Friday, June 14, 2024

ಸತ್ಯ | ನ್ಯಾಯ |ಧರ್ಮ

ಈ ಊರುಗಳಲ್ಲಿ ರಾವಣನೇ ದೇವರು! ಇಲ್ಲಿ ದಸರೆಗೆ ರಾವಣ ಪೂಜೆಯೇ ವಿಶೇಷ!

ಇತ್ತ ಕರ್ನಾಟಕದಲ್ಲಿ ಮಹಿಷ ದಸರಾ ಕುರಿತು ಬಿಜೆಪಿಯ ಪ್ರತಾಪ ಸಿಂಹ ಮತ್ತವರ ಸ್ನೇಹಿತರ ವರಾತದ ನಡುವೆಯೇ ಮಹಿಷನಂತೆಯೇ ರಾಕ್ಷಸನೆಂದು ಪರಿಗಣಿಸಲ್ಪಡುವ ರಾವಣ ಪೂಜೆ ದೇಶದ ಹಲವು ಕಡೆ ನಡೆಯುತ್ತದೆ.

ಮೈಸೂರಿನ ಮಹಿಷ ಹೇಗೆ ದಲಿತರ ಪಾಲಿಗೆ ಬೌದ್ಧ ರಾಜನಾಗಿ ಕಾಣುತ್ತಾನೆಯೋ ಹಾಗೆಯೇ ದೇಶದ ಹಲವೆಡೆಯ ಜನರಿಗೆ ರಾವಣನೂ ದೇವರಾಗಿ ಕಾಣುತ್ತಾನೆ. ಭಾರತದಂತಹ ವೈವಿಧ್ಯಪೂರ್ಣ ಸಾಂಸ್ಕೃತಿಕ ಸಂರಚನೆಯನ್ನು ಹೊಂದಿರುವ ದೇಶದಲ್ಲಿ ಇದೆಲ್ಲವೂ ಮೊದಲಿನಿಂದಲೂ ನಡೆದುಕೊಂಡು ಬರುತ್ತಿದೆ. ಆದರೆ ಪ್ರತಾಪ ಸಿಂಹರಂತಹ ರಾಜಕಾರಣಿಗಳು ಕ್ಷೇತ್ರದ ಕೆಲಸ ಮಾಡುವ ಬದಲು ಇಂತಹ ವಿಷಯಗಳನ್ನು ಮುನ್ನೆಲೆಗೆ ತಂದು ಆ ಮೂಲಕ ಜನರನ್ನು ಧ್ರುವೀಕರಿಸಿ ಔರ ಭಾವನೆಗಳನ್ನು ಮತಗಳನ್ನಾಗಿ ಪರಿವರ್ತಿಸಿಕೊ‍ಳ್ಳುತ್ತಾರೆ.

ಅದಿರಲಿ ಈಗ ನಾವು ರಾವಣನನ್ನು ಎಲ್ಲೆಲ್ಲಾ ಪೂಜಿಸಲಾಗುತ್ತದೆ ಎನ್ನುವುದನ್ನು ತಿಳಿಯೋಣ. ಸಾಮಾನ್ಯವಾಗಿ ನವರಾತ್ರಿ ಮುಗಿದು ಹತ್ತನೇ ದಿನಕ್ಕೆ ಕಾಲಿಡುವಾಗ ಆ ದಿನವನ್ನು ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿಂದ ಆಚರಿಸಲಾಗುತ್ತದೆ. ದೇಶದೆಲ್ಲೆಡೆ ಈ ಹಬ್ಬವನ್ನು ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ದೇವರುಗಳ ಹೆಸರಿನಲ್ಲಿ ಆಚರಿಸಲಾಗುತ್ತದೆ. ಕಲ್ಕತ್ತಾದಲ್ಲಿ ನವರಾತ್ರಿಯೆಂದರೆ ದುರ್ಗಾಪೂಜೆಯಾದರೆ, ಮೈಸೂರಿನಲ್ಲಿ ಅದು ಚಾಮುಂಡಿಯ ಪೂಜೆ. ಹಾಗೆ ಉತ್ತರ ಭಾರತದ ಹಲವೆಡೆ ರಾವಣನ ಅತಿ ಎತ್ತರದ ಮೂರ್ತಿಗಳನ್ನು ಸ್ಥಾಪಿಸಿ ಅದನ್ನು ಸುಡುವ ಮೂಲಕ ರಾಮನ ವಿಜಯೋತ್ಸವವನ್ನು ಆಚರಿಸಲಾಗುತ್ತದೆ.

ಅಲ್ಲಿನ ಪುರಾಣದ ಪ್ರಕಾರ, ರಾಮನು ರಾವಣನನ್ನು ಗೆದ್ದ ವಿಜಯದಶಮಿಯ ದಿನದಂದು ರಾವಣನ ಪ್ರತಿಕೃತಿಯನ್ನು ಸುಡುವ ಸಂಪ್ರದಾಯವಿದೆ. ಆದರೆ, ಈ ಪದ್ಧತಿ ಭಾರತದ ಎಲ್ಲ ಭಾಗಗಳಲ್ಲೂ ಇಲ್ಲ. ಕೆಲವೆಡೆ ಮಾತ್ರ ಆಚರಣೆಯಲ್ಲಿದೆ. ಇತರ ಸ್ಥಳಗಳಲ್ಲಿ, ಈ ಹಬ್ಬದ ಸಮಯದಲ್ಲಿ ರಾವಣನನ್ನು ಬಹಳ ಭಕ್ತಿಯಿಂದ ಪೂಜಿಸಲಾಗುತ್ತದೆ. ಅದಕ್ಕೆ ಅವರದೇ ಆದ ಕಾರಣಗಳೂ ಇವೆ.

ಗಡಚಿರೋಲಿ, ಮಹಾರಾಷ್ಟ್ರ: ಮಹಾರಾಷ್ಟ್ರದ ಗಡಚಿರೋಲಿಯ ಗೊಂಡ ಆದಿವಾಸಿ ಸಮುದಾಯವು ತಮ್ಮನ್ನು ರಾವಣನ ವಂಶಸ್ಥರೆಂದು ಗುರುತಿಸಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಅವರು ರಾವಣ ಪ್ರತಿಕೃತಿಯನ್ನು ಸುಡುವುದಿಲ್ಲ. ಅವರು ಹೇಳುವಂತೆ ತುಳಸೀದಾಸರು ಬರೆದಿರುವ ರಾಮಾಯಣದಲ್ಲಿ ಮಾತ್ರವೇ ರಾವಣನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಆದರೆ ರಾವಣ ಕೆಟ್ಟವನಲ್ಲ. ಅವನೊಬ್ಬ ಒಳ್ಳೆಯ ಗುಣಗಳನ್ನು ಹೊಂದಿದ್ದ ನಾಯಕ.

ಮಂದಸೌರ್, ಮಧ್ಯಪ್ರದೇಶ: ಮಧ್ಯಪ್ರದೇಶದ ಮಂದಸೌರ್ ರಾವಣನ ಪತ್ನಿ ಮಂಡೋದರಿಯ ಜನ್ಮಸ್ಥಳವೆಂದು ಪ್ರತೀತಿ ಪಡೆದಿದೆ. ಹೀಗಾಗಿ ಇಲ್ಲಿನ ಜನರು ರಾವಣನನ್ನು ತನ್ನ ಊರಿನ ಅಳಿಯನೆಂದು ಪರಿಗಣಿಸುತ್ತಾರೆ. ಹೀಗಾಗಿಯೇ ಅವರು ರಾವಣನ ಪ್ರತಿಕೃತಿ ಸುಡುವುದಿಲ್ಲ. ಅಳಿಯ ಸತ್ತರೆ ಯಾರು ತಾನೆ ಸಂಭ್ರಮಿಸಲು ಸಾಧ್ಯ ಎನ್ನುವುದು ಈ ಜನರ ಪ್ರಶ್ನೆ. ಅವರು ಈ ದಿನವನ್ನು ಸಂಭ್ರಮಿಸುವ ಬದಲು ದುಃಖದಿಂದ ಕಳೆಯುತ್ತಾರೆ. ರಾವಣನ ಸಾವಿನ ಶೋಕಾಚರಣೆ ಮಾಡುತ್ತಾರೆ. ಈ ಮಂದಸೌರ್ ಪ್ರದೇಶದಲ್ಲಿ ರಾವಣನ ವಿಗ್ರಹವೂ ಇದೆ. ಪ್ರತಿಮೆಯು 35 ಅಡಿ ಎತ್ತರವಿದೆ. ಈ ವಿಗ್ರಹವನ್ನು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ.

ಬಿಸ್ರಖ್, ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಿಸ್ರಖ್ ಗ್ರಾಮವು ರಾವಣನ ಜನ್ಮಸ್ಥಳ ಎಂದು ನಂಬಲಾಗಿದೆ. ಹೀಗಾಗಿ ಇಲ್ಲಿನ ಜನರು ಸಹ ರಾವಣನನ್ನು ತಮ್ಮ ಪೂರ್ವಜ ಎಂದು ಪರಿಗಣಿಸುತ್ತಾರೆ. ದಸರಾ ದಿನದಂದು ಈ ಊರಿನಲ್ಲಿ ರಾವಣನ ಆತ್ಮಕ್ಕೆ ಶಾಂತಿ ಸಿಗಲೆಂದು ಪೂಜೆ ಮಾಡಲಾಗುತ್ತದೆ. ರಾವಣನ ತಂದೆ ವಿಶ್ರವ ಮಹರ್ಷಿ ಮತ್ತು ತಾಯಿ ಕೈಕೇಶಿ. ರಾವಣನ ತಂದೆ ವಿಶ್ರವ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿದನೆಂದು ಸ್ಥಳೀಯರು ನಂಬುತ್ತಾರೆ. ಇದರ ಗೌರವಾರ್ಥವಾಗಿ ಈ ಸ್ಥಳಕ್ಕೆ ಬಿಸ್ರಖ್ ಎಂದು ಹೆಸರಿಸಲಾಯಿತು. ಈ ಪ್ರದೇಶದ ಜನರು ರಾವಣನನ್ನು ಒಬ್ಬ ಶ್ರೇಷ್ಠ ಬ್ರಾಹ್ಮಣ ಎಂದು ಪರಿಗಣಿಸುತ್ತಾರೆ.

ಕಂಗ್ರಾ, ಉತ್ತರಾಖಂಡ: ಉತ್ತರಾಖಂಡದ ಕಂಗ್ರಾ ಲಂಕಾದೀಶನು ಶಿವನನ್ನು ಕುರಿತು ಕಠೋರ ತಪಸ್ಸು ಮಾಡಿದ ಸ್ಥಳ ಎಂಬ ಪ್ರತೀತಿ ಇದೆ. ಇಲ್ಲಿಯೂ ರಾವಣ ಸಂಹಾರ ನಡೆಯುವುದಿಲ್ಲ. ಬದಲಿಗೆ ಅಂದು ಅವನನ್ನು ಪೂಜಿಸಲಾಗುತ್ತದೆ. ಅವನಿಗೆ ಭಕ್ತಿಭಾವವನ್ನು ಈ ಹಬ್ಬದಂದು ತೋರಿಸಲಾಗುತ್ತದೆ.

ಮಂಡೋರ್, ರಾಜಸ್ಥಾನ: ರಾಜಸ್ಥಾನದ ಮಂಡೋರ್‌ನಲ್ಲಿ ರಾವಣ ಮಂಡೋದರಿಯನ್ನು ಮದುವೆಯಾದನೆಂದು ನಂಬಲಾಗುತ್ತದೆ. ಈ ಊರಿನ ಜನರು ಆ ದಿನ ರಾವಣ ಪ್ರತಿಕೃತಿ ಸುಡುವ ಬದಲು ತಮ್ಮೂರಿನ ಅಳಿಯನೆನ್ನುವ ಗೌರವದಿಂದ ಪೂಜೆ ಪುನಸ್ಕಾರ ಸಲ್ಲಿಸುತ್ತಾರೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಜನರ ಮೇಲೆ ಏಕರೂಪದ ಸಂಸ್ಕೃತಿಯನ್ನು ಹೇರುತ್ತಾ ಅವರೆಲ್ಲರನ್ನೂ ಒಂದೇ ಭಾವನೆಯಿಂದ ನಿಯಂತ್ರಿಸಲು ಸಾಧ್ಯವಾಗುವಂತೆ ಭಾರತದ ಬಹುರೂಪಿ ಸಂಸ್ಕೃತಿಯನ್ನು ನುಚ್ಚು ನೂರು ಮಾಡುತ್ತಿವೆ. ಮತ ರಾಜಕಾರಣದ ಸೌಧದಡಿ ಬಹುಜನರ ಸಂಸ್ಕೃತಿಯನ್ನು ಸಮಾಧಿ ಮಾಡಲೆಂದೇ ಅದು ಮಹಿಷ ದಸರಾದಂತ ಭಿನ್ನ ಸಾಂಸ್ಕೃತಿಕ ಚಳವಳಿಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಬ್ರಾಹ್ಮಣೇತರ ಆಚರಣೆಗಳ ಕುರಿತು ಬ್ರಾಹ್ಮಣೇತರರಲ್ಲೇ ಕೀಳರಿಮೆ ಮೂಡಿಸುವಲ್ಲಿ ಕಾಲದಿಂದಲೂ ಯಶಸ್ವಿಯಾಗಿರುವ ವೈದಿಕ ಅಜೆಂಡಾ ಅದನ್ನು ಮುಂದುವರೆಸಿಕೊಂಡು ಹೋಗಲು ಪ್ರಯತ್ನಿಸುತ್ತಿದೆ.


ಆದರೆ ಇತಿಹಾಸ ಎಂದಿಗೂ ಒಬ್ಬರನ್ನಷ್ಟೇ ನೆಚ್ಚಿಸುವ ಸಲುವಾಗಿ ಕೆಲಸ ಮಾಡುವುದಿಲ್ಲ. ರಾಮನ ಜೊತೆ ರಾವಣನ, ಚಾಮುಂಡಿಯ ಜೊತೆಗೆ ಮಹಿಷನೂ ಎದ್ದು ಬರುತ್ತಾರೆ. ಹಾಗೆಯೇ ಅವರು ತಮ್ಮ ಪಾಲಿನ ಒಳ್ಳೆಯತನಕ್ಕೆ ಪ್ರಶಂಸೆಯನ್ನೂ ಬಯಸುತ್ತಾರೆ.

Related Articles

ಇತ್ತೀಚಿನ ಸುದ್ದಿಗಳು