Saturday, April 5, 2025

ಸತ್ಯ | ನ್ಯಾಯ |ಧರ್ಮ

ವಕ್ಫ್ ಮಸೂದೆ ವಂಚನೆ: ಮುಸ್ಲಿಂ ಕಲ್ಯಾಣದ ಕಾಳಜಿಯ ಹಿಂದಿನ ಮೋದಿ ಸರ್ಕಾರದ ಉದ್ದೇಶ ಏನು?

ಲೋಕಸಭೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸದಸ್ಯನನ್ನು ಹೊಂದದ ಪಕ್ಷವೊಂದು ಆ ಸಮುದಾಯದ ಕಲ್ಯಾಣದ ಬಗ್ಗೆ ಉಪದೇಶ ನೀಡುವುದು ವಿಚಿತ್ರವಾಗಿದೆ. ಆದರೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅಥವಾ ಚಿರಾಗ್ ಪಾಸ್ವಾನ್ ಅವರಂತಹ ಮಿತ್ರಪಕ್ಷಗಳಿಂದ ಇನ್ನೂ ವಿರೋಧ ಪಕ್ಷಗಳು ಏನನ್ನಾದರೂ ನಿರೀಕ್ಷೆ ಮಾಡುತ್ತಿರುವುದು ಅಷ್ಟೇ ವಿಚಿತ್ರವಾಗಿವೆ
- ಲೇಖನ: ಸಂಜಯ್ ಕೆ. ಝಾ, ರಾಜಕೀಯ ವಿಶ್ಲೇಷಕರು


ಎಪ್ರಿಲ್ 2 ರಂದು ಲೋಕಸಭೆಯಲ್ಲಿ ದೇಶ ಕಂಡುಕೇಳರಿಯದ ತರ್ಕಹೀನ ಮತ್ತು ವಂಚನೆಯ ಜಾತ್ರೆಯೇ ನಡೆಯಿತು. ನರೇಂದ್ರ ಮೋದಿ ಸರ್ಕಾರವು ಮುಸ್ಲಿಂ ಸಮುದಾಯದ ಉದ್ಧಾರಕ್ಕಾಗಿ ವಕ್ಫ್ ಮಸೂದೆಯನ್ನು ತಂದಿದ್ದೇವೆ ಎಂದು ಹೇಳಿಕೊಂಡು ಸ್ವತಂತ್ರ ಭಾರತ ಕಂಡ ಅತ್ಯಂತ ನೀಚ ರಾಜಕೀಯ ವಂಚನೆಯನ್ನು ಮಾಡಿದೆ. ತರ್ಕಹೀನ ಮತ್ತು ವಂಚನೆಯು ರಾಷ್ಟ್ರದ ಸಾಮೂಹಿಕ ವಿವೇಕವನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 

ವಕ್ಫ್ ಮಸೂದೆಯ ಉದ್ದೇಶದ ಬಗ್ಗೆ ಬಹಳಷ್ಟು ಬರೆಯಲಾಗಿದೆ, ಮಾತನಾಡಲಾಗಿದೆ. ಅವಿದ್ಯಾವಂತರಿಗೆ ಕೂಡ ಇದರ ನಿಜವಾದ ಉದ್ದೇಶ ಏನೆಂದು ತಿಳಿದಿದೆ. ಅದರ ಬಗ್ಗೆ ಆಳವಾಗಿ ಹೋಗುವುದು ಬೇಡ. ಆದರೆ ಕಳೆದ ಏಳು ದಶಕಗಳಲ್ಲಿ ಯಾವುದೇ ಸರ್ಕಾರಗಳು ಮಾಡಲಾಗದದ್ದನ್ನು ಮೋದಿ ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಕನಸು ಕಂಡಿದೆ – ಮುಸ್ಲಿಮರ ಆಸ್ತಿಗಳನ್ನು ಸಮುದಾಯದ ಕಲ್ಯಾಣಕ್ಕಾಗಿ ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು ಎಂಬ ಅಮೃತ ಕಾಲದ ಅದ್ಭುತ ಹೇಳಿಕೆಯನ್ನು ಗಂಭೀರವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ. ಬಡ ಮುಸ್ಲಿಮರ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ, ಯುವಕರನ್ನು ಕೌಶಲ್ಯಪೂರ್ಣರನ್ನಾಗಿಸಲು, ಮಹಿಳೆಯರ ಸಬಲೀಕರಣಕ್ಕಾಗಿ ಈ ಸಂಪನ್ಮೂಲಗಳನ್ನು ಏಕೆ ಬಳಸಿಕೊಳ್ಳಬಾರದು – ಎಂಬಂತ ಮಂತ್ರಿಗಳ ಬಾಯಿಂದ ಉದುರುತ್ತಿರುವ ಮಾತುಗಳು ದೇಶದ ಗಾಯಗೊಂಡ ಆತ್ಮದ ಮೇಲೆ ಹಚ್ಚುವ ಸಾಂತ್ವನಕಾರಿ ಮುಲಾಮಿನಂತೆ ಕಾಣುತ್ತಿದೆ. 

ದೇಶ ಕೃತಜ್ಞತೆಯನ್ನು ತೋರಬೇಕಾದುದು ತಾನೇ ದೇವರೆಂಬ ಭ್ರಮೆಯಲ್ಲಿರುವ ಉದಾರ ಮನಸ್ಸಿನ ಅಮಿತ್ ಶಾಗೆ, ಅವರು ಸುರಿಸುತ್ತಿರುವ ಕರುಣೆ ನಿಸ್ಸಂದೇಹವಾಗಿ ಅವರ ಮಾರ್ಗದರ್ಶಕರ ದಯೆಯನ್ನೂ ಮೀರಿಸಿದೆ. ಗುಜರಾತ್‌ನಲ್ಲಿ ಕೋಮು ಸೌಹಾರ್ದತೆಯ ಸುಟ್ಟು ಬೂದಿಯಾದಾಗ, ಅದರ ಚಿತಾಭಸ್ಮದಿಂದ ಹುಟ್ಟಿದ ದ್ವಂದ್ವ ನೀತಿಯನ್ನು ಮರೆತುಬಿಡೋಣ. ಕೇವಲ ತಿಂಗಳುಗಳ ಹಿಂದೆ – ಬೇರೆ ಯಾವುದೇ ಸರ್ಕಾರ ಬಂದರೂ ಜನರ ಆಸ್ತಿ ಮತ್ತು ಆಭರಣಗಳನ್ನು ಕಸಿದುಕೊಂಡು ನುಸುಳುಕೋರರ ಮತ್ತು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸುವವರಿಗೆ ಕೊಡುತ್ತದೆ- ಎಂದು ಮೋದಿ ಹೇಳಿದ್ದನ್ನು ಮರೆತುಬಿಡೋಣ. ಗೂಂಡಾಗಳು ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಮಾಡಿದಾಗ, ಅವರ ಪುಂಡರು ಮುಸ್ಲಿಮರನ್ನು ದೇಶದ್ರೋಹಿಗಳೆಂದು ಬಣ್ಣಿಸುವ ವಿಷಕಾರಿ ಘೋಷಣೆಗಳನ್ನು ಕೂಗಿದಾಗ, ಮುಗ್ಧ ಜನರನ್ನು ಬೀದಿಗಳಲ್ಲಿ ಹೊಡೆದು ಸಾಯಿಸಿದಾಗ ವಾಚಾಳಿ ಗೃಹ ಸಚಿವರು ಒಂದು ಮಾತನ್ನೂ ಹೇಳುವುದಿಲ್ಲ ಎಂಬುದನ್ನು ಮರೆತುಬಿಡೋಣ. ರಾಜಕೀಯ ಸ್ಪರ್ಧೆಯನ್ನು 80 vs 20 ಯುದ್ಧ ಎಂದು ವ್ಯಾಖ್ಯಾನಿಸಿದಾಗ ಪ್ರಧಾನಿಯವರ ಮೌನವನ್ನು ಮರೆತುಬಿಡೋಣ.

ಈ ಸುಳ್ಳನ್ನು ಮಾರಾಟ ಮಾಡುವ ಸರ್ಕಾರದ ಧೈರ್ಯ ದಿಗ್ಭ್ರಮೆಗೊಳಿಸುವಂತಿದೆ. ಇಡೀ ದೇಶ ಒಂದು ಗಳಿಗೆ ಇವರ ರಾಜಕೀಯದ ನಿಲುವನ್ನು ಮರೆತುಬಿಡುತ್ತದೆ ಎಂಬಂತೆ, ಅವರ ಧರ್ಮಾಂಧ ಹಿಂಬಾಲಕರು ಸರ್ಜರಿ ಮುಗಿಯುವ ವರೆಗೆ ಸುಮ್ಮನಿರುತ್ತಾರೆ ಎಂಬಂತೆ, ದೇಶದ ರಾಜಕೀಯ ವ್ಯವಸ್ಥೆಗೆ ಲೋಕಲ್‌ ಅನಸ್ತೇಶಿಯಾ ಕೊಟ್ಟು ಈ ಕೆಲಸವನ್ನು ಮಾಡಬಹುದು ಎಂದು ಅವರು ಅಂದುಕೊಂಡಿದ್ದಾರೆ. ತ್ರಿವಳಿ ತಲಾಖ್ ಅನ್ನು ತೆಗೆದುಹಾಕುವ ಮೂಲಕ ಮುಸ್ಲಿಂ ಮಹಿಳೆಯರಿಗೆ ನೆರವಾಗಿದ್ದೇವೆ ಎಂಬ ಅಸಹಜ ಪ್ರಚಾರವನ್ನು ಸೃಷ್ಟಿಸಿದಾಗ ಇದು ನಡೆಯಿತು. ಬಡ ಮುಸ್ಲಿಂ ಮಹಿಳೆಯ ಪತಿ ಅಥವಾ ಅವಳ ಸಹೋದರನನ್ನು ಬೀದಿಯಲ್ಲಿ ಕಿರುಕುಳಕ್ಕೊಳಗಾದಾಗ ಅಥವಾ ಗಲ್ಲಿಗೇರಿಸಿದಾಗ ಅವಳ ಮೇಲೆ ಅದು ಪರಿಣಾಮ ಬೀರುವುದಿಲ್ಲವೇ? ತ್ರಿವಳಿ ತಲಾಖ್ ರದ್ದತಿಯಿಂದ ಪ್ರಯೋಜನ ಪಡೆದ ಮುಸ್ಲಿಂ ಮಹಿಳೆಗೆ ಆ ಪರಕೀಯತೆಯ ಭಾವನೆ, ಅಸಮಾನತೆಯ ನೋವು, ದೇಶದ್ರೋಹಿ ಎಂದು ಹಣೆಪಟ್ಟಿ ಹೊರುವ ಭಯ ಇರುವುದಿಲ್ಲವೇ?

ಈ ಸರ್ಕಾರದ ಈ ಪರೋಪಕಾರದ ಮನಸ್ಸು ಸ್ವಿಚ್-ಆನ್ ಸ್ವಿಚ್-ಆಫ್ ಮೋಡ್‌ನಲ್ಲಿ ಕೆಲಸ ಮಾಡುತ್ತದೆ. ಸಮಾನತೆ ಮತ್ತು ನ್ಯಾಯವು ಹಣದ ನೆರವಿಗೆ ಮಾತ್ರ ಸೀಮಿತವಾಗಿದೆ. ಮುಸ್ಲಿಮರು ಮಾತ್ರ ಏಕೆ ನಿರಂತರವಾಗಿ ರಾಷ್ಟ್ರಕ್ಕೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸುತ್ತಲೇ ಇರಬೇಕು? ಅವರ ಧಾರ್ಮಿಕ ಚಟುವಟಿಕೆಗಳ ಮೇಲೆ ವಿಶೇಷ ನಿರ್ಬಂಧಗಳು ಏಕೆ? ಕನ್ವರ್ ಯಾತ್ರೆಯ ಸಮಯದಲ್ಲಿ ಬೀದಿ ವ್ಯಾಪಾರಿಗಳ ಧರ್ಮವನ್ನು ಗುರುತಿಸಲು ವಿಶೇಷ ಕ್ರಮಗಳನ್ನು ಏಕೆ ತೆಗೆದುಕೊಳ್ಳಬೇಕು? ಈದ್‌ನಲ್ಲಿ ಭಕ್ತರಿಗೆ ಅನುಕೂಲ ಮಾಡಿಕೊಡಲು ಯಾವ ವಿಶೇಷ ಕ್ರಮಗಳನ್ನು ಘೋಷಿಸಲಾಗಿದೆ? ನವರಾತ್ರಿಗಳು ಮತ್ತು ಇತರ ಹಬ್ಬಗಳ ಸಮಯದಲ್ಲಿ ದಿನಗಳವರೆಗೆ ಮಾಂಸದ ಅಂಗಡಿಗಳನ್ನು ಮುಚ್ಚುವ ಮೂಲಕ ಅವರ ವ್ಯವಹಾರಗಳನ್ನು ಏಕೆ ಗುರಿಯಾಗಿಸಿಕೊಳ್ಳಲಾಗುತ್ತದೆ? ಇತರ ಧರ್ಮಗಳ ಭಕ್ತರ ಮೇಲೆ ಯಾವ ನಿರ್ಬಂಧಗಳನ್ನು ವಿಧಿಸಲಾಗಿದೆ? ಆಕ್ಷೇಪಣೆಗಳು ಅಂತ್ಯವಿಲ್ಲ – ಅಜಾನ್‌ನಿಂದ ಹಿಜಾಬ್‌ವರೆಗೆ, ಮದರಸಾಗಳಿಂದ ಮಸೀದಿಗಳವರೆಗೆ, ಅವರನ್ನು ಎರಡನೇ ದರ್ಜೆಯ ನಾಗರಿಕರ ಸ್ಥಾನಮಾನಕ್ಕೆ ತಳ್ಳಲು ಸ್ಪಷ್ಟ ತಂತ್ರವನ್ನು ಹೆಣೆಯಲಾಗಿದೆ.

ನೀಚ ಉದ್ದೇಶಗಳನ್ನು ಹೆಚ್ಚಾಗಿ ಉದಾತ್ತ ಆಡಂಬರಗಳಿಂದ ಮರೆಮಾಚಲಾಗುತ್ತದೆ. ನಾಜಿ ಫಿಲಾಸಫಿಯಷ್ಟು ನೈತಿಕತೆ ಮತ್ತು ಆದರ್ಶವಾದಕ್ಕೆ ಯಾವುದೇ ರಾಜಕೀಯವೂ ಹೆಚ್ಚಿನ ಒತ್ತು ನೀಡಿಲ್ಲ. ಆದರೆ ಅಡಾಲ್ಫ್ ಹಿಟ್ಲರ್ ಅಂಚಿನಲ್ಲಿರುವ ಸಮುದಾಯದ ಮೇಲೆ ಹೇಗೆ ಅಮಾನವೀಯ ನಿರ್ಬಂಧಗಳನ್ನು ವಿಧಿಸಬೇಕು ಎಂಬುದನ್ನು ಜಗತ್ತಿಗೇ ತೋರಿಸಿದನು. ಅವನು ಯಹೂದಿಗಳ ವಿರುದ್ಧ ಸಣ್ಣಪುಟ್ಟ ತಾರತಮ್ಯದ ಕೃತ್ಯಗಳೊಂದಿಗೆ ಪ್ರಾರಂಭಿಸಿ, ನಿಧಾನವಾಗಿ ಅವರ ಪ್ರಯಾಣ ಮತ್ತು ವ್ಯವಹಾರಗಳ ಮೇಲೆ ನಿರ್ಬಂಧಗಳನ್ನು ಹೇರುವವರೆಗೆ ಮುಂದುವರೆದನು, ನಂತರ ಮಾನವಕುಲ ಕಂಡ ಕೇಳರಿಯದ ಅತ್ಯಂತ ಕ್ರೂರ ನರಮೇಧವನ್ನು ಆರಂಭಿಸಿದನು. “ಬುದ್ಧಿಶಕ್ತಿ ಮತ್ತು ವಿವೇಚನೆ” ತನ್ನ ಭಕ್ತರ ದಾರಿ ತಪ್ಪಿಸಬಹುದು ಎಂದು ಹಿಟ್ಲರ್ ಅವರಿಗೆ ತಮ್ಮ ಇನ್‌ಸ್ಟಿಂಕ್ಟ್‌ಗಳನ್ನು (ಪ್ರಚೋದನೆಗಳಿಗೆ ಹುಟ್ಟುವ ಪ್ರತಿಕ್ರಿಯೆಗಳನ್ನು) ಮಾತ್ರ ನಂಬುವಂತೆ ಹೇಳಿ ಅವರ ಮನವೊಲಿಸುತ್ತಿದ್ದನು. ತನ್ನ ನಿರ್ಧಾರಗಳನ್ನು ಯಾರೂ ಪ್ರಶ್ನಿಸದ ವಾತಾವರಣವನ್ನು ಅವನು ಸೃಷ್ಟಿಸಿದನು.

ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಬಿಜೆಪಿಗೆ ಏನಾದರೂ ಪ್ರಶ್ನೆಗಳನ್ನು ಕೇಳುತ್ತವೆಯೇ?- ನಿಮ್ಮ ಕಾರ್ಯಸೂಚಿ ಏನು? ನೀವು ಮುಸ್ಲಿಮರ ಉದ್ದಾರ ಮಾಡುತ್ತೀರಾ, ಸಮಾನತೆ ಮತ್ತು ನ್ಯಾಯದ ಸಾಂವಿಧಾನಿಕ ಯೋಜನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಬಯಸುತ್ತೀರಾ, ನೀವು ಒಳ್ಳೆಯ ದೇಶಕ್ಕಾಗಿ ಒಡೆದು ಆಳುವ ರಾಜಕೀಯವನ್ನು ಬಿಡಲು ಬಯಸುತ್ತೀರಾ? ಬಣ್ಣ ಬಣ್ಣದ ಮಾತುಗಳು ಮತ್ತು ಒರಟಾದ ಅವಕಾಶವಾದವು ಮೋಸಗಾರರನ್ನು ಮೂರ್ಖರನ್ನಾಗಿ ಮಾಡಬಹುದು, ಆದರೆ ರಾಷ್ಟ್ರವನ್ನು ದುರ್ಬಲಗೊಳಿಸುತ್ತದೆ. ಬಿಜೆಪಿ ಮೊದಲು ಮುಸ್ಲಿಂ ಯುವಕರನ್ನು ದೇಶದ್ರೋಹಿಗಳೆಂದು ಕರೆಯುವ ಮೂಲಕ ಅವರನ್ನು ಪ್ರತ್ಯೇಕಿಸಲು ಬಯಸುತ್ತದೆಯೇ ಅಥವಾ ಉತ್ತಮ ಭವಿಷ್ಯಕ್ಕಾಗಿ ಅವರಿಗೆ ಶಿಕ್ಷಣ ಮತ್ತು ಕೌಶಲ್ಯವನ್ನು ನೀಡಲು ಬಯಸುತ್ತದೆಯೇ ಎಂಬುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕು. ವಕ್ಫ್ ಚರ್ಚೆಯ ಸಮಯದಲ್ಲಿ ಸಂಸತ್ತಿನಲ್ಲಿ ವ್ಯಕ್ತಪಡಿಸಿದ ಭಾವನೆಗಳು ನಿಜವಾದದ್ದಾಗಿದ್ದರೆ, ಅದು ಮಂತ್ರಿಗಳ ಭಾಷಣಗಳು, ಅವರ ಬೆಂಬಲಿಗರ ನಡವಳಿಕೆ ಮತ್ತು ಅವರ ಹಿಂದೆ ಮುಂದೆ ಓಡುವ ಮಾಧ್ಯಮಗಳಲ್ಲಿ ಪ್ರತಿಫಲಿಸಬೇಕು. ವಂಚನೆಯ ರಾಜಕೀಯವು ಬೆತ್ತಲೆಯಾಗಿದೆ; ಎಲ್ಲರೂ ಎಲ್ಲವನ್ನೂ ನೋಡುತ್ತಿದ್ದಾರೆ. ಕ್ಷಣಿಕ ಸದಾಚಾರದ ಅರಿವಳಿಕೆಯಡಿಯಲ್ಲಿ ಇರಿಸಲ್ಪಟ್ಟ ರಾಷ್ಟ್ರವು ತನ್ನ ಕಣ್ಣ ಮುಂದೆ ಏನಾಗುತ್ತಿದೆ ಎಂಬುದನ್ನು ನೋಡಲು ಸಾಧ್ಯವಿಲ್ಲ ಎಂಬ ಊಹೆಯು ಮೂರ್ಖತನವಾಗಿದೆ. ಜಗತ್ತಿಗೆ ಸತ್ಯ ತಿಳಿದಿದೆ ಮತ್ತು ಅದು ಕುತರ್ಕ ಹಾಗೂ ಮೊಂಡುವಾದಗಳನ್ನು ಮೀರಿ ಸತ್ಯ ಎತ್ತರದಲ್ಲಿ ನಿಂತಿದೆ. 

ಲೋಕಸಭೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸದಸ್ಯನನ್ನು ಹೊಂದದ ಪಕ್ಷವೊಂದು ಆ ಸಮುದಾಯದ ಕಲ್ಯಾಣದ ಬಗ್ಗೆ ಉಪದೇಶ ನೀಡುವುದು ವಿಚಿತ್ರವಾಗಿದೆ. ಆದರೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅಥವಾ ಚಿರಾಗ್ ಪಾಸ್ವಾನ್ ಅವರಂತಹ ಮಿತ್ರಪಕ್ಷಗಳಿಂದ ಇನ್ನೂ ವಿರೋಧ ಪಕ್ಷಗಳು ಏನನ್ನಾದರೂ ನಿರೀಕ್ಷೆ ಮಾಡುತ್ತಿರುವುದು ಅಷ್ಟೇ ವಿಚಿತ್ರವಾಗಿವೆ. ಅವರು ಬಿಜೆಪಿಯ ಹಳೆಯ ಮತ್ತು ವಿಶ್ವಾಸಾರ್ಹ ಮಿತ್ರರು. ಅವರಿಗಿರುವ ಸೈದ್ಧಾಂತಿಕ ಹಿಂಜರಿಕೆಗಳು ಅವರನ್ನು ಬಿಜೆಪಿಯಿಂದ ದೂರ ಇರಿಸುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನ.

ನಿತೀಶ್ ಕುಮಾರ್ ಅವರ ರಾಜಕೀಯವು ಬಿಜೆಪಿಯ ಮಡಿಲಲ್ಲಿ ಬೆಳೆದ ಕೂಸು. ಅವರ ಸಾಂದರ್ಭಿಕ ದ್ರೋಹಗಳು ಸೈದ್ಧಾಂತಿಕವಾಗಿರದೆ, ಯುದ್ಧತಂತ್ರದ್ದಾಗಿದ್ದವು. ಅದಕ್ಕೆ ರಾಷ್ಟ್ರೀಯ ಕಾಳಜಿ ಇಲ್ಲ, ವೈಯಕ್ತಿಕ ಮಹತ್ವಾಕಾಂಕ್ಷೆಗಳೇ ಮುಖ್ಯವಾಗಿದ್ದವು. ನಾಯ್ಡು ಕೂಡ ಸೈದ್ಧಾಂತಿಕ ಬದ್ಧತೆಯ ರಾಜಕೀಯವನ್ನು ಮಾಡಿಲ್ಲ. ಅದು ಅದು ಅವರಿಂದ ತುಂಬಾ ದೂರದಲ್ಲಿದೆ. ಅವರ ರಾಜಕೀಯದ ಮೂಲತತ್ವ ಅಧಿಕಾರ ಮತ್ತು ಸ್ವಾರ್ಥ ಅಷ್ಟೇ. ಸಂವಿಧಾನವನ್ನು ಸಮಾಧಿ ಮಾಡಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದರೂ ಈ ಇಬ್ಬರೂ ಬಿಜೆಪಿಯೊಂದಿಗೆ ಇರುತ್ತಾರೆ. ಇವರ ಸ್ವಂತ ರಾಜಕೀಯ ಹಿತಾಸಕ್ತಿಗಳು ಅಪಾಯದಲ್ಲಿದ್ದರೆ ಪ್ರಾಯೋಗಿಕ ರಾಜಕೀಯದ ಒತ್ತಡದಲ್ಲಿ ಅವರು ಬಿಜೆಪಿಯೊಂದಿಗೆ ಇನ್ನೂ ತೀವ್ರವಾದ ಸಂಬಂಧವನ್ನು ಬೆಳೆಸುತ್ತಾರೆ. ಕಾಂಗ್ರೆಸ್ ಅಥವಾ ಇತರ ಜಾತ್ಯತೀತ ಪಕ್ಷಗಳು ಇವರ ಸಹಾಯದಿಂದ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ಬಯಸುವುದು ಜಾತ್ಯತೀತತೆಯ ಅಣಕವಾಗಿದೆ. ಈ ವರ್ತನೆ ಅವರ ದೌರ್ಬಲ್ಯಗಳು ಮತ್ತು ಅಸಹಾಯಕತೆಯನ್ನು ಬಹಿರಂಗಪಡಿಸುತ್ತದೆ. 

ಇನ್ನೂ ಕೆಟ್ಟದ್ದೇನೆಂದರೆ, ಕೆಲವು ವಿರೋಧ ಪಕ್ಷದ ನಾಯಕರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮೋದಿಯನ್ನು ಟೀಕಿಸುತ್ತದೆ ಎಂದು ಕನಸು ಕಾಣುತ್ತಿರುವುದು. ಇಲ್ಲ, ಎಂದಿಗೂ ಇದು ಸಾಧ್ಯ ಇಲ್ಲ. ಆರ್‌ಎಸ್‌ಎಸ್ ಮೋದಿಯ ಬಗ್ಗೆ ವಿಮರ್ಶಾತ್ಮಕ ಮೌಲ್ಯಮಾಪನವನ್ನು ರೂಪಿಸಿರಬಹುದು, ಆದರೆ ಸರ್ಕಾರವನ್ನು ಬಲಪಡಿಸಲು ಮತ್ತು ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮಾತ್ರ ಅದು ಬದಲಿ ಬಗ್ಗೆ ಯೋಚಿಸುತ್ತದೆ. ಮೋದಿಯ ಅಡಿಯಲ್ಲಿ ಆರ್‌ಎಸ್‌ಎಸ್ ತನ್ನ ಅತ್ಯುತ್ತಮ ಫಲವನ್ನು ಕಂಡಿದೆ ಮತ್ತು ಅದರ ಪ್ರತಿಯೊಂದು ಹೆಜ್ಜೆಯೂ ತನ್ನ ಪ್ರಾಬಲ್ಯದ ನಿಯಂತ್ರಣವನ್ನು ಶಾಶ್ವತಗೊಳಿಸುವ ಗುರಿಯನ್ನು ಹೊಂದಿರುತ್ತದೆ.

ಆರೆಸ್ಸೆಸ್‌ನಲ್ಲಿನ ಮನಸ್ಸಿನ ಬದಲಾವಣೆ ಅಥವಾ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾದಳ (ಯುನೈಟೆಡ್) (ಜೆಡಿ (ಯು) ನಂತಹ ಪಕ್ಷಗಳಿಂದ ಉಂಟಾಗುವ ಪಲ್ಟಿಗಳು ವಿರೋಧ ಪಕ್ಷದ ಮೇಲೆ ಅವಲಂಬಿತವಾಗಿವೆ, ಇದು ಸ್ವತಃ ಸೈದ್ಧಾಂತಿಕ ಅಶುದ್ಧತೆಯ ಲಕ್ಷಣವಾಗಿದೆ. ವಕ್ಫ್ ಮಸೂದೆಯಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ಪ್ರಕ್ಷುಬ್ಧತೆಯನ್ನು ನಿರೀಕ್ಷಿಸಿದವರು ಈ ಅನುಭವದಿಂದ ಸರಿಯಾದ ಪಾಠಗಳನ್ನು ಕಲಿಯಬೇಕು. ಅವರು ಹಾಗೆ ಮಾಡದಿದ್ದರೆ, ಮುಂದೆ ಅವರು ಅವರು ಸಂವಿಧಾನದ ಸಣ್ಣ ಪ್ರತಿಯನ್ನು ತಮ್ಮ ನಡುಗುವ ಕೈಯಲ್ಲಿ ಹಿಡಿದುಕೊಂಡು ಗೊಂದಲದಲ್ಲಿ ಮುಳುಗುತ್ತಲೇ ಇರುತ್ತಾರೆ. 

ಲೇಖನ: ಸಂಜಯ್ ಕೆ. ಝಾ, ರಾಜಕೀಯ ವಿಶ್ಲೇಷಕರು
ದಿ ವೈರ್‌ನಲ್ಲಿ ಪ್ರಕಟಿಸಲಾಗಿರುವ The Waqf Bill Deception: What’s the Modi Government’s Agenda Behind Concern for Muslim Welfare? ಲೇಖನದ ಕನ್ನಡಾನುವಾದ

Related Articles

ಇತ್ತೀಚಿನ ಸುದ್ದಿಗಳು

You cannot copy content of this page