ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಹೊಸ ವಕ್ಫ್ ಕಾಯ್ದೆಯ ವಿರುದ್ಧ ಇತ್ತೀಚೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಮೂವರು ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಸೋಮವಾರ ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ.
“ಕಳೆದ 36 ಗಂಟೆಗಳಿಂದ, ಹಿಂಸಾಚಾರದ ವರದಿಗಳು ಬಂದಿಲ್ಲ. ನಾವು ಈಗ ನಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ಪರಿಸ್ಥಿತಿಯನ್ನು ಶಾಂತಗೊಳಿಸಲು ನಮ್ಮ ಎಲ್ಲಾ ಶಕ್ತಿಯನ್ನು ಬಳಸುತ್ತಿದ್ದೇವೆ” ಎಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಜಾವೇದ್ ಶಮೀಮ್ ಸೋಮವಾರ ಹೇಳಿದ್ದಾರೆ.
ವಕ್ಫ್ ಎಂದರೆ ಇಸ್ಲಾಮಿಕ್ ಕಾನೂನಿನಡಿಯಲ್ಲಿ ಧಾರ್ಮಿಕ, ಶೈಕ್ಷಣಿಕ ಅಥವಾ ದತ್ತಿ ಉದ್ದೇಶಕ್ಕಾಗಿ ಮೀಸಲಾಗಿರುವ ಆಸ್ತಿ. ಪ್ರತಿಯೊಂದು ರಾಜ್ಯವು ಕಾನೂನು ಘಟಕದ ನೇತೃತ್ವದಲ್ಲಿ ವಕ್ಫ್ ಮಂಡಳಿಯನ್ನು ಹೊಂದಿದ್ದು, ಅದು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ, ಕಾಪಾಡಿಕೊಳ್ಳುವ ಮತ್ತು ವರ್ಗಾಯಿಸುವ ಅಧಿಕಾರವನ್ನು ಹೊಂದಿದೆ.
ಕಾನೂನಿನಲ್ಲಿನ ಇತ್ತೀಚಿನ ಬದಲಾವಣೆಗಳು ವಕ್ಫ್ ಮಂಡಳಿಗಳ ಅಧಿಕಾರವನ್ನು ನಿರ್ಬಂಧಿಸುತ್ತವೆ ಮತ್ತು ಅವುಗಳ ಮೇಲೆ ಹೆಚ್ಚಿನ ಸರ್ಕಾರಿ ನಿಯಂತ್ರಣವನ್ನು ನೀಡುತ್ತದೆ.
2024 ರ ವಕ್ಫ್ ತಿದ್ದುಪಡಿ ಮಸೂದೆಯು 1995 ರ ವಕ್ಫ್ ಕಾಯ್ದೆಯ 44 ವಿಭಾಗಗಳಿಗೆ ಬದಲಾವಣೆಗಳನ್ನು ತಂದಿತು, ಇದರಲ್ಲಿ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವುದು, ಆಸ್ತಿ ದೇಣಿಗೆಗಳನ್ನು ನಿರ್ಬಂಧಿಸುವುದು ಮತ್ತು ವಕ್ಫ್ ನ್ಯಾಯಮಂಡಳಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಬದಲಾಯಿಸುವುದು ಸೇರಿವೆ.
ಈ ಮಸೂದೆಯನ್ನು ಏಪ್ರಿಲ್ 4 ರಂದು ಸಂಸತ್ತು ಅಂಗೀಕರಿಸಿತು. ಏಪ್ರಿಲ್ 5 ರಂದು ರಾಷ್ಟ್ರಪತಿಗಳ ಒಪ್ಪಿಗೆ ದೊರೆತು ಏಪ್ರಿಲ್ 8 ರಂದು ಜಾರಿಗೆ ಬಂದಿತು.
ಈ ಕಾಯ್ದೆ ಜಾರಿಗೆ ಬಂದ ದಿನವೇ, ಮುರ್ಷಿದಾಬಾದ್ನ ಜಂಗಿಪುರದಲ್ಲಿ ಇದರ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಗುಂಪೊಂದು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಕಲ್ಲುಗಳನ್ನು ಎಸೆದು, ಭದ್ರತಾ ಪಡೆಗಳ ವಾಹನಗಳಿಗೆ ಬೆಂಕಿ ಹಚ್ಚಿತು. ಘರ್ಷಣೆಯಲ್ಲಿ ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ವೀಡಿಯೋ ವೀಕ್ಷಿಸಿ: