ಬೆಂಗಳೂರು: ಲಿಂಗಾಯಿತರು ಹಿಂದೂಗಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ “ಲಿಂಗಾಯತರು ಹಿಂದುತ್ವದ ಭಾಗವೇ ಹೊರತು ಬೇರೆಯಲ್ಲ,” ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ಯತ್ನಾಳ್, “ಲಿಂಗಾಯಿತರು ಹಿಂದೂಗಳಲ್ಲ ಎಂಬ ಕೆಲವರ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು, ಪ್ರತ್ಯೇಕ ಧರ್ಮದ ರೂವಾರಿಯಾಗಿದ್ದ ಸಿದ್ದರಾಮಯ್ಯನವರ ಯೋಜನೆಯ ಮುಂದುವರೆದ ಭಾಗವಾಗಿದೆ,” ಎಂದು ಆರೋಪಿಸಿದ್ದಾರೆ.
“ಹಿಂದುತ್ವ ಈ ನೆಲದ ಆತ್ಮ, ಬಸವಣ್ಣನವರು ಆರಾಧಿಸಿದ ಲಿಂಗವೂ ಈಶ್ವರನ ಅಂಶವೇ, ಹಿಂದುತ್ವ ಬದುಕುವ ದಾರಿ, ಜಗತ್ತಿನ ಯಾವುದಾದರೂ ಧರ್ಮ ಇನ್ನೊಬ್ಬರ ಮೇಲೆ ದಾಳಿ ಮಾಡದೆ, ಎಲ್ಲರನ್ನು ಗೌರವಿಸಿರುವುದು ಹಿಂದುತ್ವ ಮಾತ್ರ, ಹೀಗಾಗಿ ಲಿಂಗಾಯಿತ, ವೀರಶೈವ ಹಿಂದುತ್ವದ ಭಾಗವೇ ಹೊರತು ಬೇರೆಯಲ್ಲ,” ಎಂದು ಹೇಳಿದ್ದಾರೆ.
“2018ರ ವಿಧಾನಸಭೆ ಚುನಾವಣೆಗಾಗಿ ಸಿದ್ದರಾಮಯ್ಯನವರು ಈ ಗೊಂದಲವನ್ನು ಸೃಷ್ಟಿ ಮಾಡಿದ್ದರು, ಈಗ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಚರ್ಚೆಗೆ ಬೇರೆ ಯಾವುದೇ ವಿಷಯವಿಲ್ಲದೆ ಈ ಪ್ರತ್ಯೇಕ ಧರ್ಮದ ಚರ್ಚೆ ಆರಂಭಿಸಿದ್ದಾರೆ,” ಎಂದು ವ್ಯಂಗ್ಯವಾಡಿದ್ದಾರೆ.