Home ರಾಜ್ಯ ಧಾರವಾಡ ಯೋಗೇಶ್ ಗೌಡರ್ ಹತ್ಯೆ:‌ ಮೇಲ್ಮನವಿ ಸಲ್ಲಿಸಿದ ವಿನಯ್ ಕುಲಕರ್ಣಿ, ಕರ್ನಾಟಕ ಹೈಕೋರ್ಟ್‌ನಿಂದ ಸಿಬಿಐಗೆ ನೋಟಿಸ್

ಯೋಗೇಶ್ ಗೌಡರ್ ಹತ್ಯೆ:‌ ಮೇಲ್ಮನವಿ ಸಲ್ಲಿಸಿದ ವಿನಯ್ ಕುಲಕರ್ಣಿ, ಕರ್ನಾಟಕ ಹೈಕೋರ್ಟ್‌ನಿಂದ ಸಿಬಿಐಗೆ ನೋಟಿಸ್

0

ಬೆಂಗಳೂರು: ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತು ಸಹ ಆರೋಪಿ ಚಂದ್ರಶೇಖರ್ ಇಂದಿ ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಗಳ ಕುರಿತು ಕರ್ನಾಟಕ ಹೈಕೋರ್ಟ್ ಮಂಗಳವಾರ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಟಿ ಅವರಿದ್ದ ವಿಭಾಗೀಯ ಪೀಠವು, ಈ ವಿಷಯವನ್ನು ಈಗ ತ್ವರಿತ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿತು. ತುರ್ತು ಸಂದರ್ಭಗಳಿದ್ದರೆ ಮೇಲ್ಮನವಿದಾರರು ಹೈಕೋರ್ಟ್‌ನ ವೆಕೇಶನ್ ಬೆಂಚನ್ನು ಸಂಪರ್ಕಿಸಬಹುದು ಎಂದು ಪೀಠ ತಿಳಿಸಿದೆ.

ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂದಿ ಅವರು ವಿಶೇಷ ನ್ಯಾಯಾಲಯವು ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿದ್ದಾರೆ. ಮೇಲ್ಮನವಿ ವಿಚಾರಣೆಗೆ ಬಂದಾಗ, ವಿನಯ್ ಕುಲಕರ್ಣಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ವಿ ನಾಗೇಶ್, ಮಧ್ಯಂತರ ಪರಿಹಾರಕ್ಕಾಗಿ ವಾದಿಸಲು ಏಪ್ರಿಲ್ 30 ರಂದು ವಿಚಾರಣೆಯನ್ನು ಪಟ್ಟಿ ಮಾಡುವಂತೆ ಕೋರಿದರು. ಆದಾಗ್ಯೂ, ವಿಭಾಗೀಯ ಪೀಠವು ಅರ್ಹತೆಯ ಮೇಲೆ ಈಗ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಈ ಮಧ್ಯೆ, ವಿಶೇಷ ನ್ಯಾಯಾಲಯದ ತೀರ್ಪು 680 ಪುಟಗಳಷ್ಟಿದ್ದು, ಮೇಲ್ಮನವಿಯನ್ನು ಪರಿಶೀಲಿಸಲು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾಕಷ್ಟು ಸಮಯ ಬೇಕೆಂದು ಸಿಬಿಐ ಪರ ವಕೀಲರು ವಿನಂತಿಸಿದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.

ಏಪ್ರಿಲ್ 15 ರಂದು, ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಯನ್ನು ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿತ್ತು. ಮೃತ ಯೋಗೇಶಗೌಡರ ಮಕ್ಕಳಿಗಾಗಿ 16 ಲಕ್ಷ ರೂಪಾಯಿ ಪರಿಹಾರವನ್ನೂ ನ್ಯಾಯಾಲಯ ಘೋಷಿಸಿತ್ತು. ತನಿಖೆಯ ಆರಂಭಿಕ ಹಂತದ ತನಿಖಾಧಿಕಾರಿ ಚೆನ್ನಕೇಶವ ಟಿಂಗರಿಕರ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಜೂನ್ 15, 2016 ರಂದು ಧಾರವಾಡದ ಜಿಮ್‌ನಲ್ಲಿ ಬಾಡಿಗೆ ಹಂತಕರಿಂದ ಯೋಗೇಶಗೌಡರ ಹತ್ಯೆಯಾಗಿತ್ತು. ಹತ್ಯೆಗೂ ಮುನ್ನ ಗೌಡರಿಗೆ ಬೆದರಿಕೆ ಕರೆಗಳು ಬಂದಿದ್ದವು ಎಂದು ಕುಟುಂಬಸ್ಥರು ಆರೋಪಿಸಿದ್ದರು. ಸ್ಥಳೀಯ ಪೊಲೀಸರು ಆರಂಭದಲ್ಲಿ ಆರು ಜನರನ್ನು ಬಂಧಿಸಿದ್ದರು. ಧಾರವಾಡದಲ್ಲಿ ಗೌಡರು ಬೆಳೆಯುವುದನ್ನು ತಡೆಯಲು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ್ ಕುಲಕರ್ಣಿ ಅವರೇ ಹತ್ಯೆಯ ಮುಖ್ಯ ಸಂಚುಕೋರರು ಎಂಬುದು ಸಿಬಿಐ ವಾದವಾಗಿತ್ತು.

You cannot copy content of this page

Exit mobile version