Wednesday, December 10, 2025

ಸತ್ಯ | ನ್ಯಾಯ |ಧರ್ಮ

ಟೆಕ್ಕಿಗೆ ₹48 ಲಕ್ಷ ವಂಚನೆ ಪ್ರಕರಣ: ವಿಜಯ್ ಗುರೂಜಿ ಆಪ್ತ ಗುಜರಾತ್ ಮೂಲದ ವ್ಯಕ್ತಿ ಬಂಧನ

ಲೈಂಗಿಕ ಚಿಕಿತ್ಸೆಯ ನೆಪದಲ್ಲಿ ಟೆಕ್ಕಿ ತೇಜಸ್ ಎಂಬವರಿಂದ ₹48 ಲಕ್ಷ ವಂಚಿಸಿದ್ದ ಪ್ರಕರಣದಲ್ಲಿ ಮುಖ್ಯ ಆರೋಪಿ ವಿಜಯ್ ಗುರೂಜಿಯನ್ನು ಕೆಲ ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಈಗ, ಜ್ಞಾನಭಾರತಿ ಪೊಲೀಸರು ವಿಜಯ್ ಗುರು ಸಹಚರ ಮನೋಜ್ ಸಿಂಗ್ ಚಿತ್ತೋಡಿಯಾನನ್ನೂ ಬಂಧಿಸಿ, ಇಬ್ಬರನ್ನೂ ಪರಪ್ಪನ ಅಗೃಹಾರಾ ಜೈಲಿಗೆ ರವಾನಿಸಿದ್ದಾರೆ.

ತೆಲಂಗಾಣದಲ್ಲಿ ಸಿಕ್ಕಿಬಿದ್ದ ಸಹಚರ
ತೀವ್ರ ಆರೋಗ್ಯ ಸಮಸ್ಯೆ ಎದುರಾದ ಟೆಕ್ಕಿ ತೇಜಸ್, ಪೊಲೀಸರಿಗೆ ದೂರು ನೀಡಿದ ಬಳಿಕ ತನಿಖೆ ಆರಂಭವಾಗಿತ್ತು. ವಿಜಯ್ ಗುರೂಜಿಯನ್ನು ತೆಲಂಗಾಣದ ಮೊಹಬೂಬ್ ನಗರದಲ್ಲಿ ಬಂಧಿಸಲಾಗಿತ್ತು. ಇದೀಗ ಆತನ ಸಹಚರ ಮನೋಜ್ ಸಿಂಗ್ ಚಿತ್ತೋಡಿಯಾನನ್ನು ಸೈಬರಾಬಾದ್‌ನಲ್ಲಿ ಪೊಲೀಸರು ಹಿಡಿದಿದ್ದಾರೆ.

ಪೊಲೀಸರ ಪ್ರಾಥಮಿಕ ಪರಿಶೀಲನೆಯಲ್ಲಿ ಆರೋಪಿ ತಂಡವು ಐಷಾರಾಮಿ ಜೀವನ ನಡೆಸುತ್ತಿದ್ದು, ಬೆಂಗಳೂರು ತುಮಕೂರು ಸೇರಿ ಒಟ್ಟು 8 ಟೆಂಟ್‌ಗಳಲ್ಲಿ ಚಿಕಿತ್ಸೆ ಕೇಂದ್ರಗಳಂತೆ ನಡೆಸುತ್ತಿದ್ದರೆಂದು ತಿಳಿದು ಬಂದಿದೆ.

ಪೊಲೀಸರು ಈಗಾಗಲೇ ₹19.50 ಲಕ್ಷ ಹಣ, ಒಂದು ಟೂರ್ & ಟ್ರಾವೆಲ್ಸ್ (TT) ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಎಚ್ಚರಿಕೆ
ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರು ಘಟನೆಯ ಬಗ್ಗೆ ಹೇಳುವಾಗ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. “ನಕಲಿ ಗುರೂಜಿ ವಿಜಯ್ ಚಿತ್ತೋಡಿಯಾನನ್ನು ಬಂಧಿಸಲಾಗಿದೆ. ಇಂತಹ ಮೋಸಗಾರುಗಳಿಂದ ಜನರು ಜಾಗರೂಕರಾಗಬೇಕು. ಆತನಿಂದ ಚಿಕಿತ್ಸೆಗೆ ಒಳಗಾದ ಯಾರಿಗಾದರೂ ಆರೋಗ್ಯ ಸಮಸ್ಯೆ ಇದ್ದರೆ ಅಧಿಕೃತ ಆಸ್ಪತ್ರೆ ಮತ್ತು ವೈದ್ಯರನ್ನು ಸಂಪರ್ಕಿಸಬೇಕು.” ಎಂದು ಹೇಳಿದ್ದಾರೆ.

“ಟೆಂಟ್‌ಗಳಲ್ಲಿ ಚಿಕಿತ್ಸೆ ನೀಡುವವರ ಬಗ್ಗೆ ಪರಿಶೀಲನೆ ನಡೆಯಲಿದೆ. ಇಂತಹವರಿಗೆ ಹೋಗುವುದರಿಂದ ಜೀವಕ್ಕೂ ಅಪಾಯ.” ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಹೇಳಿದ್ದಾರೆ.

ದೂರು ನೀಡಿದ ಟೆಕ್ಕಿ ತೇಜಸ್ ಅವರಿಗೂ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page