್ಕಳನ್ನು ಆಸ್ಪತ್ರೆಗೆ ಕಳುಹಿಸಲು ಪ್ರಾರಂಭಿಸಿದರು.

ವಡೋದರ ಜಿಲ್ಲೆಯ ಸನ್‌ರೈಸ್ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನ ಗುರುವಾರ ಪಿಕ್‌ನಿಕ್‌ಗೆ ಕರೆದುಕೊಂಡು ಹೋಗಲಾಗಿತ್ತು. ಪಿಕ್ನಿಕ್’ಗೆ ತೆರಳಿದ ಬಾಲಕಿ ನ್ಯಾನ್ಸಿಯ ತಾಯಿ ನಿರಾಲಿಬೆನ್ ಮಾಚಿ, ತನ್ನ ಮಗಳು 2ನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ಶಾಲಾ ವಿಹಾರಕ್ಕೆಂದು ಇತರ ಮಕ್ಕಳೊಂದಿಗೆ ಹರಣಿ ವಾಟರ್ ಪಾರ್ಕ್ ಮತ್ತು ಕೆರೆಗೆ ಬೆಳಗ್ಗೆ 8 ಗಂಟೆಗೆ ತೆರಳಿದ್ದರು. ಸಂಜೆ ಮಕ್ಕಳ ಮನೆಗೆ ಬರುವಾಗ ಅಪಘಾತ ಸಂಭವಿಸಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು