ಸುಪ್ರೀಂ ತೀರ್ಪು ಮರೆಮಾಚಿ ಎಸ್‌ಐಟಿ ರಚನೆ: ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರದ ವಿರುದ್ಧ ವಿಜಯೇಂದ್ರ ಗಂಭೀರ ಆರೋಪ

ಬೆಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳ (SIT) ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದವರು ಯಾರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗುರುವಾರ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿ, ಕ್ಷೇತ್ರದ ವರ್ಚಸ್ಸನ್ನು ಕುಗ್ಗಿಸಲು ಷಡ್ಯಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದರು.

ಸುಪ್ರೀಂ ತೀರ್ಪು ಮರೆಮಾಚಿ ಎಸ್‌ಐಟಿ ರಚನೆ:

ಈ ದುರುದ್ದೇಶದಿಂದಲೇ ಕಾಂಗ್ರೆಸ್ ಸರ್ಕಾರವು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮರೆಮಾಚಿ, “ಬುರುಡೆ ಗ್ಯಾಂಗ್” (ಒಂದು ಗುಂಪು) ನ ದೂರು ಸ್ವೀಕರಿಸಿ ಎಸ್‌ಐಟಿ ರಚಿಸಿದೆ ಎಂಬುದು ಈಗ ಬಯಲಾಗಿದೆ ಎಂದು ವಿಜಯೇಂದ್ರ ಹೇಳಿದರು.

ಸುಪ್ರೀಂ ಕೋರ್ಟ್ ಈ ಗುಂಪು ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2025ರ ಮೇ 05 ರಂದೇ ವಜಾಗೊಳಿಸಿತ್ತು. ಆದರೂ, ಈ ಸಂಗತಿಯನ್ನು ಮುಚ್ಚಿಟ್ಟು, ಸರ್ಕಾರವು ಕಟ್ಟುಕಥೆ ಹೆಣೆದ ಆರೋಪವನ್ನು ಆಧರಿಸಿ ದೂರು ಸ್ವೀಕರಿಸಿತು.

ನಂತರ, “ಉಗ್ರ ಎಡಪಂಥೀಯ ವಿಚಾರಧಾರೆಯ ವಿತಂಡವಾದಿಗಳ ಒತ್ತಡಕ್ಕೆ ಮಣಿದಂತೆ ನಟಿಸಿ” ಸರ್ಕಾರವು ಎಸ್‌ಐಟಿ ರಚಿಸಿತು. ಇದು ಸರ್ವೋಚ್ಚ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ದೂರಿದರು.

ಕ್ಷಮೆಯಾಚಿಸುವಂತೆ ಆಗ್ರಹ:

ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸುವಾಗ, “ಇದು ಸಾರ್ವಜನಿಕ ಹಿತಾಸಕ್ತಿಯಲ್ಲ, ಬದಲಿಗೆ ಪ್ರಚಾರ, ಹಣ, ಖಾಸಗಿ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದೆ” ಎಂದು ಹೇಳಿ ಷಡ್ಯಂತ್ರ ರೂಪಿಸಲು ಹೊರಟವರಿಗೆ ಮಂಗಳಾರತಿ ಎತ್ತಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಬೇಷರತ್ತಾಗಿ ಸುಪ್ರೀಂ ಕೋರ್ಟ್‌ನ ಕ್ಷಮೆ ಕೋರಬೇಕು. ಜೊತೆಗೆ, ಧರ್ಮಸ್ಥಳದ ಷಡ್ಯಂತ್ರದಲ್ಲಿ ನಾವೂ ಭಾಗಿದಾರರು ಎಂಬ ಸತ್ಯವನ್ನು ಒಪ್ಪಿಕೊಂಡು ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

ಎನ್‌ಐಎ ತನಿಖೆಗೆ ಒತ್ತಾಯ:

ಈ ಹಿಂದಿನಿಂದಲೂ ಇದು ವ್ಯವಸ್ಥಿತ ಷಡ್ಯಂತ್ರ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ, ಈ ಮಾತನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ಹೇಳಿದ್ದಾರೆ. ಈ ವ್ಯವಸ್ಥಿತ ಹುನ್ನಾರದ ಹಿನ್ನೆಲೆಯಲ್ಲಿಯೇ ನಾವು ಧರ್ಮಸ್ಥಳದ ಕುರಿತು ಎನ್‌ಐಎ (NIA) ತನಿಖೆಗೆ ಒತ್ತಾಯಿಸುತ್ತಿದ್ದೇವೆ. ಈ ಷಡ್ಯಂತ್ರ ರೂಪಿಸಿದವರಿಗೆ ಶಿಕ್ಷೆಯಾಗುವವರೆಗೂ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು