Sunday, June 16, 2024

ಸತ್ಯ | ನ್ಯಾಯ |ಧರ್ಮ

ಭದ್ರತಾ ನಿಯಮ ಉಲ್ಲಂಘನೆ : ಮೊಹುವಾ ಮೋಯಿತ್ರಾ ಉಚ್ಚಾಟನೆ, ಪ್ರತಾಪ್ ಸಿಂಹಗೆ ಯಾಕಿಲ್ಲ? ಜಾಲತಾಣಗಳಲ್ಲಿ ಹೆಚ್ಚಿದ ಪ್ರಶ್ನೆ

ಈಗ ಕೆಲವೇ ದಿನಗಳ ಹಿಂದೆ ಭದ್ರತಾ ನಿಯಮ ಉಲ್ಲಂಘನೆ ಹಾಗೂ ಪ್ರಶ್ನೆಗಾಗಿ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮೊಹುವಾ ಮೋಯಿತ್ರಾ ಅವರನ್ನು ಲೋಕಸಭೆ ನೈತಿಕ ಸಮಿತಿ ವರದಿ ಅನ್ವಯ ಸಂಸತ್ ಸ್ಥಾನದಿಂದ ವಜಾಗೊಳಿಸಲಾಗಿದೆ. ಆದರೆ ಇದೇ ಭದ್ರತಾ ನಿಯಮ ಉಲ್ಲಂಘನೆ ಪ್ರಕರಣ ಪ್ರತಾಪ್ ಸಿಂಹ ಮೇಲೆ ಯಾಕೆ ಅನ್ವಯಿಸುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಎದ್ದಿದೆ.

ಬುಧವಾರದ ದಿನ ಲೋಕಸಭೆಯ ಸದನ ನಡೆಯುತ್ತಿರುವ ಸಂದರ್ಭದಲ್ಲಿ ಅಪರಿಚಿತ ಸಂದರ್ಶಕರೊಬ್ಬರು ಭದ್ರತೆಯನ್ನು ಉಲ್ಲಂಘಿಸಿ ಗ್ಯಾಲರಿಯಿಂದ ಕೊಠಡಿಗೆ ಹಾರಿದ ಕಾರಣ ಲೋಕಸಭೆಯಲ್ಲಿ ಗೊಂದಲ ಉಂಟಾಗಿತ್ತು. ಅದರಲ್ಲೂ ಸಂಸತ್ ಮೇಲಿನ ದಾಳಿಗೆ 22 ವರ್ಷ ಪೂರೈಸಿದ ದಿನವೇ ಈ ಒಂದು ಘಟನೆ ನಡೆದದ್ದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳಿಗೆ ಪಾಸ್ ವಿತರಣೆ ಬಗ್ಗೆ ಈಗ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಅಷ್ಟೆ ಅಲ್ಲದೆ ಪ್ರತಾಪ್ ಸಿಂಹ ಅಮಾನತಿಗೆ ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ.

ಕೇವಲ ವಿಪಕ್ಷ ನಾಯಕರಲ್ಲದೇ ಈಗ ಸಾಮಾಜಿಕ ಜಾಲತಾಣಗಳಲ್ಲೂ ಸಹ ಸಂಸದ ಪ್ರತಾಪ್ ಸಿಂಹರನ್ನು ಉಚ್ಚಾಟನೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಮೈಸೂರು ಮೂಲದ ಮನೋರಂಜನ್ ಹಾಗೂ ಉತ್ತರ ಪ್ರದೇಶ ಮೂಲದ ಸಾಗರ್ ಶರ್ಮಾ ಅವರಿಗೆ ಲೋಕಸಭೆ ಸದನ ವೀಕ್ಷಣೆ ಪಾಸ್ ನೀಡಿರುವ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಹೆಚ್ಚಿದೆ.

ಬುಧವಾರದ ದಾಳಿಗೆ ಸಂಸತ್ ನ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಗುರುವಾರ ತೀವ್ರ ಚರ್ಚೆ ಗ್ರಾಸವಾಗಿದೆ. ಈ ನಡುವೆ ಪ್ರತಾಪ್ ಸಿಂಹ ಅವರು, ‘ವೀಕ್ಷಕರ ಪಾಸ್ ನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡಿದ್ದರು’ ಎನ್ನುವ ಉಡಾಫೆ ಉತ್ತರಕ್ಕೆ ವಿರೋಧ ಪಕ್ಷದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಹಾಗೂ ಯಾವ ಆಧಾರದಲ್ಲಿ ಪಾಸ್ ನೀಡಲಾಗಿದೆ ಎಂಬುದಕ್ಕೆ ಪ್ರತಾಪ್ ಸಿಂಹ ವಿವರಣೆ ನೀಡಬೇಕು ಹಾಗೂ ಇದರ ತನಿಖೆ ಪೂರ್ಣಗೊಳ್ಳುವ ವರೆಗೂ ಪ್ರತಾಪ್ ಸಿಂಹ ಅವರನ್ನು ಅಮಾನತಿನಲ್ಲಿ ಇಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಲಾಗಿದೆ.

ಈ ನಡುವೆ ಟಿಎಂಸಿ ಸಂಸದೆ ಮೋಹುವಾ ಮೋಯಿತ್ರಾ ಅವರನ್ನು ಯಾವ ಮಾನದಂಡಗಳ ಅಡಿಯಲ್ಲಿ ಸಂಸತ್ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆಯೋ ಅದನ್ನು ಈ ಪ್ರಕರಣಕ್ಕೆ ಯಾಕೆ ಅನ್ವಯಿಸಿಲ್ಲ.. ಮೊಹುವಾ ಮೋಯಿತ್ರಾ ಪ್ರಕರಣಕ್ಕಿಂತ ಗಂಭೀರವಾದ ಪ್ರಕರಣ ಇದಾಗಿದೆ. ಅಕಸ್ಮಾತ್ ಟಿಯರ್ ಗ್ಯಾಸ್ ಬದಲು ಬಂದೂಕುಗಳೇ ಬಂದಿದ್ದರೆ ಎಂತಹ ಪ್ರಮಾದವನ್ನು ದೇಶ ಎದುರು ನೋಡುತ್ತಿತ್ತು ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕರಣದ ಅಡಿಯಲ್ಲಿ ಟೀಕೆಗಳು ವ್ಯಕ್ತವಾಗಿವೆ.

Related Articles

ಇತ್ತೀಚಿನ ಸುದ್ದಿಗಳು