Wednesday, November 20, 2024

ಸತ್ಯ | ನ್ಯಾಯ |ಧರ್ಮ

ಮಗನಿಗಾಗಿ ಹಂಬಲಿಸಿದ್ದ ಆ ತಾಯಿಗೆ ʼಮಗ ಇನ್ನಿಲ್ಲʼ ಎಂಬ ಸುದ್ದಿ ಕೇಳಿದಾಗ….

ಲೇಖನ: ರಾಜೇಶ್ ರಾವ್ ಪುತ್ತೂರು

ಆ ತಾಯಿಯ ಕಣ್ಣೀರು ಇಂದಿಗೂ ನನ್ನ ಕಣ್ಣ ಮುಂದಿದೆ. ಮಗನಿಗಾಗಿ ಹಂಬಲಿಸಿದ್ದಾಕೆ ‘ಮಗ ಇನ್ನಿಲ್ಲ’ ಎಂಬ ಸುದ್ದಿ ಕೇಳಿ ಅಂದು ಅತ್ತ ರೀತಿ ಇಂದಿಗೂ ನೆನಪಿದೆ. ಜೊತೆಗೆ ತನ್ನ ಮಗ ಯಾಕೆ ಹೀಗಾದ ಎಂದು ಆಕೆ ಹೇಳಿದ ಕಣ್ಣೀರ ಕಥೆ ಇಂದಿಗೂ ಕಿವಿಯಲ್ಲಿ ಕೇಳಿಸುತ್ತಿದೆ. ಮಗ ಬಿಟ್ಟು ಹೋಗಿ ವರ್ಷಗಳಾದ್ರೂ ಇಂದಲ್ಲ ನಾಳೆ ಬರಬಹುದು ಅಂತ ಕಾದಿದ್ದ ಆಕೆಗೆ ಅಂದು ಮಗನ ಸಾವಿನ ಸುದ್ದಿ ಬರ ಸಿಡಿಲಿನಂತೆ ಕೇಳಿಸಿತ್ತು. ಆಕೆಯ ರೋದನ ಆ ಕಾಡಿನ ಇಂಚಿಂಚಿಗೂ ತಲುಪಿ ಅಲ್ಲೇ ಕರಗಿ ಹೋಗಿತ್ತು.

ಆದರೆ ವಿಪರ್ಯಾಸ ಅಂದ್ರೆ, ನಿಜವಾಗಿಯೂ ಅಂದು ಆಕೆಯ ಮಗ ಸತ್ತಿರಲಿಲ್ಲ. ತಪ್ಪು ಮಾಹಿತಿಯೊಂದು ಆಕೆಯ ಮಗ ಇನ್ನಿಲ್ಲ ಎಂಬ ಸುದ್ದಿಯನ್ನು ಆಕೆಯ ಕಿವಿಗೆ ತಲುಪಿಸಿತ್ತು. ಆದರೆ, ಇಂದು ನಿಜವಾಗಿಯೂ ಆಕೆಯ ಮಗ ಎನ್‌ಕೌಂಟರ್ ಗೆ ಬಲಿಯಾಗಿದ್ದಾನೆ. ಆತ ಬೇರಾರು ಅಲ್ಲ ನಿನ್ನೆ ಎನ್‌ಕೌಂಟರ್‌ಗೆ ಬಲಿಯಾದ ವಿಕ್ರಂ ಗೌಡ.

ಅದು 2007 ರ ಕಥೆ.. ಚಿಕ್ಕಮಗಳೂರಿನಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ವಿಕ್ರಂ ಗೌಡ ಸತ್ತು ಹೋದ ಎಂಬ ಸುದ್ದಿ ಪೊಲೀಸ್ ಮೂಲದಿಂದಲೇ ಸಿಕ್ಕಿತ್ತು. ಹೀಗಾಗಿ ಅಂದು ಉಡುಪಿಯಲ್ಲಿದ್ದ ನಾನು ಕ್ಯಾಮೆರಾ ಮೆನ್ ಜೊತೆ ಬೈಕೇರಿ ಕಬ್ಬಿನಾಲೆಯತ್ತ ಪ್ರಯಾಣ ಆರಂಭಿಸಿದ್ದೆವು. ಹೆಬ್ರಿ ದಾಟಿ ಕಬ್ಬಿನಾಲೆ ರಸ್ತೆ ಎಂಟ್ರಿ ಆಗುವಾಗಲೇ ಎಎನ್‌ಎಫ್ ತಂಡ ನಮ್ಮನ್ನು ನಿಲ್ಲಿಸಿ ಮುಂದೆ ಹೋಗುವಂತಿಲ್ಲ ಎಂದು ಸೂಚನೆ ನೀಡಿದ್ರು. ಆ ವೇಳೆಗೆ ಕಾರ್ಕಳ ಪೊಲೀಸ್ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿ ಬಳಿಕ ಹೇಗೋ ಒಪ್ಪಿಸಿ ಕಬ್ಬಿನಾಲೆಯತ್ತ ತೆರಳಿದ್ದೆವು. ನಡುನಡುವೆ ಅಲ್ಲಲ್ಲಿ ಎಎನ್‌ಎಫ್ ಸಿಬ್ಬಂದಿ ನಿಂತಿದ್ದು, ನಕ್ಸಲ್ ತಂಡ ದಾಳಿ ನಡೆಸಬಹುದಾ ಎಂಬ ಆತಂಕ ನಮ್ಮಲ್ಲೂ ಎದುರಾಗಿತ್ತು. ಹಾಗೆ ಕೆಲ ದೂರ ಬೈಕ್ ನಲ್ಲಿ ತೆರಳಿ ಬಳಿಕ ರಸ್ತೆ ಇಲ್ಲದ ಕಾರಣ ಕಾಲ್ನಡಿಗೆಯಲ್ಲಿ ಸುಮಾರು ಮೂರು ಕಿಲೋ ಮೀಟರ್ ಕ್ರಮಿಸಿ ಕಬ್ಬಿನಾಲೆ ತಲುಪಿದ್ದೆವು. ಅಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಲ್ಲಿ, “ವಿಕ್ರಂ ಗೌಡನ ಮನೆ ಎಲ್ಲಿ ಅಣ್ಣಾ?” ಎಂದು ವಿಚಾರಿಸಿದಾಗ ಒಮ್ಮೆ ನಮ್ಮನ್ನು ವಿಚಿತ್ರವಾಗಿ ನೋಡಿ ಬಳಿಕ, “ಇನ್ನೊಂದೆರಡು ಫರ್ಲಾಂಗು ಮುಂದೆ ಹೋಗಿ, ಎಡದಲ್ಲಿ ಹಳ್ಳ ದಾಟಲು ಒಂದು ಹಗ್ಗದ ಸೇತುವೆ ಇದೆ. ಅಲ್ಲಿಂದ ಮುಂದೆ ಒಂದು ಫರ್ಲಾಂಗು ಹೋದ್ರೆ ಅಲ್ಲಿ ಮನೆಗಳಿವೆ ಅಲ್ಲಿ ಕೇಳಿ” ಎಂದು ಹೇಳಿದ್ರು. ಜೊತೆಗೆ “ಅವನ ತಾಯಿ ನಮ್ಮ ದಣಿಯ ತೋಟದಲ್ಲೇ ಕೆಲಸ ಮಾಡೋದು. ನಾನು ಅವರಿಗೆ ಹೇಳ್ತೇನೆ ನೀವು ಹೊರಡಿ” ಎಂದು ನಮ್ಮನ್ನು ಕಳುಹಿಸಿದ್ರು. ಹಾಗೇ ಮುಂದಡಿಯಿಡುತ್ತಿದ್ದಂತೆ ಅವರು ಯಾರನ್ನೋ ಕೂಗಿ ಕರೆದು ನಾವು ಬಂದ ವಿಚಾರ ಯಾರಿಗೋ ತಿಳಿಸಿದ್ದು ನಮಗೆ ಕೇಳಿಸಿತ್ತು. ಅವರು ಹೇಳಿದ ದಾರಿಯಲ್ಲೇ ಸಾಗಿದ ನಮಗೆ ವಿಚಿತ್ರ ಅನಿಸಿದ್ದು ಮಗ ಸತ್ತ ಸುದ್ದಿ ಗೊತ್ತಿದ್ರೂ ತಾಯಿ ಕೆಲಸಕ್ಕೆ ಹೋಗಿದ್ದಾರಾ ಅನ್ನೋದು. ಹಾಗೇ ನಾವಿಬ್ಬರು ಚರ್ಚಿಸುತ್ತಾ ಹೆಜ್ಜೆ ಹಾಕಿ ವಿಕ್ರಂ ಗೌಡನ ಮನೆ(ಗುಡಿಸಲು) ತಲುಪಿದ್ದೆವು. ಆದರೆ ಅಲ್ಲಿನ ವಾತಾವರಣ ಕೂಡ ನಮಗೆ ಅಲ್ಲೇನೂ ಆಗಿಲ್ಲ ಅನ್ನೋ ರೀತಿಯಲ್ಲೇ ಕಾಣಿಸಿತ್ತು.

ಅದೊಂದು ಪುಟ್ಟ ಗುಡಿಸಲಾಗಿದ್ದು ಅಂದಾಜು 200 ಚದರ ಅಡಿ ಇರಬಹುದು ಅಷ್ಟೇ. ಒಂದು ರೀತಿಯಲ್ಲಿ ಜೋಪಡಿ ಮಾದರಿಯಲ್ಲಿ ಬಾಗಿಲುಗಳಿಲ್ಲದ ಒಂದು ಸೂರು ಅದು. ಮನೆಯಲ್ಲಿ ಯಾರೂ ಕಾಣಿಸದ ಕಾರಣ ಸೆಗಣಿ ಸಾರಿಸಿ ಶುಭ್ರವಾಗಿದ್ದ ಮೆಟ್ಟಿಲ ಮೇಲೆ ವಿಶ್ರಾಂತಿ ಪಡೆದೆವು. ಅಷ್ಟರಲ್ಲಿ ಹಿಂಬದಿಯಿಂದ “ಅತ್ತೆ ಇಲ್ಲ.. ಏನು ಬೇಕು” ಎಂಬ ಹೆಣ್ಣಿನ ಧ್ವನಿ ಕೇಳಿಸಿ ತಿರುಗಿದಾಗ ಕಂಕುಳಲ್ಲಿ ಮಗು ಇಟ್ಟುಕೊಂಡ ಸಣ್ಣ ಪ್ರಾಯದ ಮಹಿಳೆ ನಿಂತಿದ್ದರು. ವಿಚಾರಿಸಿದಾಗ ಆಗೆ ವಿಕ್ರಂ ಗೌಡನ ಕಿರಿಯ ಸಹೋದರ‌ನ ಪತ್ನಿ ಅನ್ನೋದು ಗೊತ್ತಾಯ್ತು. ಆದರೆ ಆಕೆಯ ಮುಖದಲ್ಲೂ ಯಾವುದೇ ದುಃಖ ಕಾಣಿಸದೆ ನಾವು ಮತ್ತೆ ಕೇಳಿದ ಪ್ರಶ್ನೆ “ಇದು ವಿಕ್ರಂ ಗೌಡ ಮನೆ ಅಲ್ವಾ?” ಎಂಬುದಾಗಿತ್ತು. ಹೌದು ಅನ್ನೋ ಉತ್ತರ ಆ ಕಡೆಯಿಂದ ಬಂತು. ಇದೇನಪ್ಪಾ! ಅಂತ ಒಂದು ಕಡೆ ಕಸಿವಿಸಿ ಮತ್ತೊಂದು ಕಡೆ ನಕ್ಸಲ್ ವಿಕ್ರಂ ಗೌಡನ ಮನೆ ಅಂತಾ ಇನ್ಯಾರದೋ ಮನೆಗೆ ಬಂದೆವಾ ಅನ್ನೋ ಅನುಮಾನ. ಈ ವೇಳೆ ಪಕ್ಕದ ಮನೆಯವರು ಕೂಡ ಕುತೂಹಲದಿಂದ ನಮ್ಮನ್ನೇ ದಿಟ್ಟಿಸಿ ನೋಡುವುದನ್ನು ಕಂಡು ಒಬ್ಬರನ್ನು ಕರೆದು ವಿಚಾರಿಸಿದಾಗ ನಾವು ಹುಡುಕಿಕೊಂಡು ಬಂದ ಮನೆ ಇದುವೆ ಎಂಬುದು ಖಾತರಿಯಾಗಿತ್ತು. ಇದೇ ವೇಳೆ ಅವರು ಪಿಸು ದನಿಯಲ್ಲಿ, “ಅವರಿಗೆ ಇನ್ನೂ ವಿಚಾರ ಗೊತ್ತಾಗಿಲ್ಲ” ಎಂಬ ಸೂಚನೆ ಕೊಟ್ರು.

ಇಷ್ಟೆಲ್ಲಾ ಘಟನೆಗಳು ನಡೆಯುವ ವೇಳೆಗೆ ವಿಕ್ರಂ ಗೌಡನ ತಾಯಿ ಹಾಜರಾಗಿದ್ದರು. ಅವರು, “ಏನು ಬಂದಿದ್ದು? ಎಂತ ವಿಚಾರ?” ಅಂದಾಗ ನನಗಂತೂ ಮಾತಾಡಲು ಬಾಯಿ ಬಂದಿರಲಿಲ್ಲ. “ಅಮ್ಮ ಸುಮ್ಮನೆ ನಿಮ್ಮ ಮಗನ ಬಗ್ಗೆ ಮಾತಾಡಲು ಬಂದೆ” ಅಂದೆ. ಈ ವೇಳೆಗೆ ಕ್ಯಾಮರಾ ರೆಕಾರ್ಡಿಂಗ್ ಮಾಡಲು ರೆಡಿ ಆಗಿತ್ತು. ಅವರ ಬಳಿ ಮೈಕ್ ಹಿಡಿದು ಮಗ ನಕ್ಸಲ್ ಹೇಗಾದಾ ? ಯಾವಾಗ ಕಾಡಿಗೆ ಹೋದ? ಹೀಗೆ ಹಲವು ಕಥೆಗಳನ್ನ ಕೇಳಿದೆ. ಕಣ್ಣೀರು ಸುರಿಸುತ್ತಾ ಒಂದೊಂದೇ ಕಥೆ ಹೇಳಿದ್ದ ಆ ತಾಯಿ ಹೇಳಿದ ಆ ಒಂದು ಮಾತು “ನಿತ್ಯ ಪೊಲೀಸರು ಬಂದು ಹೊಡೆದು ಬಡಿದ ಕಾರಣವೇ ನನ್ನ ಮಗ ಬೆಟ್ಟ ಹತ್ತಿ ಹೋದ.” ಈ ಮಾತು ಹೇಳಿದಾಗ ವ್ಯವಸ್ಥೆಯ ಬಗ್ಗೆ ಅವರ ಮುಖದಲ್ಲಿನ ಅಸಹನೆ ಮುಚ್ಚಿಡಲಾಗಿರಲಿಲ್ಲ.

ಕಾಡುತ್ಪತ್ತಿ ಸಂಗ್ರಹಿಸಿ ಜೀವನ ಮಾಡುತ್ತಿದ್ದ ವಿಕ್ರಂ ಗೌಡ ಅದಕ್ಕಾಗಿ ಮನೆಯ ಹಿಂಬದಿಯಲ್ಲಿರುವ ದಟ್ಟ ಅರಣ್ಯಕ್ಕೆ ಹೋಗ್ತಾ ಇದ್ದ. ಸಂಗ್ರಹಿಸಿದ ಕಾಡುತ್ಪತ್ತಿಯನ್ನು ಅರಣ್ಯ ಇಲಾಖೆಯ ಮೂಲಕವೇ ಮಾರಾಟ ಮಾಡುತ್ತಿದ್ದ. ಆದರೆ, ಸಾಕೇತ್ ರಾಜನ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಈತನ ಬಗ್ಗೆ ಅನುಮಾನ ಇತ್ತು. ಬೆಟ್ಟಕ್ಕೆ ಹೋಗುವ ಈತ ನಕ್ಸಲರ ಸಂಪರ್ಕದಲ್ಲಿ ಇದ್ದಾನೆ ಅನ್ನೋ ಅನುಮಾನ ಪೊಲೀಸರಿಗಿತ್ತು. (ಅನುಮಾನ ನಿಜವೋ ಸುಳ್ಳೋ ಬೇರೆ ವಿಚಾರ ) ಇದೇ ಕಾರಣಕ್ಕೆ ಒಂದೆರಡು ಬಾರಿ ವಿಕ್ರಂ ಗೌಡನನ್ನು ಠಾಣೆಗೆ ಎಳೆದೊಯ್ದು ವಿಚಾರಣೆ ಮಾಡಿದ್ದರು. ಆದರೆ ನನಗೇನೂ ಗೊತ್ತಿಲ್ಲ ಅಂದಿದ್ದ ವಿಕ್ರಂ ಗೌಡ ಮತ್ತೆ ತನ್ನ ಕಾಡುತ್ಪತ್ತಿ ಸಂಗ್ರಹದ ಕಾಯಕ ಮುಂದುವರಿಸಿದ್ದ. ಈ ವೇಳೆ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದ್ದು ಅದೊಂದು ದಿನ ಪೊಲೀಸರು ಆತನನ್ನು ಎಳೆದೊಯ್ದು ಚೆನ್ನಾಗಿ ವಿಚಾರಿಸಿದ್ರು. ಆ ವಿಚಾರಣೆಯಿಂದ ಸುಧಾರಿಸಲು ವಿಕ್ರಂ ಗೌಡನಿಗೆ ವಾರಗಳೇ ಬೇಕಾಗಿತ್ತು. ಇದಾಗಿ ಮತ್ತೆ ಮನೆಗೆ ಬಂದ ಪೊಲೀಸರು ಮನೆಯಲ್ಲೂ ವಿಚಾರಣೆ ನಡೆಸಿ ಮತ್ತೆ ವಿಕ್ರಂ ಗೌಡನನ್ನು ಎಳೆದೊಯ್ದಿದ್ದರು. ಇದೇ ಪೊಲೀಸರು ನಡೆಸಿದ್ದ ಆತನ ಕೊನೆಯ ವಿಚಾರಣೆಯಾಗಿತ್ತು. ಪೊಲೀಸ್ ಠಾಣೆಯಿಂದ ಬಂದಿದ್ದ ವಿಕ್ರಂ ಗೌಡ ರಾತ್ರೋರಾತ್ರಿ ಮನೆಯಿಂದ ಹೊರಟು ಹಿಂಬದಿಯ ಬೆಟ್ಟ ಏರಿದ್ದ. ಇದಿಷ್ಟೂ ವಿಕ್ರಂ ಗೌಡನ ತಾಯಿ ಅಂದು ನಮ್ಮಲ್ಲಿ ಹೇಳಿದ್ದ ಕಥೆ.

ಇಷ್ಟೆಲ್ಲಾ ಕಥೆ ಕೇಳಿದ‌ ನಮಗೆ ಆ ತಾಯಿ ನಿಮ್ಮ ಮಗ ಪೊಲೀಸರ ಗುಂಡಿಗೆ ಸತ್ತಿದ್ದಾನೆ ಎಂಬ ಸತ್ಯ ಹೇಗೆ ಹೇಳುವುದು ಅನ್ನೋ ಸಂಕಟ. ಪಕ್ಕದ ಗುಡಿಸಲಿನ ಅವರ ಸಂಬಂಧಿ ಮಹಿಳೆ ನೀವು ಹೇಳಿ ಅಂತ ನಮ್ಮಲ್ಲಿ ಮನವಿ ಮಾಡಿದ್ರು. ಆದ್ರೆ, ಹೇಗೆ ಹೇಳೋದು ಅಂತ ಚಿಂತಿಸುವಾಗಲೇ ಇನ್ನೊಂದಷ್ಟು ಪತ್ರಕರ್ತರ ತಂಡ ಅಲ್ಲಿಗೆ ಬಂದು ತಲುಪಿದ್ರು. ಅವರಿಗೂ ಮನೆಯ ಪರಿಸ್ಥಿತಿ ನೋಡಿ ಅಯೋಮಯ. ನನ್ನಲ್ಲಿ ವಿಚಾರಿಸಿದಾಗ ಅವರಿಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಅಂತ ವಿಷಯ ತಿಳಿಸಿದೆ. ಅಷ್ಟರಲ್ಲಿ ಆ ತಾಯಿಗೂ ಒಂದು ಸಣ್ಣ ಅನುಮಾನ ಕಾಡಿ ಬಾಯಿ ಬಿಟ್ಟು, “ನೀವು ಇಷ್ಟು ಜನ ಬಂದಿದ್ದೀರಿ ಅಂದ್ರೆ ನನ್ನ ಮಗನಿಗೆ ಏನೋ ಆಗಿರಬೇಕು..ಏನಾಯ್ತು ?” ಅಂತ ಕೇಳಿಯೇ ಬಿಟ್ಟರು. ಆ ವೇಳೆಗೆ ಹಿರಿಯ ಪತ್ರಕರ್ತರೊಬ್ಬರು ನಿಧಾನವಾಗಿ, “ನಿಮ್ಮ ಮಗನಿಗೆ ಚಿಕ್ಕಮಗಳೂರು ಅರಣ್ಯ ವ್ಯಾಪ್ತಿಯಲ್ಲಿ ಪೊಲೀಸರು ಗುಂಡು ಹೊಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿ ಬಂದೆವು” ಎಂದು ವಿಚಾರ ಹೇಳಿದ್ರು. ಈ ಸುದ್ದಿ ಕೇಳಿ ಬರಸಿಡಿಲು ಬಡಿದಂತಾದ ಆ ತಾಯಿ ರೋದನೆ ಇಡೀ ಅರಣ್ಯದ ಮೂಲೆ ಮೂಲೆಗೂ ಕೇಳಿಸಿತು. ಇದಾದ ಬಳಿಕ ಒಂದಷ್ಟು ಜನ ಆಕೆಯನ್ನು ಸಮಾಧಾನಪಡಿಸಿ ವಿಕ್ರಂ ಗೌಡನ ಬಗ್ಗೆ ಒಂದಷ್ಟು ಮಾಹಿತಿ ಕಲೆ ಹಾಕಿಕೊಂಡು ಅಲ್ಲಿಂದ ಹೊರಟರು. ನಾವೂ ಕಬ್ಬಿನಾಲೆಯ ಕಾಡಿನಿಂದ ಹೆಬ್ರಿ ತಲುಪಿ ವಿಕ್ರಂ ಗೌಡನ ಮೃತದೇಹ ಎಲ್ಲಿ ಬರುತ್ತದೆ ಎಂಬ ಮಾಹಿತಿ ಕಲೆ ಹಾಕಲು ಆರಂಭಿಸಿದೆವು. ಅಷ್ಟರಲ್ಲಿ ಪೊಲೀಸ್ ಇಲಾಖೆಯ ಮಾಹಿತಿ ನಮ್ಮನ್ನೇ ಒಮ್ಮೆ ಅಲುಗಾಡಿಸಿ ಬಿಟ್ಟಿತ್ತು. ಅವರ ಮಾಹಿತಿ ಕೇಳಿ ಛೇ..! ಬದುಕಿದ್ದ ಮಗನನ್ನು ಸತ್ತಾ ಎಂದು ಹೇಳಿ ತಾಯಿಯ ಕಣ್ಣೀರು ಹಾಕಿಸಿದೆವಲ್ಲಾ ಅನ್ನೋ ಪಶ್ಚಾತ್ತಾಪ ಕಾಡಿತು.
ಅಸಲಿಗೆ ಅಂದು ಪೊಲೀಸ್ ಎನ್‌ಕೌಂಟರ್ ನಲ್ಲಿ ಹತನಾದವನು ಕುತ್ಲೂರಿನ ದಿನಕರ ಗೌಡ. ಪೊಲೀಸರ ಮೊದಲ ಮಾಹಿತಿಯಲ್ಲಿ ವಿಕ್ರಂ ಗೌಡ ಎಂದು ತಪ್ಪಾಗಿತ್ತು.

ಅಂದು ಸುಳ್ಳಾಗಿದ್ದ ಘಟನೆ ಇಂದು ನಿಜವಾಗಿದೆ. ತನ್ನೂರ ಪಕ್ಕದಲ್ಲೇ ಎನ್‌ಕೌಂಟರ್ ನಲ್ಲಿ ವಿಕ್ರಂ ಗೌಡ ಹತನಾಗಿದ್ದಾನೆ. ಆತನ ತಾಯಿಯ ಪ್ರಕಾರ ಆತನ ಈ ಸ್ಥಿತಿಗೆ ನಮ್ಮ ವ್ಯವಸ್ಥೆಯೇ ಕಾರಣ. ಅಂದು ವಿಚಾರಣೆಯ ಹೆಸರಿನಲ್ಲಿ ನಡೆದ ಹಿಂಸೆ ತಾಯಿ ಮಗನನ್ನು ಬೇರೆ ಮಾಡಿತ್ತು. ಆದರೆ ಬೆಟ್ಟ ಹತ್ತಿ ಬಂದೂಕು ಹಿಡಿದ ವಿಕ್ರಂ ಗೌಡ ಕೂಡ ಮಾಡಿದ್ದು ಸರಿ ಅಂತ ಹೇಳಲಾಗದು. ಆದರೆ, ಆತ ಬಂದೂಕು ಹಿಡಿದರೂ ಆತನ ತಾಯಿಯನ್ನು ಜೀತದಿಂದ ತಪ್ಪಿಸಲಾಗಿರಲಿಲ್ಲ. ಆತನ ತಾಯಿಗೊಂದು ಸೂರು ಮಾಡಲಾಗಿರಲಿಲ್ಲ. ತಮ್ಮನ ಬದುಕಿಗಾದ್ರೂ ಏನಾದ್ರೂ ಮಾಡಿದ್ನಾ ಅಂದ್ರೆ ಅದೂ ಇಲ್ಲ. ಹಾಗಿದ್ರೆ ವಿಕ್ರಂ ಗೌಡ ಕಾಡಲ್ಲಿ ಬಂದೂಕು ಹಿಡಿದು ಸಾಧಿಸಿದ್ದು ಏನನ್ನು ಎಂಬ ಪ್ರಶ್ನೆಗೆ ಉತ್ತರ ಏನಾಗಿರಬಹುದು?

  • ರಾಜೇಶ್ ರಾವ್ ಪುತ್ತೂರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page