ಭಾರತ-ಚೀನಾ ಗಡಿ ಭಾಗದ ಸಂಘರ್ಷ ಮತ್ತು ಇತರ ವಿಷಯಗಳ ಕುರಿತು ಜಂಟಿ ಕಾರ್ಯತಂತ್ರವನ್ನು ರೂಪಿಸಲು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಛೇರಿಯಲ್ಲಿ ಪ್ರತಿಪಕ್ಷ ನಾಯಕರ ಸಭೆ ಆರಂಭವಾಗಿದೆ.
ಡಿಸೆಂಬರ್ 9 ರಂದು ಭಾರತ-ಚೀನಾ ಗಡಿ ಭಾಗದಲ್ಲಿ ಚೀನಾ ಸೈನಿಕರ ಉಪಟಳವನ್ನು ಮತ್ತು ಭಾರತದ 6 ಮಂದಿ ಸೈನಿಕರ ಮೇಲಾದ ಹಲ್ಲೆ ಬಗ್ಗೆ ಚರ್ಚಿಸಲು ಇಂದು ಪ್ರತಿಪಕ್ಷಗಳು ಕಾರ್ಯತಂತ್ರ ರೂಪಿಸಲಿವೆ. ಪ್ರಮುಖವಾಗಿ ಕಳೆದ ಡಿಸೆಂಬರ್ 9 ಕ್ಕೆ ಇಷ್ಟು ಗಂಭೀರವಾದ ಘಟನೆ ನಡೆದರೂ ಕೇಂದ್ರ ಸರ್ಕಾರ ಇದನ್ನು ಮುಚ್ಚಿಟ್ಟ ಬಗ್ಗೆಯೂ ಚರ್ಚಿಸಲು ಪ್ರತಿಪಕ್ಷಗಳು ಪಟ್ಟು ಹಿಡಿಯಲಿವೆ.
ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತವಾಂಗ್ ಘರ್ಷಣೆಯ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇದೇ ರೀತಿಯ ಹೇಳಿಕೆಗಳಲ್ಲಿ, “ಯಾವುದೇ ಸಾವುನೋವುಗಳು ಅಥವಾ ಗಂಭೀರ ಗಾಯಗಳಾಗಿಲ್ಲ” ಎಂದು ಸಿಂಗ್ ಹೇಳಿದ್ದರು. ಆದರೆ ಚೀನಾ ನಿರಂತರವಾಗಿ ಅರುಣಾಚಲ ಪ್ರದೇಶ, ಅಸ್ಸಾಂ ಭಾಗದಲ್ಲಿ ಗಡಿರೇಖೆ ಉಲ್ಲಂಘನೆ ಮಾಡುತ್ತಲೇ ಇರುವ ಬಗ್ಗೆ ಈ ವರೆಗೂ ಕೇಂದ್ರ ಸರ್ಕಾರ ತುಟಿ ಬಿಚ್ಚಿಲ್ಲ.
ಈ ಎಲ್ಲಾ ವಿಷಯಗಳ ಕುರಿತು ಕಾಂಗ್ರೆಸ್ ಸೇರಿದಂತೆ ಇತರೆ ಎಲ್ಲಾ ಪ್ರತಿಪಕ್ಷಗಳು ಜಂಟಿ ಕಾರ್ಯತಂತ್ರವನ್ನು ರೂಪಿಸಲು ಹೊರಟಿವೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಚೇಂಬರ್ನಲ್ಲಿ ವಿರೋಧ ಪಕ್ಷದ ನಾಯಕರ ಸಭೆ ನಡೆದಿದೆ.